ಬಿಜೆಪಿ ಅಧ್ಯಕ್ಷ ಸ್ಥಾನದಲ್ಲೇ ಯಡಿಯೂರಪ್ಪ ಮುಂದುವರಿಕೆ
ಬೆಂಗಳೂರು, ಜೂನ್ 03: ಲೋಕಸಭೆ ಚುನಾವಣೆ 2019ರ ಹಿನ್ನಲೆಯಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಿಸಲಾಗುತ್ತದೆ. ಮಾಜಿ ಮುಖ್ಯಮಂತ್ರಿ, ಹಾಲಿ ರಾಜ್ಯ ಘಟಕದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಸ್ಥಾನವನ್ನು ಬದಲಾಯಿಸಲಾಗುತ್ತದೆ ಎಂಬ ಸುದ್ದಿಯನ್ನು ಬಿಜೆಪಿ ಮೂಲಗಳು ಅಲ್ಲಗೆಳೆದಿವೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಲು ನಾಲ್ಕಾರು ಮಂದಿ ತಯಾರಿದ್ದರೂ ಯಾರೂ ಕೂಡಾ ಲಾಬಿ ನಡೆಸಿಲ್ಲ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಅಣತಿಯಂತೆ ಹೊಸ ಮುಖ, ಅಚ್ಚರಿಯ ಹೆಸರು ಕೇಳಿ ಬಂದರೆ ಬರಲಿ, ಸದ್ಯಕ್ಕೆ ಅಧ್ಯಕ್ಷ ಸ್ಥಾನ ಎಂಬ ಹಾಟ್ ಸೀಟ್ ಏರುವುದು ಬೇಡ ಎಂದು ರಾಜ್ಯ ನಾಯಕರಿದ್ದಾರೆ.
ಯಡಿಯೂರಪ್ಪ ಅವರ ನಂತರ ಮಾಸ್ ಲೀಡರ್ ಯಾರು?
ಬಿಎಸ್ ಯಡಿಯೂರಪ್ಪ ಎಂಬ ಮಾಸ್ ಲೀಡರ್ ನಂತರ ಅವರ ಸ್ಥಾನ ತುಂಬಬಲ್ಲ ನಾಯಕರು ಯಾರು? ಎಂಬ ಪ್ರಶ್ನೆಗೆ ಬಿಜೆಪಿ ಇನ್ನೂ ಉತ್ತರ ಕಂಡುಕೊಂಡಿಲ್ಲ. ಕರ್ನಾಟಕ ವಿಧಾನಸಭೆ ಚುನಾವಣೆ 2019 ವೇಳೆಯಲ್ಲಿ ಪರ್ಯಾಯ ನಾಯಕತ್ವದ ಬಗ್ಗೆ ಮಾತುಕತೆ ಬಂದರೂ, ಯಾರೊಬ್ಬರೂ ಇಡೀ ರಾಜ್ಯಕ್ಕೆ ಒಪ್ಪುವಂಥ ನಾಯಕರಿಲ್ಲ ಎಂಬ ಮನವರಿಕೆ ಹೈಕಮಾಂಡ್ ಗೆ ತಡವಾಗಿಯಾದರೂ ಆಗಿದೆ.
2019ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ಈಗಾಗಲೇ ಬಿಜೆಪಿ ತನ್ನ ಅಭಿಯಾನ ಆರಂಭಿಸಿದೆ. ಆದರೆ, ಕರ್ನಾಟಕದಲ್ಲಿ ಅಧ್ಯಕ್ಷರ ಬದಲಾವಣೆ ಗೊಂದಲ ಮೂಡದಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಬಿಜೆಪಿಗೆ ಇದು ಅನಿವಾರ್ಯ ಕೂಡಾ.
ಅಧ್ಯಕ್ಷ ಸ್ಥಾನ ರೇಸಿನಲ್ಲಿರುವವರು?
ಪ್ರತಿಪಕ್ಷ ನಾಯಕರಾಗಿ ಯಡಿಯೂರಪ್ಪ ಮುಂದುವರಿಯುವುದರಿಂದ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮತ್ತೊಬ್ಬರನ್ನು ಆಯ್ಕೆ ಮಾಡಬಹುದು ಎಂಬ ನಿರೀಕ್ಷೆ ಮೂಡಿತು. ಹೀಗಾಗಿ, ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸಂಸದರ ಪೈಕಿ ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ ಹೆಸರು ಕೇಳಿ ಬಂದಿತು. ಇನ್ನು ಶಾಸಕರ ಪೈಕಿ ಆರ್ ಅಶೋಕ, ಸಿ.ಟಿ. ರವಿ, ಅರವಿಂದ ಲಿಂಬಾವಳಿ ಆಕಾಂಕ್ಷಿಗಳಾಗಿದ್ದಾರೆ. ಸಂಸದ ಸ್ಥಾನ ತೊರೆದು ಶಾಸಕರಾಗಿರುವ ಬಿ ಶ್ರೀರಾಮುಲುಗೂ ಅವಕಾಶ ಸಿಗಬಹುದು ಎಂಬ ಆಸೆ ಅವರ ಅಭಿಮಾನಿಗಳಿಗಿದೆ.