ಚುನಾವಣಾ ಆಯೋಗದ ಭೇಟಿ: ದೆಹಲಿಗೆ ಹೊರಟ ಮುಖ್ಯಮಂತ್ರಿ ಕುಮಾರಸ್ವಾಮಿ
Recommended Video
ಬೆಂಗಳೂರು, ಮೇ 21: ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾದ ಬೆನ್ನಲ್ಲೇ ಎನ್ಡಿಎ ವಿರೋಧ ಪಕ್ಷಗಳು ಇವಿಎಂ ಮತ್ತು ವಿವಿಪ್ಯಾಟ್ ಕುರಿತು ಕಳವಳ ವ್ಯಕ್ತಪಡಿಸಿ ಚುನಾವಣಾ ಆಯೋಗವನ್ನು ಮಂಗಳವಾರ ಭೇಟಿ ಮಾಡಲಿವೆ. ಇದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ದೆಹಲಿಗೆ ತೆರಳಲಿದ್ದಾರೆ.
ಕುಮಾರಸ್ವಾಮಿ ಅವರು ಬೆಳಿಗ್ಗೆ 11 ಗಂಟೆ ಸುಮಾರಿಗೆ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ಚುನಾವಣಾ ಸಮೀಕ್ಷೆಗಳು ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್ಡಿಎಗೆ ಸುಲಭದ ಗೆಲುವು ದೊರಕಲಿವೆ ಎಂದು ಹೇಳಿದ್ದವು. ಇದರಿಂದ ಕಳವಳಗೊಂಡಿರುವ 21 ವಿರೋಧಪಕ್ಷಗಳ ಪ್ರತಿನಿಧಿಗಳು ಚುನಾವಣಾ ಆಯೋಗವನ್ನು ಭೇಟಿ ಮಾಡಲಿದ್ದಾರೆ.
ಎಕ್ಸಿಟ್ ಪೋಲ್: ಈ ರಾಜ್ಯಗಳಲ್ಲಿನ ಫಲಿತಾಂಶ ನೀಡಲಿದೆ ಅಚ್ಚರಿ
ಇವಿಎಂ ಮತ್ತು ವಿವಿಪ್ಯಾಟ್ಗಳಲ್ಲಿನ ದೋಷಗಳು, ಅವುಗಳ ವಿಶ್ವಾಸಾರ್ಹತೆ, ದುರ್ಬಳಕೆ ಮುಂತಾದ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ. ಬಳಿಕ ವಿರೋಧಪಕ್ಷಗಳ ಮುಖಂಡರು ಪರಸ್ಪರ ಭೇಟಿಯಾಗಿ ಸಮಾಲೋಚನೆ ನಡೆಸಲಿದ್ದಾರೆ.
ಭಾನುವಾರ ಪ್ರಕಟಗೊಂಡ ಸುಮಾರು 13 ಎಕ್ಸಿಟ್ ಪೋಲ್ಗಳಲ್ಲಿ ಬಿಜೆಪಿ ವಿರುದ್ಧ ಸಂಘಟನೆಗೊಂಡ ವಿವಿಧ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು 122 ಸೀಟುಗಳಿಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಾರವು ಎಂದು ಭವಿಷ್ಯ ನುಡಿದಿವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಆಸೆ ಹೊಂದಿರುವ ವಿರೋಧಪಕ್ಷಗಳಿಗೆ ತೀವ್ರ ನಿರಾಸೆಯಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸೇರಿದಂತೆ ಅನೇಕರು ಎಕ್ಸಿಟ್ ಪೋಲ್ಗಳನ್ನು ನಿರಾಕರಿಸಿದ್ದಾರೆ.
ದೆಹಲಿಯಲ್ಲಿ ಇಂದು ಪ್ರತಿಪಕ್ಷ ನಾಯಕರ ಜೊತೆ ಚಂದ್ರಬಾಬು ನಾಯ್ಡು ಸಭೆ
ಈ ಎಕ್ಸಿಟ್ ಪೋಲ್ಗಳು ಸಾವಿರಾರು ಇವಿಎಂಗಳನ್ನು ಬದಲಿಸುವ ಹುನ್ನಾರ ಎಂದು ಮಮತಾ ಬ್ಯಾನರ್ಜಿ ಮತ್ತು ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.