ಎಕ್ಸಿಟ್ ಪೋಲ್ ಫಲಿತಾಂಶದಿಂದ 'ಕೈ' ತಳಮಳ: ಮತ್ತೆ ಇವಿಎಂ ಮೇಲೆ ಆರೋಪ
ಬೆಂಗಳೂರು, ಮೇ 20: ಬಹುನಿರೀಕ್ಷಿತ ಲೋಕಸಭೆ ಚುನಾವಣೆಯ ಎಕ್ಸಿಟ್ ಪೋಲ್ಗಳು ಹೊರಬಿದ್ದಿವೆ. ಬಹುತೇಕ ಸಮೀಕ್ಷೆಗಳು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅಭಿಪ್ರಾಯಪಟ್ಟಿವೆ. ಇನ್ನು ಕೆಲವು ಸಮೀಕ್ಷೆಗಳು ಎನ್ಡಿಎಗೆ ಸರ್ಕಾರ ರಚಿಸುವಷ್ಟು ಸೀಟುಗಳು ಸಿಗದೆ ಇದ್ದರೂ ಭಾರಿ ಮುನ್ನಡೆ ಪಡೆದುಕೊಳ್ಳಲಿವೆ ಎಂದಿದೆ.
ಯಾವ ಸಮೀಕ್ಷೆಯೂ ಕಾಂಗ್ರೆಸ್ ನೇತೃತ್ವದ ಯುಪಿಎ ಅಥವಾ ಮಹಾಘಟಬಂಧನದ ಪಕ್ಷಗಳು ಸೇರಿ ಸರ್ಕಾರ ರಚಿಸುವ ಸಾಧ್ಯತೆಯನ್ನು ಹೇಳಿಲ್ಲ. ಇದರಿಂದ ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕಿಳಿಸಿ ಸರ್ಕಾರ ರಚಿಸುವ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ಬಯಕೆಗೆ ಫಲಿತಾಂಶಕ್ಕೆ ಮುನ್ನವೇ ಭ್ರಮನಿರಸನವಾಗಿದೆ.
ಎಕ್ಸಿಟ್ ಪೋಲ್ ಸತ್ಯವಾದರೆ ಕರ್ನಾಟಕ ಸರ್ಕಾರದ ಕತೆ ಏನು?
ಈ ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಜೆಪಿ ವಿರೋಧಿಗಳಲ್ಲಿ, ಮುಖ್ಯವಾಗಿ ಕಾಂಗ್ರೆಸ್ ಪಾಳಯದಲ್ಲಿ ತಳಮಳ ಮೂಡಿಸಿವೆ. ಈ ಬಾರಿ ಮತ್ತೆ ಸರ್ಕಾರ ರಚಿಸುವ ಉತ್ಸಾಹದಲ್ಲಿದ್ದ ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷದ ಉತ್ಸಾಹಕ್ಕೆ ಸಮೀಕ್ಷೆಗಳು ತಣ್ಣೀರು ಎರಚಿವೆ. ಈ ನಡುವೆ ಕಾಂಗ್ರೆಸ್ ಮುಖಂಡರು ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನು ನಿರಾಕರಿಸುತ್ತಿದ್ದಾರೆ. ಎಕ್ಸಿಟ್ ಪೋಲ್ಗಳು ಯಾವಾಗಲೂ ಸತ್ಯವಾಗುತ್ತವೆ ಎನ್ನಲಾಗದು ಎನ್ನುತ್ತಿರುವ ಕಾಂಗ್ರೆಸ್ ನಾಯಕರು ಅದಕ್ಕೆ ಇತ್ತೀಚಿನ ಆಸ್ಟ್ರೇಲಿಯಾದ ಚುನಾವಣಾ ಸಮೀಕ್ಷೆಗಳ ಫಲಿತಾಂಶವನ್ನು ಉದಾಹರಣೆಯಾಗಿ ನೀಡುತ್ತಿದ್ದಾರೆ. ಇನ್ನು ಕೆಲವು ಮುಖಂಡರು ಹಿಂದಿನಂತೆಯೇ ಇವಿಎಂ ಮೇಲೆ ದೋಷಾರೋಪ ಹೊರಿಸುವ ಮೂಲಕ ಸೋಲಿನ ಅಪವಾದದಿಂದ ನುಣುಚಿಕೊಳ್ಳಲು ಆರಂಭಿಸಿದ್ದಾರೆ.
ಎಕ್ಸಿಟ್ ಪೋಲ್ ಸಮೀಕ್ಷೆಯ ಅಂಕಿ-ಅಂಶಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ನಾಯಕರ ಹೇಳಿಕೆಗಳು ಹೀಗಿವೆ...
ಇವಿಎಂ ಬಗ್ಗೆ ಅನುಮಾನ
ಇವಿಎಂಗಳನ್ನು ಹ್ಯಾಕ್ ಮಾಡಿರುವುದು ಬಗ್ಗೆ ತಮಗೆ ಅನುಮಾನ ಇದೆ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದ್ದಾರೆ. ಎಕ್ಸಿಟ್ ಪೋಲ್ಗಳನ್ನು ನೋಡಿದರೆ ಈ ಅನುಮಾನ ದಟ್ಟವಾಗುತ್ತದೆ. ಸಮೀಕ್ಷೆಗಳು ಬಿಜೆಪಿ ಅಧ್ಯಕ್ಷರು ಹೇಳಿ ಮಾಡಿಸಿದ ಹಾಗೆ ಇದೆ. ದೇಶದಲ್ಲಿ ವಸ್ತುಸ್ಥಿತಿ ಬೇರೆ ರೀತಿಯಲ್ಲಿಯೇ ಇದೆ. 300 ಸ್ಥಾನ ಬರುತ್ತದೆ ಎಂದು ಬಿಜೆಪಿ ಸಮಾಧಾನಪಟ್ಟುಕೊಳ್ಳುತ್ತಿದೆ. ಫಲಿತಾಂಶ ಬಂದ ಬಳಿಕ ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಯುಪಿಎ ಅಧಿಕಾರಕ್ಕೆ ಬರಲಿದೆ
ಈ ಭಾರಿ ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬರುವ ಎಲ್ಲ ಸಾಧ್ಯತೆಗಳಿವೆ, ಈ ಬಗ್ಗೆ ನಿನ್ನೆ ದೆಹಲಿಯಲ್ಲಿಯೂ ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಅಲ್ಲಿ ಸಿಕ್ಕ ಮಾಹಿತಿ ಪ್ರಕಾರ ಯುಪಿಎ ಅಧಿಕಾರಕ್ಕೆ ಬರಲಿದೆ. ಕರ್ನಾಟಕದಲ್ಲಿ ಬಿಜೆಪಿ 18 ಸೀಟುಗಳನ್ನು ಗೆಲ್ಲುತ್ತದೆ ಎನ್ನಲಾಗಿದೆ. ಈ ಸಮೀಕ್ಷೆಯನ್ನು ನಂಬಲು ಸಾಧ್ಯವಿದೆಯಾ? ಚುನಾವಣೋತ್ತರ ಸಮೀಕ್ಷೆ ಮೇಲೆ ನನಗೆ ವಿಶ್ವಾಸವಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ 20 ಸೀಟುಗಳಲ್ಲಿ ಗೆಲ್ಲಲಿದೆ. ಇದು ನಮ್ಮ ಲೆಕ್ಕಾಚಾರ. ವಾತಾವರಣ ಕೂಡ ಹಾಗೆಯೇ ಇದೆ ಎಂದು ಪರಮೇಶ್ವರ್ ಭರವಸೆ ವ್ಯಕ್ತಪಡಿಸಿದ್ದಾರೆ.
'ಎಕ್ಸಿಟ್ ಪೋಲ್ ನಂಬಬೇಡಿ, ಮೇ 23ಕ್ಕೆ ನಿಮಗೆ ಅಚ್ಚರಿ ಕಾದಿದೆ'
ಇವಿಎಂ ತಿರುಚುವ ಹುನ್ನಾರ
ಎಕ್ಸಿಟ್ ಪೋಲ್ ಸಮೀಕ್ಷೆಯದು ಅಂತಿಮ ಫಲಿತಾಂಶವಲ್ಲ. ಎಲ್ಲರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೇ 23ರಂದು ಸ್ಪಷ್ಟ ಚಿತ್ರಣ ಸಿಗಲಿದೆ. ಈ ಸಮೀಕ್ಷೆಗಳು ಜನರ ಮೈಂಡ್ ಸೆಟ್ ಮಾಡಿ ಇವಿಎಂ ತಿರುಚುವ ಹುನ್ನಾರವಾಗಿವೆ. ಚಂದ್ರಬಾಬು ನಾಯ್ಡು ಪದೇ ಪದೇ ಇದನ್ನೇ ಹೇಳುತ್ತಿದ್ದಾರೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
Array |
ತಳಮಟ್ಟದ ಅಭಿಪ್ರಾಯ ದಾಖಲಾಗಿಲ್ಲ
ಸಮೀಕ್ಷೆಯಲ್ಲಿ ಬಂದಿರುವ ಅಂಕಿಗಳನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ತಳಮಟ್ಟದ ಅಭಿಪ್ರಾಯ ದಾಖಲಾಗಿಲ್ಲವೇನೋ ಎಂದು ಅನಿಸುತ್ತಿದೆ. ಇಷ್ಟು ದೊಡ್ಡ ಮಟ್ಟದ ಅಭಿಪ್ರಾಯವನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಇನ್ನೇನು ಮೂರು ದಿನಗಳಲ್ಲಿ ಫಲಿತಾಂಶ ಬರಲಿದ್ದು, ಕಾದು ನೋಡುತ್ತೇವೆ. ಸಮೀಕ್ಷೆಗಳು ಉಲ್ಟಾ ಆಗಿರುವ ಉದಾಹರಣೆಗಳು ಸಾಕಷ್ಟಿವೆ. ಆಸ್ಟ್ರೇಲಿಯಾದಲ್ಲಿ ಮಾಡಿರುವ ಮೂರೂ ಸಮೀಕ್ಷೆಗಳು ಸಹ ಉಲ್ಟಾ ಆಗಿವೆ. ಕರ್ನಾಟಕದಲ್ಲಿ ನಾವು ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಎಬಿಪಿ ನ್ಯೂಸ್ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ಮುದುಡಲಿದೆ ಕಮಲ
|
ಎಲ್ಲವೂ ತಪ್ಪಾಗಲಿವೆ
ಎಕ್ಸಿಟ್ ಪೋಲ್ಗಳು ತಪ್ಪಾಗಲಿವೆ ಎಂಬುದು ನನ್ನ ನಂಬಿಕೆ. ಆಸ್ಟ್ರೇಲಿಯಾದಲ್ಲಿ ಕಳೆದ ವಾರಾಂತ್ಯದಲ್ಲಿ 56 ವಿಭಿನ್ನ ಎಕ್ಸಿಟ್ ಪೋಲ್ಗಳು ತಪ್ಪಾಗಿದ್ದವು. ಭಾರತದಲ್ಲಿ ಹೆಚ್ಚಿನ ಜನರು ಸಮೀಕ್ಷೆ ನಡೆಸಲು ಬಂದವರು ಸರ್ಕಾರದ ಕಡೆಯಿಂದ ಬಂದಿರಬೇಕು ಎಂದು ಹೆದರಿ ಸತ್ಯ ಹೇಳುವುದಿಲ್ಲ. ನಿಜವಾದ ಫಲಿತಾಂಶಕ್ಕಾಗಿ ಮೇ 23ರವರೆಗೆ ಕಾಯುತ್ತೇವೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಹಿಂದೆಯೂ ಸುಳ್ಳಾಗಿದ್ದವು
ಎಕ್ಸಿಟ್ ಪೋಲ್ ಸಮೀಕ್ಷೆಗಳು ನಿಜವಾಗುತ್ತವೆ ಎನ್ನಲಾಗದು. ವಾಜಪೇಯಿ ಮತ್ತು ಸಿದ್ದರಾಮಯ್ಯ ಅವಧಿಯಲ್ಲಿ ಎಕ್ಸಿಟ್ ಪೋಲ್ಗಳು ಸುಳ್ಳಾಗಿದ್ದವು. 20-30 ಸಾವಿರ ಜನರನ್ನು ಸಮೀಕ್ಷೆಗೆ ಒಳಪಡಿಸಿರುತ್ತಾರೆ. ಉಳಿದವರು ಯಾರಿಗೆ ಮತ ಹಾಕಿರುತ್ತಾರೆಂದು ಗೊತ್ತಾಗುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ 14 ಮತ್ತು ಜೆಡಿಎಸ್ 3 ಸೀಟುಗಳನ್ನು ಗೆಲ್ಲುತ್ತವೆ. ಫಲಿತಾಂಶ ಬಳಿಕ ಮೈತ್ರಿ ಸರ್ಕಾರ ಬೀಳುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ರಾಘವೇಂದ್ ಹಿಟ್ನಾಳ್ ಕೊಪ್ಪಳದಲ್ಲಿ ಹೇಳಿದ್ದಾರೆ.