ಲೋಕಸಭಾ ಚುನಾವಣೆ : ದೇವೇಗೌಡರ ಕುಟುಂಬದ ಕಥೆ ಏನು?
ಬೆಂಗಳೂರು, ಮೇ 23 : 2019ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸೋಲು ಅನುಭವಿಸಿದರು. ತುಮಕೂರು ಕ್ಷೇತ್ರದಿಂದ ದೇವೇಗೌಡರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು.
ಗುರುವಾರ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಅಧಿಕಾರದಲ್ಲಿದೆ. ಆದರೆ, ಜೆಡಿಎಸ್ ಪಕ್ಷ ಕೇವಲ 1 ಸ್ಥಾನಗಳನ್ನು ಗಳಿಸಲು ಮಾತ್ರ ಸಾಧ್ಯವಾಗಿದೆ.
ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
ಎಚ್.ಡಿ.ದೇವೇಗೌಡರ ಕುಟುಂಬದ ಮೂವರು ಸದಸ್ಯರು ಚುನಾವಣಾ ಕಣದಲ್ಲಿದ್ದರು. ತುಮಕೂರಿನಲ್ಲಿ ದೇವೇಗೌಡರು ಸೋತರೆ, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು ಕಂಡರು. ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರು ಜಯಗಳಿಸುವ ಮೂಲಕ ಸಂಸತ್ ಪ್ರವೇಶಿಸಿದರು.
ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟಿದ್ದ ಎಚ್.ಡಿ.ದೇವೇಗೌಡರು ತುಮಕೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಬಿಜೆಪಿಯ ಜಿ.ಎಸ್.ಬಸವರಾಜು ಅವರ ವಿರುದ್ಧ ಸೋಲು ಅನುಭವಿಸಿದರು.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ, 13,339 ಮತಗಳ ಅಂತರದಿಂದ ದೇವೇಗೌಡರು ಸೋಲೊಪ್ಪಿಕೊಂಡರು. ತಮ್ಮ ಕೊನೆಯ ಚುನಾವಣೆಯಲ್ಲಿ ದೇವೇಗೌಡರು ಸಂಸತ್ ಪ್ರವೇಶಿಸುವ ಕನಸು ನನಸಾಗಲಿಲ್ಲ.
ತುಮಕೂರಿನಲ್ಲಿ ಯಾರಿಗೆಷ್ಟು ಮತ?
ತುಮಕೂರು ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸೋಲು ಅನುಭವಿಸಿದರು. ಬಿಜೆಪಿಯ ಜಿ.ಎಸ್.ಬಸವರಾಜು ಅವರು 5,96,127 ಮತಗಳನ್ನು ಪಡೆದು ಜಯಗಳಿಸಿದರು. ಎಚ್.ಡಿ.ದೇವೇಗೌಡರು 5,82,788 ಮತಗಳನ್ನು ಪಡೆದರು. 13,339 ಮತಗಳ ಅಂತರದಿಂದ ಗೌಡರು ಸೋಲು ಕಂಡರು.
ಪ್ರಜ್ವಲ್ ರೇವಣ್ಣ ಗೆಲುವು
ದೇವೇಗೌಡರು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಪ್ರಜ್ವಲ್ ರೇವಣ್ಣ ಅವರು ಹಾಸನದಲ್ಲಿ ಬಿಜೆಪಿಯ ಎ.ಮಂಜು ವಿರುದ್ಧ ಗೆಲುವು ಸಾಧಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರು 6,76,606 ಮತಗಳನ್ನು ಪಡೆದು ಜಯಗಳಿಸಿದರು. ಎದುರಾಳಿ ಎ.ಮಂಜು ಅವರು 5,35,282 ಮತಗಳನ್ನು ಪಡೆದರು. ಗೆಲುವಿನ ಅಂತರ 1,41,324 ಮತಗಳು.
ನಿಖಿಲ್ ಕುಮಾರಸ್ವಾಮಿ ಸೋಲು
ಎಚ್.ಡಿ.ದೇವೇಗೌಡರ ಮತ್ತೊಬ್ಬ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಸೋಲು ಅನುಭವಿಸಿದರು.
ಸುಮಲತಾ ಅವರು 703660 ಮತಗಳನ್ನು ಪಡೆದರೆ, ನಿಖಿಲ್ ಕುಮಾರಸ್ವಾಮಿ 5,77,784 ಮತಗಳನ್ನು ಪಡೆದು ಸೋಲು ಕಂಡರು. ಗೆಲುವಿನ ಅಂತರ 1,25,876 ಮತಗಳು.
ದೇವೇಗೌಡರ ಗೆಲುವಿಗೆ ಶ್ರಮ
ತುಮಕೂರು ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡರ ಗೆಲುವಿದಾಗಿ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಸಾಕಷ್ಟು ಶ್ರಮಪಟ್ಟರು. ಆದರೆ, ಅದು ಫಲ ನೀಡಲಿಲ್ಲ.