ಭವಾನಿ ರೇವಣ್ಣಗೆ ನಿರಾಶೆ, ಪ್ರಜ್ವಲ್ ಭವಿಷ್ಯದ ಚಿಂತೆ
ಬೆಂಗಳೂರು, ಮಾ.07; ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಮತ್ತೊಮ್ಮೆ ತಮ್ಮ ರಾಜಕೀಯ ತಂತ್ರಗಾರಿಕೆ ಮೆರೆದಿದ್ದಾರೆ. ಜೆಡಿಎಸ್ ಕಾರ್ಯತಂತ್ರ ಹಾಗೂ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪುತ್ರ ಕುಮಾರಸ್ವಾಮಿ ಹೆಣೆದಿರುವ ಪಟ್ಟಿಗೆ ಓಕೆ ಎಂದಿದ್ದಾರೆ. ಇದರಿಂದ ಮಾಜಿ ಸಚಿವ ಎಚ್.ಡಿ.ರೇವಣ್ಣನವರ ಕುಟುಂಬಕ್ಕೆ ಮತ್ತೊಮ್ಮೆ ಟಿಕೆಟ್ ತಪ್ಪಿದ್ದಂತಾಗಿದೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ, ಭವಾನಿ ರೇವಣ್ಣ ಅವರ ರಾಜಕೀಯ ಪ್ರವೇಶವನ್ನು ದೊಡ್ಡ ಗೌಡ್ರು ನಿರಾಕರಿಸಿದ್ದರು. ನಂತರ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಉತ್ತರಾಧಿಕಾರಿ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಪ್ರವೇಶದ ಬಗ್ಗೆ ಸ್ವತಃ ಅವರ ಅಮ್ಮ ಭವಾನಿ ಅವರು ಪ್ರಕಟಣೆ ಹೊರಡಿಸಿದ್ದರು. ಆದರೆ, ದೊಡ್ಡ ಗೌಡ್ರು ಪ್ರಜ್ವಲ್ ಪ್ರವೇಶಕ್ಕೆ ಒಪ್ಪಿಗೆ ಸೂಚಿಸಿದ್ದಾರೆಯೇ? ಎಂಬ ಪ್ರಶ್ನೆ ಹಾಗೆ ಉಳಿದಿತ್ತು. ಈಗ ಈ ಕುರಿತು ತಕ್ಕಮಟ್ಟಿನ ಉತ್ತರ ಕುಮಾರಸ್ವಾಮಿ ಅವರಿಂದ ಸಿಕ್ಕಿದೆ.
ಸುವರ್ಣ ನ್ಯೂಸ್ ವಾಹಿನಿಯ ನ್ಯೂಸ್ ಅವರ್ ಕಾರ್ಯಕ್ರಮದಲ್ಲಿ ವಿಶೇಷ ಸಂದರ್ಶನದಲ್ಲಿ ಕುಮಾರಣ್ಣನವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಿಖಿಲ್ ಗೌಡ ರಾಜಕೀಯಕ್ಕಿಲ್ಲ... ರೇವಣ್ಣನ ಪುತ್ರ ಪ್ರಜ್ವಲ್'ಗೆ ರಾಜಕೀಯದಲ್ಲಿ ಆಸಕ್ತಿ ಹೆಚ್ಚು ಇದ್ದು, ಆತ ಈ ಕ್ಷೇತ್ರಕ್ಕೆ ಬಂದರೂ ಬರಬಹುದು ಎಂದು ಕುಮಾರಣ್ಣ ಹೇಳಿದ್ದಾರೆ.
ಪ್ರಜ್ವಲ್ ಭವಿಷ್ಯದ ಚಿಂತೆ,ನಿಖಿಲ್ ಗೌಡ ಪ್ರವೇಶ ಸಾಧ್ಯವೇ?
ತನ್ನ ಪುತ್ರ ನಿಖಿಲ್ ಗೌಡ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ. ಚಿಕ್ಕಬಳ್ಳಾಪರದಿಂದ ಪತ್ನಿ ಕಣಕ್ಕೆ ತನ್ನ ಪತ್ನಿ ಅನಿತಾ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಯುವುದು ಖಚಿತ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದೇನೆ ಎಂದಿದ್ದಾರೆ.
ಪ್ರಜ್ವಲ್ ರೇವಣ್ಣಗೆ ರಾಜಕೀಯ ಅನುಭವ ಏನಿದೆ?
ಪ್ರಜ್ವಲ್ ಅವರು ಕಳೆದ ವಿಧಾನಸಭೆ ಚುಅನವಣೆ ಸಂದರ್ಭದಲ್ಲಿ ಸಕಲೇಶಪುರ ಹಾಗೂ ಬೇಲೂರುಗಳಲ್ಲಿ ಯುವಕರ ಸಭೆ ನಡೆಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಧುಮುಕುವ ಸುಳಿವು ನೀಡಿದ್ದರು.
ಈ ಮುನ್ನ ತಮ್ಮ ತಾಯಿ ಭವಾನಿ ಅವರನ್ನು ಬೇಲೂರು ಕ್ಷೇತ್ರದಲ್ಲಿ ಕಣಕ್ಕಿಳಿಸಲು ಇನ್ನಿಲ್ಲದ ಸಾಹಸ ಪಟ್ಟು ಒಂದು ಹಂತದ ಗೆಲುವು ಸಾಧಿಸಿದ್ದರು. ಆದರೆ, ಅಂತಿಮ ಕ್ಷಣದಲ್ಲಿ ದೇವೇಗೌಡರ ಮಧ್ಯ ಪ್ರವೇಶದಿಂದ ವಿಚಿತ್ರ ತಿರುವು ಪಡೆಯಿತು.ಕಗ್ಗಂಟ್ಟಾಗಿದ್ದ ಬೇಲೂರು ವಿಧಾನಸಭಾ ಟಿಕೆಟ್ ಹಂಚಿಕೆಯನ್ನು ಗೌಡ್ರು ಇಟ್ಟ ನಡೆ ಅವರ ನಿಷ್ಠಾವಂತನನ್ನು ಕಳೆದುಕೊಳ್ಳುವಂತೆ ಮಾಡಿತು. ಮನೆ ಸೊಸೆ ಮುನಿಸಿಗೂ ಕಾರಣವಾಗಿತ್ತು.
ಗೌಡರ ಸೆಂಟಿಮೆಂಟ್ ಎಲ್ಲರನ್ನು ಮೆತ್ತಗಾಗಿಸಿದೆ
ನನ್ನ ರಾಜಕೀಯ ಜೀವನದ ಕೊನೆಗಾಲದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ತಂದುಕೊಂಡಿರುವ ಸ್ಥಿತಿಯನ್ನು ನಾನು ತಂದುಕೊಳ್ಳಲು ಇಷ್ಟಪಡುವುದಿಲ್ಲ. 'ನನ್ನನ್ನು ಕರುಣಾನಿಧಿ ಸ್ಥಿತಿಗೆ ದೂಡಬೇಡಿ' ಎಂದು ಗೌಡ್ರು ಟವೆಲ್ ಕೊಡವಿಕೊಂಡು ಎದ್ದಿದ್ದು ಕುಟುಂಬದಲ್ಲಿ ಎಲ್ಲರನ್ನು ಮೆತ್ತಗಾಗಿಸಿದೆ.
ಅನಿತಾ ಕುಮಾರಸ್ವಾಮಿ ಅವರು ಹೊಂಗನೂರಿನಲ್ಲಿ ಒಮ್ಮೆ ದೇವೇಗೌಡರು ಇಳಿವಯಸ್ಸಿನಲ್ಲೂ ಸಕ್ರಿಯವಾಗಿ ಹಗಲು ರಾತ್ರಿ ದುಡಿಯುತ್ತಾರೆ ಅವರಿಗೆ ವಿಶ್ರಾಂತಿಯೇ ಸಿಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದರು. ದೇವೇಗೌಡರ ಎಲ್ಲಾ ತಂತ್ರಕ್ಕೆ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡದೆ ಇದೆಲ್ಲ ಕಾರ್ಯಕರ್ತರ ಒಮ್ಮತದ ನಿಲುವು ಎಂದು ತೇಲಿಸಿ ಹೇಳಿಕೆ ನೀಡುತ್ತಾ ಬಂದಿದ್ದಾರೆ. ಅನಿತಾ ಅವರ ಸ್ಪರ್ಧೆ ಕೂಡಾ ಕಾರ್ಯಕರ್ತರ ಬೇಡಿಕೆ ಎಂದಿದ್ದಾರೆ. ಆದರೆ, ಇದೇ ಕಾರ್ಯಕರ್ತರ ಬೇಡಿಕೆ ಮನ್ನಿಸಿ ಭವಾನಿ ಅವರಿಗೆ ಏಕೆ ಟಿಕೆಟ್ ನೀಡಿಲ್ಲ ಎಂಬ ಪ್ರಶ್ನೆಗೆ ದೇವೇಗೌಡರು ಬಿಟ್ಟರೆ ಮಿಕ್ಕವರಲ್ಲಿ ಉತ್ತರವಿಲ್ಲ
ಪ್ರಜ್ವಲ್ ರೇವಣ್ಣ ರಾಜಕೀಯ ಪ್ರವೇಶ ಯಾವಾಗ?
ಇಂದಲ್ಲ ನಾಳೆ ಪ್ರಜ್ವಲ್ ರೇವಣ್ಣ ಅವರ ಅಧಿಕೃತ ಪ್ರವೇಶ ಖಚಿತ. ಈಗಾಗಲೇ ಜೆಡಿಎಸ್ ಪರ ಹಲವಾರು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪ್ರಜ್ವಲ್ ಅವರಿಗೆ ಇಂದಿನ ಯುವ ಪೀಳಿಗೆಯನ್ನು ಆಕರ್ಷಿಸುವ ಹುಮ್ಮಸ್ಸಿದೆ. ವಿಪಕ್ಷಗಳ ಹುಳುಕನ್ನು ಎತ್ತಿ ತೋರಿಸುತ್ತಾ, ದೇವೇಗೌಡರ ಬದುಕನ್ನು ಎಲ್ಲರಿಗೂ ಸಾರುತ್ತಾ, ಜೆಡಿಎಸ್ ಹೇಗೆ ಜನ ಸಾಮಾನ್ಯರ ನೋವು ನಲಿವಿಗೆ ಸ್ಪಂದಿಸುತ್ತಿದೆ ಎಂದು ಪ್ರಜ್ವಲ್ ಫೌಂಡೇಷನ್ ಮೂಲಕ ಸಾರುತ್ತಾ ಬಂದಿದ್ದಾರೆ. ಸೋದರ ಸೂರಜ್ ಗಿಂತ ಹಾಗೂ ಕಸಿನ್ ನಿಖಿಲ್ ಗಿಂತ ರಾಜಕೀಯವಾಗಿ ಪ್ರಜ್ವಲ್ ಉತ್ತಮ ಭವಿಷ್ಯ ಕಂಡುಕೊಳ್ಳುವ ಸಾಧ್ಯತೆಯೂ ಇದೆ