ಲೋಕ್ ಅದಾಲತ್ನಲ್ಲಿ ದಾಖಲೆಯ 8.34 ಲಕ್ಷ ಕೇಸ್ ಇತ್ಯರ್ಥ..!
ಬೆಂಗಳೂರು, ಆ.15: ರಾಜ್ಯದಾದ್ಯಂತ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ದಾಖಲೆಯ ಒಟ್ಟು 8.34 ಲಕ್ಷ ಪ್ರಕರಣ ಇತ್ಯರ್ಥವಾಗಿದೆ. ಇದರಿಂದಾಗಿ ನ್ಯಾಯಾಲಯಗಳ ಮೇಲಿನ ಹೊರೆ ಗಣನೀಯವಾಗಿ ತಗ್ಗಿದೆ.
ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್ಎಲ್ಎಸ್ಎ) ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಅವರು ರಾಜಿ ಸಂಧಾನದ ಮೂಲಕ ನ್ಯಾಯಾಲಯಗಳಲ್ಲಿವಿಚಾರಣೆಗೆ ಬಾಕಿಯಿದ್ದ 1,53,024 ಮತ್ತು ವ್ಯಾಜ್ಯಪೂರ್ವ 6,81,596 ಸೇರಿದಂತೆ ಒಟ್ಟು 8,34,620 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.
ಆ.13ರಂದು (ಶನಿವಾರ) ರಾಜ್ಯಾದ್ಯಂತ ಒಟ್ಟು 1009 ಬೈಠಕ್ಗಳನ್ನು ನಡೆಸಿ ರಾಜಿ ಸಂಧಾನದ ಮೂಲಕ ವಿಲೇವಾರಿ ಮಾಡಲಾಗಿದೆ, ಮತ್ತೊಂದು ವಿಶೇಷವೆಂದರೆ 1,380 ವೈವಾಹಿಕ ವಿವಾದ ಪ್ರಕರಣ ಇತ್ಯರ್ಥಪಡಿಸಿ, 120 ಜೋಡಿಗಳನ್ನು ಒಗ್ಗೂಡಿಸಲಾಗಿದೆ. ಮೈಸೂರಿನಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ 27 ದಂಪತಿ ಹಾಗೂ ಬೆಂಗಳೂರಿನ 12 ದಂಪತಿ ಒಂದಾಗಿದ್ದಾರೆ ಎಂದರು.
13.86 ಕೋಟಿ ರೂ. ಸಂಗ್ರಹ:
ಕಂದಾಯ ವಿಭಾಗದಲ್ಲಿ ಖಾತೆ ಬದಲಾವಣೆ, ಗುರುತಿನ ಚೀಟಿ ವಿತರಣೆ ಹಾಗೂ ಪಿಂಚಣಿ ಇತ್ಯಾದಿಯಂತ 94,446 ದಾವೆ ಪೂರ್ವ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಬ್ಯಾಂಕ್ಗಳಿಂದ ಪಡೆದಿದ್ದ ಸಾಲಕ್ಕೆ ಸಂಬಂಧಿಸಿದ 8,571 ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿ, ಒಟ್ಟು 25,08,33,360 ವಸೂಲಿ ಮಾಡಿಕೊಡಲಾಗಿದೆ. ಇನ್ನೂ 95,756 ವಿದ್ಯುತ್ ಬಿಲ್ ಬಾಕಿ ಪ್ರಕರಣ ಇತ್ಯರ್ಥಪಡಿಸಿ, 13,58,15,559 ರೂ. ಮತ್ತು 78,716 ನೀರಿನ ಬಿಲ್ ಬಾಕಿ ಪ್ರಕರಣ ವಿಲೇವಾರಿ ಮಾಡಿ 13,86,19,435 ಕೋಟಿ ರು. ಸಂಗ್ರಹಿಸಿ ಕೊಡಲಾಗಿದೆ ಎಂದರು.
ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಮತ್ತು ರಿಯಲ್ ಎಸ್ಟೇಟ್ ಮೇಲ್ಮನವಿ ನ್ಯಾಯ ಮಂಡಳಿಯಲ್ಲಿ ಬಾಕಿಯಿದ್ದ 80 ಪ್ರಕರಣಗಳನ್ನು ವಿಲೇವಾರಿ ಮಾಡಿದ್ದು, 48,40,000 ರು. ಪರಿಹಾರ ಪಾವತಿಸಲು ಸೂಚಿಸಲಾಗಿದೆ. ಕರ್ನಾಟಕ ಮಾಹಿತಿ ಹಕ್ಕು ಆಯೋಗದಲ್ಲಿನ 77 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಗ್ರಾಹಕರ ಆಯೋಗದಲ್ಲಿಬಾಕಿ ಇದ್ದ 136 ಪ್ರಕರಣಗಳನ್ನು ಇತ್ಯರ್ಥಪಡಿಸಿ ಒಟ್ಟು 3,01,34,406 ರು. ಪಾವತಿಸಲು ನಿರ್ದೇಶಿಸಲಾಗಿದೆ ಎಂದು ಹೇಳಿದರು. ರಾಜ್ಯದಾದ್ಯಂತ ಇರುವ ಸಿವಿಲ್ ನ್ಯಾಯಾಲಯಗಳು ಒಟ್ಟು 7,670 ಪ್ರಕರಣಗಳನ್ನು ರಾಜಿಯಲ್ಲಿಕೊನೆಯಾಗಿವೆ. 2,967 ಮೋಟಾರು ವಾಹನ ಕ್ಲೇಮು ಪ್ರಕರಣಗಳನ್ನು ಬಗೆಹರಿಸಿ,
125,47,35,879 ರು. ಪರಿಹಾರ ಕೊಡಿಸಲಾಗಿದೆ. ಎನ್ಐ ಕಾಯ್ದೆಗೆ ಸಂಬಂಧಿಸಿದ 7,178 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 266,75,12,358 ರು. ಪರಿಹಾರ ಕೊಡಿಸಲಾಗಿದೆ. ಕಾರವಾರ ನ್ಯಾಯಾಲಯದಲ್ಲಿ 42 ವರ್ಷಗಳಷ್ಟು ಹಳೆಯದಾದ ಆಸ್ತಿ ವಿಭಜನೆ ಕೇಸ್ ಇತ್ಯರ್ಥವಾಗಿದೆ ಎಂದು ಹೇಳಿದರು.
ಅಪಪ್ರಚಾರ ಬೇಡ:
ಅದಾಲತ್ ಮೂಲಕ ಕಕ್ಷಿದಾರರಿಗೆ ಅನೂಕೂಲ ಮಾಡುತ್ತಿರುವ ಸಂದರ್ಭದಲ್ಲಿಯೇ ಕೆಲ ವಕೀಲರು, ನ್ಯಾಯಾಧೀಶರು ಮತ್ತು ಆರ್ಟಿಐ ಕಾರ್ಯಕರ್ತರು ಸೇರಿದಂತೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ವಾಸ್ತವವಾಗಿ ಈ ಕೇಸುಗಳನ್ನೂ ಅದಲಾತ್ನಲ್ಲಿವಿಚಾರಣೆ ನಡೆಸಿ ಇತ್ಯರ್ಥಪಡಿಸಲಾಗುವುದು ಎಂದರು.
ಒಂದು ಸಾವಿರ ಕೋಟಿ ರು. ದಂಡ ವಸೂಲಿಗೆ ಬಾಕಿಯಿರುವ 66 ಲಕ್ಷ ಪ್ರಕರಣಗಳು ಟ್ರಾಫಿಕ್ ಚಲನ್(ಸಂಚಾರ ನಿಯಮ ಉಲ್ಲಂಘನೆ) ವಿಲೇವಾರಿಯಾಗದೆ ಹಾಗೆ ಉಳಿದಿವೆ. ಪೊಲೀಸರ ಕೋರಿಕೆಯಂತೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ 2,46,890 ಪ್ರಕರಣಗಳನ್ನು ಇತ್ಯರ್ಥಪಡಿಸಿ 14,35,10,566 ಕೋಟಿ ರು. ಸಂಗ್ರಹಿಸಿ ಕೊಡಲಾಗಿದೆ ಎಂದರು.
ಹಾಗೆಯೇ, ಲೋಕ ಅದಾಲತ್ನಲ್ಲಿಯಾವ್ಯಾವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಅವಕಾಶವಿದೆ ಎಂಬ ಪಟ್ಟಿಯನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಬಿಡುಗಡೆ ಮಾಡಿದೆ. ಈ ಬಗ್ಗೆ ಯಾರಿಗಾದರೂ ಏನೇ ಅನುಮಾನಗಳಿದ್ದರೂ ಕೆಎಸ್ಎಲ್ಎಸ್ಎ ಸಂಪರ್ಕಿಸಬಹುದು. ಇಂತಹ ಅಪಪ್ರಚಾರದಿಂದ ಸಾರ್ವಜನಿಕರಿಗೆ ಅದರಲ್ಲೂಬಡ ಕಕ್ಷಿದಾರರಿಗೆ ತೊಂದರೆಯಾಗಲಿದೆ. ಯಾರೂ ಅಪ ಪ್ರಚಾರದಲ್ಲಿತೊಡಗಿಸಿಕೊಳ್ಳಬಾರದು. ಇನ್ನೂ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಕ್ರಮ ಜರುಗಿಸಲಾಗುವುದು. ಆ ಕುರಿತ ವರದಿಯನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಎಚ್ಚರಿಕೆ ನೀಡಿದರು.