ಲಾಕ್ಡೌನ್ ಸಡಿಲಿಕೆ: ಗ್ರೀನ್ ಝೋನ್ಗಳಿಗೆ ಮತ್ತಷ್ಟು ವಿನಾಯಿತಿ
ಬೆಂಗಳೂರು, ಏ. 28: ರಾಜ್ಯಾದ್ಯಂತ 520 ಜನರಿಗೆ ಕೊರೊನ ವೈರಸ್ ಸೋಂಕು ಹರಡಿದ್ದು, ಈಗಾಗಲೇ 20 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್ ಇನ್ನೂ ಸಂಪೂರ್ಣವಾಗಿ ಹತೋಟಿಗೆ ಬಂದಿಲ್ಲ. ಈ ಮಧ್ಯೆ ಮತ್ತಷ್ಟು ಜಿಲ್ಲೆಗಳಿಗೆ ಲಾಕ್ಡೌನ್ ಸಡಲಿಗೊಳಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಕೊರೊನಾ ವೈರಸ್ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳದ ಹಾಗೂ ಈವರೆಗೆ ಸೋಕು ಪತ್ತೆಯಾಗದ 14 ಜಿಲ್ಲೆಗಳಲ್ಲಿ ಮತ್ತಷ್ಟು ಚಟುವಟಿಕೆಗಳಿಗೆ ಅವಕಾಶ ಕೊಡಲಾಗಿದೆ.
Recommended Video
ಚಾಮರಾಜನಗರ, ಕೊಪ್ಪಳ, ಚಿಕ್ಕಮಗಳೂರು, ರಾಯಚೂರು, ಚಿತ್ರದುರ್ಗ, ರಾಮನಗರ, ಹಾಸನ, ಶಿವಮೊಗ್ಗ, ಹಾವೇರಿ, ಯಾದಗಿರಿ, ಕೋಲಾರ, ದಾವಣಗೆರೆ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಹೆಚ್ಚುವರಿ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಆದೇಶ ಮಾಡಿದ್ದಾರೆ. ದಾವಣಗೆರೆ ಹಾಗೂ ಕೊಡಗು ಜಿಲ್ಲೆಗಳಲ್ಲಿ ಆರಂಭದಲ್ಲಿ ಸೋಂಕು ಪತ್ತೆಯಾಗಿತ್ತು. ಬಳಿಕ ಕಳೆದ ಹಲವು ದಿನಗಳಿಂದ ಸೋಂಕು ಪತ್ತೆಯಾಗಿಲ್ಲ. ಹೀಗಾಗಿ ಲಾಕ್ಡೌನ್ ಸಡಿಲಗೊಳಿಸಲಾಗಿದೆ.
ಕೇಂದ್ರ ಸರ್ಕಾರ ಕಳೆದ ಏ. 15 ರಂದು ಹೊರಡಿಸಿದ್ದ ಮಾರ್ಗಸೂಚಿ ಅನ್ವಯ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ನಗರ, ಪಟ್ಟಣ ಪ್ರದೇಶ ಹೊರತುಪಡಿಸಿ, ಗ್ರಾಮೀಣ ಭಾಗದ ಕೈಗಾರಿಕೆಗಳು ಆರಂಭಿಸಲು ಅನುಮತಿ ಕೊಡಲಾಗಿದೆ. ಆರ್ಥಿಕ ವಲಯಗಳಲ್ಲಿರುವ ರಫ್ತು ಆಧಾರಿತ ಕಾರ್ಖಾನೆಗಳು, ಅಂಗಡಿ ಮತ್ತು ಎಸ್ಟಾಬ್ಲಿಷ್ಮೆಂಟ್ನಲ್ಲಿ ನೋಂದಣಿಯಾಗಿರುವ ಎಲ್ಲ ಅಂಗಡಿಗಳು, ಜನವಸತಿ ಪ್ರದೇಶಗಳಲ್ಲಿನ ಅಂಗಡಿಗಳು, ಕಾಂಪ್ಲೆಕ್ಸ್ಗಳು (ಸಿಂಗಲ್ ಬ್ಯಾಂಡ್, ಮಲ್ಟಿ ಬ್ಯಾಂಡ್ ಮಾಲ್ಗಳನ್ನು ಹೊರತು ಪಡಿಸಿ) ಶೇಕಡಾ 50ರಷ್ಟು ಉದ್ಯೋಗಿಗಳನ್ನು ಕೆಲಸಕ್ಕೆ ಬಳಸಿಕೊಂಡು ಆರಂಭಿಸಲು ಅನುಮತಿ ಕೊಡಲಾಗಿದೆ.
ಅದರೊಂದಿಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ಕೈಗವಸು ಬಳಸಲು ಸೂಚನೆ ನೀಡಲಾಗಿದೆ. ಹಸಿರು ವಲಯಗಳಲ್ಲಿ ಸಾರ್ವಜನಿಕ ಸಾರಿಗೆಗೆ ಅವಕಾಶವಿರುವುದಿಲ್ಲ. ಬಸ್, ರೈಲು ಹಾಗು ಉಳಿದ ಯಾವುದೇ ಸಾರ್ವಜನಿಕ ಸಾರಿಗೆಗೆ ಅವಕಾಶ ಇರುವುದಿಲ್ಲ.