ಲಾಕ್ ಡೌನ್ ಅವಧಿಯಲ್ಲಿ ಸಂಚರಿಸಲಿದೆ ಫ್ಲೈಬಸ್
ಬೆಂಗಳೂರು, ಏಪ್ರಿಲ್ 27; ಕರ್ನಾಟಕದಲ್ಲಿ 14 ದಿನಗಳ ಲಾಕ್ ಡೌನ್ ಮಂಗಳವಾರ ರಾತ್ರಿ 9 ಗಂಟೆಯಿಂದ ಜಾರಿಗೆ ಬರಲಿದೆ. ರಾಜ್ಯಾದ್ಯಂತ ಖಾಸಗಿ ಮತ್ತು ಸರ್ಕಾರಿ ಬಸ್ಗಳ ಸಂಚಾರ ಈ ಅವಧಿಯಲ್ಲಿ ಸ್ಥಗಿತಗೊಳ್ಳಲಿದೆ.
ಕರ್ನಾಟಕ ಸರ್ಕಾರ ಸೋಮವಾರ ಬಿಡುಗಡೆ ಮಾಡಿರುವ ಮಾರ್ಗಸೂಚಿ ಅನ್ವಯ 14 ದಿನ ಬಸ್ಗಳ ಸಂಚಾರ ಇರುವುದಿಲ್ಲ. ತುರ್ತು ಸಂದರ್ಭದಲ್ಲಿ ಮಾತ್ರ ಜನರು ಖಾಸಗಿ ವಾಹನಗಳಲ್ಲಿ ಸಂಚಾರ ನಡೆಸಬಹುದಾಗಿದೆ.
ಲಾಕ್ ಡೌನ್ ಜಾರಿಯಲ್ಲಿದ್ದರೂ ವಿಮಾನ ಸೇವೆಗೆ ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ. ವಿಮಾನ ನಿಲ್ದಾಣಕ್ಕೆ ಜನರು ಟ್ಯಾಕ್ಸಿಯಲ್ಲಿ ಸಂಚಾರ ನಡೆಸಲು ಸರ್ಕಾರ ಅವಕಾಶ ನೀಡಿದೆ. ಆದರೆ, ಪೊಲೀಸರು ತಪಾಸಣೆಗೆ ತಡೆದರೆ ವಿಮಾನದ ಟಿಕೆಟ್ ತೋರಿಸಬೇಕಿದೆ.
ಕೆಎಸ್ಆರ್ಟಿಸಿ ಬೆಂಗಳೂರು ವಿಮಾನ ನಿಲ್ದಾಣದಿಂದ ಮೈಸೂರು ಮತ್ತು ಮಡಿಕೇರಿಗೆ ಫ್ಲೈ ಬಸ್ಗಳನ್ನು ಓಡಿಸುತ್ತದೆ. ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಈ ಸೇವೆಯನ್ನು ಆರಂಭಿಸಲಾಗಿದೆ.
ಲಾಕ್ ಡೌನ್ ಹಿನ್ನಲೆಯಲ್ಲಿ ಫ್ಲೈ ಬಸ್ ಸಂಚಾರದ ಬಗ್ಗೆ ಕೆಎಸ್ಆರ್ಟಿಸಿ ಮಾಹಿತಿ ನೀಡಿದೆ. ಸರ್ಕಾರದ ಸುತ್ತೋಲೆಯ ಪ್ರಕಾರ ವಿಮಾನ ನಿಲ್ದಾಣದ ಬಸ್ಸು ಸೇವೆಗಳು ಯಥಾರೀತಿ ಮುಂದುವರಿಯಲಿದೆ. ಅದರಂತೆ ಕೆಎಸ್ಆರ್ಟಿಸಿ ಫ್ಲೈಬಸ್ ಸೇವೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರು ಮತ್ತು ಮಡಿಕೇರಿಗೆ ಕಾರ್ಯ ನಿರ್ವಹಿಸಲಿದೆ ಎಂದು ಸ್ಪಷ್ಟಪಡಿಸಿದೆ.
Recommended Video
ಲಾಕ್ ಡೌನ್ ಅವಧಿಯಲ್ಲಿ ಮೈಸೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಜನರು ಪ್ಲೈ ಬಸ್ ಸೇವೆಯು ಉಪಯೋಗವನ್ನು ಪಡೆದುಕೊಳ್ಳಬಹುದು. ಬಸ್ ವೇಳಾಪಟ್ಟಿ, ಆನ್ ಲೈನ್ ಬುಕ್ಕಿಂಗ್ ಕೆಎಸ್ಆರ್ಟಿಸಿ ವೆಬ್ ಸೈಟ್ನಲ್ಲಿ ಲಭ್ಯವಿದೆ.