RTPS,YTPS, BTPS ಖಾಸಗೀಕರಣದ ವಿರುದ್ಧ ಸ್ಥಳೀಯರ ಆಕ್ರೋಶ
ರಾಯಚೂರು ಶಾಖೋತ್ಪನ್ನ ವಿದ್ಯುತ್ಕೇಂದ್ರ (ಆರ್ಟಿಪಿಎಸ್), ಯರಮರಸ್ ಸೂಪರ್ ಕ್ರಿಟಿಕಲ್ ಪವರ್ ಸ್ಟೇಷನ್ (ವೈಟಿಪಿಎಸ್) ಹಾಗೂ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಬಿಟಿಪಿಎಸ್)ವನ್ನು ಖಾಸಗಿ ಕಂಪನಿಗೆ ಗುತ್ತಿಗೆ ನೀಡುವುದಕ್ಕೆ ಮುಂದಾಗಿರುವ ಸರ್ಕಾರದ ಕ್ರಮವನ್ನ ವಿಪಕ್ಷ ನಾಯಕರು ತೀವ್ರವಾಗಿ ವಿರೋಧಿಸಿದ್ದಾರೆ.
ಸರ್ಕಾರ ವಿದ್ಯುತ್ ಕೇಂದ್ರಗಳನ್ನು ಖಾಸಗೀಯವರಿಗೆ ನೀಡಿದರೆ ಅನೇಕ ರೈತರು ಸಮಸ್ಯೆಗಳಿಗೆ ಸಿಲುಕಿಕೊಳ್ಳಲಿದ್ದಾರೆ ಜೊತೆಗೆ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಲಿದೆ. ಮಾತ್ರವಲ್ಲದೆ ವಿದ್ಯಾವಂತರಿಗೆ ಘೋಷಣೆಯಾಗಲಿದೆ ಎನ್ನುವಂತಹ ಆರೋಪಗಳು ಕೇಳಿ ಬಂದಿದೆ.
RTPS: ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 5 ಘಟಕಗಳು ಸ್ಥಗಿತ
ಈ ಬಗ್ಗೆ ಮಾತನಾಡಿದ ಹೈದರಾಬಾದ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಡಾ.ರಝಾಕ ಉಸ್ತಾದ ಅವರು, 'ವೈಟಿಪಿಎಸ್ ನಿರ್ಮಾಣಕ್ಕಾಗಿ ರೈತರು ಸಾವಿರಾರು ಎಕರೆ ಭೂಮಿಯನ್ನು ಬಿಟ್ಟು ಕೊಟ್ಟಿದ್ದಾರೆ. ಇನ್ನೂ ಅನೇಕ ರೈತರ ಕುಟುಂಬಗಳಿಗೆ ಉದ್ಯೋಗ ಸಿಕ್ಕಿಲ್ಲ. ಖಾಸಗೀಕರಣದಿಂದ ಜನರಿಗೆ ಉದ್ಯೋಗ ಕಳೆದುಕೊಳ್ಳುತ್ತಾರೆ. ಇದರಿಂದ ರೈತರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ' ಎಂದು ಹೇಳಿದ್ದಾರೆ.
*ಆರ್ಟಿಪಿಎಸ್ ಹಾಗೂ ವೈಟಿಪಿಎಸ್ ಖಾಸಗೀಕರಣ ಮಾಡಿದರೆ ಸರ್ಕಾರ ಹೆಚ್ಚು ಹಣಕ್ಕೆ ವಿದ್ಯುತ್ ಖರೀದಿ ಮಾಡುತ್ತದೆ. ಸದ್ಯ ಕಡಿಮೆ ಹಣದಲ್ಲಿ ವಿದ್ಯುತ್ ಖರೀದಿ ಮಾಡುವಾಗ ಖಾಸಗೀಕರಣಗೊಂಡರೆ ಹೆಚ್ಚಿನ ಹಣಕ್ಕೆ ವಿದ್ಯುತ್ ಖರೀದಿ ಮಾಡಬೇಕಾಗಬಹುದು.
*ಇದನ್ನು ಸರ್ಕಾರ ನಡೆಸಿದರೆ ಜಮೀನು ನೀಡಿದವರಿಗೆ ಕೆಲಸ ಕೊಡಬೇಕು. ಆದರೆ ಖಾಸಗೀಯವರಿಗೆ ನೀಡಿದರೆ ಕೆಲಸ ಕೊಡಲೇಬೇಕು ಎನ್ನುವ ಕಟ್ಟುನಿಟ್ಟಿಲ್ಲ.
*ಸುಮಾರು 3-4 ಸಾವಿರ ಜನ ಕಂಪನಿ ಒಳಗಡೆ ಕೆಲಸ ಮಾಡುತ್ತಾರೆ. ಖಾಸಗೀಯವರಿಗೆ ನೀಡಿದರೇ ಇದೇ ಕೆಲಸಗಾರರನ್ನು ಮುಂದುವರೆಸಬಹುದು ಅಥವಾ ಶಿಫ್ಟ್ ಮಾಡಬಹುದು. ಆದರೆ ಮುಂದಿನ ಪೀಳಿಗೆಯ ಗತಿ ಏನು? ಎನ್ನುವ ಪ್ರಶ್ನೆ. ಖಾಸಗೀಯವರು ತಮ್ಮ ಇಚ್ಚೆಯಂತೆ ಬೇರೆ ರಾಜ್ಯದ ಉದ್ಯೋಗಿಗಳಿಗೆ ಕೆಲಸ ನೀಡಬಹುದು. ನಮ್ಮ ರಾಜ್ಯದ ಜನರನ್ನು ಕಡೆಗಣಿಸಬಹುದು. ಖಾಸಗಿಯವರು ಯಾರಿಗೆ ಬೇಕಾದರೂ ಕೆಲಸಕ್ಕೆ ತೆಗೆದುಕೊಳ್ಳಬಹುದು.
*ಇನ್ನೂ ವೈಟಿಪಿಎಸ್ ರಾಜ್ಯದಲ್ಲಿ ಹೊಸ ಪ್ಲಾಂಟ್. ಸಾವಿರಾರು ಕೋಟಿ ಖರ್ಚು ಮಾಡಿ ಹೊಸದಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿ (ಮಾಲಿನ್ಯ ಮುಕ್ತ) ನವೀಕರಿಸಿ ಖಾಸಗಿಯವರಿಗೆ ನೀಡುವುದರಲ್ಲಿ ಅರ್ಥವಿಲ್ಲ. ಜನಸಾಮಾನ್ಯರ ಹಣದಲ್ಲಿ ನವೀಕರಿಸಿ ಖಾಸಗೀಯರ ಕೈಗೆ ನೀಡುವುದು 'ಬೇರೆಯವರ ಹಣದಲ್ಲಿ ಮನೆ ಕಟ್ಟಿ ಅಲಂಕರಿಸಿ, ನಮ್ಮ ಹೆಸರಿನಲ್ಲಿ ಅಧಿಕ ಹಣಕ್ಕೆ ಮಾರಿಕೊಂಡಂತೆ' ಎಂದಿದ್ದಾರೆ.
*ಇದನ್ನು ಕಿಕ್ ಬ್ಯಾಕ್ ಪ್ರಕರಣಕ್ಕೆ ಹೋಲಿಕೆ ಮಾಡಬಹುದು ಎಂದಿದ್ದಾರೆ.
*ಇದು ಖಾಸಗೀಕರಣದ ಮುಂದುವರೆದ ಭಾಗ. ಇದರಿಂದ ಸ್ಥಳೀಯರಿಗೆ ಸಮಸ್ಯೆಯಾಗುತ್ತದೆ.
* ವೈಟಿಪಿಎಸ್ ನಿಂದ ಜಮೀನ್ ಕಳೆದುಕೊಂಡವರಿಗೆ ಕಷ್ಟವಾಗುತ್ತದೆ. ಇದರಲ್ಲಿ ಸುಮಾರು 150 ರೈತ ಕುಟುಂಬಗಳಿಗೆ ಕೆಲಸ ನೀಡಬೇಕಿದೆ.
ಸ್ಥಳೀಯರಿಗೆ ದೊಡ್ಡ ಸಮಸ್ಯೆ -ಎಂ.ವಿರೂಪಾಕ್ಷಿ
ಇನ್ನೂ ಯರಮರಸ್ ಸೂಪರ್ ಕ್ರಿಟಿಕಲ್ ಪವರ್ ಸ್ಟೇಷನ್ (ವೈಟಿಪಿಎಸ್) ಹಾಗೂ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಬಿಟಿಪಿಎಸ್)ವನ್ನು ಖಾಸಗಿ ಕಂಪನಿಗೆ ಗುತ್ತಿಗೆ ನೀಡುವುದಕ್ಕೆ ಮುಂದಾಗಿರುವ ಸರ್ಕಾರದ ಕ್ರಮವನ್ನ ರಾಯಚೂರು ಜಿಲ್ಲಾ ಜಾತ್ಯತೀತ ಜನತಾದಳ ಅಧ್ಯಕ್ಷ ಎಂ.ವಿರೂಪಾಕ್ಷಿ ವಿರೋಧಿಸಿದ್ದಾರೆ. ದಿಲ್ಲಿಯ ಕೆಲ ರಾಜಕಾರಣಿಗಳ ಕುತಂತ್ರದಿಂದ ಖಾಸಗೀ ವ್ಯಕ್ತಿಗಳಿಗೆ ಮಾರಾಟ ಮಾಡುವಂತ ಎಲ್ಲಾ ಪ್ರಯತ್ನ ಹಾಗೂ ದಾಖಲೆಗಳನ್ನು ಸೃಷ್ಟಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಭಾಗದ ನೆಲೆ ಜಲ ಉಪಯೋಗ ಮಾಡಿಕೊಂಡು ನಿರ್ಮಾಣ ಮಾಡಿರುವ ಕಂಪನಿಗಳನ್ನು ಖಾಸಗೀಕರಣ ಮಾಡುವುದರಿಂದ ಸ್ಥಳೀಯರಿಗೆ ದೊಡ್ಡ ಹೊಡೆತವನ್ನು ನೀಡುವಂತ ಕೆಲಸವಾಗುತ್ತಿದೆ ಎಂದು ಹೇಳಿದ್ದಾರೆ.
ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಶಾಸಕ ಬಸನಗೌಡ ದದ್ದಲ
ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಆರ್ಟಿಪಿಎಸ್)ವನ್ನು ಖಾಸಗೀಯವರಿಗೆ ನೀಡಬೇಕು ಎನ್ನುವ ಮಾತುಗಳು ಮತ್ತೆ ಕೇಳಿ ಬಂದ ಹಿನ್ನೆಲೆಯಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಒಂದು ವೇಳೆ ಕ್ಷೇತ್ರದ ಜನರು ಕಾರ್ಮಿಕರೊಂದಿಗೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ ಹೇಳಿದ್ದಾರೆ.
ಆರ್ಟಿಪಿಎಸ್ ಖಾಸಗಿಯವರಿಗೆ ನೀಡಲಾಗುತ್ತದೆ ಎನ್ನುವ ಸುದ್ದಿ ಕೇಳಿ ಬಂದಾಗ ನಾನು ಈ ಕುರಿತಂತೆ ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನಿಸಿದಾಗ ಸರಕಾರ ಖಾಸಗಿಯವರಿಗೆ ನೀಡುವ ಉದ್ದೇಶವಿಲ್ಲ ಎಂದು ಲಿಖಿತವಾಗಿ ವಿಧಾನಸಭೆ ಅಧಿವೇಶನದಲ್ಲಿ ಉತ್ತರ ನೀಡಿದೆ. ಆದರೆ ಈಗ ಸರಕಾರ ಆರ್ಟಿಪಿಎಸ್ನ್ನು ಅದಾನಿ ಗ್ರೂಪ್ಗೆ ನೀಡಲು ಮುಂದಾಗಿದೆ ಎನ್ನುವ ಸುದ್ದಿಗಳು ಕೇಳಿ ಬಂದಿವೆ. ಸರಕಾರ ಒಳಗೊಂದು ಹೊರಗೊಂದು ಎನ್ನುವ ರೀತಿಯಲ್ಲಿ ನಡೆದು ಕೊಂಡರೆ ಹೋರಾಟದ ಮೂಲಕ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಆರ್ಟಿಪಿಎಸ್ ಈ ಭಾಗದ ಜನರ ಬದುಕು ಜೀವ. ಅವರ ಜೀವನವನ್ನು ಬದುಕನ್ನು ಖಾಸಗಿಯವರಿಗೆ ಒಪ್ಪಿಸಲು ಬಿಡುವುದಿಲ್ಲ. ಆರ್ಟಿಪಿಎಸ್ ಗೆ ಅನೇಕ ರೈತರು ಭೂಮಿಯನ್ನು ಕಳೆದುಕೊಂಡಿದ್ದಾರೆ. ಇನ್ನೂ ಅನೇಕ ರೈತರು ಕುಟುಂಬಗಳಿಗೆ ಉದ್ಯೋಗ ಸಿಕ್ಕಿಲ್ಲ. ಸಮರ್ಪಕ ಪರಿಹಾರ ಸಿಕ್ಕಿಲ್ಲ. ಅಗತ್ಯ ಸೌಲಭ್ಯಗಳಿಗಾಗಿ ರೈತರು ಹೋರಾಟ ನಡೆಸುತ್ತ ಬಂದಿದ್ದಾರೆ. ನಾನು ಸಹ ರೈತರಿಗೆ ಧ್ವನಿಯಾಗಿ ಅವರಿಗೆ ಬೆನ್ನೆಲುಬು ಆಗಿ ನಿಂತು ಸರಕಾರದ ಮಟ್ಟದಲ್ಲಿ ಹೋರಾಟ ನಡೆಸುವ ಮೂಲಕ ಒತ್ತಡತರುವ ಕೆಲಸವನ್ನು ಶಕ್ತಿ ಮೀರಿ ಮಾಡುತ್ತಿರುವೆ ಎಂದು ಅವರು ತಿಳಿಸಿದ್ದಾರೆ.
ಆರ್ಟಿಪಿಎಸ್ ನಂಬಿಕೊಂಡು ಅನೇಕ ರೈತರು ಟ್ರಾಕ್ಟರ್ ಸೇರಿದಂತೆ ಇನ್ನಿತರ ರೈತರು ವಾಹನಗಳನ್ನು ಖರೀದಿ ಮಾಡಿ ಜೀವನೋಪಾಯ ನಡೆಸುತ್ತಿದ್ದಾರೆ. ಒಂದು ವೇಳೆ ಸರಕಾರ ಆರ್ಟಿಪಿಎಸ್ ಅನ್ನು ಖಾಸಗಿಯವರಿಗೆ ಒಪ್ಪಿಸಿದರೆ ಈ ಭಾಗದ ರೈತರ ಜೀವನದ ಮೇಲೆ ಸರಕಾರ ಬರೆ ಎಳೆದಂತೆ ಆಗುತ್ತದೆ. ಹೀಗಾಗಿ ಸರಕಾರ ಎಲ್ಲ ಆಯಾಮಗಳ ಬಗ್ಗೆ ಗಂಭೀರವಾಗಿ ಯೋಚಿಸಿ ಆರ್ಟಿಪಿಎಸ್ ಖಾಸಗಿ ಯವರಿಗೆ ನೀಡುವ ಉದ್ದೇಶವನ್ನು ಕೈಬಿಡಬೇಕು. ಇಲ್ಲದಿದ್ದರೆ ರೈತರ ಕಾರ್ಮಿಕರ ಸಾರ್ವಜನಿಕ ಹೋರಾಟ ನೋಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
'ನಿರೋದ್ಯೋಗಿಗಳ ಸಂಖ್ಯೆ ಹೆಚ್ಚಳ' ವಸಂತ ಕುಮಾರ್
ಈ ಬಗ್ಗೆ 'ಒನ್ಇಂಡಿಯಾ ಕನ್ನಡ' ಜೊತೆ ಮಾತನಾಡಿದ ಕೆಪಿಸಿಸಿ ರಾಜ್ಯ ವಕ್ತಾರ ವಸಂತ ಕುಮಾರ್, 'ಆರ್ಟಿಪಿಎಸ್, ವೈಟಿಪಿಎಸ್ ಹಾಗೂ ಬಿಟಿಪಿಎಸ್ ಖಾಸಗಿಯವರಿಗೆ ನೀಡುವುದರಿಂದ ನಿರೋದ್ಯೋಗಿಗಳ ಸಂಖ್ಯೆ ಹೆಚ್ಚಾತ್ತದೆ. ವಿದ್ಯಾವಂತರಿಗೆ ಘೋಷಣೆಯಾಗಲಿದೆ. ಕ್ರಾಂಟ್ಯಾಕ್ಟ್ ಕೊಡುವಂತ ಯೋಜನೆ ಇದು. ಇದರಿಂದ ಯಾರಿಗೂ ಲಾಭವಿಲ್ಲ. ಈ ಭಾಗದ ಜನ ನಿರುದ್ಯೋಗಿಗಳಾಗುತ್ತಾರೆ. ಹಂತ ಹಂತವಾಗಿ ಸರ್ಕಾರ ಈ ಕಾರ್ಯಕ್ಕೆ ಮುಂದಾಗಿದೆ. ಜೊತೆಗೆ ಈ ಭಾಗದ ಜನರ ಮೀಸಲಾತಿಗೆ ದಕ್ಕೆ ತರುವಂತ ಕೆಲಸವಿದು' ಎಂದು ಆರೋಪಿಸಿದ್ದಾರೆ.
ಮೂರು ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ
ಸದ್ಯ ರಾಜ್ಯದ ಮೂರು ವಿದ್ಯುತ್ ಸ್ಥಾವರಗಳು ಕಲ್ಲಿದ್ದಲು ಕೊರತೆಯನ್ನು ಅನುಭವಿಸುತ್ತಿವೆ. ಈ ಬಗ್ಗೆ ಚಿಂತಿಸಬೇಕಾದ ಸರ್ಕಾರ ವಿದ್ಯುತ್ ಸ್ಥಾವರಗಳನ್ನು ಖಾಸಗಿಯವರಿಗೆ ನೀಡಲು ಮುಂದಾಗುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಸಾಲಾದಕ್ಕೆ ಸಾವಿರಾರು ಸ್ಥಳೀಯ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ಥಾವರಗಳು ಸ್ಥಗಿತಗೊಳಿಸಿರುವುದೇ ಅವರ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಹೀಗಿರುವಾಗ ಅವುಗಳನ್ನ ಖಾಸಗೀಕರಣ ಮಾಡುವುದು ಎಷ್ಟು ಸರಿ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.
ರಾಯಚೂರಿನ ಶಕ್ತಿ ನಗರದ ಎಂಟು ಘಟಕಗಳಿಂದ 1,720 ಮೆ. ವ್ಯಾ. ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವಿದ್ದರೂ ಕೇವಲ ಮೂರು ಘಟಕಗಳಿಂದ 460 ಮೆ. ವ್ಯಾ. ಉತ್ಪಾದಿಸಲಾಗುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಇಲ್ಲಿ ನಾಲ್ಕು ಘಟಕಗಳಲ್ಲಿ ಉತ್ಪಾದಿಸಲಾಗುತ್ತಿತ್ತು. ಒಂದು ಘಟಕದಲ್ಲಿ ಉತ್ಪಾದನೆ ಸ್ಥಗಿತಗೊಳಿಸಿದ್ದು, ಈಗ ಮೂರು ಘಟಕಗಳಲ್ಲಿ ಮಾತ್ರ ವಿದ್ಯುತ್ ಉತ್ಪಾದನೆ ಆಗ್ತಿದೆ. ದಿನವೊಂದಕ್ಕೆ ಶಕ್ತಿನಗರಕ್ಕೆ 16.3 ಮೆ. ಟನ್ ಕಲ್ಲಿದ್ದಲು ಬೇಕಿದೆ. ಸದ್ಯ 18.9 ಕಲ್ಲಿದ್ದಲು ಲಭ್ಯವಿದೆ.
ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ 2 ಘಟಕಗಳಿಂದ 1,600 ಮೆ. ವ್ಯಾ. ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿದ್ದರೂ, ಒಂದು ಘಟಕದಿಂದ 700 ಮೆ. ವ್ಯಾ. ವಿದ್ಯುತ್ ಮಾತ್ರ ಉತ್ಪಾದಿಸಲಾಗುತ್ತಿದೆ. ದಿನವೊಂದಕ್ಕೆ ಇಲ್ಲಿ 13.7 ಮೆ. ಟನ್ ಕಲ್ಲಿದ್ದಲು ಬೇಕಿದ್ದು, ಸದ್ಯ 20 ಮೆ. ಟನ್ ಲಭ್ಯವಿದೆ.
ಬಳ್ಳಾರಿಯ ಕುಡಿತಿನಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಮೂರು ಘಟಕಗಳಿಂದ ಒಟ್ಟು 1,700 ಮೆ. ವ್ಯಾ. ಉತ್ಪಾದನಾ ಸಾಮರ್ಥ್ಯವಿದ್ದರೂ, ಸದ್ಯ ಕೇವಲ ಒಂದು ಘಟಕದಲ್ಲಿ 430 ಮೆ. ವ್ಯಾ. ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಬಿಟಿಪಿಎಸ್ನಲ್ಲಿ ದಿನವೊಂದಕ್ಕೆ 1.5 ಮೆ. ಟನ್ ಕಲ್ಲಿದ್ದಲು ಅವಶ್ಯಕತೆಯಿದೆ. ಆದರೆ ಸದ್ಯ 17.6 ಮೆ. ಟನ್ ಕಲ್ಲಿದ್ದಲಿದೆ.