ಸಿಎಂ ಯಡಿಯೂರಪ್ಪನವರು ಸಾಹಿತಿ ಹಂಪನಾ ಕ್ಷಮೆಯಾಚಿಸಲಿ: ಕರವೇ
ಬೆಂಗಳೂರು, ಜನವರಿ.22: ರಾಜ್ಯದಲ್ಲಿ "ಆಳುವ ಸರ್ಕಾರವನ್ನು ಟೀಕಿಸಿದರು ಎಂಬ ಕಾರಣಕ್ಕೆ ಕನ್ನಡದ ಹೆಸರಾಂತ ಸಾಹಿತಿ ನಾಡೋಜ ಡಾ. ಹಂಪನಾರನ್ನು ಪೊಲೀಸ್ ಠಾಣೆಗೆ ಕರೆಯಿಸಿ ಅಪಮಾನಿಸಲಾಗಿದೆ. ಇದನ್ನು ಮಾಡಿದವರದ್ದು ವಿಕೃತ ಮನಸ್ಥಿತಿಯಾಗಿದೆ. ಕನ್ನಡಿಗರ ಪರಂಪರೆಯ ಮೇಲೆ ಮಾಡಿದ ಹಲ್ಲೆಯಿದು. ಈ ದುಷ್ಕೃತ್ಯಕ್ಕೆ ಯಾರು ಕಾರಣರೋ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು" ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಆಗ್ರಹಿಸಿದ್ದಾರೆ.
"ಹಂಪನಾ ಅವರು ಕನ್ನಡ ಸಾಹಿತ್ಯ, ಸಂಸ್ಕೃತಿ, ಸಂಶೋಧನಾ ಕ್ಷೇತ್ರಗಳಿಗೆ ನೀಡಿರುವ ಕೊಡುಗೆ ಅಪಾರವಾಗಿದೆ. ಕನ್ನಡ ಕುಲಕೋಟಿ ಹಂಪನಾ ಅವರಿಗೆ ಸದಾ ಆಭಾರಿಯಾಗಿರಬೇಕು. ಹೀಗಿರುವಾಗ ಅವರ ಮೇಲೆ ಸುಳ್ಳು ದೂರು ದಾಖಲಿಸಿಕೊಂಡಿದ್ದಲ್ಲದೆ, ಪೊಲೀಸ್ ಠಾಣೆಗೆ ಕರೆಯಿಸಿಕೊಂಡಿದ್ದು ಹೀನಕೃತ್ಯವಾಗಿದೆ. ಇದು ಕನ್ನಡ ಸಂಸ್ಕೃತಿಗೆ, ಪರಂಪರೆಗೆ ಎಸಗಿದ ಅಪಚಾರ" ಎಂದು ಕರವೇ ದೂಷಿಸಿದೆ.
ರಕ್ಷಣಾ ವೇದಿಕೆಯಿಂದ #NoHindiSlavery ಟ್ವೀಟ್ ಅಭಿಯಾನ
"ಭಾರತ ಒಕ್ಕೂಟ ಈಗಲೂ ಪ್ರಜಾಪ್ರಭುತ್ವವನ್ನು ಹೊಂದಿದೆ. ಭಾರತೀಯರು ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಸರ್ಕಾರಗಳನ್ನು ಟೀಕಿಸುವುದು, ಸರ್ಕಾರಗಳ ನಡೆಗಳ ವಿರುದ್ಧ ಪ್ರತಿಭಟಿಸುವುದು ಪ್ರತಿಯೊಬ್ಬ ನಾಗರಿಕರ ಹಕ್ಕು. ರಾಜ್ಯ ಸರ್ಕಾರ ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಕರವೇ ಕಿಡಿ ಕಾರಿದೆ.
ಈ ಹಿಂದೆ ರಾಷ್ಟ್ರಕವಿ ಕುವೆಂಪು ಅವರಿಗೂ ನೋಟಿಸ್
ಏಕೀಕರಣಕ್ಕೆ ಮನಸು ಮಾಡುತ್ತಿಲ್ಲ ಎಂಬ ಕಾರಣಕ್ಕೆ ಸರ್ಕಾರವನ್ನು ಟೀಕಿಸಿದರೆಂಬ ಕಾರಣಕ್ಕೆ ರಾಷ್ಟ್ರಕವಿ ಕುವೆಂಪು ಅವರಿಗೆ ಹಿಂದೆ ನೋಟೀಸ್ ನೀಡಲಾಗಿತ್ತು. ಆಗ ಕುವೆಂಪು ಅವರು 'ಅಖಂಡ ಕರ್ನಾಟಕ' ಪದ್ಯವನ್ನು ಬರೆದು "ಇಂದು ಬಂದು ನಾಳೆ ಸಂದು ಹೋಹ ಸಚಿವ ಮಂಡಲ, ರಚಿಸುವೊಂದು ಕೃತಕವಲ್ತೊ, ಸಿರಿಗನ್ನಡ ಸರಸ್ವತಿಯ ವಜ್ರ ಕರ್ಣಕುಂಡಲ!" ಕಟುವಾಗಿ ಟೀಕಿಸಿದ್ದರು.
ಕುವೆಂಪು ಅವರಿಗೆ ನೋಟಿಸ್ ನೀಡಲು ನಿರಾಕರಣೆ
ಅಖಂಡ ಕರ್ನಾಟಕ ಕವಿತೆ ಅತ್ಯಂತ ಜನಪ್ರಿಯಗೊಳ್ಳುತ್ತಿದ್ದಂತೆ, ಅಂದಿನ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರಿಗೆ ಮತ್ತೊಂದು ನೋಟಿಸ್ ಕೊಡಿ ಎಂದು ಹಲವರು ಸಲಹೆ ನೀಡಿದರಂತೆ. ಆಗ ಕೆ.ಸಿ.ರೆಡ್ಡಿಯವರು, "ಒಂದು ನೋಟಿಸಿಗೆ ಕುವೆಂಪು ಅವರು ಒಂದು ಪದ್ಯ ಬರೆದಿದ್ದಾರೆ, ಇನ್ನೊಂದು ನೋಟಿಸು ಕೊಟ್ಟರೆ ಮತ್ತೆ ಮೂರು ಪದ್ಯ ಬರೆಯುತ್ತಾರೆ. ಬೆಂಕಿಯ ಜತೆ ಸರಸ ಒಳ್ಳೆಯಲ್ಲ" ಎಂದಿದ್ದರು ಎಂಬ ಬಗ್ಗೆ ಕರವೇ ತನ್ನ ಟ್ವೀಟ್ ನಲ್ಲಿ ಉಲ್ಲೇಖಿಸಿದೆ.
ಸಾಹಿತಿ ಹಂಪನಾ ವಿರುದ್ಧ ಖಾಕಿ ಛೂ ಬಿಟ್ಟಿತಾ ಸರ್ಕಾರ?
ಹಂಪನಾ ಅವರ ಮೇಲೆ ಪೊಲೀಸರನ್ನು ಛೂ ಬಿಟ್ಟು ರಾಜ್ಯ ಸರ್ಕಾರ ಈಗ ನಿಜಕ್ಕೂ ಬೆಂಕಿಯ ಜತೆ ಸರಸವಾಡುತ್ತಿದೆ. ಕನ್ನಡ ಸಾಹಿತ್ಯ, ಸಂಸ್ಕೃತಿ, ಇತಿಹಾಸದ ಗಂಧಗಾಳಿ ಇಲ್ಲದವರಷ್ಟೇ ಇಷ್ಟು ವಿಕೃತವಾಗಿ ನಡೆದುಕೊಳ್ಳಲು ಸಾಧ್ಯ. ಪೊಲೀಸರನ್ನು ಮುಂದೆ ಬಿಟ್ಟು ಸಾಹಿತಿಗಳ ಕೊರಳನ್ನು ಮುಟ್ಟುಗೋಲು ಹಾಕಿಕೊಳ್ಳಲು, ಧ್ವನಿ ಅಡಗಿಸಲು ಸಾಧ್ಯವಿಲ್ಲ. ಯಾವುದೇ ಜನಪರವಾದ ಸರ್ಕಾರ ಜನರ ಆಗ್ರಹಗಳನ್ನು ಮುಕ್ತ ಮನಸಿನಿಂದ ಆಲಿಸಬೇಕು. ಸಾಹಿತಿಗಳು ಮೊದಲಿನಿಂದಲೂ ಸರ್ಕಾರ, ಸಮಾಜವನ್ನು ಎಚ್ಚರಿಸುವ ಮಾತುಗಳನ್ನು ಆಡುತ್ತಾ ಬಂದಿದ್ದಾರೆ. ಇಂಥ ಧ್ವನಿಗಳನ್ನು ಹತ್ತಿಕ್ಕುವುದೆಂದರೆ ಪ್ರಜಾಪ್ರಭುತ್ವ, ಸಂವಿಧಾನವನ್ನು ನಾಶಪಡಿಸುವುದು ಎಂದರ್ಥ. ಸರ್ಕಾರ ನಡೆಸುವವರಿಗೆ ಈ ವಿವೇಕ ಇರಬೇಕು.
ಚಿತ್ರ ಕೃಪೆ: Wikipedia
"ಹಂಪನಾ ಅವರ ಕ್ಷಮೆಯಾಚಿಸಬೇಕು ಮುಖ್ಯಮಂತ್ರಿ"
"ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪೊಲೀಸರು ಮಾಡಿರುವ ದುಷ್ಕೃತ್ಯಕ್ಕಾಗಿ ಕೂಡಲೇ ಹಂಪನಾ ಅವರಲ್ಲಿ ಕ್ಷಮೆ ಯಾಚಿಸಬೇಕು. ಈ ರೀತಿಯ ಸುಳ್ಳು ಕೇಸುಗಳನ್ನು ದಾಖಲಿಸಿಕೊಳ್ಳುವ ದಾರ್ಷ್ಟ್ಯ ಪ್ರದರ್ಶಿಸುತ್ತಿರುವ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಬೇಕು. ಈ ಘಟನೆಗೆ ಕಾರಣಕರ್ತರನ್ನು ಕೂಡಲೇ ಅಮಾನತು ಮಾಡಬೇಕು" ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ.
Recommended Video
ಸರ್ಕಾರದಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ
ಹಂಪನಾ ಅವರನ್ನು ಠಾಣೆಗೆ ಕರೆಸಿಕೊಂಡು ವಿಚಾರಿಸಿದ ಪ್ರಕರಣವನ್ನು ಒಂಟಿಯಾಗಿ ನೋಡಲಾಗದು. ಅನಂತಮೂರ್ತಿಯವರಿಗೆ ಪಾಕಿಸ್ತಾನಕ್ಕೆ ಟಿಕೆಟ್ ಬುಕ್ ಮಾಡಿದ್ದು, ಕಲಬುರ್ಗಿ- ಗೌರಿಹತ್ಯೆಗಳು, ನಾಟಕದ ಸಂಭಾಷಣೆಯೊಂದಕ್ಕಾಗಿ ಶಾಲೆಯ ಮೇಲೆ ದೇಶದ್ರೋಹದ ಪ್ರಕರಣಗಳಿಂದ ಹಿಡಿದು ಹಂಪನಾ ಪ್ರಕರಣದ ತನಕ ಸರಣಿ ವಿದ್ಯಮಾನಗಳಿವೆ. ತಿನ್ನುವ ಉಡುವ ಪ್ರೇಮಿಸುವ ಬರೆವ ಪಶುಸಾಕುವ ಮಾರುವ ಮಾತಾಡುವ- ಅನೇಕ ಬಗೆಯ ಸ್ವಾತಂತ್ರ್ಯಗಳನ್ನು ಹತ್ತಿಕ್ಕುತ್ತಿರುವ ಚಿಂತನೆ ಮತ್ತು ರಾಜಕೀಯ ವ್ಯವಸ್ಥೆಯ ಭಾಗವಾಗಿ ಇವನ್ನು ಗಮನಿಸಬೇಕು. ಕರ್ನಾಟಕವು ನಾಗರಿಕ ಸ್ವಾತಂತ್ರ್ಯ ಕಸಿಯುವ ರಾಜ್ಯವಾಗುತ್ತಿರುವುದು ದಿಟ. ಕೌಶಲ್ಯ ನಾವೀನ್ಯತೆ ವಿಷಯದಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆಯಬಲ್ಲ ಕರ್ನಾಟಕಕ್ಕೆ ಇಂತಹ ವಿದ್ಯಮಾನಗಳು ಘಾತಕವಾದವು ಎಂದು ರಹಮತ್ ತರೀಕೆರೆ ಆತಂಕ ವ್ಯಕ್ತಪಡಿಸಿದ್ದಾರೆ.
ಚಿತ್ರ ಕೃಪೆ: Wikipedia