ಆನಂದ್ ಸಿಂಗ್ ಬೇಡಿಕೆ: ಸ್ವಾತಂತ್ರ್ಯ ಧ್ವಜಾರೋಹಣಕ್ಕೆ ಜಿಲ್ಲಾ ಕೇಂದ್ರ ಬದಲಿಸಿದ ಸರ್ಕಾರ
ಬೆಂಗಳೂರು ಆಗಸ್ಟ್ 09: ಆಗಸ್ಟ್ 15ರಂದು ನಡೆಯಲಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನಾಚರಣೆ ಹಿನ್ನೆಲೆ ಧ್ವಜಾರೋಹಣ ಮಾಡಲು ಜಿಲ್ಲಾ ಕೇಂದ್ರಗಳಿಗೆ ಸಚಿವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಪೈಕಿ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ಧ್ವಜಾರೋಹಣಕ್ಕಾಗಿ ಅದಲು ಬದಲು ಜಿಲ್ಲಾ ಕೇಂದ್ರಗಳಿಗೆ ನೇಮಕ ಮಾಡಲಾಗಿದೆ.
ಆಗಸ್ಟ್ 15ರ ಧ್ವಜಾರೋಹಣ ಮಾಡಲು ಜಿಲ್ಲಾ ಕೇಂದ್ರಗಳಿಗೆ ಸಚಿವರ ನೇಮಕ ಆದೇಶದಲ್ಲಿ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರನ್ನು ವಿಜಯನಗರ ಜಿಲ್ಲೆಗೆ, ಮುಜರಾಯಿ ಮತ್ತು ವಕ್ಫ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಕೊಪ್ಪಳಕ್ಕೆ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಮಂಡ್ಯ ಜಿಲ್ಲಾ ಕೇಂದ್ರಕ್ಕೆ ನೇಮಕ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆ ಹೊರತು ಪಡಿಸಿ ಎಲ್ಲ ಜಿಲ್ಲಾ ಕೇಂದ್ರಗಳಿಗೆ ಧ್ವಜಾರೋಹಣ ಸಂಬಂಧ ಸಚಿವರನ್ನು ನೇಮಕ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಸದ್ಯ ವಿಜಯನಗರ ಜಿಲ್ಲೆ ಉಸ್ತುವಾರಿ ಸಚಿವರಾಗಿ ಶಶಿಕಲಾ ಜೊಲ್ಲೆ ಇದ್ದು, ಕೊಪ್ಪಳ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಆನಂದ್ ಸಿಂಗ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಉಸ್ತುವಾರಿ ಕನಸು ಈಡೇರಿಲ್ಲ: ಧಜಾರೋಹಣಕ್ಕೆ ಅವಕಾಶ
ಒಂದಷ್ಟು ಹೋರಾಟದ ನಂತರ ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡುವಲ್ಲಿ ಸಚಿವ ಆನಂದ್ ಸಿಂಗ್ ಸಫಲರಾದರು. ಆದರೆ ಬಿಜೆಪಿಯಲ್ಲಿರುವ ನಿಯಮದಂತೆ ಸ್ವಂತ ಜಿಲ್ಲೆಯ ಜನಪ್ರತಿನಿಧಿಗಳಿಗೆ ಅದೇ ಜಿಲ್ಲೆಯ ಉಸ್ತುವಾರಿ ಆಗಲು ಅವಕಾಶ ಇಲ್ಲ. ಹೀಗಾಗಿಯೇ ಆನಂದ್ ಸಿಂಗ್ರನ್ನು ಕೊಪ್ಪಳಕ್ಕೆ ಉಸ್ತುವಾರಿಯನ್ನಾಗಿ ಮಾಡಿ, ಅವರ ಜಿಲ್ಲೆಗೆ ಶಶಿಕಲಾ ಜೊಲ್ಲೆ ಅವರನ್ನು ಉಸ್ತುವಾರಿ ಆಗಿ ನೇಮಿಸಲಾಗಿದೆ. ಇದರಿಂದಾಗಿ ವಿಜಯನಗರ ಉಸ್ತುವಾರಿ ಸಚಿವರಾಗಬೇಕೆಂಬ ಆನಂದ್ ಸಿಂಗ್ರ ಕನಸು ಈಡೇರಿಲ್ಲ.
ಈ ಮಧ್ಯೆ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ವರ್ಷಾಚರಣೆಗೆ ಸರ್ಕಾರ ಜಿಲ್ಲಾ ಕೇಂದ್ರಗಳಿಗೆ ಸಚಿವರನ್ನು ನೇಮಕ ಮಾಡಲು ಉದ್ದೇಶಿಸಿದಾಗ ಆನಂದ್ ಸಿಂಗ್ ಅವರ ಅಣತಿಯಂತೆ ಸರ್ಕಾರ ಈ ಇಬ್ಬರು ಸಚಿವರನ್ನು ಅದಲು ಬದಲು ನೇಮಕ ಮಾಡುವ ಮೂಲಕ ವಿಜನಗರ ಜಿಲ್ಲೆಯಲ್ಲಿ ಆನಂದ್ ಸಿಂಗ್ ಧ್ವಜಾರೋಹಣಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಹೊಸ ಜಿಲ್ಲೆಯಾಗಿ ಉದಯಿಸಿದ ನಂತರ 75ನೇ ಸ್ವಾತಂತ್ರ್ಯ ವರ್ಷಾಚರಣೆ ವಿಜಯನಗರ ಜಿಲ್ಲೆಗೆ ಅತ್ಯಂತ ಮಹತ್ವದ್ದು ಎನ್ನಲಾಗಿದೆ.
ಒಂದೇ ದಿನದಲ್ಲಿ ಆದೇಶ ವಾಪಸ್
Recommended Video
ವಿಜಯನಗರ ಜಿಲ್ಲೆಯನ್ನಾಗಿ ಮಾಡುವಲ್ಲಿ ಸಚಿವ ಆನಂದ್ ಸಿಂಗ್ ಅವರು ನಿರಂತರವಾಗಿ ಶ್ರಮಿಸಿದ್ದು, ಅವರ ಹೋರಾಟ ಹಠಕ್ಕೆ ಬಿದ್ದವರಂತಿತ್ತು. ಅವರು ಅಂದುಕೊಂಡಂತೆ ವಿಜಯನಗರ ಜಿಲ್ಲೆ ಉದ್ಯಯವಾಯಿತು. ಆದರೆ ಉಸ್ತುವಾರಿ ಸಚಿವ ಸ್ಥಾನ ಲಭಿಸಲಿಲ್ಲ. ಈ ಹಿಂದೆ ಸರ್ಕಾರ ನಿಯಮ ಮೀರಿ ವಿಜಯನಗರ ಜಿಲ್ಲೆಗೆ ಅದೇ ಜಿಲ್ಲೆಯವರೇ ಆದ ಆನಂದ್ ಸಿಂಗ್ರನ್ನು ಮತ್ತು ಆ ಜಿಲ್ಲೆಗೆ ಉಸ್ತುವಾರಿಯಾಗಿದ್ದ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಕೊಪ್ಪಳಕ್ಕೆ ಉಸ್ತುವಾರಿ ಸಚಿವರಾಗಿ ಮಾಡಿ ಆದೇಶಿಸಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೆ ಒಂದೇ ದಿನದಲ್ಲಿ ಆದೇಶ ರದ್ದು ಮಾಡಿ ನಿಯಮದಂತೆ ಯಥಾಸ್ಥಿತಿ ಕಾಪಾಡಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ.