ಸೋಮವಾರ ನಡೆದ ಸಂಪುಟ ಸಭೆಯ ಪ್ರಮುಖ ತೀರ್ಮಾನಗಳಿವು
ಬೆಂಗಳೂರು, ಆಗಸ್ಟ್ 29: ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಆರೋಗ್ಯ ಭಾಗ್ಯ ಯೋಜನೆ, 49 ಹೊಸ ತಾಲೂಕುಗಳ ರಚನೆಗೆ ಅನುಮೋದನೆ ಸೇರಿದಂತೆ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.
ಆರೋಗ್ಯ ಭಾಗ್ಯ
ರಾಜ್ಯದ 1.40 ಲಕ್ಷ ಕುಟುಂಬಗಳಿಗೆ ಸರ್ಕಾರಿ ಮತ್ತು ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ, ಸರ್ವರಿಗೂ ಆರೋಗ್ಯ ರಕ್ಷಣೆ ಒದಗಿಸು 'ಆರೋಗ್ಯ ಭಾಗ್ಯ ಯೋಜನೆ'ಗೆ ಅನುಮೋದನೆ ನೀಡಲಾಯಿತು. ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ದಿನ ಮುಖ್ಯಮಂತ್ರಿಗಳು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಇನ್ನು ಸಂಪುಟ ಸಭೆಯ ಇತರ ಪ್ರಮುಖ ತೀರ್ಮಾನಗಳು ಹೀಗಿವೆ,
ಹೊಸ ತಾಲೂಕು ರಚನೆಗೆ ಅನುಮೋದನೆ
49 ಹೊಸ ತಾಲೂಕುಗಳ ರಚನೆಗೆ ಸಂಪುಟ ಅನುಮೋದನೆ ನೀಡಿದೆ. ಅಲ್ಲದೆ ಬೆಂಗಳೂರು ನಗರದ ಎಕೆ ಕಾಲೋನಿಯಲ್ಲಿ ವಾಸವಾಗಿರುವ 7612 ಅನಧಿಕೃತ ನಿವಾಸಿಗಳ ನೀರಿನ ಬಾಕಿ ಮತ್ತು ಅದರ ಬಡ್ಡಿ ಮನ್ನಾ ಮಾಡಲು ತೀರ್ಮಾನಿಸಲಾಗಿದೆ.
ರಸಗೊಬ್ಬರ ದಾಸ್ತಾನು ಮಾಡಲು ಸಹಕಾರಿ ಬ್ಯಾಂಕುಗಳಿಗೆ 500 ಕೋಟಿ ರೂ. ಬಂಡವಾಳ ಸಾಲ ನೀಡಲು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಮತ್ತು ಆಶ್ರಯ ಶಾಲೆಗಳ ವಿದ್ಯಾರ್ಥಿಗಳಿಗೆ ಸಾಬೂನು ಮತ್ತು ಮಾರ್ಜಕ ಸಂಸ್ಥೆಯಿಂದ ಕಿಟ್ ವಿತರಣೆಗೂ ನಿರ್ಧರಿಸಲಾಗಿದೆ.
ಕಾಲುವೆ ಅಭಿವೃದ್ಧಿ, ಕೃಷ್ಣಾಭಾಗ್ಯ ಜಲ ನಿಗಮಕ್ಕೆ ಅನುದಾನ
ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಹಾದು ಹೋಗುವ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಕೆಳ ಸೇತುವೆ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ ನೀಡಿದೆ.
ಇನ್ನು ಬೆಂಗಳೂರಿನ ಪ್ರಮುಖ ರಸ್ತೆಗಳಿಗೆ 292 ಕೋಟಿ ರೂ ವೆಚ್ಚದಲ್ಲಿ ಟ್ಯಾಪಿಂಗ್ ಮಾಡಲು, ಕೃಷ್ಣಾಭಾಗ್ಯ ಜಲ ನಿಗಮಕ್ಕೆ ಐಐಬಿಆರ್ ವತಿಯಿಂದ 1500 ಕೋಟಿ ರೂ ಹಣ ಸಾಲ ರೂಪದಲ್ಲಿ ಸಂಗ್ರಹಿಸಲು ಸಂಪುಟ ತೀರ್ಮಾನಿಸಿದೆ.
ಇದರ ಜತೆಗೆ ಕೊಳ್ಳೇಗಾಲ ತಾಲೂಕಿನ ಸರ್ ಕಾಟನ್ ಕಾಲುವೆ, ಹಂಪಾಪುರ ಕಾಲುವೆ ಮತ್ತು ಗುಪ್ಪಮ್ಮ ಕಾಲುವೆಗಳನ್ನು ಅಭಿವೃದ್ಧಿಪಡಿಸುವ 20.30 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸಂಪುಟ ಸಭೆ ಆಡಳಿತಾತ್ಮಕ ಒಪ್ಪಿಗೆ ನೀಡಿದೆ
ಎರಡು ಏತ ನೀರಾವರಿ ಯೋಜನೆಗಳಿಗೆ ಒಪ್ಪಿಗೆ
•ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನಲ್ಲಿ ಘಟಪ್ರಭಾ ನದಿಯ ಎಡಬದಿಯಿಂದ ಎಳ್ಳಿಗುತ್ತಿ ಗ್ರಾಮದ ಹತ್ತಿರ 0.093 ಟಿ.ಎಂ.ಸಿ ನೀರನ್ನು ಏತ ನೀರಾವರಿ ಮೂಲಕ ಮೇಲೆತ್ತುವ 35 ಕೋಟಿ ರೂ. ವೆಚ್ಚದ ಯೋಜನೆಗೆ ಸಂಪುಟ ಆಡಳಿತಾತ್ಮಕ ಒಪ್ಪಿಗೆ ನೀಡಿದೆ.
•ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಅಮಾನಿ ಕೆರೆಯಿಂದ ಏತ ನೀರಾವರಿ ಮೂಲಕ ನೀರನ್ನು ಎತ್ತಿ 25 ಕೆರೆಗಳಿಗೆ ನೀರು ತುಂಬಿಸುವ 70 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸಂಪುಟ ಅನುಮೋದನೆ ನೀಡಿದೆ.
ಹಾರಂಗಿ ಎಡದಂಡೆ ನಾಲೆ ಅಭಿವೃದ್ಧಿ
ಹಾರಂಗಿ ಎಡದಂಡೆ ನಾಲೆಯ ಸರಪಳಿ 27,083-35,905 ಕಿ. ಮೀ ವರೆಗೆ 116 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಹಾಗೂ ಸರಪಳಿ 85,905-149.385 ಕಿ.ಮೀ ವರೆಗೆ 62.15 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮೆಕಾನಿಕಲ್ ವೇಪರ್ ಬಳಸಿ ಸಿಸಿ ಲೈನಿಂಗ್ ಮತ್ತು ಅಡ್ಡ ಮೋರಿ ಅಭಿವೃದ್ಧಿಗೆ ಸಂಪುಟ ಒಪ್ಪಿಗೆ ನೀಡಿದೆ.
ನಾರಾಯಪುರ ಜಲಾಶಯದ ಹಿನ್ನೀರಿನಿಂದ ಮುದ್ದೇಬಿಹಾಳ ತಾಲ್ಲೂಕಿನ ಬಂಗಾರುಗುಂಡ ಗ್ರಾಮದ ಹತ್ತಿರ ನೀರನ್ನು ಏತ ನೀರಾವರಿ ಮೂಲಕ ಮೇಲೆತ್ತು ಮುದ್ದೇಬಿಹಾಳ ತಾಲ್ಲೂಕಿನ 3200 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ 170 ಕೋಟಿ ರೂ. ವೆಚ್ಚದ ಯೋಜನೆಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ವಿತರಣಾ ಕಾಲುವೆಗಳ ನಿರ್ಮಾಣ
ಆಲಮಟ್ಟಿ ಎಡದಂಡೆ ಕಾಲುವೆಯ ಸರಪಳಿ 0.00-68.24 ಕಿ. ಮೀ ವರೆಗಿನ ಹಾಳಾಗಿರುವ ಆಯ್ದ ಭಾಗಗಳ ಹಾಗೂ ವಿತರಣಾ ಕಾಲುವೆಗಳನ್ನು 112.46 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.
ಹಾಗೂ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ಮಹಾರಾಷ್ಟ್ರ ಮಾದರಿಯಲ್ಲಿಯೇ ಅಂತರ್ಜಲ ಅಭಿವೃದ್ಧಿ ಪಡಿಸುವ ವಿಶೇಷ ಯೋಜನೆಯ ಕಾಮಗಾರಿಯನ್ನು 20.59 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.