ಪ್ರತಿಷ್ಠಿತ ಮ್ಯಾಗ್ಸೆಸೆ ಪುರಸ್ಕಾರಕ್ಕೆ ಭಾಜನರಾದ ಕನ್ನಡಿಗರು
ಬೆಂಗಳೂರು, ಜುಲೈ, 27: ಕರ್ನಾಟಕದ ಕೋಲಾರದ ಸಮಾಜ ಸೇವಕ ಬೇಜವಾಡಾ ವಿಲ್ಸನ್ ಅವರಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪುರಸ್ಕಾರ ಲಭ್ಯವಾಗಿದೆ. ಇದರೊಂದಿಗೆ ಸಾಧಕರ ಸಾಲಿನಲ್ಲಿಯೂ ಸ್ಥಾನ ಪಡೆದುಕೊಂಡಿದ್ದಾರೆ.
ಕರ್ನಾಟಕದ ಕೋಲಾರದ ಮಣ್ಣಿನಲ್ಲಿ ಜನಿಸಿ ಸಫಾಯಿ ಕರ್ಮಚಾರಿಗಳ ಪರವಾಗಿ ಕೆಲಸ ಮಾಡುತ್ತಿರುವ ಬೇಜವಾಡಾ ವಿಲ್ಸನ್ ಹೊಸ ಗೌರವಕ್ಕೆ ಹೆಸರು ದಾಖಲು ಮಾಡಿಕೊಂಡಿದ್ದಾರೆ.[ಕೋಲಾರದ ಕರ್ಮಚಾರಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ]
ವಿಲ್ಸನ್ ಗೂ ಮುನ್ನ ಕರ್ನಾಟಕದ ಹರೀಶ್ ಹಂದೆ (2011), ಆರ್ ಕೆ ಲಕ್ಷ್ಮಣ (1984), ಕೆ ವಿ ಸುಬ್ಬಣ್ಣ (1991) ಅವರಿಗೂ ಮ್ಯಾಗ್ಸೆಸೆ ಪ್ರಶಸ್ತಿ ಸಂದಿತ್ತು. ವಿವಿಧ ಕ್ಷೇತ್ರಗಳ ಸಾಧನೆ ಪರಿಗಣಿಸಿ ಪುರಸ್ಕಾರ ನೀಡಲಾಗಿತ್ತು. ಪ್ರಶಸ್ತಿಯ ಮೇಲೊಂದು ಹಿನ್ನೋಟ ಇಲ್ಲಿದೆ...
ಕಾಮನ್ ಮ್ಯಾನ್- ಆರ್ ಕೆ ಲಕ್ಷ್ಮಣ (1984)
ಶ್ರೀಸಾಮಾನ್ಯ(The Common Man) ವ್ಯಂಗ್ಯಚಿತ್ರದ ಮೂಲಕ ಜನಮನ್ನಣೆಗೆ ಪಾತ್ರವಾಗಿದ್ದ ಆರ್.ಕೆ ಲಕ್ಷ್ಮಣ್ ಅವರಿಗೆ 1984 ರಲ್ಲಿ ಮ್ಯಾಗ್ಸೆಸೆ ಪುರಸ್ಕಾರ ಲಭಿಸಿತ್ತು. ಪತ್ರಿಕೋದ್ಯಮ, ಸಾಹಿತ್ಯ, ರಚನಾತ್ಮಕ ಕೆಲಸದ ಆಧಾರದಲ್ಲಿ ಲಕ್ಷಣ್ ಅವರಿಗೆ ಪುರಸ್ಕಾರ ನೀಡಲಾಗಿತ್ತು.
ಲಕ್ಷ್ಮಣ ಹುಟ್ಟೂರು ಮೈಸೂರು
ಆರ್. ಕೆ. ಲಕ್ಮಣ ತವರೂರು ಮೈಸೂರು. ಅವರು ಹುಟ್ಟಿದ್ದು, ಬೆಳೆದಿದ್ದು ಹಾಗೂ ವಿದ್ಯಾರ್ಜನೆ ಮಾಡಿದ್ದು ಮೈಸೂರಿನಲ್ಲಿಯೇ. ಮೈಸೂರು ಮಹಾರಾಜ ಕಾಲೇಜಿನಲ್ಲಿಯೇ ಡಿಗ್ರಿಯನ್ನೂ ಪಡೆದರು. ಇಲ್ಲಿಯೇ ಅವರ ವ್ಯಂಗ್ಯಚಿತ್ರ ಕೌಶಲ್ಯ ಅರಳಲು ಆರಂಭವಾಗಿತ್ತು. ಅವರ ಸಹೋದರ ಖ್ಯಾತ ಲೇಖಕ ಆರ್.ಕೆ. ನಾರಾಯಣ್ ಸಹೋದರನ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದ್ದು ಇದೀಗ ಇತಿಹಾಸ
ಕೆ ವಿ ಸುಬ್ಬಣ್ಣ (1991)
ನಾಟಕ ಮತ್ತು ರಂಗಕಲೆಗಳಲ್ಲಿ ಮಾಡಿದ ಸಾಧನೆಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕೆ ವಿ ಸುಬ್ಬಣ್ಣ ಅವರಿಗೆ 1991 ರಲ್ಲಿ ಮ್ಯಾಗ್ಸೆಸೆ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ನೀನಾಸಂ ರಂಗಕಲಾ ತರಬೇತಿ ಸಂಸ್ಥೆಯ ಮೂಲಕ ಸುಬ್ಬಣ್ಣ ಇಡೀ ಪ್ರಪಂಚದಾದ್ಯಂತ ತಮ್ಮ ಹೆಸರು ಅಜರಾಮರ ಮಾಡಿದ್ದಾರೆ.
ನೀನಾಸಂ
ಕುಂಟಗೋಡು ವಿಭೂತಿ ಸುಬ್ಬಣ್ಣ ಸಾಗರ ತಾಲೂಕಿನ ಹೆಗ್ಗೋಡಿನವರು. ಹೆಗ್ಗೋಡಿನಲ್ಲಿಯೇ 1949 ಸ್ಥಾಪಿಸಿದ ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ)ರಂಗ ಸಂಸ್ಥೆ ದೇಶದ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಿತು.
ಹರೀಶ್ ಹಂದೆ (2011)
ಸೌರ ವಿದ್ಯುತನ್ನು ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ಹಾಗೂ ಇನ್ನಿತರ ರಾಜ್ಯದ ಹಳ್ಳಿಹಳ್ಳಿಗೂ ಕೊಂಡೊಯ್ದು, ಸುಮಾರು ಒಂದು ಲಕ್ಷ ಬಡ ಕುಟುಂಬಗಳ ಗುಡಿಸಲುಗಳಲ್ಲಿ ಸೌರ ಶಕ್ತಿಯ ಮೂಲಕ ಬೆಳಕನ್ನು ನೀಡಿದ ಸಾಧನೆಗೆ ಹರೀಶ್ ಅವರನ್ನು ಅರಸಿ ಪ್ರಶಸ್ತಿ ಬಂದಿತ್ತು.
ಉಡುಪಿ ಜಿಲ್ಲೆಯ ಹೆಮ್ಮೆ
ಡಾ.ಹರೀಶ್ ಹಂದೆ ಮೂಲತ: ಉಡುಪಿ ಜಿಲ್ಲೆಯ ಕೋಟದ ಹಂದೆ ಕುಟುಂಬಕ್ಕೆ ಸೇರಿದವರು, ಬೆಂಗಳೂರಿನಲ್ಲಿ ಜನಿಸಿ ಹರೀಶ್ ಹಂದೆ, ಸುಬ್ರಹ್ಮಣ್ಯ ಹಂದೆ ಹಾಗೂ ಸುಶೀಲಾ ಹಂದೆಯವರ ಪುತ್ರ. ಒಡಿಶಾದ ರೂರ್ಕೆಲದಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ ಪ್ರತಿಷ್ಠಿತ ಐಐಟಿ ಖರಗಪುರದಲ್ಲಿ ಇಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆರು. 1995ರಲ್ಲಿ ನೆವಿಲ್ಲೆ ವಿಲಿಯಮ್ಸ್ರೊಂದಿಗೆ ಸೇರಿ ಸ್ಥಾಪಿಸಿದ ಸೆಲ್ಕೋ-ಇಂಡಿಯಾ ಅನೇಕರ ಬಾಳಿಗೆ ಬೆಳಕು ನೀಡಿತು.
ಕೋಲಾರದ ಚಿನ್ನ
ಇದೀಗ ಕರ್ನಾಟಕದ ಕೋಲಾರದ ಸಾಧಕ ಬೇಜವಾಡಾ ವಿಲ್ಸನ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ಘೋಷಣೆಯಾಗಿದೆ. ದಲಿತ ಕುಟುಂದಲ್ಲಿ 1966 ರಲ್ಲಿ ಜನಿಸಿದ ವಿಲ್ಸನ್ ಸಫಾಯಿ ಕರ್ಮಚಾರಿಗಳ ಪರವಾಗಿ ಆಂದೋಲನದಲ್ಲಿ ಸದಾ ತೊಡಗಿಕೊಂಡಿದ್ದಾರೆ.