ಮದ್ಯ ಮಾರಾಟ ಚೇತರಿಕೆ: ಅಬಕಾರಿ ಇಲಾಖೆಗೆ ಖುಷಿ ಕೊಟ್ಟ ಮದ್ಯಪ್ರಿಯರು!
ಬೆಂಗಳೂರು, ಡಿಸೆಂಬರ್ 3: ಕರ್ನಾಟಕದಲ್ಲಿ ಕೋವಿಡ್ 19 ಲಾಕ್ಡೌನ್ ಸಂದರ್ಭದಲ್ಲಿ ಎಲ್ಲ ಲಿಕ್ಕರ್ ಮಳಿಗೆಗಳು ಮತ್ತು ಬಾರ್ಗಳು ಮುಚ್ಚಿದ್ದರಿಂದ ಮದ್ಯ ಮಾರಾಟದಲ್ಲಿ ಭಾರಿ ಇಳಿಕೆಯಾಗಿತ್ತು. ಆದರೆ, ಲಾಕ್ಡೌನ್ ತೆರವುಗೊಂಡ ಬಳಿಕ ಅಬಕಾರಿ ಇಲಾಖೆ ತನ್ನ ಆದಾಯವನ್ನು ಹೆಚ್ಚಿಸಿಕೊಂಡಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಅತ್ಯಲ್ಪ ಆದಾಯ ಕುಸಿತ ಅನುಭವಿಸಿದೆ.
2019ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ ರಾಜ್ಯ ಅಬಕಾರಿ ಇಲಾಖೆಯು 14,390.39 ಕೋಟಿ ರೂ ಆದಾಯ ಪಡೆದಿದ್ದರೆ, ಈ ವರ್ಷ 13,778.30 ಕೋಟಿ ರೂ ಆದಾಯ ಗಳಿಸಿದೆ. ಅಂದರೆ ಎರಡು ತಿಂಗಳ ಲಾಕ್ಡೌನ್ ಮತ್ತು ಜನರ ಕೋವಿಡ್ ಭಯದ ನಡುವೆಯೂ ಅಬಕಾರಿ ಇಲಾಖೆ ಕಳೆದ ವರ್ಷಕ್ಕೆ ಹೋಲಿಸಿದರೆ ಕೇವಲ 612.09 ಕೋಟಿ ರೂ ಕಡಿಮೆ ಆದಾಯ ಗಳಿಸಿದೆ.
ಸ್ಮಗಲಿಂಗ್ ತಡೆಗಟ್ಟಲು ಮದ್ಯ ಬೆಲೆ ತಗ್ಗಿಸಿದ ರಾಜ್ಯ ಸರ್ಕಾರ
ಅಂದರೆ 2019ರ ನವೆಂಬರ್ ಅಂತ್ಯಕ್ಕೆ ಸಂಗ್ರಹವಾಗಿದ್ದ ಇಲಾಖೆಯ ಆದಾಯಕ್ಕೆ ಹೋಲಿಸಿದರೆ 2020ರ ನವೆಂಬರ್ ಅಂತ್ಯಕ್ಕೆ ಅಬಕಾರಿ ಆದಾಯವು ಶೇ 4.25ರಷ್ಟು ಮಾತ್ರವೇ ಕಡಿಮೆಯಾಗಿದೆ. ಈ ಕೊರತೆಯು ಮೇ ತಿಂಗಳ ಶೇ 58.15, ಜೂನ್ ತಿಂಗಳ ಶೇ 33.49, ಜುಲೈ ತಿಂಗಳ ಶೇ 21.26 ಮತ್ತು ಆಗಸ್ಟ್ ತಿಂಗಳ ಶೇ 15.07ರಿಂದ ಇಳಿಕೆಯಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ ಮದ್ಯ ಸಿಗುತ್ತಿಲ್ಲ ಎಂದು ಪರದಾಡುತ್ತಿದ್ದ ಮದ್ಯಪ್ರಿಯರು, ಸೀಮಿತ ಅವಧಿಯಲ್ಲಿ ಮದ್ಯ ಮಳಿಗೆಗಳನ್ನು ತೆರೆಯಲು ಅವಕಾಶ ನೀಡುತ್ತಿದ್ದಂತೆಯೇ ಖುಷಿಯಿಂದ ಮುಗಿಬಿದ್ದು ಖರೀದಿಯಲ್ಲಿ ತೊಡಗಿದ್ದರು. ಈಗ ತೀವ್ರ ನಷ್ಟ ಎದುರಿಸುವ ಭೀತಿಯಲ್ಲಿದ್ದ ಅಬಕಾರಿ ಇಲಾಖೆಗೆ ನೆಮ್ಮದಿ ನೀಡಿದ್ದಾರೆ. ಮುಂದೆ ಓದಿ.
ಆನ್ಲೈನ್ನಲ್ಲಿ ಮದ್ಯ ಮಾರಾಟ; ಮೊದಲ ಹೆಜ್ಜೆ ಇಟ್ಟ ಕರ್ನಾಟಕ
ಲಾಕ್ಡೌನ್ ಸಂಕಷ್ಟ
ಮಾರ್ಚ್ 25ರಂದು ಸಂಪೂರ್ಣ ಲಾಕ್ಡೌನ್ ಆರಂಭವಾದ ಬಳಿಕ ಮೇ ತಿಂಗಳಲ್ಲಿ ಸೀಮಿತ ಅವಧಿಗೆ ಮದ್ಯ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಇದಾಗಿ ಐದು ತಿಂಗಳ ನಂತರ ಸೆ. 1ರಂದು ಮಾತ್ರವೇ ಸಂಪೂರ್ಣ ಮದ್ಯ ಮಾರಾಟಕ್ಕೆ ಅವಕಾಶ ದೊರಕಿತ್ತು.
ಅಬಕಾರಿ ಸುಂಕದಿಂದ ಆದಾಯ
ಈ ವರ್ಷ ಮದ್ಯ ಮಾರಾಟದಲ್ಲಿ ಸ್ಥಿರ ಚೇತರಿಕೆ ಉಂಟಾಗಿದೆ. ಆದರೆ ಆದಾಯ ಸೃಷ್ಟಿಗೆ ರಾಜ್ಯ ಬಜೆಟ್ನಲ್ಲಿ ಜಾರಿ ಮಾಡಿದ ಹೆಚ್ಚುವರಿ ಅಬಕಾರಿ ಸುಂಕ ನೆರವಾಗಿದೆ. ಬಿಯರ್ ಮಾರಾಟದಲ್ಲಿ ವರ್ಷದಿಂದ ವರ್ಷದ ಆಧಾರದಲ್ಲಿ ನವೆಂಬರ್ನಲ್ಲಿ ಮಾತ್ರವೇ ಬೆಳವಣಿಗೆಯಾಗಿದೆ. ಆದರೆ ಕಚ್ಚಾ ಮದ್ಯದಲ್ಲಿ ಸೆಪ್ಟೆಂಬರ್ ತಿಂಗಳಿನಿಂದ ವಾರ್ಷಿಕ ಪ್ರಗತಿ ಉಂಟಾಗಿದೆ.
ಇತ್ತೀಚೆಗಷ್ಟೇ ಮಾರಾಟ ಹೆಚ್ಚಳ
'ನಾವು ಮಾರ್ಚ್ವರೆಗೂ ಇನ್ನೂ ಮೂರು ತಿಂಗಳು ಅವಕಾಶ ಹೊಂದಿದ್ದೇವೆ. ಇತ್ತೀಚೆಗಷ್ಟೇ ಮಾರಾಟದಲ್ಲಿ ಏರಿಕೆಯಾಗಿದೆ. ಇಲ್ಲದಿದ್ದರೆ ವರ್ಷದಿಂದ ವರ್ಷದ ಆದಾಯದ ಕೊರತೆಯು ದೊಡ್ಡ ಮಟ್ಟಕ್ಕೆ ಕುಸಿತ ಕಾಣುತ್ತಿತ್ತು. ಸೆಪ್ಟೆಂಬರ್ವರೆಗೂ ನಮಗೆ ಇದರಲ್ಲಿ ಚೇತರಿಕೆ ಕಂಡಿರಲಿಲ್ಲ. ಹೆಚ್ಚುವರಿ ಅಬಕಾರಿ ಸುಂಕದ ಕಾರಣದಿಂದ ಆದಾಯ ಏರಿಕೆ ಕಂಡುಬಂದಿದೆ' ಎಂದು ಅಬಕಾರಿ ಆಯುಕ್ತ ಯಶವಂತ್ ವಿ ತಿಳಿಸಿದ್ದಾಗಿ 'ದಿ ನ್ಯೂಸ್ ಮಿನಿಟ್' ವರದಿ ಮಾಡಿದೆ.
Recommended Video
45 ದಿನಗಳಲ್ಲಿನ ನಷ್ಟ
'ಮಾರ್ಚ್ ಏಪ್ರಿಲ್ನಲ್ಲಿ 45 ದಿನಗಳಲ್ಲಿ ಉಂಟಾದ ನಷ್ಟವಾದ 2,000 ರೂ. ಮೊತ್ತವನ್ನು ಮರಳಿ ಪಡೆಯುವುದು ಕಷ್ಟಕರ. ಡಿಸೆಂಬರ್-ಜನವರಿಯಲ್ಲಿ ಎಲ್ಲವೂ ಸಹಜ ಸ್ಥಿತಿಯಲ್ಲಿದ್ದರೆ ಮಾತ್ರ ನಾವು ಮಾರಾಟದ ಕೊರತೆಯನ್ನು ಸಹ ಸರಿದೂಗಿಸಬಹುದು' ಎಂದು ತಿಳಿಸಿದ್ದಾರೆ.