ಲಿಂಗಾಯತರಿಗೀಗ ಯಡಿಯೂರಪ್ಪ ನಾಯಕರಲ್ಲ: ರಾಷ್ಟ್ರೀಯ ಬಸವ ಸೇನೆ
ಬೆಂಗಳೂರು, ಏಪ್ರಿಲ್ 25: ಲಿಂಗಾಯತರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರನ್ನು ತಮ್ಮ ನಾಯಕ ಎಂದು ಒಪ್ಪಿಕೊಂಡಿದ್ದ ದಿನಗಳು ಕಳೆದುಹೋಗಿವೆ. ಲಿಂಗಾಯತ ಸಮುದಾಯಕ್ಕೆ ಈಗ ಯಡಿಯೂರಪ್ಪ ನಾಯಕರಲ್ಲ ಎಂದು ರಾಷ್ಟ್ರೀಯ ಬಸವ ಸೇನೆ ಹೇಳಿದೆ.
"ಲಿಂಗಾಯತರು ಬಿಜೆಪಿಯ ಬೆಂಬಲಿಗರಾಗಿ ಉಳಿದಿಲ್ಲ. 2014 ರಲ್ಲಿ ಹಲವು ಸ್ಥಾನಗಳಲ್ಲಿ ಜಯ ಸಾಧಿಸಿದರೂ, ಕೇಂದ್ರ ಸಚಿವ ಸಂಪುಟಕ್ಕೆ ಹೆಚ್ಚಿನ ಸಚಿವರನ್ನು ನೇಮಕ ಮಾಡಿಲ್ಲ. ಬಿಜೆಪಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಆದರೆ ಲಿಂಗಾಯತರು ಅವರನ್ನು ತಮ್ಮ ನಾಯಕ ಎಂದು ನೋಡುತ್ತಿಲ್ಲ, ಮತ್ತು ಯಡಿಯೂರಪ್ಪನರ ಮೇಲೆ ಯಾವುದೇ ನಂಬಿಕೆ ಅವರಿಗಿಲ್ಲ. ಲಿಂಗಾಯತರು ಅನೇಕ ವರ್ಷಗಳಿಂದ ಬಸವ ತತ್ತ್ವದ ಪರಿಪಾಲಕರಾಗಿರುವ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೆಚ್ಚು ಬೆಂಬಲ ನೀಡುತ್ತಿದ್ದಾರೆ," ಎಂದು ರಾಷ್ಟ್ರೀಯ ಬಸವ ಸೇನೆಯ ಪ್ರಧಾನ ಕಾರ್ಯದರ್ಶಿ ಎ.ಪಿ ಬಸವರಾಜ್ ಎಎನ್ಐಗೆ ತಿಳಿಸಿದ್ದಾರೆ.
ಕಳೆದ ಮಾರ್ಚ್ ನಲ್ಲಿ ಸಿದ್ದರಾಮಯ್ಯ ಸರಕಾರ ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿತ್ತು. ಆದರೆ ಇದನ್ನು ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳು ಮತ ಗಳಿಕೆಯ ತಂತ್ರ ಎಂದು ಟೀಕಿಸಿವೆ.