ಲಿಂಗಾಯತ ಹಿಂದೂ ಧರ್ಮದ ಅವಿಭಾಜ್ಯ ಅಂಗ : ಕೇಂದ್ರದ ಅಫಿಡವಿಟ್
ಬೆಂಗಳೂರು, ಜೂನ್ 20 : ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಅಸ್ತಿತ್ವ ಬೇಕು ಎಂದು ನಡೆಸಿದ ಹೋರಾಟಕ್ಕೆ ಭಾರೀ ಹೊಡೆತ ಬಿದ್ದಿದ್ದು, ಲಿಂಗಾಯತ ಧರ್ಮ ಕೂಡ ಹಿಂದೂ ಧರ್ಮದ ಒಂದು ಅಂಗ ಎಂದು ಕೇಂದ್ರ ಕರ್ನಾಟಕ ಹೈಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿದೆ.
ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯ ಅಧ್ಯಯನಕ್ಕಾಗಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗ ರಚಿಸಿದ್ದ ಮಂಡಳಿಯ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಅಫಿಡವಿಟ್ ಸಲ್ಲಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಲಿಂಗಾಯತ ಹೋರಾಟ ನೆಲಕಚ್ಚಲು ಇಪ್ಪತ್ತೆಂಟು ಕಾರಣಗಳು
ಅಫಿಡವಿಟ್ ನಲ್ಲಿ, 2011ರಲ್ಲಿ ರಿಜಿಸ್ಟ್ರಾರ್ ಜನರಲ್ ಮತ್ತು ಭಾರತದ ಜನಗಣತಿ ಆಯೋಗ ನಡೆಸಿದ ಜನಗಣತಿ ನಡೆಸಿದ್ದು, ಲಿಂಗಾಯತರನ್ನು ಮತ್ತು ವೀರಶೈವರನ್ನು ಹಿಂದೂ ಧರ್ಮದಲ್ಲಿಯೇ ಅಡಕ ಮಾಡಲಾಗಿದೆ ಎಂದು ತಿಳಿಸಿದೆ.
ಅಲ್ಲದೆ, ನ್ಯಾಷನಲ್ ಕಮಿಷನ್ ಫಾರ್ ಮೈನಾರಿಟೀಸ್ ಆಕ್ಟ್ 1972ರ ಪ್ರಕಾರ, ಯಾವುದೇ ಸಮುದಾಯವನ್ನು ಧಾರ್ಮಿಕ ಅಲ್ಪಸಂಖ್ಯಾತ ಎಂದು ಗುರುತಿಸಲು ಕಾಯ್ದೆಯಲ್ಲಿ ಯಾವುದೇ ನಿಯಮಗಳಿಲ್ಲ ಎಂದು ತಿಳಿಸಲಾಗಿದೆ. ಒಂದು ವೇಳೆ ಇದ್ದರೂ, ಕೇಂದ್ರ ಸರಕಾರದ ಸಂಬಂಧಿತ ಇಲಾಖೆ, ಅಲ್ಪಸಂಖ್ಯಾತರ ರಾಷ್ಟ್ರೀಯ ಸಮಿತಿ ಮತ್ತು ಇತರ ಸಂಘಟನೆಗಳ ಸಲಹೆ ಸೂಚನೆ ಪಡೆದೇ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕಾಗುತ್ತದೆ.
ವೀರಶೈವ ಮತ್ತು ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಅಥವಾ ಸ್ವತಂತ್ರ ಧರ್ಮದ ಅಸ್ತಿತ್ವವಿಲ್ಲ, ಅವು ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿವೆ ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದ್ದು, ಲಿಂಗಾಯತ ಮತ್ತು ವೀರಶೈವ ಧರ್ಮದ ಸಾಮಾಜಿಕ ಮತ್ತು ಐತಿಹಾಸಿಕ ದೃಷ್ಟಿಕೋನದಿಂದ ಈ ನಿರ್ಧಾರಕ್ಕೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಬಂದಿದೆ ಎಂದು ವಿವರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಎಂಬಿ ಪಾಟೀಲರ ನೇತೃತ್ವದಲ್ಲಿ, ವೀರಶೈವವನ್ನು ಹೊರಗಿರಿಸಿ, ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕೆಂದು, ಹಿಂದಿನ ಕಾಂಗ್ರೆಸ್ ಸರಕಾರ ನಡೆಸಿದ ರಾಜ್ಯವ್ಯಾಪಿ ಹೋರಾಟಕ್ಕೆ ಭಾರೀ ಹೊಡೆತ ಬಿದ್ದಂತಾಗಿದೆ. ಈ ಹೋರಾಟದಿಂದಾಗಿಯೇ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಉತ್ತರ ಮತ್ತು ಕೇಂದ್ರ ಕರ್ನಾಟಕದಲ್ಲಿ ಕಾಂಗ್ರೆಸ್ ಭಾರೀ ಹಿನ್ನಡೆಯನ್ನು ಕೂಡ ಅನುಭವಿಸಬೇಕಾಯಿತು.