ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಿಡಿದೆದ್ದ ಲಿಂಗಾಯತ ಪಂಚಮಸಾಲಿ ಬಿಜೆಪಿ ಶಾಸಕರು!
ಬೆಂಗಳೂರು, ಮಾ. 16: ಬಿಜೆಪಿ ಹೈಕಮಾಂಡ್ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬೆಂಬಲಕ್ಕಿದೆಯಾ? ಹೌದು ಎನ್ನುತ್ತಿದೆ ಸಿಎಂ ಯಡಿಯೂರಪ್ಪ ಅವರ ಆಪ್ತ ವಲಯ. ಅದಕ್ಕೆ ಕಾರಣ ಯತ್ನಾಳ್ ಅವರ ಮಾತುಗಳು. ಹೀಗಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮೇಲೆ ಶಕ್ತಿ ಪ್ರದರ್ಶನಕ್ಕೆ ಯಡಿಯೂರಪ್ಪ ಬಣ ಸಿದ್ಧವಾಗಿದ್ದು, ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ತೆರೆ ಬೀಳುತ್ತಿದ್ದಂತೆಯೆ ರಾಜ್ಯ ಬಿಜೆಪಿಯಲ್ಲಿ ಈ ಬೆಳವಣಿಗೆಗಳಾಗುತ್ತಿವೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೋರಾಟ ಕೈಬಿಡುವಂತೆ ಪಂಚಮಸಾಲಿ ಶ್ರೀಗಳೂ ಸೇರಿದಂತೆ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ್ದರು. ಆರು ತಿಂಗಳ ಗಡುವು ಕೊಟ್ಟಿರುವ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೋರಾಟ ಕೈಬಿಟ್ಟಿದ್ದಾರೆ.
ಅದಾದ ಬಳಿಕೆ ಸಿಎಂ ಯಡಿಯೂರಪ್ಪ ಅವರ ಬೆಂಬಲಿಗರು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮೇಲೆ ಮುಗಿಬಿದ್ದಿದ್ದಾರೆ. ಶಾಸಕರು, ಮಾಜಿ ಸಂಸದರು ಸೇರಿದಂತೆ ಬಿಜೆಪಿ ಲಿಂಗಾಯತ ನಾಯಕರು ಶಾಸಕ ಯತ್ನಾಳ್ ಅವರ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಬಹುತೇಕ ನಾಯಕರು ವಿಧಾನಸೌಧದಲ್ಲಿ ಶಾಸಕ ಯತ್ನಾಳ್ ಅವರ ವಿರುದ್ಧ ಹೇಳಿಕೆ ನೀಡಿದ್ದು, ಒಟ್ಟಾರೆ ಸಿಎಂ ಯಡಿಯೂರಪ್ಪ ಅವರಿಗೆ ಭರ್ಜರಿ ಬೆಂಬಲ ಕೊಡುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ!
ಶಾಸಕ ಯತ್ನಾಳ್ ಅವರಿಗೆ ಬಿಜೆಪಿ ನಾಯಕರ ಬೆಂಬಲ?
ಮಹತ್ವದ ಬೆಳವಣಿಗೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಆಪ್ತ ಶಾಸಕ ರೇಣುಕಾಚಾರ್ಯ ನೇತೃತ್ವದಲ್ಲಿ ಬಿಜೆಪಿ ಶಾಸಕರಿಂದ ಯತ್ನಾಳ್ ಅವರಿಗೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿಯಲ್ಲಿ ಪ್ರಮುಖ ಮುಖಂಡರೇ ಬೆಂಬಲ ಕೊಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೇ ಕಾರಣಕ್ಕೆ ಯತ್ನಾಳ ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುದು ಬಿಜೆಪಿಯ ಹಲವು ನಾಯಕರ ಅಭಿಪ್ರಾಯ. ಹೀಗಾಗಿ ಒಂದೇ ಸಲಕ್ಕೆ ಎಲ್ಲ ಶಾಸಕರು ಯತ್ನಾಳ್ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ವಿಜಯೇಂದ್ರ ಭ್ರಷ್ಟಾಚಾರ ಮಾಡಿಲ್ಲ
ಶಾಸಕ ಯತ್ನಾಳ್ ಅವರು ಇನ್ಮುಂದೆ ಹಾದಿ ಬೀದಿಲಿ ಮಾತನಾಡಿದರೆ ಸಹಿಸೋದಿಲ್ಲ. ಯಡಿಯೂರಪ್ಪ ಬಗ್ಗೆ ಟೀಕೆ ಮಾಡಿದ್ರೂ ಒಂದೇ, ಪಕ್ಷದ ಉಪಾಧ್ಯಕ್ಷ ವಿಜಯೇಂದ್ರ ಅವರನ್ನು ಟೀಕಿಸಿದ್ರೂ ಒಂದೇ. ಪಕ್ಷದ ಚೌಕಟ್ಟಿನಲ್ಲಿ ಇರುವುದನ್ನು ಯತ್ನಾಳ್ ಕಲಿಯಬೇಕು ಎಂದು ರೇಣುಕಾಚಾರ್ಯ ಎಚ್ಚರಿಸಿದ್ದಾರೆ.
ಸಿಎಂ ಯಡಿಯೂರಪ್ಪ ಅವರಿಗೆ ವರ್ಗಾವಣೆ ಸ್ಥಗಿತಗೊಳಿಸುವಂತೆ ನಾವೇ ಹೇಳಿದ್ದೇವೆ. ವರ್ಗಾವಣೆ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಭ್ರಷ್ಟಾಚಾರ ಮಾಡಿಲ್ಲ, ವಿಜಯೇಂದ್ರ ಕೂಡ ಭ್ರಷ್ಟಾಚಾರ ಮಾಡಿಲ್ಲ. ಆಡಳಿತ ಪಕ್ಷದ ಶಾಸಕನಾಗಿ ಹಾದಿ ಬೀದಿಲಿ ಮಾತನಾಡ್ತೀರಾ? ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿ. ತಾಕತ್ತಿದ್ದರೇ ಯತ್ನಾಳ್ ಹೊನ್ನಾಳಿ ಕ್ಷೇತ್ರಕ್ಕೆ ಬರಲಿ ನೋಡೇ ಬಿಡ್ತೇನಿ ಎಂದು ರೇಣುಕಾಚಾರ್ಯ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ನಾವು ಯಡಿಯೂರಪ್ಪ ಜೊತೆ ಇದ್ದೇವೆ
ನಾನೂ ಕೂಡಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ಶಾಸಕ ಎಂದು ರಾಣೆಬೆನ್ನೂರು ಬಿಜೆಪಿ ಶಾಸಕ ಅರುಣಕುಮಾರ್ ಪೂಜಾರ್ ಹೇಳಿದ್ದಾರೆ. ಯಡಿಯೂರಪ್ಪ ಅವರ ನಾಯಕತ್ವದಲ್ಲೇ ನಾವು ಗೆದ್ದು ಬಂದಿದ್ದೇವೆ. ಯತ್ನಾಳ ಒಬ್ಬರೇ ಪಂಚಮಸಾಲಿ ಅಲ್ಲ, ನಾವೆಲ್ಲರೂ ಅವರೇ. ಎಲ್ಲರೂ ಒಟ್ಟಾಗಿ ಜನರ ಋಣ ತೀರಿಸೋ ಕೆಲಸ ಮಾಡುತ್ತಿದ್ದೇವೆ. ಯಡಿಯೂರಪ್ಪ ಬಗ್ಗೆ ಮಾತಾಡಿದರೆ ಅವರ ವ್ಯಕ್ತಿತ್ವ ಏನೂ ಕಡಿಮೆ ಆಗಲ್ಲ, ಕಡಿಮೆ ಆಗೋದು ಯತ್ನಾಳ ಅವರ ವ್ಯಕ್ತಿತ್ವ. ನಾವು ಯಡಿಯೂರಪ್ಪನವರ ಜೊತೆ ಇದ್ದೇವೆ, ಯಡಿಯೂರಪ್ಪ ಕರೆದರೆ ಪಂಚಮಸಾಲಿ ಸಮುದಾಯದ ನಾವೆಲ್ಲಾ ಶಾಸಕರು ಅವರ ಮನೆ ಮುಂದೆ ಇರುತ್ತೇವೆ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಲಿ!
ಇನ್ನು ಶಾಸಕ ಜ್ಯೋತಿ ಗಣೇಶ್ ಅವರೂ ಕೂಡ ಯಡಿಯೂರಪ್ಪ ಅವರ ಪರವಾಗಿ ಹಾಗೂ ಯತ್ನಾಳ್ ವಿರುದ್ಧ ಮಾತನಾಡಿದ್ದಾರೆ. ಯತ್ನಾಳ್ ಅವರು ಮಾತಾಡೋದು ಸರಿಯಲ್ಲ. ಬಿಜೆಪಿ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡುವುದನ್ನು ಬಿಟ್ಟು ಹೊರಗೆ ಮಾತನಾಡುವುದು ಸರಿಯಲ್ಲ. ಏನೇ ಸಮಸ್ಯೆ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಆಗಲಿ. ಈ ಬಗ್ಗೆ ಮಾತಾಡೋಕೆ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಅಂತ ನಾನು ವಿನಂತಿ ಮಾಡುವೆ ಎಂದಿದ್ದಾರೆ.
ಯತ್ನಾಳ್ ಅವರು ಈ ರೀತಿ ಮಾತಾಡೋದು ಸೂಕ್ತ ಅಲ್ಲ
ಇನ್ನು ಮಾಯಕೊಂಡ ಬಿಜೆಪಿ ಶಾಸಕ ಪ್ರೊ. ಲಿಂಗಣ್ಣ ಅವರು ಮಾತನಾಡಿ, ಶಾಸಕ ಯತ್ನಾಳ್ ಅವರು ಈ ರೀತಿ ಮಾತನಾಡುವುದು ಸೂಕ್ತ ಅಲ್ಲ. ಯಡಿಯೂರಪ್ಪ ಅವರ ಜೊತೆ ಮಾತಾಡಿದರೆ ಖಂಡಿತ ನಾವು ಸಹಿಸುವುದಿಲ್ಲ. ಪದೇ ಪದೇ ಹೀಗೆ ಮಾತಾಡಿದ್ದು ಎಲ್ಲರಿಗೂ ಬೇಸರ ಆಗಿದೆ ಎಂದಿದ್ದಾರೆ.
ಯತ್ನಾಳ್ ವಿರುದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಾಗ್ದಾಳಿ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಮ್ಮ ಹಿರಿಯ ಮುಖಂಡರು. ಆದರೆ ಪದೇ ಪದೇ ಸಿಎಂ ಯಡಿಯೂರಪ್ಪ ಅವರನ್ನು ಟೀಕೆ ಮಾಡುವುದು ಎಷ್ಟು ಸರಿ? ಎಂದು ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಪ್ರಶ್ನೆ ಮಾಡಿದ್ದಾರೆ. ಬಿವೈ ವಿಜಯೇಂದ್ರ ಅವರು ಭ್ರಷ್ಟಾಚಾರ ಮಾಡಿರುವ ದಾಖಲೆ ಇದ್ದರೆ ಯತ್ನಾಳ್ ಬಿಡುಗಡೆ ಮಾಡಲಿ. ಅದ್ನು ಬಿಟ್ಟು ಸುಮ್ಮನೇ ಮಾತಾಡುವುದು ಸರಿಯಲ್ಲ. ಶಾಸಕ ಯತ್ನಾಳ್ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸುತ್ತೇವೆ ಎಂದಿದ್ದಾರೆ.
ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಯತ್ನಾಳ ಅವರ ವಿರುದ್ದ ಕಚೇರಿ ಮುಂದೆ ಧರಣಿ ಮಾಡಿದರೂ ಆಶ್ಚರ್ಯ ಪಡಬೇಡಿ. ಹೀಗೆ ಯತ್ನಾಳ್ ಮಾತನಾಡುತ್ತಿದ್ದರೂ ಪಕ್ಷ ಹಾಗೂ ನಾಯಕರಿಗೆ ಹಿನ್ನಡೆ ಆಗುತ್ತದೆ.
Recommended Video
ಡಿ ಗ್ರೂಪ್ ನೌಕರರ ವರ್ಗಾವಣೆ ಕೂಡ ಸಿಎಂ ಮನೆಯಿಂದ ಆಗಬೇಕಾ?
ಡಿ ಗ್ರೂಪ್ ನೌಕರರ ವರ್ಗಾವಣೆ ಕೂಡ ಸಿಎಂ ಯಡಿಯೂರಪ್ಪ ಅವರ ಮನೆಯಿಂದ ಆಗಬೇಕು ಎಂದು ಹೇಳಿಕೆ ಕೊಟ್ಟಿದ್ದಾರೆ. ಯತ್ನಾಳ್ ಹಿರಿಯ ಮುಖಂಡರಾಗಿ ತಿಳಿದುಕೊಂಡು ಮಾತನಾಡಬೇಕು. ಅವರ ನಡವಳಿಕೆ ವಿರೋಧಿಸಿ ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದು ಶಿಸ್ತು ಕ್ರಮಕ್ಕೆ ಒತ್ತಾಯ ಮಾಡುತ್ತೇವೆ. ಸದ್ಯದಲ್ಲೇ ಶಾಸಕಾಂಗ ಸಭೆ ಕರೆದಾಗ ಶಾಸಕ ಯತ್ನಾಳ ಅವರನ್ನು ನಿಷ್ಟಾವಂತ ನಾಯಕರು ತರಾಟೆಗೆ ತೆಗೆದುಕೊಳ್ಳುತ್ತೇವೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಎಚ್ಚರಿಸಿದ್ದಾರೆ.
ಇನ್ನಾದರೂ ಯತ್ನಾಳ ತಮ್ಮ ನಡವಳಿಕೆ ತಿದ್ದಿಕೊಳ್ಳಬೇಕು. ಇನ್ನಾದ್ರೂ ಯತ್ನಾಳ್ ಬಾಯಿ ಮುಚ್ಚಿಕೊಂಡಿರಬೇಕು. ಇದಕ್ಕೆ ಯತ್ನಾಳ್ ಜಗ್ಗದೆ ಬಗ್ಗದೆ ಹೋದರೆ ನಾವು ಏನು ಮಾಡಬೇಕು ಅದನ್ನು ಮಾಡುತ್ತೇವೆ ಎಂದಿದ್ದಾರೆ.