"ಲಿಂಗಾಯತ ಧರ್ಮ ಶಿಫಾರಸು ಆರಂಭದ ಮುನ್ನಡೆ ಅಷ್ಟೆ; ಸಂಪೂರ್ಣ ಗೆಲುವಲ್ಲ"
ಬೆಂಗಳೂರು ಮಾರ್ಚ್ 20: ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ವರದಿಯನ್ನು ಅಂಗೀಕರಿಸಲು ಒಪ್ಪಿಗೆ ನೀಡಲಾಗಿದೆ. ಇದು ಒಂದು ರೀತಿಯಲ್ಲಿ ಬಹು ದಿನಗಳ ಲಿಂಗಾಯತ ಧರ್ಮ ಬೇಡಿಕೆಯ ಆರಂಭಿಕ ಮುನ್ನಡೆಯೇ ಹೊರತು ಸಂಪೂರ್ಣ ಗೆಲುವಲ್ಲ ಎಂದು ಡಾ. ಶಶಿಕಾಂತ ಪಟ್ಟಣ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈ ಕುರಿತು ವಿಶ್ವ ಲಿಂಗಾಯತ ಸಮಿತಿ ಧಾರವಾಡದ ಕಾರ್ಯಾಧ್ಯಕ್ಷರು ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರಿನ ರಾಷ್ಟ್ರೀಯ ಕಾರ್ಯದರ್ಶಿಗಳೂ ಆದ ಶಶಿಕಾಂತ್ ಪಟ್ಟಣ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮ : ಯಡಿಯೂರಪ್ಪಗೆ ಬಿಸಿತುಪ್ಪ
ಮುಕ್ತವಾಗಿ ಬಸವಣ್ಣನವರ ತತ್ವಗಳಿಗೆ ಒಳಗಾದವರು ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಹಾಗೂ ಬಸವ ತತ್ವಗಳಲ್ಲಿ ನಂಬಿಕೆ ಇಟ್ಟು ಆಚರಿಸುವ ಅನ್ಯರಿಗೆ ಕರ್ನಾಟಕ ಅಲ್ಪಸಂಖ್ಯಾತ ಸೆಕ್ಷನ್ 2 (D) ಕಾನೂನಿನ ಅಡಿಯಲ್ಲಿ ಅಲ್ಪಸಂಖ್ಯಾತ ಮಾನ್ಯತೆ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಅವರು ಸರಕಾರದ ಆದೇಶವನ್ನು ವಿವರಿಸಿದ್ದಾರೆ.
ಸಂಪುಟ ಸಭೆ ತೀರ್ಮಾನಗಳು
ಸಂಪುಟ ಸಭೆಯ ಪ್ರಮುಖ ತೀರ್ಮಾನಗಳನ್ನು ಶಶಿಕಾಂತ್ ಪಟ್ಟಣ ಅವರು ಹೀಗೆ ಪಟ್ಟಿ ಮಾಡಿದ್ದಾರೆ,
* ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಬಗ್ಗೆ ನ್ಯಾ. ನಾಗಮೋಹನದಾಸ್ ಕೊಟ್ಟಿರುವ ವರದಿಯನ್ನು ಸಚಿವ ಸಂಪುಟ ಸರ್ವ ಸಮ್ಮತದಿಂದ ಒಪ್ಪಿಕೊಂಡಿದೆ.
* ಲಿಂಗಾಯತಕ್ಕೆ ಅಲ್ಪಸಂಖ್ಯಾತ ಸ್ಥಾನ ಮಾನ ನೀಡುವಂತೆ ರಾಜ್ಯ ಅಲ್ಪಸಂಖ್ಯಾತ ಆಯೋಗವು ಕೇಂದ್ರಕ್ಕೆ ಶಿಫಾರಸ್ಸು ಮಾಡಲಿದೆ.
* ಬಸವತತ್ವ ಪಾಲನೆ ಮಾಡುವವರು ಲಿಂಗಾಯತರು. ಲಿಂಗಾಯತ ಧರ್ಮಕ್ಕೆ ಬಸವಣ್ಣನನ್ನು ಧರ್ಮಗುರು. ಇಷ್ಟ ಲಿಂಗ ದೇವರು. ವಚನ ಧರ್ಮ ಗ್ರಂಥ ಎಂದುಕೊಳ್ಳಬಹುದು.
* ಯಾವ ಸಚಿವರ ವಿರೋಧವೂ ಇಲ್ಲದೆ, ಸಂಪುಟ ಸಭೆಯಲ್ಲಿ ವರದಿ ಅಂಗೀಕಾರವಾಗಿದೆ.
* ಶಿಫಾರಸ್ಸು ಕಳಿಸುವ ದಿನಾಂಕವನ್ನು ಸರ್ಕಾರ ನಿರ್ಧಾರ ಮಾಡಲಿದೆ.
* ಲಿಂಗಾಯತರಿಗೆ ನೀಡಲಾಗುವ ಮೀಸಲಾತಿಗಳನ್ನು ಮುಂದಿನ ದಿನಗಳಲ್ಲಿ ನಿರ್ಧಾರ ಮಾಡಲಾಗುತ್ತದೆ.
* ವೀರಶೈವ ಲಿಂಗಾಯತರು, ಲಿಂಗಾಯತ ಧರ್ಮದ ಭಾಗ
ಟ್ವೀಟ್ಸ್ : 'ಒಡೆದು ಆಳುವ ನೀತಿ ಕಾಂಗ್ರೆಸ್ಸಿಗೆ ಬ್ರಿಟಿಷರ ಕೊಡುಗೆ'
ವೀರಶೈವರ ಸೇರ್ಪಡೆಗೆ ವಿರೋಧ
ನ್ಯಾ. ನಾಗಮೋಹನ ದಾಸ್ ಅವರು ತಮ್ಮ ವರದಿಯಲ್ಲಿ ಲಿಂಗಾಯತರು ಹಿಂದೂಗಳಲ್ಲ, ವೀರಶೈವವು ಧರ್ಮವಲ್ಲ, ಅಲ್ಲದೆ ಸಿದ್ಧಾಂತ ಶಿಖಾಮಣಿಯು ಒಂದು ಖೊಟ್ಟಿ ಗ್ರಂಥವೆಂದು ದಾಖಲೆ ಪಡಿಸಿದ್ದಾರೆ. ಕರ್ನಾಟಕ ಸರಕಾರದ ಪರವಾಗಿ ಅಲ್ಪಸಂಖ್ಯಾತ ಆಯೋಗವು ಹೈಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಲಿಂಗಾಯತರು ಹಿಂದೂಗಳಲ್ಲ ಎಂದು ಅತ್ಯಂತ ಸ್ಪಷ್ಟ ನಿಲುವನ್ನು ತಾಳಿದೆ. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ವರದಿಯನ್ನು ಯಥಾವತ್ತಾಗಿ ಒಪ್ಪಿಕೊಂಡು ಕೇವಲ ಲಿಂಗಾಯತ ಧರ್ಮ ಮಾನ್ಯತೆ ಹಾಗೂ ಅಲ್ಪ ಸಂಖ್ಯಾತ ಸ್ಥಾನಮಾನಕ್ಕೆ ಶಿಫಾರಸು ಮಾಡಿದ್ದಾರೆ ಚೆನ್ನಾಗಿರುತಿತ್ತು ಎಂದು ಅವರು ಹೇಳಿದ್ದಾರೆ.
ವೀರಶೈವರ ಸೇರ್ಪಡೆಯಿಂದ ಈ ಹಿಂದೆ ಆದ ಕಹಿ ಅನುಭವ ಮತ್ತೆ ಮರುಕಳಿಸದಿರಲಿ ಎಂಬ ಆತಂಕವು ಅನೇಕರನ್ನು ಕಾಡುತ್ತಿದೆ. ಸರಕಾರದ ಈ ನಿರ್ಣಯದಿಂದ ಸಂತಸ ವ್ಯಕ್ತಪಡಿಸುವ ಹಾಗಿಲ್ಲ ಹಾಗೂ ಅಸಮಾಧಾನವನ್ನು ತೋಡಿಕೊಳ್ಳದ ಸಂದಿಗ್ಧ ಪರಿಸ್ಥಿತಿಗೆ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಸಂಭ್ರಮವನ್ನಾಗಿ ಆಚರಿಸುವುದು ತಪ್ಪು. ಅತಂತ್ರ ಸ್ಥಿತಿಯಲ್ಲಿದ್ದ ಲಿಂಗಾಯತ ಧರ್ಮದ ಮಾನ್ಯತೆಗೆ ಮಗ್ಗುಲಿನ ಮುಳ್ಳಾಗಿದ್ದ ವೀರಶೈವ ಲಿಂಗಾಯತರನ್ನು ಇದೀಗ ಪ್ರತ್ಯೇಕ ಧರ್ಮದಲ್ಲಿ ಸೇರ್ಪಡೆಗೊಳಿಸಿರುವುದು ಬಹಳಷ್ಟು ಜನರಿಗೆ ನೋವು ಮತ್ತು ಅಸಮಾಧಾನವನ್ನು ಉಂಟು ಮಾಡಿದೆ ಎಂದು ಅವರು ವಿವರಿಸಿದ್ದಾರೆ.
ಆರಂಭದ ಮುನ್ನುಡಿ ಅಷ್ಟೇ!
ಲಿಂಗಾಯತ ಚಳುವಳಿಯ ಹೋರಾಟಕ್ಕೆ ಇದು ಆರಂಭದ ಮುನ್ನಡೆ. ಅತಿಯಾದ ಭಾವುಕತೆಯಿಂದ ಪಟಾಕಿ ಸಿಡಿಸಿ ಸಿಹಿ ಹಂಚುವ ಪೂರ್ಣ ಪ್ರಮಾಣದ ಪ್ರಸಂಗ ಇದಲ್ಲ. ಕಾರಣ ವೀರಶೈವರು ಹಿಂದೂಗಳು ಎಂದು ವಾದಿಸುವಾಗ ಅವರನ್ನು ಲಿಂಗಾಯತರ ಜೊತೆಗೆ ತಳಕು ಹಾಕಿರುವುದು ಸರಿಯಾದ ಕ್ರಮವಲ್ಲ. ಮಾತಾಜಿಯವರು ಇದನ್ನೇ ಹೇಳಿದ್ದಾರೆ. ನಮಗೆ ಬೇಕಾಗಿರುವುದು ಅಪ್ಪ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಮಾತ್ರ ಅದನ್ನು ವಿರೋಧಿಸುವ ವೀರಶೈವರ ಸೇರ್ಪಡೆಯಲ್ಲ ಎಂದು ಶಶಿಕಾಂತ್ ಪಟ್ಟಣ ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ ಇಂತಹ ನಿರ್ಣಯ ಬರುವ ಹಾಗಿದ್ದರೆ ಇಷ್ಟೊಂದು ಸಂಘರ್ಷದ ಅವಶ್ಯಕತೆಯೇ ಇರಲಿಲ್ಲ. ನಮ್ಮ ಬೇಡಿಕೆಯು ಕೇವಲ ಲಿಂಗಾಯತ ಮಾತ್ರವಿದ್ದು, ಬಸವ ಭಕ್ತರಿಗೆ ವೀರಶೈವ ಲಿಂಗಾಯತವನ್ನು ಸೇರಿಸಿರುವುದರಿಂದ ನೋವಾಗಿದೆ ಎಂದಿದ್ದಾರೆ.
2021 ರ ಒಳಗಾಗಿ ಲಿಂಗಾಯತಕ್ಕೆ ಧರ್ಮದ ಮಾನ್ಯತೆ
ಜನ್ಮ ದಾಖಲಾತಿಯಲ್ಲಿ ಈ ಹಿಂದೆ ಇದ್ದ ಕೇವಲ ಲಿಂಗಾಯತ ಎಂಬ ಕಾಲಮ್ ನಲ್ಲಿ ವೀರಶೈವ / ಲಿಂಗಾಯತ ಸೇರಿಸಿದವರು ಯಾರು? ಅದನ್ನು ಸರಿಪಡಿಸುವ ಭರವಸೆ ನೀಡಿದವರು ಯಾರು ? ಬಸವ ತತ್ವದಲ್ಲಿ ನಂಬಿಕೆ ಇಟ್ಟಿರುವ ವೀರಶೈವ ಮಹಾಸಭೆಯು ಈ ಕೂಡಲೇ ತನ್ನ ಮಹಾಸಭೆಯ ನಿಯಮಾವಳಿಗಳನ್ನು ಬೈ ಲಾ ಸರಿಪಡಿಸುವುದೇ? 1940 ರಲ್ಲಿ ಬ್ಯಾರಿಸ್ಟರ್ ಎಂ.ಎಸ್. ಸರದಾರ್ ಅವರು ಇದನ್ನು ಅಖಿಲ ಭಾರತ ಲಿಂಗಾಯತ ಮಹಾಸಭೆಯೆಂದು ಮಾಡಬೇಕೆಂದು ಸೂಚನೆ ನೀಡಿದ ಠರಾವನ್ನು ಅಂಗೀಕರಿಸುವುದೇ? ಹೀಗೆ ಹತ್ತು ಹಲವು ಪ್ರಶ್ನೆಗಳು ಬಸವ ಭಕ್ತರಮನದಲ್ಲಿ ಮಡುವುಗಟ್ಟಿವೆ ಎಂದು ಶಶಿಕಾಂತ್ ಪಟ್ಟಣ ಖಾರವಾಗಿಯೇ ಹೇಳಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭೆಗೆ ಪರ್ಯಾಯ ಜಾಗತಿಕ ಲಿಂಗಾಯತ ಮಹಾಸಭೆ ಮಾಡಿ, ಕೊನೆಗೆ ಲಿಂಗಾಯತ ಮತ್ತು ವೀರಶೈವ ಲಿಂಗಾಯತಕ್ಕೆ ಧರ್ಮ ಮಾನ್ಯತೆ ಪಡೆಯುವ ಶಿಫಾರಸು ಮಾಡಿರುವುದು ಯಾವ ಹೋರಾಟಕ್ಕೂ ಸರಿಯೆನಿಸದ ಒಪ್ಪಂದವಾಗಿದೆ. ಬಸವರಾಜ ಹೊರಟ್ಟಿ, ಎಂ.ಬಿ. ಪಾಟೀಲರು ಇನ್ನೊಮ್ಮೆ ಸದರಿ ಬೆಳವಣಿಗೆಯನ್ನು ಕೂಲಂಕಷವಾಗಿ ಪರಿಶೀಲಿಸಿ 2021 ರ ಒಳಗಾಗಿ ಲಿಂಗಾಯತ ಧರ್ಮದ ಮಾನ್ಯತೆ ಹೋರಾಟಕ್ಕೆ ಒಂದು ಗಟ್ಟಿಯಾದ ವೇದಿಕೆ ಸಿದ್ಧ ಮಾಡಲಿ ಎಂದು ಅವರು ಒತ್ತಾಯಿಸಿದ್ದಾರೆ. ಕೆಲವರ ಒತ್ತಡ, ಓಲೈಕೆ, ರಾಜಿ ಸಂಧಾನ ಸೂತ್ರಗಳು ಆರಂಭದ ಸಂತಸ ತಂದರೂ ಮುಂದೆ ಅವುಗಳೇ ಅಡಚಣೆಗಳನ್ನು ಉಂಟು ಮಾಡುತ್ತವೆ ಎಂದು ಅವರು ವಿಷಾದಿಸಿದ್ದಾರೆ.
ಡಾ.ಎಂ.ಎಂ. ಕಲಬುರ್ಗಿ ನೆನಪು
ಕಳೆದ ಒಂದು ದಶಕಕ್ಕೂ ಅಧಿಕ ನಿರಂತರವಾಗಿ ಹೋರಾಟ ನಡೆಸಿದ ಅನೇಕ ಕಾರ್ಯಕರ್ತರಿಗೆ ಇದು ಅಳುಕು ತಂದ ಸುದ್ಧಿಯಾಗಿದೆ. ವೀರಶೈವದ ಸೇರ್ಪಡೆ ಬೇಸರ ತಂದಿದೆ. ಆದರೆ ಮುಂದಿನ ದಿನಗಳಲ್ಲಿ ಕಾನೂನಿನ ಸಮರಕ್ಕೆ ಬಸವಾಭಿಮಾನಿಗಳಿಗೆ ಶಕ್ತಿ ಬಂದಂತಾಗಿದೆ. ಸದ್ಯ ಕರ್ನಾಟಕ ಸರಕಾರ ನಿರ್ಣಯವನ್ನು ಸ್ವಾಗತ ಮಾಡೋಣ. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತು ಬಸವ ಭಕ್ತರು ಮುಂದಿನ ಹೋರಾಟಕ್ಕೆ ಸಜ್ಜಾಗಬೇಕು. ಈ ಹೋರಾಟದಲ್ಲಿ ಡಾ.ಎಂ.ಎಂ. ಕಲಬುರ್ಗಿ ಅವರನ್ನು ನೆನೆಯಲೇ ಬೇಕು. ಅವರ ಹತ್ಯೆ ಹಂತಕರು ಇನ್ನೂ ಪತ್ತೆಯಾಗಿಲ್ಲ ಎಂದಿದ್ದಾರೆ.
ಕಾನೂನಿನ ನೆರವು ಪಡೆದುಕೊಂಡು ಲಿಂಗಾಯತ ಧರ್ಮಕ್ಕೆ ನ್ಯಾಯ ಒದಗಿಸುವ ಕಾರ್ಯ ಇನ್ನು ಕೇಂದ್ರ ಸರಕಾರದ ಹೆಗಲ ಮೇಲಿದೆ. ಕಾರಣ ಕೇಂದ್ರ ಸರಕಾರವು ಕರ್ನಾಟಕದ ಈ ಮಹತ್ತರ ನಿರ್ಣಯವನ್ನು ರಾಜಕೀಯ ಲೆಕ್ಕಾಚಾರಕ್ಕೆ ಬಳಸದೆ ಶೀಘ್ರವಾಗಿ ಅನುಮೋದನೆ ನೀಡಿ ಬಸವಣ್ಣನವರಿಗೆ, ಅವರ ತತ್ವಗಳಿಗೆ ಸಂವಿಧಾನ ಮಾನ್ಯತೆ ನೀಡಬೇಕು. ಈ ದಿಶೆಯಲ್ಲಿ ಪ್ರಾಮಾಣಿಕವಾಗಿ ದುಡಿದ ಎಲ್ಲ ಸಚಿವರಿಗೆ, ಮಠಾಧೀಶರಿಗೆ, ಕಾರ್ಯಕರ್ತರಿಗೆ, ಮಾಧ್ಯಮದವರಿಗೆ, ಮತ್ತು ಬಸವ ಭಕ್ತರಿಗೆ ಧನ್ಯವಾದಗಳನ್ನು ಅವರು ಸಲ್ಲಿಸಿದ್ದಾರೆ.