ಲಿಂಗಾಯತ ಸಮುದಾಯದ ಬೇಡಿಕೆ: ಇಕ್ಕಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ!
ಬೆಂಗಳೂರು, ನ. 15: ಬಿಜೆಪಿಯಲ್ಲಿನ ಲಿಂಗಾಯತ ನಾಯಕರಿಂದಲೇ ಮುಖ್ಯಮಂತ್ರಿ ಬದಲಾವಣೆ ಮಾತು ಕೇಳಿ ಬಂದಿತ್ತು. ಅದಾದ ಬಳಿಕ ಎರಡು ಉಪ ಚುನಾವಣೆಯಲ್ಲಿ ಭರ್ಜರಿ ಗೆಲವು ಯಡಿಯೂರಪ್ಪ ಅವರ ಖುರ್ಚಿಯನ್ನು ಮತ್ತೆ ಗಟ್ಟಿಗೊಳಿಸಿದೆ ಎನ್ನಲಾಗಿತ್ತು. ಆದರೆ ಇದೀಗ ಲಿಂಗಾಯತ ನಾಯಕರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಎದುರು ಮಹತ್ವದ ಬೇಡಿಕೆಗಳನ್ನು ಇಟ್ಟಿದ್ದಾರೆ. ಬಸವಕಲ್ಯಾಣ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ.
ಇದೀಗ ಸ್ವಜಾತಿಯವರಿಂದಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಹತ್ವದ ಬೇಡಿಕೆಗಳು ಬಂದಿವೆ. ಜೊತೆಗೆ ಪರೋಕ್ಷ ಎಚ್ಚರಿಕೆಯನ್ನು ಜಾತಿ ಬಾಂಧವರು ಯಡಿಯೂರಪ್ಪ ಅವರಿಗೆ ಕೊಟ್ಟಿದ್ದಾರೆ. ಹೀಗಾಗಿ ಬಸವಕಲ್ಯಾಣ, ಮಸ್ಕಿ ಉಪ ಚುನಾವಣೆ ಸೇರಿದಂತೆ ರಾಜ್ಯಾದ್ಯಂತ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆ ಸಿಎಂ ಯಡಿಯೂರಪ್ಪ ಅವರಿಗೆ ಕಬ್ಬಿಣದ ಕಡಲೆ ಆಗುವುದು ಖಚಿತ.
ಬಸವಕಲ್ಯಾಣಕ್ಕೆ ಬಿಎಸ್ವೈ ಪುತ್ರ ಬಿ.ವೈ. ವಿಜಯೇಂದ್ರ ಭೇಟಿ ಹಿಂದಿನ ರಹಸ್ಯ!
ಅಷ್ಟಕ್ಕೂ ಲಿಂಗಾಯತ ಸಮುದಾಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಎದುರು ಇಟ್ಟಿರುವ ಪ್ರಮುಖ ಬೇಡಿಕೆಗಳು ಏನು? ಯಾರು ಆ ಬೇಡಿಕೆ ಇಟ್ಟಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ
ಮರಾಠ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಹಾಗೂ ಆ ಸಮುದಾಯದ ಅಭಿವೃದ್ಧಿಗೆ 50 ಕೋಟಿ ರೂಪಾಯಿಗಳನ್ನು ಮೀಸಲಿಡಲು ಸಿಎಂ ಯಡಿಯೂರಪ್ಪ ಅವರು ಆದೇಶ ಮಾಡಿದ್ದಾರೆ. ಇದೇ ಹಿನ್ನೆಲೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಯಡಿಯೂರಪ್ಪ ಅವರ ಎದುರು ಮಹತ್ವದ ಬೇಡಿಕೆ ಇಟ್ಟಿದೆ.
ತಾವು ಬೇರೆ ಎಲ್ಲ ಸಮುದಾಯದ ನಿಗಮ ಮತ್ತು ಪ್ರಾಧಿಕಾರ ರಚನೆ ಮಾಡುತ್ತಿದ್ದೀರಿ. ಬಹಳ ದಿನಗಳ ನಮ್ಮ ಬೇಡಿಕೆ ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕೆಂದು. ಆದರೆ ಯಾಕೋ ನಮ್ಮ ಮನವಿಗೆ ನೀವು ಸ್ಪಂದಿಸುತ್ತಿಲ್ಲ. ನಮ್ಮ ಸಮಾಜದ ಕಡು ಬಡವರು, ಸಮಾಜದ ಹಿಂದುಳಿದ ವರ್ಗಕ್ಕೆ, ಯುವಕರಿಗೆ ಸಹಾಯ ಆಗಬೇಕು ಹಾಗು ಸಮುದಾಯಕ್ಕೆ ಒಳ್ಳೆಯದು ಆಗಬೇಕೆಂಬುದು ನಮ್ಮ ಅಪೇಕ್ಷೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಜಿ ಮನೋಹರ್ ಅಬ್ಬಿಗೆರೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಹಿತ್ತಲ ಗಿಡ ಮದ್ದಲ್ಲ!
ರಾಜ್ಯದಲ್ಲಿ ಚುನಾವಣೆ, ಉಪ ಚುನಾವಣೆಗಳು ನಡೆದಾಗ ಪ್ರಚಾರದಲ್ಲಿ ತಾವು ಲಿಂಗಾಯತರ ಒಂದು ಮತವೂ ಬೇರೆ ಪಕ್ಷದ ಅಭ್ಯರ್ಥಿಗೆ ಹೋಗಬಾರದೆಂದು ಹೇಳುತ್ತೀರಿ. ಆದರೆ ತಾವು ಲಿಂಗಾಯತರಿಗೆ ಇಲ್ಲಿಯವರೆಗೆ ಮಾಡಿದ್ದೇನು. ತಾವು ಲಿಂಗಾಯತ ಸಮಾಜದಲ್ಲಿ ಹುಟ್ಟಿದ್ದರಿಂದ ನಿಮಗೆ ಮುಖ್ಯಮಂತ್ರಿ ಪದವಿ ಸಿಕ್ಕಿದೆ ಎಂಬುದನ್ನು ಸಹ ನೀವು ನೆನಪಿನಲ್ಲಿಟ್ಟುಕೊಳ್ಳಬೇಕು.
'ಹಿತ್ತಲ ಗಿಡ ಮದ್ದಲ್ಲ' ಎಂದು ಹೇಳುವ ಗಾದೆ ಮಾತಿನಂತೆ ನೀವು (ಬಿ.ಎಸ್. ಯಡಿಯೂರಪ್ಪ) ಲಿಂಗಾಯತರನ್ನು ನಿಷ್ಕಾಳಜಿ ಮಾಡುತ್ತೀರಿ ಎಂಬುದು ಲಿಂಗಾಯತರ ಅಭಿಪ್ರಾಯ. ಈ ಅಭಿಪ್ರಾಯ ಹೋಗಲು ಮಹಾರಾಷ್ಟ್ರ ಸರ್ಕಾರದಂತೆ ಲಿಂಗಾಯತ ಸಮುದಾಯದ ಅಭಿವೃದ್ಧಿಗೆ ಸಹಾಯ ಮಾಡಿ ಎಂದು ಬಸವರಾಜ್ ಹೊರಟ್ಟಿ ಅವರು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಮಹಾರಾಷ್ಟ್ರದಂತೆ ಮೀಸಲಾತಿ ಕೊಡಿ
ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಒದಗಿಸುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅವರು ಪತ್ರ ಬರೆದು ಆಗ್ರಹಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯದವರಿಗೆ ಶೇಕಡಾ 16ರಷ್ಟು ಮೀಸಲಾತಿ ಕೊಟ್ಟಿದ್ದಾರೆ.
ಅದೇ ರೀತಿ ಕರ್ನಾಟಕದಲ್ಲಿ ಲಿಂಗಾಯತರಿಗೆ ಶೇಕಡಾ 16 ರಷ್ಟು ಮೀಸಲಾತಿ ಕೊಡಬೇಕು. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನೀವು ಲಿಂಗಾಯತರನ್ನು ನಿಷ್ಕಾಳಜಿ ಮಾಡುತ್ತೀರಿ ಎಂಬ ಮಾತಿದೆ. ಆ ಮಾತನ್ನು ಹೋಗಲಾಡಿಸಲು ಲಿಂಗಾಯರಿಗೆ ಶೇಕಡಾ 16ರಷ್ಟು ಮೀಸಲಾತಿ ಘೋಷಣೆ ಮಾಡಬೇಕು ಎಂದು ಲಿಂಗಾಯತ ಸಮುದಾಯದ ನಾಯಕ, ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಬಸವರಾಜ್ ಹೊರಟ್ಟಿ ಆಗ್ರಹಿಸಿದ್ದಾರೆ.
ಯಡಿಯೂರಪ್ಪಗೆ ಶುರುವಾಯ್ತು ಟೆನ್ಶನ್!
ಸಿಎಂ ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಎಂದೇ ಹೇಳಲಾಗುತ್ತಿದೆ. ಇದೀಗ ಯಡಿಯೂರಪ್ಪ ಬಳಿಕ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಆ ಸ್ಥಾನವನ್ನು ಗಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದು ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ನಾಯಕರಿಗೆ ಆತಂಕ ಸೃಷ್ಟಿಸಿದೆ. ಹೀಗಾಗಿ ಆ ಸಮುದಾಯದ ನಾಯಕರು ನಿರ್ಧಿಷ್ಟ ಬೇಡಿಕೆಗಳನ್ನು ಇಟ್ಟು ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆಂದು ಹೆಸರು ಹೇಳಲು ಇಚ್ಚಿಸದ ಬಿಜೆಪಿ ನಾಯಕರೊಬ್ಬರು 'ಒನ್ಇಂಡಿಯಾ ಕನ್ನಡ'ದೊಂದಿಗೆ ಮಾತನಾಡಿ ಮಾಹಿತಿ ನೀಡಿದರು.
ರಾಜಕೀಯ ಏನೇ ಇರಲಿ, ಒಂದು ಸಮುದಾಯದ ಪರವಾಗಿ ಆ ಸಮುದಾಯದ ನಾಯಕರು ಬೇಡಿಕೆ ಇಡುವುದನ್ನು ತಪ್ಪು ಎಂದು ಹೇಳುವುದು ಸರಿಯಲ್ಲ. ಹೀಗಾಗಿ ಲಿಂಗಾಯತ ಸಮುದಾಯದ ಬೇಡಿಕೆಗಳನ್ನು ಈಡೇರಿಸುವ ಮೂಲಕ ಯಡಿಯೂರಪ್ಪ ಅವರು ತಮ್ಮ ಸಮುದಾಯದ ನಂಬಿಕೆ ಉಳಿಸಿಕೊಳ್ಳುತ್ತಾರೊ? ಅಥವಾ ನಿರ್ಲಕ್ಷಿಸಿ ಮುಂದಕ್ಕೆ ಹೋಗುತ್ತಾರೊ ಕಾಯ್ದು ನೋಡಬೇಕು!