ಕೇಂದ್ರ ಸರ್ಕಾರದ ವಿರುದ್ಧ ವಿಮಾ ಪ್ರತಿನಿಧಿಗಳ ಪ್ರತಿಭಟನೆ
ಚಿಂತಾಮಣಿ ಆ. 5: ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮುಂಡಿಸಲು ಮುಂದಾಗುತ್ತಿರುವ ವಿಮಾ ಮಸೂದೆ 2008 ಮತ್ತು ಇದರ ತಿದ್ದುಪಡಿ ಮಸೂದೆಯನ್ನು ಖಂಡಿಸಿ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಸದಸ್ಯರು ಕೋಲಾರದ ಚಿಂತಾಮಣಿಯಲ್ಲಿ ಪ್ರತಿಭಟನೆ ನಡೆಸಿದರು.
ಈ ತಿದ್ದುಪಡಿ ಮಸೂದೆಯಲ್ಲಿ ಜೀವ ವಿಮಾ ಪ್ರತಿನಿಧಿಗಳಿಗೆ ಮಾರಕವಾಗಿರುವ ಅನೇಕ ಅಂಶಗಳಿದ್ದು ಇದರಿಂದ ವಿಮಾ ಪ್ರತಿನಿಧಿಗಳಿಗೆ ಮತ್ತು ವಿಮಾ ಉದ್ಯಮಕ್ಕೆ ಪೆಟ್ಟು ಬೀಳುವ ಅವಕಾಶಗಳು ಹೇರಳವಾಗಿವೆ ಎಂದು ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟ ದಕ್ಷಿಣ ಕೇಂದ್ರ ವಲಯದ ಅಧ್ಯಕ್ಷ ಎನ್.ಕೃಷ್ಣ ಹೇಳಿದ್ದಾರೆ.
ವಿಮಾ ಪ್ರತಿನಿಧಿಗಳಿಗೆ ಸಂವಿಧಾನಾತ್ಮಕವಾಗಿ ರಕ್ಷಣೆ ನೀಡುತ್ತಿರುವ ಸೆಕ್ಷನ್ಗಳಾದ 40, 40(ಎ) ಮತ್ತು 44 ಇವುಗಳನ್ನು ಹೊಸ ವಿಮಾ ಮಸೂದೆ 2008 ರಲ್ಲಿ ತೆಗೆದುಹಾಕಿರುವ ಕೇಂದ್ರ ಸರ್ಕಾರದ ನಡೆಯನ್ನು ಅವರು ಖಂಡಿಸಿದ್ದಾರೆ.
ಸೆಕ್ಷನ್ 40 : ಈ ಸೆಕ್ಷನ್ ವಿಮಾ ಕಾಯಿದೆ 1938 ರ ಅತೀ ಮುಖ್ಯವಾಗಿದ್ದು ಇದರ ಪ್ರಕಾರ ವಿಮಾ ಪ್ರತಿನಿಧಿಗಳಿಗೆ ಪ್ರಥಮ ವರ್ಷದ ಮತ್ತು ರಿನ್ಯೂವಲ್ ಕಮೀಷನ್ ಕೊಡಲೇ ಬೇಕಾದಂತಹ ಸಂವಿಧಾನಾತ್ಮಕ ಸೌಲಭ್ಯವನ್ನು ಹೊಂದಿರುತ್ತದೆ. ಆದರೆ ಈಗ ಬಂದಿರುವ ತಿದ್ದುಪಡಿ ಮಸೂದೆಯಲ್ಲಿ ಈ ಒಂದು ಸೆಕ್ಷನ್ ತೆಗೆದುಬಿಟ್ಟಿದ್ದು ಇದರಿಂದ ವಿಮಾ ಪ್ರತಿನಿಧಿಗಳಿಗೆ ಸಂವಿಧಾನಾತ್ಮಕವಾಗಿ ಲಭ್ಯವಿರುವ ಸೌಲಭ್ಯವನ್ನು ಕಿತ್ತುಕೊಂಡಂತಾಗಿದೆ.
ಸೆಕ್ಷನ್40(ಎ) : ಈ ಸೆಕ್ಷನ್ ಸಹ ವಿಮಾ ಕಾಯಿದೆ 1938 ರಲ್ಲಿ ಅಡಕವಾಗಿದ್ದು ವಿಮಾ ಪ್ರತಿನಿಧಿಗಳಿಗೆ ಸಂವಿಧಾನಾತ್ಮಕವಾಗಿ ಕಮೀಷನ್ ಕೊಡುವ ಸೌಲಭ್ಯ ಹೊಂದಿರುತ್ತದೆ. ಆದರೆ ಈಗ ತರಲಾಗುತ್ತಿರುವ ತಿದ್ದುಪಡಿ ಮಸೂದೆಯಲ್ಲಿ ಈ ಸೆಕ್ಷನ್ 40(ಎ)ಅನ್ನು ತೆಗೆದುಹಾಕಿರುತ್ತಾರೆ ಇದರಿಂದ ವಿಮಾ ಪ್ರತಿನಿಧಿಗಳು ಸಂವಿಧಾನಾತ್ಮಕವಾಗಿ ಲಭ್ಯವಿರುವ ಸೌಲಭ್ಯವನ್ನು ಕಳೆದುಕೊಳ್ಳುವ ಬೀತಿಯನ್ನು ಎದುರುಸುತ್ತಿದ್ದಾರೆ. ಮತ್ತು ಸುಮಾರು 32 ಲಕ್ಷ ಪ್ರತಿನಿಧಿಗಳು ಬೀದಿಗೆ ಬರಲಿದ್ದಾರೆ.
ಸೆಕ್ಷನ್ 44 : ಈ ಸೆಕ್ಷನ್ ಪ್ರಕಾರ ಯಾವುದೇ ಒಬ್ಬ ವಿಮಾ ಪ್ರತಿನಿಧಿ ಮೃತಪಟ್ಟರೆ ಅವರ ಕುಟುಂಬ ವರ್ಗದವರಿಗೆ ಕಮೀಷನ್ ಸೌಲಭ್ಯವನ್ನು(ಹೆರಡಿಟರಿ ಕಮೀಷನ್) ಕೊಡುವ ಸಂವಿಧಾನಾತ್ಮಕ ಸೌಲಭ್ಯ ಇರುತ್ತದೆ. ಈ ಒಂದು ಸೆಕ್ಷನ್ ಅನ್ನು ಹೊಸ ತಿದ್ದುಪಡಿ ಮಸೂದೆಯಲ್ಲಿ ತೆಗೆದು ಹಾಕಿರುವುದರಿಂದ ವಿಮಾ ಪ್ರತಿನಿಧಿಗಳು ಮತ್ತು ಅವರ ಕುಟುಂಬದವರಿಗೆ ಮರ್ಮಾಘಾತವಾಗುವಂತಹ ಹೊಡೆತ ಬೀಳಲಿದೆ.