ಹಜ್ ಭವನಕ್ಕೆ ಅಬ್ದುಲ್ ಕಲಾಂ ಹೆಸರಿಡಿ, ಯಡಿಯೂರಪ್ಪ ಆಗ್ರಹ
Recommended Video
ಬೆಂಗಳೂರು, ಜೂನ್ 24: ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ರಾಜ್ಯ ಸರಕಾರದ ಪ್ರಸ್ತಾಪಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಹಳೆ ವಿಷಯ. ಇದೀಗ ಹೆಸರು ಬದಲಾಯಿಸುವುದಾದರೆ ದೇಶದ ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ಅವರ ಹೆಸರಿಡಿ ಎಂದು ಬಿಜೆಪಿ ಬೇಡಿಕೆ ಮುಂದಿಟ್ಟಿದೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, "ನಾನು ಒಂದು ವಿಷಯ ಹೇಳುತ್ತೇನೆ. ಅವರು ಅದಕ್ಕೆ ಅಬ್ದುಲ್ ಕಲಾಂ ಅವರ ಹೆಸರನ್ನಿಡಲಿ," ಎಂಬ ಪರಿಹಾರ ಸೂತ್ರವನ್ನು ಮುಂದಿಟ್ಟಿದ್ದಾರೆ.
ಹಜ್ ಘರ್ಗೆ ಟಿಪ್ಪು ಸುಲ್ತಾನ್ ಹೆಸರು: ವಿವಾದಕ್ಕೆ ಮುನ್ನುಡಿ?
ಹಜ್ ಭವನದ ಹೆಸರನ್ನು ಟಿಪ್ಪು ಸುಲ್ತಾನ್ ಹಜ್ ಘರ್ ಎಂದು ಬದಲಾಯಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಹಜ್, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಕೆಲವು ದಿನಗಳ ಹಿಂದೆ ಹೇಳಿಕೆ ನೀಡಿದ್ದರು.
ಮಾಧ್ಯಮಗಳೊಂದಿಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, "ಹಜ್ ಹೌಸ್ ಹೆಸರನ್ನು ಟಿಪ್ಪು ಸುಲ್ತಾನ್ ಹಜ್ ಘರ್ ಎಂದು ಮರು ನಾಮಕರಣ ಮಾಡುವಂತೆ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲೇ ಜನರು ಮತ್ತು ಉಲೇಮಾರಿಂದ ಬೇಡಿಕೆ ಇತ್ತು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಯಡಿಯೂರಪ್ಪ ಅವರ ಜೊತೆಗೆ ಈ ಸಂಬಂಧ ನಾನು ಚರ್ಚೆ ಮಾಡುತ್ತೇನೆ," ಎಂದು ತಿಳಿಸಿದ್ದರು.
ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಮಾತ್ರವಲ್ಲ ಟಿಪ್ಪು ಹೆಸರಿಟ್ಟರೆ ಉಗ್ರ ಹೋರಾಟ ನಡೆಸುವುದಾಗಿಯೂ ಹೇಳಿತ್ತು. ಇದೀಗ ಬಿಜೆಪಿಯೇ ಅಬ್ದುಲ್ ಕಲಾಂ ಅವರ ಹೆಸರನ್ನು ತೇಲಿ ಬಿಟ್ಟಿದೆ.