"ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ 80% ಮೀಸಲಾತಿ ನೀಡಿ"
ಬೆಂಗಳೂರು, ಆಗಸ್ಟ್ 19: ದೇಶದಲ್ಲಿ ಕಳೆದ 45 ವರ್ಷದಲ್ಲಿ ಎಂದೂ ಕಂಡರಿಯದಂತಹ ನಿರುದ್ಯೋಗದ ಸಮಸ್ಯೆ ಇಂದು ನಿರ್ಮಾಣವಾಗಿದೆ. ಶೇ.50ಕ್ಕೂ ಹೆಚ್ಚು ಯುವಜನರಿರುವ ಭಾರತವನ್ನು ಯುವರಾಷ್ಟ್ರ ಎಂದು ಕರೆಯಲಾಗುತ್ತಿದ್ದರೂ, ದೇಶದಲ್ಲಿ 8 ಕೋಟಿ ಜನರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಕರ್ನಾಟಕದಲ್ಲಿ 95 ಲಕ್ಷಕ್ಕೂ ಹೆಚ್ಚು ನಿರುದ್ಯೋಗಿಗಳಿದ್ದು, ಇವರ ಸಾಲಿಗೆ ಪ್ರತಿವರ್ಷವೂ 8 ಲಕ್ಷ ಯುವಜನರ ಸೇರ್ಪಡೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕನ್ನಡ ಮಾತೃ ಭಾಷೆಯಲ್ಲಿ ಓದಿದ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ 80% ಮೀಸಲಾತಿ ಜಾರಿಯಾಗಬೇಕು ಎಂದು ಆಮ್ ಆದ್ಮಿ ಪಕ್ಷವು ಆಗ್ರಹಿಸಿದೆ.
ಕರ್ನಾಟಕದ ಯುವಜನರಿಗೆ ಉದ್ಯೋಗವಿಲ್ಲದಿರುವ ಇಂದಿನ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿರುವ ಐಟಿ, ಬಿಟಿ ಕ್ಷೇತ್ರಗಳಲ್ಲಿ 25 ಲಕ್ಷ ಉದ್ಯೋಗಿಗಳಿದ್ದು, ಇವರಲ್ಲಿ ಶೇ.75ರಷ್ಟು ಅನ್ಯ ಭಾಷಿಕರೇ ಆಗಿದ್ದಾರೆ. ಅಲ್ಲದೆ ಕರ್ನಾಟಕದಲ್ಲಿ ಮೂರು ಪ್ರಾದೇಶಿಕ ಬ್ಯಾಂಕ್ಗಳು 1773 ಶಾಖೆಗಳನ್ನು ಹೊಂದಿದ್ದು 9 ಸಾವಿರ ಉದ್ಯೋಗಿಗಳನ್ನು ಹೊಂದಿದೆ. ಇವುಗಳ ಉನ್ನತ ಹುದ್ದೆಗಳಲ್ಲಿ ಪರಭಾಷೆಯ ಅಧಿಕಾರಿಗಳನ್ನು ಕೂರಿಸಲಾಗಿದೆ.
ಹಿಂದಿ ಬ್ಯಾನರ್, ಕನ್ನಡಿಗರ ಬಂಧನ; ಏನಿದು ವಿವಾದ?
ಹೀಗೆ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿರುವ ಎಲ್ಲಾ ಕ್ಷೇತ್ರಗಳಲ್ಲಿಯೂ ಸಿ ಮತ್ತು ಡಿ ಗ್ರೂಪ್ ನೌಕರರೂ ಸೇರಿದಂತೆ ಎಲ್ಲಾ ಹುದ್ದೆಗಳಲ್ಲೂ ಕನ್ನಡೇತರರನ್ನೇ ನೇಮಕ ಮಾಡಲಾಗುತ್ತಿದ್ದು, ಕನ್ನಡಿಗರು ಉದ್ಯೋಗ ವಂಚಿತರಾಗಿ, ಕೂಲಿ ಕೆಲಸದ ಆಳುಗಳಾಗಿ ದುಡಿದು ಬದುಕುವಂತಹ ಅನಿವಾರ್ಯತೆಯನ್ನು ಸರ್ಕಾರಗಳು ಸೃಷ್ಟಿಸುತ್ತಿರುವುದು ಅರ್ಥವಾಗುತ್ತದೆ.
ಇದರಿಂದಾಗಿ ಸ್ಥಳೀಯರು ಉದ್ಯೋಗದಿಂದ ವಂಚಿತರಾಗುವುದಷ್ಟೇ ಅಲ್ಲದೆ, ಎಲ್ಲಾ ಕ್ಷೇತ್ರಗಳಲ್ಲೂ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಸಾರ್ವಭೌಮತೆ ಶುರುವಾಗಿದ್ದು, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರಿಗೆ ಮಾತ್ರ ಉದ್ಯೋಗ ಎಂಬಂತಾಗಿದೆ. ಇದರಿಂದ ಮಾತೃ ಭಾಷಾ ಮಾಧ್ಯಮದಲ್ಲಿ ಓದಿದವರು ಉದ್ಯೋಗಗಳಿಂದ ವಂಚಿತರಾಗುತ್ತಿದ್ದು, ಪ್ರಾದೇಶಿಕ ಭಾಷೆಗಳು ಅವುಗಳ ಮೌಲ್ಯವನ್ನೇ ಕಳೆದುಕೊಂಡು ಅಳಿವಿನ ಅಂಚಿಗೆ ತಂದು ನಿಲ್ಲಿಸಲಾಗಿದೆ.
ಸ್ಥಳೀಯ ಉದ್ಯೋಗಗಳು ಸ್ಥಳೀಯರಿಗೆ ಸಿಗಬೇಕು
ಇಂತಹ ಕಾರಣಗಳಿಂದಾಗಿ ಸ್ಥಳೀಯರಿಗೆ ಉದ್ಯೋಗ ಸಿಗುವುದರ ಜೊತೆಗೆ ಪ್ರಾದೇಶಿಕ ಭಾಷೆಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಿಂದ ದೇಶದ ಹಲವಾರು ರಾಜ್ಯಗಳಲ್ಲಿ ಸ್ಥಳೀಯ ಉದ್ಯೋಗಗಳು ಸ್ಥಳೀಯರಿಗೆ ಸಿಗಬೇಕು ಎಂಬ ಹೋರಾಟಗಳು ಭುಗಿಲೆದ್ದಿದ್ದರಿಂದಾಗಿ ಆಂಧ್ರಪ್ರದೇಶದ ಸರ್ಕಾರ 2019ರ ಜುಲೈ 23 ರಂದು ಖಾಸಗೀ ಕ್ಷೇತ್ರಗಳಲ್ಲಿಯೂ ಸ್ಥಳೀಯರಿಗೆ 75% ಮೀಸಲಾತಿಯನ್ನು ಘೋಷಿಸಿದೆ. ಮಧ್ಯಪ್ರದೇಶದ ಸರ್ಕಾರ ಜುಲೈ 09ರಂದು ಕೈಗಾರಿಕಾ ನೀತಿಯನ್ನು ಜಾರಿಗೆ ತಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಉದ್ಯೋಗದಲ್ಲಿ ಸ್ಥಳೀಯರಿಗೆ 70% ಮೀಸಲಾತಿಯನ್ನು ಕಡ್ಡಾಯಗೊಳಿಸಿದ್ದಾರೆ.
ಬ್ಯಾಂಕಿಂಗ್ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಮಾತ್ರ ಅವಕಾಶ
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಗಳಲ್ಲಿ ಮೀಸಲಾತಿ ಬೇಕು ಎಂಬ ಕೂಗು ಐದಾರು ವರ್ಷಗಳಿಂದ ಕೇಳಿಬರುತ್ತಿದ್ದು, ಆಮ್ ಆದ್ಮಿ ಪಕ್ಷವು ಬ್ಯಾಂಕಿಂಗ್ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಮಾತ್ರ ಅವಕಾಶವಿರಬೇಕೆಂದೂ, ಐಬಿಪಿಎಸ್ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವುದರ ವಿರುದ್ಧವೂ ಹೋರಾಟ ನಡೆಸಿತ್ತು. ಕರ್ನಾಟಕದಲ್ಲಿಯೇ ಒಂದು ಕೋಟಿ ಯುವಜನರು ಉದ್ಯೋಗವಂಚಿತರಾಗಿರುವಾಗ ಮೊದಲು ಕನ್ನಡಿಗರಿಗೆ ಉದ್ಯೋಗವನ್ನು ನೀಡಬೇಕು.
ಹಿಂದಿ ಬ್ಯಾನರ್ ವಿವಾದ, #ReleaseKannadaActivists ಟ್ರೆಂಡಿಂಗ್
ಶೇ80 ರಷ್ಟು ಮೀಸಲಾತಿಯನ್ನು ಜಾರಿ ಮಾಡಿ
•ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿರುವ ಎಲ್ಲಾ ಕ್ಷೇತ್ರಗಳಲ್ಲಿಯೂ ಸಿ ಮತ್ತು ಡಿ ಗ್ರೂಪ್ ಹುದ್ದೆಗಳಲ್ಲಿ ಕನ್ನಡಿಗರಿಗೆ ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಶೇ80 ರಷ್ಟು ಮೀಸಲಾತಿಯನ್ನು ಜಾರಿ ಮಾಡಬೇಕು.
•ಸರೋಜಿನಿ ಮಹಿಷಿ ವರದಿಯಲ್ಲಿರುವ ಐಟಿ, ಬಿಟಿ ಸೇರಿದಂತೆ ಎಲ್ಲಾ ಖಾಸಗಿ ವಲಯಗಳಲ್ಲಿಯೂ ಸಿ ಮತ್ತು ಡಿ ವರ್ಗದ ಹುದ್ದೆಗಳಲ್ಲಿ ಶೇ.100ರಷ್ಟು ಮತ್ತು ಉನ್ನತ ಹುದ್ದೆಗಳಲ್ಲಿ ಶೇ.80ರಷ್ಟು ಕನ್ನಡಿಗರಿಗೆ ಮೀಸಲಿಡಬೇಕು.
ಉರ್ದು ಎಂದರೆ ಒಪ್ಪಿಗೆ, ಹಿಂದಿ ಎಂದರೆ ವಿರೋಧ ಎನ್ನುವುದು ಮೂರ್ಖತನ: ರಕ್ಷಿತ್ ಬರಹ
ಸರ್ಕಾರಿ ವಲಯದ ಎಲ್ಲಾ ಹುದ್ದೆಗಳಿಗೂ ಕನ್ನಡಿಗರನ್ನೇ ಆಯ್ಕೆ
•ರಾಜ್ಯದಲ್ಲಿರುವ ಸರ್ಕಾರಿ ವಲಯದ ಎಲ್ಲಾ ಹುದ್ದೆಗಳಿಗೂ ಕನ್ನಡಿಗರನ್ನೇ ಆಯ್ಕೆ ಮಾಡಬೇಕು.
•ಐಸಿಎಸ್ಇ ಮತ್ತು ಸಿಬಿಎಸ್ಇ ಸೇರಿದಂತೆ ಎಲ್ಲಾ ಖಾಸಗಿ ವಿದ್ಯಾಲಯಗಳಲ್ಲಿ 10ನೇ ತರಗತಿಯವರೆಗೆ ಕನ್ನಡ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸಬೇಕು.
•ಕೇಂದ್ರ ಸರ್ಕಾರದ ಹುದ್ದೆಗಳಿಗೆ ಎಲ್ಲಾ ಭಾಷೆಗಳಲ್ಲೂ ಪರೀಕ್ಷೆಗಳನ್ನು ನಡೆಸಬೇಕು. ಈ ಎಲ್ಲಾ ಅಂಶಗಳು ಜಾರಿಯಾದರೆ ಕನ್ನಡಿಗರಿಗೆ ಉದ್ಯೋಗ ಸಿಗುವುದರ ಜೊತೆಗೆ ಕನ್ನಡ ಭಾಷೆಯೂ ಉಳಿಯುತ್ತದೆ. ಹಾಗಾಗಿ ಸರೋಜಿನಿ ಮಹಿಷಿ ವರದಿಯನ್ನು ರಾಜ್ಯ ಸರ್ಕಾರ ಜಾರಿಮಾಡಬೇಕೆಂದು ಆಮ್ ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಹೇಳಿದ್ದಾರೆ.