ಚಿರತೆ ದಾಳಿ: 21 ಗ್ರಾಮಗಳಲ್ಲಿ ಕರ್ಫ್ಯೂ ವಿಧಿಸಲು ಅರಣ್ಯ ಇಲಾಖೆ ಮನವಿ
ಮೂರು ತಿಂಗಳೊಳಗೆ ಚಿರತೆ ದಾಳಿಯಿಂದ ನಾಲ್ವರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತೀವ್ರ ಕಾರ್ಯಾಚರಣೆ ಕೈಗೊಂಡಿರುವ ಟಿ.ನರಸೀಪುರ ತಾಲೂಕಿನ 21 ಗ್ರಾಮಗಳಲ್ಲಿ ಚಿರತೆಗಳನ್ನು ಬಲೆಗೆ ಬೀಳಿಸಲು ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ನಿಷೇಧಾಜ್ಞೆ ಜಾರಿ
ಮೈಸೂರು, ಜನವರಿ 25: ಮೂರು ತಿಂಗಳೊಳಗೆ ಚಿರತೆ ದಾಳಿಯಿಂದ ನಾಲ್ವರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತೀವ್ರ ಕಾರ್ಯಾಚರಣೆ ಕೈಗೊಂಡಿರುವ ಟಿ.ನರಸೀಪುರ ತಾಲೂಕಿನ 21 ಗ್ರಾಮಗಳಲ್ಲಿ ಚಿರತೆಗಳನ್ನು ಬಲೆಗೆ ಬೀಳಿಸಲು ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ರಾತ್ರಿ ಸಮಯದಲ್ಲಿ ಗ್ರಾಮಸ್ಥರು ಹೊರಗೆ ಬಾರದಂತೆ ಕರ್ಫ್ಯೂ ಜಾರಿಗೊಳಿಸಲಾಗುತ್ತದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಂ ಮಾಲತಿ ಪ್ರಿಯಾ ತಿಳಿಸಿದ್ದಾರೆ.
ಸೆರೆಹಿಡಿಯಲಾದ ಚಿರತೆ, ಹುಲಿಗಳಿಗೆ ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಲು ಅರಣ್ಯ ಇಲಾಖೆ ಪ್ರಸ್ತಾಪ
ಚಿರತೆ ದಾಳಿಯಿಂದ ಸಾವು ಸಂಭವಿಸಿದ ಕನ್ನಾಯಕನಹಳ್ಳಿ, ಹೊರಳಳ್ಳಿ, ಎಸ್ ಕೆಬ್ಬೆಹುಂಡಿ ಸೇರಿದಂತೆ ಜಗಜೀವನಗ್ರಾಮ, ಚಿಕ್ಕ ಲಕ್ಷ್ಮೀಪುರ, ತಮ್ಮಡಿಪುರ, ನರಗ್ಯಾತನಹಳ್ಳಿ, ಸೋಸಲೆ, ಕೆಬ್ಬೆ, ಕೊಳತ್ತೂರು, ಸೀಗವಾಡಿಪುರ, ಕೆಂಪಾಪುರ, ರಾಮೇಗೌಡ, ಕೆಂಪೆಹುಂಡಿ, ಕೋನಗಳ್ಳಿ, ಚಿದ್ರವಳ್ಳಿ, ಮುದುಕನಾಪುರ, ಹಾಲವಾರ, ದೊಡ್ಡಬಾಗಿಲು, ಹಸುವತ್ತಿ, ಚಿಟಗಯ್ಯನ ಕೊಪ್ಪಲು ಗ್ರಾಮಗಳಲ್ಲಿ ಕರ್ಫ್ಯೂ ವಿಧಿಸಲು ಮುಂದಾಗಿದ್ದೇವೆ ಎಂದು ಅವರು ಹೇಳಿದರು.
ಬಂಡೀಪುರದ ವಿಶೇಷ ಹುಲಿ ರಕ್ಷಣಾ ಪಡೆ ಸೇರಿದಂತೆ 90 ಸಿಬ್ಬಂದಿಗಳೊಂದಿಗೆ 13 ವಿಶೇಷ ತಂಡಗಳು ಚಿರತೆಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಿವೆ. 74 ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, 18 ಕೇಜ್ಗಳನ್ನು ಇರಿಸಲಾಗಿದೆ ಎಂದು ಮಾಲತಿ ಪ್ರಿಯಾ ಹೇಳಿದರು. ಶನಿವಾರ ರಾತ್ರಿ 11 ವರ್ಷದ ಜಯಂತ್ ಹತ್ಯೆಗೀಡಾದ ಹೊರಲಹಳ್ಳಿಯಲ್ಲಿ 20 ಟ್ರ್ಯಾಪ್ ಕ್ಯಾಮೆರಾಗಳು, ದನದ ಕೊಟ್ಟಿಗೆಯನ್ನು ಹೋಲುವ ಪಂಜರ ಮತ್ತು ಇನ್ನೊಂದು ಪಂಜರವನ್ನು ಅಳವಡಿಸಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮೀಕಾಂತ್ ತಿಳಿಸಿದ್ದಾರೆ.
ತಿ.ನರಸೀಪುರ: ಚಿರತೆ ಬಲಿ ಪಡೆದ ಸಿದ್ದಮ್ಮ ಕುಟುಂಬಕ್ಕೆ ಎಸ್.ಟಿ.ಸೋಮಶೇಖರ್ ಸಾಂತ್ವನ
ಗುರುವಾರ ರಾತ್ರಿ 60 ವರ್ಷದ ಸಿದ್ದಮ್ಮ ಎಂಬಾಕೆಯನ್ನು ಚಿರತೆ ದಾಳಿಗೆ ಬಲಿಯಾದ ಕನ್ನಾಯಕನಹಳ್ಳಿಯಲ್ಲಿ ಎರಡು ಪಂಜರ ಹಾಗೂ 20 ಟ್ರ್ಯಾಪ್ ಕ್ಯಾಮೆರಾಗಳನ್ನು ಇರಿಸಲಾಗಿದೆ. ಬಂಡೀಪುರ, ನಾಗರಹೊಳೆ, ಬಿಳಿಗಿರಿ ರಂಗ ಹುಲಿ ಸಂರಕ್ಷಿತ ಪ್ರದೇಶ ಮತ್ತು ಕೊಡಗು ಸೇರಿದಂತೆ ಎಲ್ಲಾ ನೆರೆಹೊರೆಯ ಅರಣ್ಯ ಪ್ರದೇಶಗಳಿಂದ ನಾವು ಟ್ರ್ಯಾಪ್ ಕ್ಯಾಮೆರಾಗಳನ್ನು ಸಂಗ್ರಹಿಸಿದ್ದೇವೆ ಎಂದು ಅವರು ವಿವರಿಸಿದರು.
ಕಳೆದ ವಾರ ಚಿರತೆ ದಾಳಿಯಿಂದ ಎರಡು ಸಾವು ಸಂಭವಿಸಿದ ಎರಡು ಗ್ರಾಮಗಳ ಸಮೀಪದಲ್ಲಿ ಎರಡು ಸ್ಥಳಗಳಲ್ಲಿ ಚಿರತೆಗಳ ಹೆಜ್ಜೆ ಗುರುತುಗಳು ಮಾತ್ರ ನಮಗೆ ಕಂಡು ಬಂದಿವೆ. ಆದರೆ, ಯಾವುದೇ ಟ್ರ್ಯಾಪ್ ಕ್ಯಾಮೆರಾದಲ್ಲಿ ಚಿರತೆಗಳು ಇದುವರೆಗೂ ಪತ್ತೆಯಾಗಿಲ್ಲ. ಚಿರತೆಗಳು ನೀಲಗಿರಿ, ಕಬ್ಬಿನ ಗದ್ದೆ, ಪೊದೆಗಳಲ್ಲಿ ಅಡಗಿ ಕುಳಿತಿವೆ. ನಾವು ಹಗಲು ರಾತ್ರಿ ಹುಡುಕುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಇದಕ್ಕೂ ಮೊದಲು ಡಿಸೆಂಬರ್ 2ರಂದು ಎಸ್ ಕೆಬ್ಬೆಹುಂಡಿಯಲ್ಲಿ 22 ವರ್ಷದ ಮೇಘನಾ ಮತ್ತು ಅಕ್ಟೋಬರ್ 31ರಂದು ಮಲ್ಲಿಕಾರ್ಜುನಸ್ವಾಮಿ ಬೆಟ್ಟದ ಬಳಿಯ ಉಕ್ಕಲಗೆರೆಯಲ್ಲಿ 22 ವರ್ಷದ ಮಂಜುನಾಥ್ ಚಿರತೆಗೆ ಬಲಿಯಾಗಿದ್ದರು. ಅರಣ್ಯಾಧಿಕಾರಿಗಳು 2022ರ ಏಪ್ರಿಲ್ನಿಂದ ಇಲ್ಲಿಯವರೆಗೆ ಟಿ ನರಸೀಪುರ ತಾಲೂಕಿನಲ್ಲಿ 12 ಚಿರತೆಗಳು ಸೇರಿದಂತೆ ಮೈಸೂರು ವಿಭಾಗದಲ್ಲಿ 33 ಚಿರತೆಗಳನ್ನು ಪತ್ತೆ ಹಚ್ಚಿದ್ದಾರೆ.