ನೈಸ್ ಅಕ್ರಮದ ತನಿಖೆ ಮಾಡಲಿದೆ ಸದನ ಸಮಿತಿ
ಬೆಂಗಳೂರು, ಜು.25 : ಎಲ್ಲಾ ಪಕ್ಷದ ಶಾಸಕರ ಒತ್ತಡಕ್ಕೆ ಮಣಿದಿರುವ ಸರ್ಕಾರ ಬುಹುಕೋಟಿ ಮೌಲ್ಯದ ನೈಸ್ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ನಿರ್ಧರಿಸಿದೆ. ನೈಸ್ ಅಕ್ರಮಗಳ ತನಿಖೆಗೆ ಸದನ ಸಮಿತಿ ರಚಿಸುವುದಾಗಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ವಿಧಾನಸಭೆಯಲ್ಲಿ ಗುರುವಾರ ತಿಳಿಸಿದ್ದಾರೆ.
ಎರಡು ದಿನಗಳಿಂದ ವಿಧಾನಸಭೆಯಲ್ಲಿ ನೈಸ್ ಕಂಪನಿ ಅಕ್ರಮಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ರಸ್ತೆ, ಟೌನ್ ಶಿಪ್ಗಾಗಿ ಸಹಸ್ರಾರು ಕೋಟಿ ರೂ. ಮೌಲ್ಯದ ಭೂಮಿ ಪಡೆದಿರುವ ನಂದಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ (ನೈಸ್) ಸಂಸ್ಥೆ ಭೂಮಿಯನ್ನು ಸದ್ಭಳಕೆ ಮಾಡಿಲ್ಲ ಎಂದು ಎಲ್ಲಾ ಪಕ್ಷದ ಶಾಸಕರು ಆರೋಪಿಸಿದ್ದರು.
ಗುರುವಾರದ ಕಲಾಪದಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಈ ಕುರಿತು ಮಾತನಾಡಿ, ಪ್ರತಿಪಕ್ಷಗಳ ಬಹುತೇಕ ಶಾಸಕರು ನೈಸ್ ಕಂಪನಿಯ ಅಕ್ರಮಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟು, ತನಿಖೆಗೆ ಆಗ್ರಹಿಸಿದ್ದಾರೆ. ಸಾರ್ವಜನಿಕರಲ್ಲೂ ಈ ಬಗ್ಗೆ ಹಲವಾರು ಅನುಮಾನಗಳಿವೆ ಎಂದು ಹೇಳಿದರು.
ವಿಧಾನಸಭೆಗೆ ನೈಸ್ ಸಂಸ್ಥೆಯ ಅಶೋಕ್ ಖೇಣಿ ತಮ್ಮಲ್ಲಿ ದಾಖಲೆಗಳಿದ್ದು, ಎಲ್ಲಾ ಸಂಶಯಗಳನ್ನೂ ಬಗೆಹರಿಸುವುದಾಗಿ ಕಡತವನ್ನು ತರುತ್ತಾರೆ. ಆದ್ದರಿಂದ ಎಲ್ಲಾ ಅನುಮಾನಗಳಿಗೆ ತೆರೆ ಎಳೆಯಲು ಸರ್ಕಾರ ಸದನ ಸಮಿತಿ ರಚಿಸಲು ತೀರ್ಮಾನಿಸಿದೆ ಎಂದು ಹೇಳಿದ ಸಚಿವರು, ಸಮಿತಿ ವಿವರವಾದ ವರದಿಯನ್ನು ನೀಡಲಿದೆ ಎಂದರು. [ಮತ್ತೆ ನೈಸ್ ರೋಡಿಗಿಳಿದ ದೇವೇಗೌಡರು]
ಯಾರ ಕೈಗೊಂಬೆಯಲ್ಲ : ಸರ್ಕಾರ ಮತ್ತು ಸದನ ಸಮಿತಿ ಯಾರ ಕೈಗೊಂಬೆಯಲ್ಲ. ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಯೋಜನೆಯಲ್ಲಿ ಅಕ್ರಮ ನಡೆದಿದ್ದರೆ, ಸತ್ಯ ಹೊರಬರಲಿ ಎಂಬ ಆಶಯದಿಂದ ಸದನ ಸಮಿತಿ ರಚಿಸಲಾಗಿದೆ ಎಂದು ಸಚಿವ ಮಹದೇವಪ್ಪ ಸ್ಪಷ್ಟಪಡಿಸಿದರು. [ಹೆಂಗಿತ್ತು ಸೋಂಪುರ ಗ್ರಾಮ ಹೇಗಾಯ್ತು ಗೊತ್ತಾ]
ನೈಸ್ ವಿವಾದದ ಕುರಿತು : ಬೆಂಗಳೂರು-ಮೈಸೂರು ಮಧ್ಯೆ ಸುಗಮ ಸಂಚಾರಕ್ಕೆ ರಸ್ತೆ ಯೋಜನೆ ಅನುಷ್ಠಾನಗೊಳಿಸಲು ನಂದಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಕಂಪನಿ (ನೈಸ್) ಜತೆಗೆ 1997ರಲ್ಲಿ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು.
ಸರ್ಕಾರಿ ಭೂಮಿಯನ್ನು ಉಚಿತವಾಗಿ ಹಾಗೂ ರೈತರ ಭೂಮಿಯನ್ನು ಕೆಐಎಡಿಬಿಯಿಂದ ವಶಪಡಿಸಿಕೊಂಡು ಯೋಜನೆಗಾಗಿ ನೀಡುವ ಹೊಣೆಗಾರಿಕೆ ಸರ್ಕಾರದ ಮೇಲಿತ್ತು. ನಿಗದಿತ ಅವಧಿಯಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ, 30 ವರ್ಷಗಳ ಕಾಲ ನಿರ್ವಹಣೆ ಮಾಡುವುದು ನೈಸ್ ಸಂಸ್ಥೆಯ ಜವಾಬ್ದಾರಿಯಾಗಿತ್ತು.
ನಂತರ ಯೋಜನೆಯಲ್ಲಿ ಹಲವಾರು ಬದಲಾವಣೆಗಳಾದವು. ಪೆರಿಫೆರಿಲ್ ರಸ್ತೆ, ಬೆಂಗಳೂರು-ಮೈಸೂರು ರಸ್ತೆ ಅಕ್ಕ ಪಕ್ಕದಲ್ಲಿ ಟೌನ್ ಶಿಪ್ ನಿರ್ಮಾಣದ ಯೋಜನೆ ಪ್ರಸ್ತಾವನೆಯೂ ಈ ಯೋಜನೆಗೆ ಸೇರ್ಪಡೆಗೊಂಡಿತು. ಇದು ನಂತರ ದೊಡ್ಡ ವಿವಾದವಾಗಿದೆ.
ಟೌನ್ ಶಿಪ್ ಹೆಸರಿನಲ್ಲಿ ರೈತರ ಜಮೀನು ಪಡೆದ ನೈಸ್ ಸಂಸ್ಥೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದೆ ಎಂಬುದು ಜನರ ಮತ್ತು ಶಾಸಕರ ಆರೋಪ. ಯೋಜನೆ ಇದುವರೆಗೂ ಪೂರ್ಣಗೊಂಡಿಲ್ಲ. ಈ ಮಧ್ಯೆ ನೈಸ್ ಕಂಪನಿ ನಿರ್ಮಿಸಿರುವ ಕೆಲವು ಕಿ.ಮೀ ರಸ್ತೆಗೆ ಹೆಚ್ಚಿನ ಟೋಲ್ ಸಂಗ್ರಹಣೆ ಮಾಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.