ವಿಧಾನ ಪರಿಷತ್ ಫಲಿತಾಂಶ: ಕಾಂಗ್ರೆಸ್ ಪರ ವಾತಾವರಣ- ಸಿದ್ದರಾಮಯ್ಯ
ಬೆಂಗಳೂರು, ಜೂ. 16: ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಕರು ಮತ್ತು ಪದವೀಧರ ಮತದಾರರು ಬದಲಾವಣೆಯನ್ನು ಬಯಸಿದ್ದಾರೆ ಎಂಬುದು ಈ ಫಲಿತಾಂಶದಿಂದ ಸ್ಪಷ್ಟವಾಗುತ್ತದೆ. ಬಿಜೆಪಿ ಪಕ್ಷ ನಾಲ್ಕೂ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂಬ ಜಂಭ ಹೊಡೆದಿದ್ದರು, ಮುಖ್ಯಮಂತ್ರಿಗಳೇ ಹೋಗಿ ಪ್ರಚಾರ ಮಾಡಿದ್ದರು. ನಮಗೆ ಸಂಪನ್ಮೂಲಗಳ ಕೊರತೆ ಇದ್ದಾಗ್ಯೂ ಕೂಡ ಪದವೀಧರರು ಮತ್ತು ಶಿಕ್ಷಕರು ನಮಗೆ ಆಶಿರ್ವಾದ ಮಾಡಿದ್ದಾರೆ. ಇದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ ಎಂದು ಅವರು ಗುರುವಾರ ತಮ್ಮ ನಿವಾಸದದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.
ದಕ್ಷಿಣ ಪದವೀಧರ ಕ್ಷೇತ್ರದಿಂದ ನಮ್ಮ ಅಭ್ಯರ್ಥಿ ಮಧು ಜಿ ಮಾದೇಗೌಡ ಅವರು ಸುಮಾರು 12,205 ಮತಗಳ ಅಂತರದಿಂದ ಪದವೀಧರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ನಮ್ಮ ಸಮೀಪ ಅಭ್ಯರ್ಥಿ M V ರವಿಶಂಕರ್ ಅವರಿಗೆ 33,848 ನಮ್ಮ ಅಭ್ಯರ್ಥಿಗೆ 46,073 ಮತಗಳು ಬಂದಿವೆ, ಜೆಡಿಎಸ್ ಗೆ 19,630 ಮತ ಬಂದಿದೆ. ಎರಡು ಬಾರಿ ಶ್ರೀಕಂಠೇಗೌಡ ಅವರು ಗೆದ್ದಿದ್ದರು. ಈ ಬಾರಿ ರಾಮು ಅವರಿಗೆ ಜೆಡಿಎಸ್ ಟಿಕೆಟ್ ನೀಡಿತ್ತು. ಬಹುಶಃ ಸೋಲಿನ ಭಯದಿಂದ ಶ್ರೀಕಂಠೇಗೌಡರು ಸ್ಪರ್ಧಿಸಿರಲಿಲ್ಲ ಎಂದು ಕಾಣುತ್ತದೆ ಎಂದರು.
ಬಿಜೆಪಿ ಸರ್ಕಾರದ ಧರ್ಮರಾಜಕಾರಣ, ಕೋಮುವಾದ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಗಳ ವಿರುದ್ಧ ನಾಡಿನ ಜನ ಜಾಗೃತರಾಗಿದ್ದಾರೆ.
— Siddaramaiah (@siddaramaiah) June 16, 2022
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಕೈಹಿಡಿಯಲಿದ್ದಾರೆ ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿ. 5/5#ElectionResults
ನಮ್ಮ ಪಕ್ಷದ ಅಭ್ಯರ್ಥಿಗಳು ಶಿಕ್ಷಕರ ಕ್ಷೇತ್ರದಿಂದ ಈ ಹಿಂದೆ ಗೆದ್ದಿದ್ದರು ಆದರೆ ಯಾವತ್ತೂ ದಕ್ಷಿಣ ಪದವೀಧರ ಕ್ಷೇತ್ರದಿಂದ ಗೆದ್ದಿರಲಿಲ್ಲ. ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಈ ಬಾರಿ ಪದವೀಧರ ಕ್ಷೇತ್ರದಿಂದ ಗೆದ್ದಿದ್ದು. ಜೆಡಿಎಸ್ ನವರು ಮತ್ತು ಬಿಜೆಪಿ ಅವರು ಇದನ್ನು ನಮ್ಮ ಭದ್ರಕೋಟೆ ಎಂದು ಹೇಳುತ್ತಿದ್ದರು. ಇಂಥಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ಮಧು ಮಾದೇಗೌಡ ಅವರು ಗೆದ್ದಿದ್ದಾರೆ. ಅವರಿಗೆ ನಾನು ಅಭಿನಂದನೆಗಳನ್ನು ಹೇಳಲು ಬಯಸುತ್ತೇನೆ. ನಮ್ಮ ಅಭ್ಯರ್ಥಿಗೆ ಮತ ನೀಡಿದ ಪದವೀಧರ ಮತದಾರರಿಗೆ ಧನ್ಯವಾದಗಳು. 1 ಲಕ್ಷ 33 ಸಾವಿರ ಪದವೀಧರ ಮತದಾರರಿದ್ದರು. ನಮ್ಮ ಅಭ್ಯರ್ಥಿ ಇವರ ಮನ ಗೆಲ್ಲಲು ಯಶಸ್ವಿಯಾಗಿದ್ದಾರೆ. ನಮ್ಮ ಅಭ್ಯರ್ಥಿಯ ಗೆಲುವಿಗೆ ಸಂಘಟಿತ ಹೋರಾಟ ಕಾರಣ.
ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳ ಪದವೀಧರ ಮತದಾರರು ಮತ ಚಲಾಯಿಸಿದ್ದಾರೆ. ಈ ನಾಲ್ಕು ಜಿಲ್ಲೆಗಳ ಕಾರ್ಯಕರ್ತರು, ಪಕ್ಷದ ಅಧ್ಯಕ್ಷರುಗಳು, ಮಾಜಿ ಸಂಸದರು, ಶಾಸಕರು ಇವರೆಲ್ಲರ ಸಂಘಟಿತ ಹೋರಾಟದ ಮೂಲಕ ಚುನಾವಣೆ ಗೆದ್ದಿದ್ದೇವೆ. ಈ ಎಲ್ಲರಿಗೂ ನನ್ನ ಆತ್ಮೀಯ ಧನ್ಯವಾದಗಳು.
ಪ್ರಕಾಶ್ ಹುಕ್ಕೇರಿ:
ಇದೇ ರೀತಿ ಬೆಳಗಾವಿಯ ಶಿಕ್ಷಕರ ಕ್ಷೇತ್ರದಲ್ಲಿ ಪ್ರಕಾಶ್ ಹುಕ್ಕೇರಿ ಅವರು ಮೊದಲ ಸುತ್ತಿನಲ್ಲೇ ಗೆಲುವಿನ ಕೋಟಾ ತಲುಪಿ ಗೆದ್ದಿದ್ದಾರೆ. ಚಲಾವಣೆಯಾದ 20,000 ಮತಗಳಲ್ಲಿ ನಮ್ಮ ಅಭ್ಯರ್ಥಿ 11,000 ಕ್ಕೂ ಅಧಿಕ ಮತ ಪಡೆದಿದ್ದಾರೆ. ಕಳೆದ ಎರಡು ಬಾರಿ ಅಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ್ ಅವರು ಗೆದ್ದಿದ್ದರು. ನಮ್ಮ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿದ ಬೆಳಗಾವಿ, ಬಿಜಾಪುರ, ಬಾಗಲಕೋಟೆ ಜಿಲ್ಲೆಗಳ ಎಲ್ಲಾ ಶಿಕ್ಷಕ ಬಂಧುಗಳಿಗೆ, ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದಗಳು.
ಉಳಿದ ಇನ್ನೆರಡು ಕ್ಷೇತ್ರಗಳಲ್ಲಿ ಸೋತಿದ್ದೇವೆ. ನಾವು ಈ ಮೊದಲು ನಾಲ್ಕೂ ಸ್ಥಾನಗಳಲ್ಲೂ ಇರಲಿಲ್ಲ. ಬಸವರಾಜ್ ಗುರಿಕಾರ್ ಅವರಿಗೆ ಸುಮಾರು 4,597 ಮತಗಳನ್ನು ಹಾಗೂ ಸುನೀಲ್ ಸಂಕ ಅವರಿಗೆ 10,122 ಮತಗಳನ್ನು ನೀಡಿದ್ದಾರೆ. ಇಲ್ಲಿ ನಮ್ಮ ಅಭ್ಯರ್ಥಿಗಳು ಸೋತಿದ್ದರೂ, ಇಷ್ಟು ಮತಗಳನ್ನು ನೀಡಿದ್ದಕ್ಕಾಗಿ ಮತದಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ.
ಹೊರಟ್ಟಿ ಗೆದ್ದಿದ್ದು ವೈಯಕ್ತಿ ವರ್ಚಸ್ಸಿನಿಂದ:
ಬಸವರಾಜ ಹೊರಟ್ಟಿ ಅವರು ವೈಯಕ್ತಿಕ ವರ್ಚಸ್ಸಿನಿಂದ ಗೆದ್ದಿರುವುದು, ಬಿಜೆಪಿಯಿಂದ ನಿಂತಿದ್ದಕ್ಕಾಗಿ ಗೆದ್ದಿದ್ದಲ್ಲ. ಈ ಹಿಂದೆ ಅವರು ಜೆಡಿಎಸ್ ನಿಂದ 3 ಬಾರಿ ಗೆದ್ದಿದ್ದರು. ವಾಯುವ್ಯ ಪದವೀಧರರ ಕ್ಷೇತ್ರದಿಂದ ಬಲಿಷ್ಠ ಅಭ್ಯರ್ಥಿಯನ್ನು ನಮ್ಮಿಂದ ಹಾಕಲು ಆಗಲಿಲ್ಲ. ಕೊನೆ ಕ್ಷಣದಲ್ಲಿ ಒಬ್ಬರು ಲಾಯರ್ ಅವರನ್ನು ನಿಲ್ಲಿಸಿದ್ವಿ. ಗೆದ್ದ ಕಡೆಗಳೆಲ್ಲೆಲ್ಲ ದೊಡ್ಡ ಅಂತರದಲ್ಲಿ ಗೆದ್ದಿದ್ದೀವಿ. ನಾಲ್ಕೂ ಕಡೆಗಳಲ್ಲಿ ಈ ಮೊದಲು ಕಾಂಗ್ರೆಸ್ ಶೂನ್ಯದಲ್ಲಿತ್ತು, ಆದರೆ ಈ ಬಾರಿ ಎರಡು ಕಡೆ ಗೆದ್ದಿದ್ದೀವಿ.
Recommended Video
ಸೋತ ಅಭ್ಯರ್ಥಿ ತಾನು ನ್ಯಾಯವಾಗಿ ಸೋತೆ ಎಂದು ಹೇಳುತ್ತಾರ? ನಮ್ಮ ಅಭ್ಯರ್ಥಿ ಒಂದು ಬಾರಿ ಗೆದ್ದಿದ್ದಕ್ಕೆ ಹಣ ಖರ್ಚು ಮಾಡಿ ಗೆದ್ದಿದ್ದು ಎನ್ನುವುದಾದರೆ ಈ ಹಿಂದೆ ಅರುಣ್ ಶಹಾಪುರ ಎರಡು ಬಾರಿ ಗೆದ್ದಿದ್ರಲ್ಲ ಎಷ್ಟು ಹಣ ಖರ್ಚು ಮಾಡಿ ಗೆದ್ದಿದ್ದಂತೆ? ಇದು ಮತದಾರರಿಗೆ ಅವಮಾನ ಮಾಡಿದಂತೆ ಆಗಲ್ವಾ? ಚುನಾವಣಾ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿದವರು ಬಿಜೆಪಿಯವರು, ನಾವಲ್ಲ ಎಂದು ಹೇಳಿದರು.