ಪರಿಷತ್ ಫೈಟ್; ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಜೆಡಿಎಸ್ ನಾಯಕ!
ಬೆಂಗಳೂರು, ಜೂನ್ 06; ರಾಜ್ಯ ರಾಜಕೀಯದಲ್ಲಿ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಬಗ್ಗೆ ಚರ್ಚೆಗಳು ಜೋರಾಗಿವೆ. ರಾಜ್ಯಸಭೆ ಚುನಾವಣೆ ಜೂನ್ 10ಕ್ಕೆ ಮತ್ತು ವಿಧಾನ ಪರಿಷತ್ ಚುನಾವಣೆ ಜೂನ್ 13ರಂದು ನಡೆಯಲಿದೆ.
ಈ ಚುನಾವಣೆಗಳಲ್ಲಿ ಗೆಲ್ಲಲು ಮೂರು ಪಕ್ಷಗಳ ನಾಯಕರು ತಂತ್ರಗಳನ್ನು ಹಣೆದಿದ್ದಾರೆ. ಈ ಚುನಾವಣೆಗಳು ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯಾಗಿದೆ. ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ನಾಯಕರ ಮಾತಿನ ಮಲ್ಲಯುದ್ಧ ಸಾಗಿದೆ.
ಅಲ್ಪಸಂಖ್ಯಾತರ ಮತಕ್ಕಾಗಿ ಕಾಂಗ್ರೆಸ್, ಜೆಡಿಎಸ್ ಕಸರತ್ತು!
ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸುತ್ತೇನೆ ಎಂದು ಜೆಡಿಎಸ್ ನಾಯಕ ಘೋಷಣೆ ಮಾಡಿದ್ದಾನೆ. ಈ ಮೂಲಕ ಮೈಸೂರು ಭಾಗದಲ್ಲಿ ಜೆಡಿಎಸ್ಗೆ ಚುನಾವಣೆಗೆ ಮೊದಲೇ ಹಿನ್ನಡೆ ಉಂಟಾಗಿದೆ.
ಕಾಂಗ್ರೆಸ್ ಸೇರುವುದಾಗಿ ಮತ್ತೊಬ್ಬ ಜೆಡಿಎಸ್ ಶಾಸಕನ ಘೋಷಣೆ!
ದಕ್ಷಿಣ ಪಧವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಬೆಂಬಲಿಸುತ್ತೇನೆ ಎಂದು ಜೆಡಿಎಸ್ ನಾಯಕ, ಪರಿಷತ್ ಸದಸ್ಯ ಮರಿತಿಬ್ಬೇ ಗೌಡ ಹೇಳಿಕೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಜೆಡಿಎಸ್ ತೊರೆಯುವ ಘೋಷಣೆ ಮಾಡಿದ್ದರು.
ಲೋಕಸಭೆ ಚುನಾವಣೆ: ತೃತೀಯ ರಂಗದತ್ತ ಜೆಡಿಎಸ್ ಉತ್ಸುಕ
ಜೆಡಿಎಸ್ ಪಕ್ಷದಿಂದ ದೂರ
ಜೆಡಿಎಸ್ ನಾಯಕ, ಪರಿಷತ್ ಸದಸ್ಯ ಮರಿತಿಬ್ಬೇ ಗೌಡ ತಮ್ಮ ಬೆಂಬಲಿಗನಿಗೆ ಪಕ್ಷ ಟಿಕೆಟ್ ನಿರಾಕರಿಸಿದ ಬಳಿಕ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. 2023ರ ವಿಧಾನಸಭೆ ಚುನಾವಣೆ ವೇಳೆಗೆ ತಾವು ಜೆಡಿಎಸ್ನಲ್ಲಿ ಇರುವುದಿಲ್ಲ ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸುವುದಾಗಿ ಹೇಳುವ ಮೂಲಕ ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದಾರೆ.
ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೆ
ಶನಿವಾರ ಮೈಸೂರಿನಲ್ಲಿ ಮರಿತಿಬ್ಬೇಗೌಡ ಅಭಿಮಾನಿ ಬಳಗ ಆಯೋಜನೆ ಮಾಡಿದ್ದ ಸಭೆಯಲ್ಲಿ ಮಾತನಾಡಿದ ಅವರು, "ಒಂದು ವೇಳೆ ಪಕ್ಷ ನಿಷ್ಠಾವಂತ ಪಕ್ಷದ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟಿದ್ದರೆ ನಾನು ಅವರ ಪರವಾಗಿ ಕೆಲಸ ಮಾಡುತ್ತಿದ್ದೆ. ಪಕ್ಷದ ಬಗ್ಗೆ ಕಾಳಜಿ ಇಲ್ಲದ, ಆರ್ಥಿಕ ಸ್ಥಿತಿ ಉತ್ತಮವಾಗಿರುವ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ. ಆದ್ದರಿಂದ ಚುನಾವಣೆಯಲ್ಲಿ ಅಭ್ಯರ್ಥಿ ಪರವಾಗಿ ಕೆಲಸ ಮಾಡುವುದಿಲ್ಲ" ಎಂದರು.
ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮೈ. ವಿ. ರವಿಶಂಕರ್. ಜೆಡಿಎಸ್ನಿಂದ ಹೆಚ್. ಕೆ. ರಾಮು ಸೇರಿದಂತೆ 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುತ್ತೇನೆ
ಜೆಡಿಎಸ್ ಪಕ್ಷದ ನಾಯಕ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇ ಗೌಡ ಮಾತನಾಡಿ, "ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಬೆಂಲಿಸುತ್ತೇನೆ. ನನ್ನ ಬೆಂಬಲಿಗರ ಜೊತೆ ಚರ್ಚೆ ನಡೆಸಿದ ಬಳಿಕ ಈ ಕುರಿತು ತೀರ್ಮಾನವನ್ನು ಕೈಗೊಂಡಿದ್ದೇನೆ" ಎಂದು ಹೇಳಿದರು.
ಮುಂದಿನ ಚುನಾವಣೆಯಲ್ಲಿ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನದ ನಿರೀಕ್ಷೆಯನ್ನು ಜೆಡಿಎಸ್ ಪಕ್ಷ ಇಟ್ಟುಕೊಳ್ಳುವಂತಿಲ್ಲ.ಮೈಸೂರು ಭಾಗದಲ್ಲಿ ತಳಮಟ್ಟದ ಕಾರ್ಯಕರ್ತರು ಪಕ್ಷ ತೊರೆಯುತ್ತಿರುವುದು ಕಾಣಿಸುತ್ತಿದೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡರು ಪಕ್ಷ ತೊರೆದಿದ್ದೇ ಆದರೆ ಒಂದಷ್ಟು ಅವರ ಬೆಂಬಲಿಗ ನಾಯಕರು ಪಕ್ಷ ತೊರೆಯುವುದಂತು ಖಚಿತ.
ನನ್ನನ್ನು ಪರಿಗಣಿಸುವುದಿಲ್ಲ ಎಂಬ ಹೇಳಿಕೆ
"2024ರಲ್ಲಿ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಯಲ್ಲಿ ನನ್ನನ್ನು ಪರಿಗಣಿಸುವುದಿಲ್ಲ ಎಂದು ಜೆಡಿಎಸ್ ಪಕ್ಷ ಹೇಳಿದೆ. ಆದ್ದರಿಂದ ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಾನು ತೀರ್ಮಾನ ಕೈಗೊಂಡಿದ್ದೇನೆ" ಎಂದು ಮರಿತಿಬ್ಬೇ ಗೌಡ ಹೇಳಿದ್ದಾರೆ.
ಮರಿತಿಬ್ಬೇ ಗೌಡ ಅಸಮಾಧಾನಕ್ಕೆ ಕಾರಣ?
ಮರಿತಿಬ್ಬೇ ಗೌಡರು ಅಸಮಾಧಾನಗೊಳ್ಳಲು ಕಾರಣ ಪರಿಷತ್ ಅಭ್ಯರ್ಥಿ ಆಯ್ಕೆ. ದಕ್ಷಿಣ ಪದವೀಧರರ ಕ್ಷೇತ್ರದ ಟಿಕೆಟ್ ಅನ್ನು ನಿಷ್ಠಾವಂತ ಕಾರ್ಯಕರ್ತ ಜಯರಾಮ್ ಕೀಲಾರ ಬದಲು ಎಚ್. ಕೆ. ರಾಮುಗೆ ನೀಡಲಾಗಿದೆ. ದಕ್ಷಿಣ ಪದವೀಧರರ ಕ್ಷೇತ್ರಕ್ಕೂ ಎಚ್. ಕೆ. ರಾಮುಗೂ ಏನು ಸಂಬಂಧ? ಎಂಬುದು ಅವರ ಪ್ರಶ್ನೆ.
ಮರಿತಿಬ್ಬೇ ಗೌಡ, "ಜೆಡಿಎಸ್ನಲ್ಲಿ ಸಾಮಾನ್ಯ ಕಾರ್ಯಕರ್ತ, ಆರ್ಟಿಸಿ ಹೊಂದಿರುವ ರೈತನನ್ನು ಎಂಎಲ್ಸಿ ಮಾಡಿಲ್ಲ. ಕುದುರೆ ಜೂಜಾಡುವವರು, ಚಿನ್ನ ವ್ಯಾಪಾರಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ವಿಧಾನ ಪರಿಷತ್ತಿಗೆ ಕಳುಹಿಸಿದ್ದಾರೆ" ಎಂದು ದೂರಿದ್ದಾರೆ.
Recommended Video