ಪರಿಷತ್ ಚುನಾವಣೆ; ಜೆಡಿಎಸ್ ಹೊಸ ಕಾರ್ಯತಂತ್ರ!
ಬೆಂಗಳೂರು, ನವೆಂಬರ್ 15; ಚುನಾವಣಾ ಆಯೋಗ 25 ವಿಧಾನ ಪರಿಷತ್ ಸ್ಥಾನಗಳ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು, 14ರಂದು ಮತ ಎಣಿಕೆ ನಡೆಯಲಿದೆ. ಮೂರು ಪಕ್ಷಗಳು ಚುನಾವಣಾ ತಯಾರಿಯನ್ನು ನಡೆಸುತ್ತಿವೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಿರುವ 14 ಕಾಂಗ್ರೆಸ್, ಬಿಜೆಪಿಯ 7 ಮತ್ತು ಜೆಡಿಎಸ್ನ 4 ಸದಸ್ಯರ ಅವಧಿ ಪೂರ್ಣಗೊಳ್ಳಲಿದೆ. ಈ ಸ್ಥಾನಗಳಿಗೆ ಹೊಸ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯುತ್ತಿದೆ.
ಪರಿಷತ್; ಜಿಲ್ಲಾ, ತಾಲೂಕು ಪಂಚಾಯಿತಿ ಸದಸ್ಯರಿಗೆ ಮತದಾನದ ಹಕ್ಕಿಲ್ಲ
25 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಮೂರು ಪಕ್ಷಗಳು ಹೆಚ್ಚು ಸ್ಥಾನಗಳನ್ನು ಗೆದ್ದು ಪರಿಷತ್ನಲ್ಲಿ ಬಲ ಹೆಚ್ಚಿಸಿಕೊಳ್ಳಲು ತಂತ್ರ ರೂಪಿಸುತ್ತಿವೆ. 2023ರ ವಿಧಾನಸಭೆ ಚುನಾವಣೆಗೂ ಮೊದಲು ಈ ಚುನಾವಣೆ ನಡೆಯುತ್ತಿದ್ದು, ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಪರಿಷತ್ ಚುನಾವಣೆ; ಜಾರಕಿಹೊಳಿ ಕುಟುಂಬಕ್ಕೆ ಟಿಕೆಟ್?
ನವೆಂಬರ್ 16 ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಪ್ರಕಟಿಸಲಿದ್ದಾರೆ. ನವೆಂಬರ್ 23ರ ತನಕ (ಸಾರ್ವಜನಿಕ ರಜೆ ದಿನಗಳನ್ನು ಹೊರತುಪಡಿಸಿ ) ಬೆಳಗ್ಗೆ 11ರಿಂದ ಮಧ್ಯಾಹ್ನ 3ರ ತನಕ ನಾಮಪತ್ರಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ವೀಕರಿಸಲಾಗುತ್ತದೆ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ, ನವೆಂಬರ್ 26ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನ.
ವಿಧಾನ ಪರಿಷತ್ ಚುನಾವಣೆ; ಸ್ಪರ್ಧಿಸಲು ಅರ್ಹತೆಗಳು
ಜೆಡಿಎಸ್ ಹೊಸ ಕಾರ್ಯತಂತ್ರ
ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಹೊಸ ಕಾರ್ಯತಂತ್ರವನ್ನು ಅನುಸರಿಸಲಿದೆ. ಎಲ್ಲಾ ಕ್ಷೇತ್ರಗಳತ್ತ ಗಮನಹರಿಸುವುದಕ್ಕಿಂತ ಗೆಲ್ಲುವ ಕ್ಷೇತ್ರಗಳತ್ತ ಹೆಚ್ಚು ಗಮನ ಹರಿಸಲು ಜೆಡಿಎಸ್ ನಾಯಕರು ಚಿಂತನೆ ನಡೆಸಿದ್ದಾರೆ. 25 ಕ್ಷೇತ್ರಗಳ ಪೈಕಿ 6 ರಿಂದ 8 ಕ್ಷೇತ್ರಗಳತ್ತ ಪಕ್ಷದ ನಾಯಕರು ಹೆಚ್ಚು ಗಮನ ನೀಡಲಿದ್ದಾರೆ. ಅಧಿಕಾರ ನಡೆಸುತ್ತಿರುವ ಬಿಜೆಪಿ ಮೇಲ್ಮನೆಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆಯಲು ಚುನಾವಣೆ ಮೇಲೆ ಹೆಚ್ಚು ಗಮನ ನೀಡಿದೆ. ಪ್ರತಿಪಕ್ಷವಾಗಿರುವ ಕಾಂಗ್ರೆಸ್ಗೆ ಸಹ ಚುನಾವಣೆ ಪ್ರತಿಷ್ಠೆಯಾಗಿದೆ.
ನಾಲ್ವರು ಸದಸ್ಯರ ಅವಧಿ ಪೂರ್ಣ
ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿರುವ ನಾಲ್ವರು ವಿಧಾನ ಪರಿಷತ್ ಸದಸ್ಯರು ನಿವೃತ್ತಿಯಾಗಲಿದ್ದಾರೆ. ಆದರೆ ಇವರಲ್ಲಿ ಮೂವರು ಬೇರೆ ಪಕ್ಷಗಳತ್ತ ಮುಖ ಮಾಡಿದ್ದು, ಅವರು ಪಕ್ಷದಿಂದ ಸ್ಪರ್ಧಿಸುವುದು ಅನುಮಾನವಾಗಿದೆ. ಎನ್. ಅಪ್ಪಾಜಿ ಗೌಡ (ಮಂಡ್ಯ) ಟಿಕೆಟ್ ಸಿಕ್ಕರೆ ಮತ್ತೊಮ್ಮೆ ಕಣಕ್ಕಿಳಿಯಬಹುದು.
ಸಂದೇಶ್ ನಾಗರಾಜ್ (ಮೈಸೂರು), ಸಿ. ಆರ್. ಮನೋಹರ್ (ಕೋಲಾರ), ಬೆಮಲ್ ಕಾಂತರಾಜು (ತುಮಕೂರು) ಬೇರೆ ಪಕ್ಷಗಳತ್ತ ಮುಖ ಮಾಡಿದ್ದು, ಈ ಕ್ಷೇತ್ರಗಳಿಗೆ ಜೆಡಿಎಸ್ ಹೊಸ ಅಭ್ಯರ್ಥಿಗಳನ್ನು ಹುಡುಕುವುದು ಅನಿವಾರ್ಯವಾಗಿದೆ.
ಯಾವ ಜಿಲ್ಲೆಗಳಿಗೆ ಆದ್ಯತೆ
ಜೆಡಿಎಸ್ ಪ್ರಮುಖವಾಗಿ ಮಂಡ್ಯ, ಮೈಸೂರು, ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳತ್ತ ಹೆಚ್ಚು ಗಮನಹರಿಸಲಿದ್ದಾರೆ. ಮಂಡ್ಯದಲ್ಲಿ ಹಾಲಿ ಪರಿಷತ್ ಸದಸ್ಯರಾಗಿರುವ ಎನ್. ಅಪ್ಪಾಜಿ ಗೌಡ ಟಿಕೆಟ್ ಪಡೆಯುವ ಸಾಧ್ಯತೆ ಹೆಚ್ಚಿದೆ.
ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಬಗ್ಗೆ ಸ್ಥಳೀಯ ನಾಯಕರ ಜೊತೆ ಚರ್ಚಿಸಿ ಜೆಡಿಎಸ್ ನಾಯಕರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಎರಡು ಅಥವ ಮೂರು ದಿನದಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಚ್. ಕೆ. ಕುಮಾರಸ್ವಾಮಿ ಹೇಳಿದ್ದಾರೆ.
ಕುತೂಹಲ ಮೂಡಿಸಿದ ಹಾಸನ ಕ್ಷೇತ್ರ
ಹಾಸನ ಜಿಲ್ಲೆಯಲ್ಲಿಯೂ ಒಂದು ವಿಧಾನ ಪರಿಷತ್ ಸ್ಥಾನ ಖಾಲಿಯಾಗುತ್ತಿದೆ. ಜೆಡಿಎಸ್ ಪಕ್ಷದಿಂದ ಕ್ಷೇತ್ರದಲ್ಲಿ ಮಾಜಿ ಸಚಿವ ಎಚ್. ಡಿ. ರೇವಣ್ಣ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ರೇವಣ್ಣ ಪತ್ನಿ ಭವಾನಿ ರೇವಣ್ಣ ಟಿಕೆಟ್ ಪಡೆಯುವ ಸಾಧ್ಯತೆ ಇದೆ.
ಗೆಲ್ಲುವ ಸಾರ್ಥ್ಯವಿರುವ ಅಭ್ಯರ್ಥಿಗಳು ಸ್ಪರ್ಧಿಸಲು ಬಯಸಿದರೆ ಟಿಕೆಟ್ ನೀಡುವುದಾಗಿ ಪಕ್ಷದ ವರಿಷ್ಠ ಎಚ್. ಡಿ. ದೇವೇಗೌಡ ಹೇಳಿದ್ದಾರೆ. ಯಾರೂ ಆಸಕ್ತಿ ತೋರದಿದ್ದಲ್ಲಿ ಟಿಕೆಟ್ ರೇವಣ್ಣ ಕುಟುಂಬಕ್ಕೆ ಸಿಗುವ ನಿರೀಕ್ಷೆ ಇದೆ.