ಪರಿಷತ್ ಚುನಾವಣೆ : ಜೆಡಿಎಸ್ನಲ್ಲಿ ಅಭ್ಯರ್ಥಿ ಬಗ್ಗೆ ಅಸಮಾಧಾನ
ಬೆಂಗಳೂರು, ಸೆಪ್ಟೆಂಬರ್ 25 : ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿ ಆಯ್ಕೆ ಬಗ್ಗೆ ಜೆಡಿಎಸ್ ಪಕ್ಷದಲ್ಲಿ ಅಸಮಾಧಾನ ಉಂಟಾಗಿದೆ. ಎಚ್.ಎಂ.ರಮೇಶ್ ಗೌಡ ಅಭ್ಯರ್ಥಿಯಾಗಿದ್ದು, ಸೋಮವಾರ ನಾಮಪತ್ರವನ್ನು ಸಲ್ಲಿಸಿದ್ದಾರೆ.
ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಮೂವರು ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ಅಕ್ಟೋಬರ್ 3ರಂದು ಚುನಾವಣೆ ನಿಗದಿಯಾಗಿದೆ. ಪ್ರತಿಪಕ್ಷ ಬಿಜೆಪಿ ಚುನಾವಣೆಯಿಂದ ದೂರವುಳಿದಿದೆ. ಕಾಂಗ್ರೆಸ್ನ ಇಬ್ಬರು, ಜೆಡಿಎಸ್ನ ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಏಕೆ ಸ್ಪರ್ಧಿಸುತ್ತಿಲ್ಲ?
ಕಾಂಗ್ರೆಸ್ನಿಂದ ಎಂ.ಸಿ.ವೇಣುಗೋಪಾಲ್, ನಜೀರ್ ಅಹ್ಮದ್ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಲು ಕೇವಲ 15 ನಿಮಿಷ ಬಾಕಿ ಇರುವಾಗ ಜೆಡಿಎಸ್ ಅಭ್ಯರ್ಥಿಯಾಗಿ ಎಚ್.ಎಂ.ರಮೇಶ್ ಗೌಡ ನಾಮಪತ್ರ ಸಲ್ಲಿಸಿದ್ದಾರೆ.
ವಿಧಾನಪರಿಷತ್ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಎಚ್.ಎಂ.ರಮೇಶ್ ಗೌಡ ಆಯ್ಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿರಿಯ ನಾಯಕರಿಗೆ ಅವಕಾಶ ನೀಡಬಹುದಿತ್ತು ಎಂಬುದು ಅವರ ವಾದ. ಪಕ್ಷದ ಕೆಲವು ನಾಯಕರು ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಮಳೆ ನಿಂತು ಹೋದ ಮೇಲೆ ಆಗಿದ್ದೇನು?
ಹೊಸ ಮುಖಕ್ಕೆ ಆದ್ಯತೆ
ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಲು ಸೆ.24 ಕೊನೆಯ ದಿನವಾಗಿತ್ತು. ಕೇವಲ 15 ನಿಮಿಷ ಬಾಕಿ ಇರುವಾಗ ಎಚ್.ಎಂ.ರಮೇಶ್ ಗೌಡ ಅವರು ಸಚಿವ ಎಚ್.ಡಿ.ರೇವಣ್ಣ ಜೊತೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ.
ಎಚ್.ಎಂ.ರಮೇಶ್ ಗೌಡ ಬೆಂಗಳೂರು ನಗರ ಯುವ ಜೆಡಿಎಸ್ ಘಟಕದ ಅಧ್ಯಕ್ಷರು. ಅವಿರೋಧವಾಗಿ ರಮೇಶ್ ಗೌಡ ಅವರು ಆಯ್ಕೆಯಾಗಲಿದ್ದು ಅವರ ಸದಸ್ಯತ್ವದ ಅವಧಿ 2022ರ ಜೂನ್ 14ರ ತನಕ ಇರಲಿದೆ.
ಎಚ್.ವಿಶ್ವನಾಥ್ ಅಸಮಾಧಾನ
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಎಚ್.ಎಂ.ರಮೇಶ್ ಗೌಡ ಆಯ್ಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಪ್ತರ ಬಳಿ ಈ ಕುರಿತು ಅವರು ಮಾತುಕತೆ ನಡೆಸಿದ್ದಾರೆ.
ಮಾಜಿ ಶಾಸಕರಾದ ಮಧು ಬಂಗಾರಪ್ಪ, ವೈ.ಎಸ್.ವಿ.ದತ್ತಾ, ಕೋನರೆಡ್ಡಿ ಅವರ ಹೆಸರುಗಳು ಪರಿಷತ್ ಚುನಾವಣೆಗೆ ಕೇಳಿಬಂದಿದ್ದವು. ಆದರೆ, ಹಿರಿಯ ನಾಯಕರನ್ನು ಬಿಟ್ಟು ಎಚ್.ಎಂ.ರಮೇಶ್ ಗೌಡ ಆಯ್ಕೆ ಮಾಡಿರುವುದು ವಿಶ್ವನಾಥ್ ಅಸಮಾಧಾನಕ್ಕೆ ಕಾರಣವಾಗಿದೆ.
ದೇವೇಗೌಡರ ಆಯ್ಕೆ?
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಹ ಎಚ್.ಎಂ.ರಮೇಶ್ ಗೌಡ ಆಯ್ಕೆ ಬಗ್ಗೆ ಒಮ್ಮತ ಹೊಂದಿಲ್ಲ. ಮಧು ಬಂಗಾರಪ್ಪ, ವೈ.ಎಸ್.ವಿ.ದತ್ತಾ, ಕೋನರೆಡ್ಡಿ ಮತ್ತು ರಮೇಶ್ ಬಾಬು ಅವರ ಹೆಸರು ಕೇಳಿಬಂದಿತ್ತು.
ಎಚ್.ಡಿ.ಕುಮಾರಸ್ವಾಮಿ ಅವರು ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ಆಯ್ಕೆ ಮಾಡಲು ಬಯಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಎಚ್.ಎಂ.ರಮೇಶ್ ಗೌಡ ಅಭ್ಯರ್ಥಿಯಾಗಿದ್ದಾರೆ.
ಕುಟುಂಬ ಸದಸ್ಯರ ಒತ್ತಡ
ಕಡೂರು ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ.ದತ್ತಾ, ಜೆಡಿಎಸ್ ವಕ್ತಾರ ರಮೇಶ್ ಬಾಬು ಅವರ ಹೆಸರನ್ನು ಅಂತಿಮವಾಗಿ ದೇವೇಗೌಡರಿಗೆ ಕಳುಹಿಸಲಾಗಿತ್ತು. ಆದರೆ, ಕುಟುಂಬ ಸದಸ್ಯರು ಒತ್ತಡಕ್ಕೆ ಮಣಿದು ಎಚ್.ಎಂ.ರಮೇಶ್ ಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.