ಮಾಜಿ ಪ್ರಧಾನಿಗಳ ಕರೆ; ಎಚ್. ಡಿ. ಕುಮಾರಸ್ವಾಮಿ ಪ್ರೆಸ್ ಮೀಟ್ ರದ್ದು!
ಬೆಂಗಳೂರು, ಮೇ. 23: ಜೂನ್ 3 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ದೊಡ್ಡ ಗೌಡರ ಸಲಹೆ ಪಡೆಯಲು ತೆರಳಿದ್ದಾರೆ. ಹೀಗಾಗಿ ಸೋಮವಾರ ಮಧ್ಯಾಹ್ನ ಕುಮಾರಸ್ವಾಮಿ ಕರೆದಿದ್ದ ಸುದ್ದಿಗೋಷ್ಠಿ ರದ್ದು ಮಾಡಿದ್ದಾರೆ.
ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ನಿಂದ ಒಬ್ಬ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದಾರೆ. ಆದರೆ ಸುಮಾರು ಅಭ್ಯರ್ಥಿಗಳು ರೇಸ್ನಲ್ಲಿದ್ದು, ಅಂತಿಮ ಆಯ್ಕೆ ಮಾಡುವ ವಿಚಾರದಲ್ಲಿ ಜೆಡಿಎಸ್ ಕೂಡ ಗೊಂದಲಕ್ಕೆ ಒಳಗಾಗಿದೆ.
ಈ ಹಿನ್ನಲೆಯಲ್ಲಿ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಕರೆದಿದ್ದ ಸುದ್ದಿಗೋಷ್ಠಿ ರದ್ದುಪಡಿಸಿ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರ ಕರೆ ಮೇರೆಗೆ ತೆರಳಿದ್ದಾರೆ. ಜೆಡಿಎಸ್ನಿಂದ ವಿಧಾನ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸಲು ಹಲವು ಅಭ್ಯರ್ಥಿಗಳು ಸಾಲಿನಲ್ಲಿ ನಿಂತಿದ್ದಾರೆ. ಅದರಲ್ಲಿ ಟಿ. ಎ. ಶರವಣ ಹಾಗೂ ಕುಪೇಂದ್ರ ರೆಡ್ಡಿ ಪ್ರಮುಖರು.
ಇನ್ನೂ ಬೇರೆ ಅಭ್ಯರ್ಥಿಗಳು ಈ ಬಾರಿ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡುವಂತೆ ದೊಡ್ಡ ಗೌರ ಬಳಿ ಮೊರೆ ಇಟ್ಟಿದ್ದಾರೆ. ಟಿಕೆಟ್ ಅಂತಿಮಗೊಳಿಸುವ ವಿಚಾರವಾಗಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರನ್ನು ಕುಮಾರಸ್ವಾಮಿ ಭೇಟಿ ಮಾಡಿದ್ದು, ಮಾತುಕತೆ ನಡೆಸಲಿದ್ದಾರೆ. ಹಿರಿಯ ಗೌಡರ ಸಲಹೆ ಮೇರೆಗೆ ಮಂಗಳವಾರ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಬಿಜೆಪಿಯಲ್ಲೂ ಗುದ್ದಾಟ: ಇನ್ನು ವಿಧಾನ ಸಭೆಯಿಂದ ವಿಧಾನ ಪರಿಷತ್ಗೆ ಆಯ್ಕೆ ಮಾಡಲು ಬಿಜೆಪಿಗೆ 4 ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಆಕಾಂಕ್ಷಿಗಳ ದೊಡ್ಡ ಪಟ್ಟಿ ಬೆಳೆದಿದ್ದು, ಹೈಕಮಾಂಡ್ ಸೂಚಿಸಿದವರ ಹೆಸರನ್ನು ಅಂತಿಮಗೊಳಿಸಲಾಗುತ್ತಿದೆ.
ಬಿಜೆಪಿಯಲ್ಲಿ ಸದ್ಯದ ಮಟ್ಟಿಗೆ ಬಿ. ವೈ. ವಿಜಯೇಂದ್ರ, ನಿರ್ಮಲ್ ಕುಮಾರ್ ಸುರಾನಾ, ಛಲವಾದಿ ನಾರಾಯಣ ಸ್ವಾಮಿ, ಮಹಂತೇಶ್ ಕವಟಗಿ ಮಠ, ಅಶ್ವತ್ಥ್ ನಾರಾಯಣ ಗೌಡ, ಭಾನುಪ್ರಕಾಶ್ ಮತ್ತಿತರ ಹೆಸರು ಕೇಳಿ ಬರುತ್ತಿದೆ.
ನಾಲ್ವರು ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲು ಬಿಜಿಪಿ ಕೂಡ ಹರಸಾಹಸ ಪಡುತ್ತಿದೆ. ನಿಗೂಢತೆ ಕಾಯ್ದುಕೊಂಡಿರುವ ಬಿಜೆಪಿ ಯಾರ ಹೆಸರನ್ನು ಅಂತಿಮಗೊಳಿಸಲಿದೆಯೋ? ಕಾದು ನೋಡಬೇಕಿದೆ.
Recommended Video