ನೈಋತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಹೊಸಕೊಪ್ಪ ಸಂದರ್ಶನ
ಶಿವಮೊಗ್ಗ, ಮೇ 31 : ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ನಡೆಯುವ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳ ಕಲರವ ಹೆಚ್ಚಾಗಿದೆ. ಶಿವಮೊಗ್ಗ ಜಿಲ್ಲೆಯ ಐವರು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಜೂನ್ 8ರಂದು ವಿಧಾನಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ. ಪ್ರಮುಖ ರಾಜಕೀಯ ಪಕ್ಷಗಳ ಜೊತೆಗೆ ಜೈ ಶಿಕ್ಷಕ, ಜೈ ಕರ್ನಾಟಕ ಎಂಬ ಘೋಷಣೆಯೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಡಾ.ಅರುಣ್ ಹೊಸಕೊಪ್ಪ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ
ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅರುಣ್ ಹೊಸಕೊಪ್ಪ ಕಳೆದ ಬಾರಿ ಸೋಲು ಕಂಡಿದ್ದರು. ಈ ಬಾರಿಯ ಚುನಾವಣಾ ಕಣದಲ್ಲಿರುವ ಹೆಚ್ಚು ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿ ಇವರು. ಕುವೆಂಪು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ.
ಆಯನೂರು ಮಂಜುನಾಥ್ಗೆ ಟಿಕೆಟ್, ಶಿವಮೊಗ್ಗ ಬಿಜೆಪಿಯಲ್ಲಿ ಅಸಮಾಧಾನ
ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಡಾ.ಅರುಣ್ ಹೊಸಕೊಪ್ಪ ಅವರು 'ನೈಋತ್ಯ ಪತ್ರಿಕೆ' ಎಂಬ ಮಾಸಪತ್ರಿಕೆಯನ್ನು ಹೊರತರುತ್ತಾರೆ. 'ನೈಟಿಂಗೇಲ್ ಆಫ್ ಕರ್ನಾಟಕ' ಎಂಬ ಸಂಗೀತ ಕಾರ್ಯಕ್ರಮವನ್ನು ಅವರು ರಾಜ್ಯಾದ್ಯಂತ ನಡೆಸಿಕೊಡುತ್ತಾರೆ.
ವಿಧಾನಪರಿಷತ್ ಚುನಾವಣೆ : ಎಲ್ಲಾ 11 ಅಭ್ಯರ್ಥಿಗಳು ಅವಿರೋಧ ಆಯ್ಕೆ?
ಶಿಕ್ಷಕರ ಕ್ಷೇತ್ರದಿಂದ ಶಿಕ್ಷಕರೇ ಆಯ್ಕೆಯಾಗಬೇಕು ಎಂಬುದು ಡಾ.ಅರುಣ್ ಹೊಸಕೊಪ್ಪ ಅವರ ಮನವಿ. ಚುನಾವಣೆಗೆ ಸ್ಪರ್ಧಿಸುತ್ತಿರುವುದು ಏಕೆ?, ಶಿಕ್ಷಕರ ಸಮಸ್ಯೆಗಳೇನು? ಮುಂತಾದ ವಿಚಾರಗಳ ಕುರಿತು ಡಾ.ಅರುಣ್ ಹೊಸಕೊಪ್ಪ ಒನ್ ಇಂಡಿಯಾ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ ನೋಡಿ..
ಪಕ್ಷೇತರ ಅಭ್ಯರ್ಥಿಯಾಗಿ ಏಕೆ ಸ್ಪರ್ಧೆ?
ಶಿಕ್ಷಕರು ಯಾವುದೋ ಹೋರಾಟ ಮಾಡುತ್ತಿರುತ್ತಾರೆ. ಪಕ್ಷೇತರರಾದರೆ ನೇರವಾಗಿ ಹೋರಾಟದಲ್ಲಿ ಪಾಲ್ಗೊಳ್ಳಬಹುದು. ಆದರೆ, ಪಕ್ಷದಿಂದ ಆಯ್ಕೆಯಾದರೆ ಹೈಕಮಾಂಡ್ ಒಪ್ಪಿಗೆ ಪಡೆಯಬೇಕಾಗುತ್ತದೆ. ಶಿಕ್ಷಕರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದ್ದು ಬಂದ ಉದಾಹರಣೆಗಳು ಹೆಚ್ಚು.
ಆಹೋರಾತ್ರಿ ಧರಣಿಗಳು ನಡೆಯುತ್ತವೆ. ಆವಾಗ ಕಾಂಗ್ರೆಸ್ನಿಂದ ಪರಿಷತ್ ಸದಸ್ಯರು ಬರುವುದಿಲ್ಲ. ಏಕೆಂದರೆ ಅವರು ಸರ್ಕಾರದ ವಿರುದ್ಧ ಹೋಗಬೇಕಾಗುತ್ತದೆ. ಆದ್ದರಿಂದ, ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ಧೇನೆ. ನೈಋತ್ಯ ಶಿಕ್ಷಕರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದ್ದು ಬಂದಿರುವುದೇ ಹೆಚ್ಚು.
ಪರಿಷತ್ ಚುನಾವಣೆ ಏಕೆ?, ವಿಧಾನಸಭೆಗೆ ಏಕೆ ಸ್ಪರ್ಧಿಸಿಲ್ಲ?
ನಾನು ಒಬ್ಬ ಶಿಕ್ಷಕ, 5 ವರ್ಷಗಳ ಕಾಲ ಶಿಕ್ಷಕನಾಗಿ ಕೆಲಸ ಮಾಡಿದ್ದೇನೆ. ಮೂರು ವರ್ಷ ಪದವಿ ಕಾಲೇಜಿನಲ್ಲಿ, 2 ವರ್ಷ ಪಿಯು ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಿದ್ದೇನೆ. ಶಿಕ್ಷಕರ ಕ್ಷೇತ್ರ ಉತ್ತಮವಾದದ್ದು.
ರಾಜಕೀಯದಲ್ಲಿ ಸ್ಪಲ್ಪಮಟ್ಟಿಗಿನ ಗೌರವನ್ನು ಕ್ಷೇತ್ರ ಉಳಿಸಿಕೊಂಡಿದೆ. ಹಣ, ಹೆಂಡ ಮುಂತಾದವುಗಳಿಗೆ ಇಲ್ಲಿ ಆಸ್ಪದವಿಲ್ಲ. ಆದ್ದರಿಂದ, ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ.
ಶಿಕ್ಷಕರ ಸಮಸ್ಯೆಗಳು ಏನಿರುತ್ತವೆ?
ಶಿಕ್ಷಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳ ಬಗ್ಗೆ ಮಾತನಾಡುತ್ತಾ ಹೋದರೆ ದಿನಗಳು ಬೇಕಾಗುತ್ತವೆ. ಸರ್ಕಾರಿ ಶಾಲೆಗಳ ಸಮಸ್ಯೆ ಬೇರೆ, ಅನುದಾನಿತ ಶಾಲೆಗಳ ಸಮಸ್ಯೆ ಬೇರೆ, ಡಿಪ್ಲೋಮಾ ಕಾಲೇಜಿನ ಶಿಕ್ಷಕರ ಸಮಸ್ಯೆಗಳು ಬೇರೆ. ಖಾಸಗಿ ಶಾಲೆಗಳ ಸಮಸ್ಯೆಗಳು ಬೇರೆ. ಇನ್ನು ಬೇರೆಬೇರೆ ವಿಷಯಗಳ ಶಿಕ್ಷಕರ ಸಮಸ್ಯೆಗಳು ಹಲವಾರು ಇವೆ.
ನಿಶ್ಚಿತ ಪಿಂಚಣಿ ಎಲ್ಲರಿಗೂ ಅನ್ವಯವಾಗಬೇಕು ಎಂದು ಈಗ ಬಹುದೊಡ್ಡ ಹೋರಾಟ ಸಾಗಿದೆ. ಅನುದಾನಿತ ಶಾಲೆಗಳ ಶಿಕ್ಷಕರಿಗೆ ಪಿಂಚಣಿ ಸಿಗುತ್ತಿಲ್ಲ. ದೈಹಿಕ ಶಿಕ್ಷಕರಿಗೆ ಪ್ರಮೋಷನ್ ಸಿಗುತ್ತಿಲ್ಲ. ಈ ವಿಚಾರಗಳ ಬಗ್ಗೆ ಹೋರಾಟಗಳನ್ನು ಮಾಡುತ್ತಲೇ ಬಂದಿದ್ದಾರೆ.
ಈಗಿರುವ ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. 12 ವರ್ಷದ ಹಿಂದೆ ನೀಡಿದ ಮನವಿಯನ್ನು ಈಗಲೂ ಸಲ್ಲಿಸುತ್ತಿದ್ದೇವೆ. ಕೆಲವು ಬಗೆಹರಿದಿವೆ. ನಾನು ಒಬ್ಬ ಶಿಕ್ಷಕ, ಸಮಸ್ಯೆಗಳು ಚೆನ್ನಾಗಿ ತಿಳಿದಿವೆ. ಆದ್ದರಿಂದ ಚುನಾವಣಾ ಕಣಕ್ಕೆ ಇಳಿದಿದ್ದೇನೆ.
ನೈಋತ್ಯ ಶಿಕ್ಷಕರ ಕ್ಷೇತದ ಜಿಲ್ಲೆಗಳು, ಸಮಸ್ಯೆಗಳು ಏನು?
ನೈಋತ್ಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಗೆ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳು ಒಳಪಡುತ್ತವೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ ತಾಲೂಕುಗಳು ಸಹ ಕ್ಷೇತ್ರ ಒಳಗೊಂಡಿದೆ.
ರಾಜ್ಯದ ಎಲ್ಲಾ ಶಿಕ್ಷಕರ ಸಮಸ್ಯೆಗಳು ಒಂದೇ ಅದನ್ನು ಜಿಲ್ಲಾವಾರು ವಿಭಜನೆ ಮಾಡಲು ಆಗುವುದಿಲ್ಲ. ಪ್ರದೇಶವಾರು ಇರುವ ಸಮಸ್ಯೆಗಳು ಚಿಕ್ಕವು. ಆದರೆ, ರಾಜ್ಯಾದ್ಯಂತ ಇರುವ ಸಮಸ್ಯೆಗಳು ಹೆಚ್ಚು.
ಶಿಕ್ಷಕ ವೃತ್ತಿ ಬಿಟ್ಟು ರಾಜಕೀಯಕ್ಕೆ ಬರಲು ಕಾರಣವೇನು?
ನನಗೆ ಸಾರ್ವಜನಿಕ ಸೇವೆ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇದೆ. ನಾನು ಶಿಕ್ಷಕನಾಗಿದ್ದವನು. ಅವರ ಸಮಸ್ಯೆಯನ್ನು ಹತ್ತಿರದಿಂದ ನೋಡಿದ್ದೇನೆ. ಆದ್ದರಿಂದ, ಒಂದು ಅವಕಾಶ ನೀಡಿದರೆ ಸಮಸ್ಯೆಯನ್ನು ಬಗೆಹರಿಸಲು ಕೆಲಸ ಮಾಡುವ ಎಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ.
ಈ ಬಾರಿ ಚುನಾವಣೆಯಲ್ಲಿ ನಿಮ್ಮನ್ನು ಏಕೆ ಬೆಂಬಲಿಸಬೇಕು?
ನಾನು ಕಳೆದ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದೇನೆ. ಮತ್ತೊಂದು ನಾನು ಎಲ್ಲಾ ಶಿಕ್ಷಕರನ್ನು ಭೇಟಿ ಮಾಡುತ್ತೇನೆ. ಎಲ್ಲರೂ ಮೀಟಿಂಗ್ ಮಾಡುತ್ತಾರೆ. ಆದರೆ, ನಾನು ಖುದ್ದಾಗಿ ಭೇಟಿ ಮಾಡುತ್ತೇನೆ. ಇನ್ನೊಂದು ನಾನೊಬ್ಬ ಶಿಕ್ಷಕ. ಶಿಕ್ಷಕರ ಕ್ಷೇತ್ರದಲ್ಲಿ ಶಿಕ್ಷಕರು ಸ್ಪರ್ಧೆ ಮಾಡಬೇಕು.
ಈ ಚುನಾವಣೆಯಲ್ಲಿ ಇಂತವರು ಸ್ಪರ್ಧೆ ಮಾಡಬೇಕು ಎಂದು ಬೈಲಾ ಇಲ್ಲ. ಒಂದು ದಿನ ಪಾಠ ಮಾಡದವರು ಸಹ ಸ್ಪರ್ಧೆ ಮಾಡುತ್ತಾರೆ. ರಾಜಕೀಯ ವಲಯದವರು ಸ್ಪರ್ಧಿಸುತ್ತಾರೆ. ಆದ್ದರಿಂದ, ನನ್ನ ಬೇಡಿಕೆ ಒಂದೇ ಶಿಕ್ಷಕರನ್ನೇ ಆಯ್ಕೆ ಮಾಡಿ. ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುವವರು ಶಿಕ್ಷಕರೇ ಆಗಿರಬೇಕು ಎಂಬುದು ನನ್ನ ಮನವಿ.