ರಾಜಕೀಯ ನಾಯಕರಿಗೆ ಪರಿಷತ್ ಚುನಾವಣೆ ಸವಾಲ್!
ಬೆಂಗಳೂರು, ನವೆಂಬರ್ 28; ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಆಡಳಿತರೂಢ ಬಿಜೆಪಿಗೆ ಈಗ ನಡೆಯುತ್ತಿರುವ ವಿಧಾನಪರಿಷತ್ ಚುನಾವಣೆ ಹಲವು ರೀತಿಯಲ್ಲಿ ಪ್ರತಿಷ್ಠೆಯ ಕಣವಾಗಿದೆ. ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲೇಬೇಕಾದ ಅನಿವಾರ್ಯತೆ ಘಟಾನುಘಟಿ ನಾಯಕರಿಗೆ ಬಂದೊದಗಿದೆ.
ಡಿಸೆಂಬರ್ 10ರಂದು ಸ್ಥಳೀಯ ಸಂಸ್ಥೆಗಳಿಂದ 25 ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ. ಡಿಸೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆ ಮುಗಿದಿದ್ದು, ವಿವಿಧ ಪಕ್ಷದ ನಾಯಕರು ಪ್ರಚಾರದಲ್ಲಿ ತೊಡಗಿದ್ದಾರೆ.
ಪರಿಷತ್ ಚುನಾವಣೆ; ನಾಮಪತ್ರ ವಾಪಸ್ ಪಡೆದ ಜೆಡಿಎಸ್ ಅಭ್ಯರ್ಥಿ!
ಪಕ್ಷದ ನಾಯಕತ್ವ ಹೊತ್ತಿರುವ ಪ್ರಮುಖ ನಾಯಕರೆನಿಸಿಕೊಂಡವರಿಗೆ ಇದೊಂದು ಪ್ರತಿಷ್ಠೆಯ ಕಣ ಮಾತ್ರವಲ್ಲದೆ, ಅವರ ವರ್ಚಸ್ಸಿಗೊಂದು ಸವಾಲು ಕೂಡ ಹೌದು. ಮೇಲ್ನೋಟಕ್ಕೆ ಇದು ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಅಲ್ಲವೇ ಅಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಿದ್ದರೂ ಅದನ್ನು ಒಪ್ಪಿಕೊಳ್ಳುವುದು ಕಷ್ಟಸಾಧ್ಯವೇ.
ಪರಿಷತ್ ಚುನಾವಣೆ; ಒಳ ಒಪ್ಪಂದದ ರಹಸ್ಯ ಬಿಚ್ಚಿಟ್ಟ ಎಚ್ಡಿಕೆ
ಇಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗೆಲ್ಲುವುದು ಅಗತ್ಯವಾಗಿದೆ. ಏಕೆಂದರೆ ಹೆಚ್ಚಿನ ಸ್ಥಾನಗೆದ್ದರೆ ಕಾಂಗ್ರೆಸ್ ಪ್ರಾಬಲ್ಯದಲ್ಲಿರುವ ಮೇಲ್ಮನೆಯನ್ನು ತಮ್ಮ ಹಿಡಿತಕ್ಕೆ ಪಡೆಯಬಹುದು. ಜತೆಗೆ ಮುಂದಿನ 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಹುಮ್ಮಸ್ಸಿನಿಂದಲೇ ಹೋಗಬಹುದು. ಒಂದು ವೇಳೆ ಪರಿಷತ್ ಚುನಾವಣೆಯಲ್ಲಿ ಮುಗ್ಗರಿಸಿದರೆ ಅದರ ನೇರ ಹೊಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊರಬೇಕಾಗುತ್ತದೆ. ಅಷ್ಟೇ ಅಲ್ಲದೆ ಪಕ್ಷದ ಇತರೆ ನಾಯಕರಿಗೂ ಮುಳುಗು ನೀರಾಗುವ ಸಾಧ್ಯತೆ ಇಲ್ಲದಿಲ್ಲ.
ಪರಿಷತ್; ರಾತ್ರೋರಾತ್ರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜೆಡಿಎಸ್ ಅಭ್ಯರ್ಥಿ!
ವಿಪಕ್ಷಗಳತ್ತ ಜನ ಮುಖ ಮಾಡಲು ವೇದಿಕೆ
ಸದ್ಯದ ಸ್ಥಿತಿಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹಂಬಲಿಸಿರುವ ಪ್ರತಿಪಕ್ಷಗಳು ಬಿಜೆಪಿ ಸೋಲಿನ ಲಾಭಕ್ಕಾಗಿ ಕಾದು ಕುಳಿತಿವೆ. ಹಾಗೆನಾದರೂ ಆಗಿಬಿಟ್ಟರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಪಕ್ಷಗಳತ್ತ ಜನ ಮುಖ ಮಾಡಲು ವೇದಿಕೆ ಮಾಡಿಕೊಟ್ಟಂತಾಗುತ್ತದೆ. ಬಿಜೆಪಿಯದು ಜನವಿರೋಧಿ ಸರ್ಕಾರ ಹಾಗಾಗಿ ಹೆಚ್ಚಿನ ಸ್ಥಾನಗಳಿಸಿಲ್ಲ. ಜನ ಸರ್ಕಾರದ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ ಎಂಬಂತೆ ಬಿಂಬಿಸಿ ಮುಂದಿನ ವಿಧಾನ ಸಭಾ ಚುನಾವಣೆಗೆ ತಯಾರಾಗುವುದು ಖಚಿತ.
ಇಲ್ಲಿ ಮೂರು ರಾಜಕೀಯ ಪಕ್ಷಗಳಿಗೆ ಗೆಲುವು ಎಷ್ಟು ಮುಖ್ಯವೋ? ಅಷ್ಟೇ ಅಲ್ಲಿರುವ ನಾಯಕರಿಗೆ ತಮ್ಮ ಸ್ವಂತ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿತರುವುದು ಮುಖ್ಯವಾಗಿದೆ. ಕಾರಣ ಪಕ್ಷದಲ್ಲಿ ತಮ್ಮ ವರ್ಚಸ್ಸನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಇಲ್ಲದೆ ಹೋದರೆ ಪಕ್ಷದೊಳಗೆ ಮತ್ತು ಹೊರಗಿನ ರಾಜಕೀಯ ವಿರೋಧಿಗಳ ಮುಂದೆ ನಗೆಪಾಟಲಿಗೀಡಬೇಕಾಗುತ್ತದೆ.
ಉಪಚುನಾವಣೆಯಲ್ಲಿ ಸಿಎಂ ಕಹಿ ಅನುಭವ
ಮುಖ್ಯಮಂತ್ರಿ ಬಸವರಾಜಬೊಮ್ಮಾಯಿಗೆ ಈ ಹಿಂದೆ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಕಹಿ ಅನುಭವವಾಗಿದೆ. ತಮ್ಮ ಕ್ಷೇತ್ರದಲ್ಲಿ ಗೆಲುವು ಪಡೆಯಲಾಗದೆ ಹೋದದ್ದು ದೊಡ್ಡ ಸುದ್ದಿಯಾಗಿತ್ತು. ಅಲ್ಲಿ ಗೆದ್ದ ಕಾಂಗ್ರೆಸ್ ಹೇಗೆ ಬೀಗಿತು ಎಂಬುದನ್ನು ಎಲ್ಲರೂ ನೋಡಿದ್ದಾರೆ. ಹೀಗಿರುವಾಗ ಪ್ರತಿ ಕ್ಷೇತ್ರದ ಅಭ್ಯರ್ಥಿ ಗೆಲುವು ಬರೀ ಅಭ್ಯರ್ಥಿಯದು ಮಾತ್ರ ಗೆಲುವಲ್ಲ. ಅದು ಪಕ್ಷ ಮತ್ತು ಆ ಪಕ್ಷದ ನಾಯಕರ ಗೆಲುವಾಗಿಯೂ ಬಿಂಬಿತವಾಗುತ್ತದೆ.
ಸಾಮೂಹಿಕ ನಾಯಕತ್ವದಲ್ಲಿಯೇ ಚುನಾವಣೆಗೆ ಹೋಗುತ್ತೇವೆ ಎನ್ನುವ ರಾಜಕೀಯ ಪಕ್ಷಗಳ ನಾಯಕರು ಚುನಾವಣೆ ಸಮಯದಲ್ಲಿ ಮಾತ್ರ ತಮ್ಮ ಕ್ಷೇತ್ರದತ್ತ ಹೆಚ್ಚಿನ ನಿಗಾವಹಿಸುತ್ತಾರೆ. ರಾಜಕೀಯವಾಗಿ ನಾಯಕರು ಪಕ್ಷದಲ್ಲಿ ಉಳಿದು ಬೆಳೆಯಬೇಕಾದರೆ ಅದು ಅಗತ್ಯವೂ ಹೌದು. ಇಲ್ಲದೆ ಹೋದರೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಜಿ. ಪರಮೇಶ್ವರ ಅನುಭವಿಸಿದ ಕಹಿ ಅನುಭವ ಎಲ್ಲರಿಗೂ ಆಗುವುದರಲ್ಲಿ ಸಂದೇಹವಿಲ್ಲ. ಹೀಗಾಗಿಯೇ ಪ್ರಮುಖ ಆಯಕಟ್ಟಿನಲ್ಲಿರುವ ನಾಯಕರು ತಮ್ಮ ಉಳಿಗಾಗಿ ಸ್ವಲ್ಪ ಹೆಚ್ಚಿನ ನಿಗಾವನ್ನು ತಮ್ಮ ಕ್ಷೇತ್ರದತ್ತ ವಹಿಸುವುದು ಕಂಡು ಬರುತ್ತಿದೆ.
ಪ್ರತಿಯೊಬ್ಬ ಅಭ್ಯರ್ಥಿಗೂ ಕಷ್ಟದ ಕೆಲಸ
ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಬಹುಮತ ಪಡೆದು ಆಡಳಿತ ನಡೆಸುತ್ತಿದ್ದರೂ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನ ಸ್ಥಾನಗಳು ಕಾಂಗ್ರೆಸ್, ಜೆಡಿಎಸ್ಗೆ ಹಂಚಿ ಹೋಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್ ಗಟ್ಟಿಯಾಗಿದೆ. ಹೀಗಾಗಿ ಗ್ರಾಮ ಪಂಚಾಯಿತಿ ಸದಸ್ಯರು ಒಲವು ತೋರುವ ಅಭ್ಯರ್ಥಿಗಳು ಸುಲಭವಾಗಿ ಗೆಲ್ಲುತ್ತಾರೆ. ಬೇರೆ ಬೇರೆ ಪಕ್ಷಗಳಲ್ಲಿ ಹಂಚಿಹೋಗಿರುವ ಮತದಾರರನ್ನು ಸೆಳೆದುಕೊಂಡು ಮತ ಪಡೆಯುವುದು ಪ್ರತಿಯೊಬ್ಬ ಅಭ್ಯರ್ಥಿಗೂ ಕಷ್ಟದ ಕೆಲಸವೇ.
Recommended Video
ಗೆಲುವಿಗಾಗಿ ಸರ್ವ ಪ್ರಯತ್ನ
ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಹಣ ಹರಿದಾಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ತಳಮಟ್ಟದ ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರು ಸೇರಿದಂತೆ ಇತರೆ ಸ್ಥಳೀಯ ಸಂಸ್ಥೆ ಸದಸ್ಯರು ತಟಸ್ಥಧೋರಣೆ ತಾಳುತ್ತಾ ತಮ್ಮ ಬಳಿಗೆ ಬರುವ ಅಭ್ಯರ್ಥಿಗಳೊಂದಿಗೆ ಆತ್ಮೀಯವಾಗಿಯೇ ಇದ್ದಾರೆ. ಹೀಗಾಗಿ ಸದ್ಯಕ್ಕೆ ಮೇಲ್ಮಟ್ಟದ ನಾಯಕರಿಗೆ ಗೊಂದಲ ಕಾಡುತ್ತಿದೆ. ಅದು ಏನೇ ಇರಲಿ ನಾಯಕರು ಮಾತ್ರ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಸರ್ವ ರೀತಿಯ ಪ್ರಯತ್ನ ಮಾಡುತ್ತಿರುವುದಂತು ನಿಜ.