ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿ ಪರ ಅಶ್ವತ್ಥನಾರಾಯಣ ಮಂಡ್ಯ, ಮೈಸೂರಿನಲ್ಲಿ ಪ್ರಚಾರ
ಮಂಡ್ಯ, ಮೇ 16: ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ ಸ್ಥಾನಕ್ಕೆ ಸದ್ಯದಲ್ಲೇ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮೈ ವಿ ರವಿಶಂಕರ್ ಅವರ ಪರವಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಸೋಮವಾರ ಮಂಡ್ಯ ಮತ್ತು ಮೈಸೂರು ನಗರಗಳಲ್ಲಿ ಭರ್ಜರಿ ಪ್ರಚಾರ ಸಭೆಗಳನ್ನು ನಡೆಸಿದರು.
ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದೆ. ಎರಡು ಪದವೀಧರ ಕ್ಷೇತ್ರಗಳು ಮತ್ತು ಎರಡು ಶಿಕ್ಷಕರ ಕ್ಷೇತ್ರಗಳಿಗೆ ಜೂ 13ರಂದು ಮತದಾನ ನಡೆಯುತ್ತದೆ. ಇದಲ್ಲದೆ, ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗುವ 7 ಮಂದಿ ಸದಸ್ಯರ ಅವಧಿ ಜೂ 14ಕ್ಕೆ ಮುಕ್ತಾಯ ಆಗಲಿದ್ದು, ಅದಕ್ಕೂ ಸಹ ಜೂ 3ರಂದು ಮತದಾನ ಪ್ರಕ್ರಿಯೆ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಕಣ ರಂಗೇರಿದೆ.
ರಾಜ್ಯಸಭೆ- ವಿಧಾನ ಪರಿಷತ್ ಚುನಾವಣೆ: ಸಿಎಂ ಬೊಮ್ಮಾಯಿ- ಯಡಿಯೂರಪ್ಪ ಭೇಟಿ
ಪ್ರಚಾರದ ಅಂಗವಾಗಿ ಅಶ್ವತ್ಥನಾರಾಯಣ ಅವರು ಬೆಳಿಗ್ಗೆಯಿಂದಲೇ ಮತದಾರರ ಜತೆ ಸಂವಾದ ಮತ್ತು ಪ್ರಮುಖರ ಭೇಟಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮಂಡ್ಯದಲ್ಲಿ ಮತಯಾಚನೆ
ಇದರಂತೆ ಮಂಡ್ಯದ ಮಾಂಡವ್ಯ ಶಿಕ್ಷಣ ಸಂಸ್ಥೆ, ಸರಕಾರಿ ಮಹಿಳಾ ಕಾಲೇಜು, ಮಂಡ್ಯ ವೈದ್ಯಕೀಯ ಕಾಲೇಜು, ಪಿಇಎಸ್ ಪದವಿ ಕಾಲೇಜು, ಮಂಡ್ಯ ವಿಶ್ವವಿದ್ಯಾಲಯ, ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಮತ್ತು ಯಲಿಯೂರಿನ ಅನಿಕೇತನ ಶಾಲೆಗಳಲ್ಲಿ ನಡೆದ ಸಭೆಗಳಲ್ಲಿ ಭಾಗವಹಿಸಿ, ಮತಯಾಚನೆ ಮಾಡಿದರು. ಮೈಸೂರಿನಲ್ಲಿ ಸಚಿವರು 'ಮುಕ್ತ ಗಂಗೋತ್ರಿ'ಯಲ್ಲಿ ಇದೇ ರೀತಿ ಸಭೆ ನಡೆಸಿದರು.
ಮಂಡ್ಯದ ಸಭೆಗಳಲ್ಲಿ ಮಾತನಾಡಿದ ಅವರು, ಯುವಜನರಿಗೆ ಉಜ್ವಲ ಭವಿಷ್ಯವನ್ನು ಸೃಷ್ಟಿಸುವುದು ಮತ್ತು ಭ್ರಷ್ಟಾಚಾರರಹಿತ ಆಡಳಿತವನ್ನು ಒದಗಿಸುವುದು ಮತ್ತು ಪರಿಶುದ್ಧ ಸಮಾಜ ನಿರ್ಮಿಸುವುದು ಬಿಜೆಪಿಯಿಂದ ಮಾತ್ರ ಸಾಧ್ಯವಿದೆ. ಆದ್ದರಿಂದ ಪಕ್ಷದ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ಹಾಕುವ ಮೂಲಕ, ಗೆಲ್ಲಿಸಬೇಕು' ಎಂದು ಮನವಿ ಮಾಡಿಕೊಂಡರು.
ಜಾತಿಗೆ ಸೀಮಿತವಾದ ಪಕ್ಷವಲ್ಲ:
ಬಿಜೆಪಿ ಯಾವುದೇ ಒಂದು ಜಾತಿಗಾಗಲಿ, ಧರ್ಮಕ್ಕಾಗಲಿ ಸೀಮಿತವಾದ ಪಕ್ಷವಲ್ಲ. ಇದು ಕನ್ನಡಿಗರಿಗೆ ಮತ್ತು ಭಾರತೀಯರಿಗೆ ಸೇರಿದ ವಿಶಾಲ ನೆಲೆಯ ಪಕ್ಷವಾಗಿದೆ. ಆದ್ದರಿಂದ ಅರ್ಹ ಪದವೀಧರರು ಬಿಜೆಪಿ ಪರವಾಗಿ ನಿಲ್ಲುವ ಮೂಲಕ ವ್ಯವಸ್ಥೆಯ ಪರಿವರ್ತನೆಗೆ ಬೆಂಬಲಿಸಬೇಕು' ಎಂದು ಅವರು ಹೇಳಿದರು.
ಪಕ್ಷದ ಅಭ್ಯರ್ಥಿಯಾಗಿರುವ ರವಿಶಂಕರ್ ಅವರು ಹಿರಿಯ ನಾಯಕರಾಗಿದ್ದು, ಒಳ್ಳೆಯ ಹಿನ್ನೆಲೆ ಹೊಂದಿದ್ದಾರೆ. ಸಮಾಜದಲ್ಲಿ ಬದಲಾವಣೆಯನ್ನು ತರುವ ತುಡಿತ ಹೊಂದಿರುವ ಇಂಥವರನ್ನು ಆರಿಸಿದರೆ, ಅದರಿಂದ ಪದವೀಧರರ ಹಿತಾಸಕ್ತಿಗಳನ್ನು ಕಾಪಾಡುವ ಗಟ್ಟಿ ದನಿಯೊಂದು ಸದನದಲ್ಲಿ ಕೇಳಿಬರತೊಡಗುತ್ತದೆ' ಎಂದು ಸಚಿವರು ಬಣ್ಣಿಸಿದರು.
ಬಿಜೆಪಿಯಿಂದ ಮಾತ್ರ ಸಾಧ್ಯ:
21ನೇ ಶತಮಾನವು ಜ್ಞಾನದ ಶತಮಾನವಾಗಿದ್ದು, ಇಡೀ ಆರ್ಥಿಕ ವ್ಯವಸ್ಥೆಯು ಇದರ ಮೇಲೆ ನಿಂತಿದೆ. ಜಾಗತಿಕ ಸ್ಪರ್ಧೆಯನ್ನು ಎದುರಿಸಬೇಕೆಂದರೆ, ಯುವಜನರ ಆಶೋತ್ತರಗಳನ್ನು ಅರ್ಥ ಮಾಡಿಕೊಂಡು, ಅವರಿಗೆ ಉಜ್ವಲ ಅವಕಾಶಗಳನ್ನು ಸೃಷ್ಟಿಸುವಂತಹ ಸೂಕ್ತ ವ್ಯವಸ್ಥೆಯನ್ನು ನಿರ್ಮಿಸಬೇಕು. ಇದು ಬಿಜೆಪಿಯಿಂದ ಮಾತ್ರ ಸಾಧ್ಯವಾಗುವಂತಹ ಕೆಲಸ. ಈ ನಿಟ್ಟಿನಲ್ಲಿ ಎನ್ಇಪಿಯನ್ನು ಜಾರಿಗೆ ತರುತ್ತಿರುವುದನ್ನು ನೋಡಬಹುದು ಎಂದು ಅಶ್ವತ್ಥನಾರಾಯಣ ಪ್ರತಿಪಾದಿಸಿದರು.
ಮಂಡ್ಯ ಮತ್ತು ಮೈಸೂರಿನಲ್ಲಿ ನಡೆದ ಪ್ರಚಾರ ಸಭೆಗಳಲ್ಲಿ ಅಭ್ಯರ್ಥಿ ಮೈ.ವಿ. ರವಿಶಂಕರ್, ಪಕ್ಷದ ಜಿಲ್ಲಾ ಮುಖಂಡರು ಮತ್ತು ದಕ್ಷಿಣ ಪದವೀಧರ ಕ್ಷೇತ್ರದ ವ್ಯಾಪ್ತಿಯ ಅನೇಕ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.