ವಿಧಾನ ಪರಿಷತ್ ಚುನಾವಣೆ : 3 ಅಭ್ಯರ್ಥಿಗಳು ಅವಿರೋಧ ಆಯ್ಕೆ
ಬೆಂಗಳೂರು, ಸೆಪ್ಟೆಂಬರ್ 27 : ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಸದಸ್ಯರನ್ನು ಆಯ್ಕೆ ಮಾಡಲು ಅಕ್ಟೋಬರ್ 3ಕ್ಕೆ ಚುನಾವಣೆ ನಿಗದಿಯಾಗಿತ್ತು.
ಗುರುವಾರ ಚುನಾವಣಾಧಿಕಾರಿ ಎಂ.ಎಸ್.ಕುಮಾರಸ್ವಾಮಿ ಅವರು ಇಬ್ಬರು ಕಾಂಗ್ರೆಸ್, ಒಬ್ಬರು ಜೆಡಿಎಸ್ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು. ಮೂರು ಸ್ಥಾನಕ್ಕೆ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಅವಿರೋಧ ಆಯ್ಕೆ ನಡೆದಿದೆ.
ಅವಿರೋಧವಾಗಿ ಆಯ್ಕೆಯಾದ ಪರಿಷತ್ ಸದಸ್ಯರ ಪರಿಚಯ
ಕಾಂಗ್ರೆಸ್ ಪಕ್ಷದ ನಜೀರ್ ಅಹ್ಮದ್, ಎಂ.ಸಿ.ವೇಣುಗೋಪಾಲ್ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿ ಎಚ್.ಎಂ.ರಮೇಶ್ ಗೌಡ ಅವರು ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಗಳು ನೂತನ ಸದಸ್ಯರಿಗೆ ಪ್ರಮಾಣ ಪತ್ರ ನೀಡಿದರು.
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಏಕೆ ಸ್ಪರ್ಧಿಸುತ್ತಿಲ್ಲ?
ಕೆ.ಎಸ್.ಈಶ್ವರಪ್ಪ, ಡಾ.ಜಿ.ಪರಮೇಶ್ವರ ಮತ್ತು ವಿ.ಸೋಮಣ್ಣ ಅವರು 2018ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದರು. ಆದ್ದರಿಂದ, ವಿಧಾನ ಪರಿಷತ್ತಿನ ಮೂರು ಸ್ಥಾನಗಳು ತೆರವಾಗಿದ್ದವು. ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ.
ರಾಜ್ಯ ರಾಜಕೀಯದಲ್ಲಿ ಮಳೆ ನಿಂತು ಹೋದ ಮೇಲೆ ಆಗಿದ್ದೇನು?
ಎಂ.ಸಿ.ವೇಣುಗೋಪಾಲ್
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಆಪ್ತರಾದ ಎಂ.ಸಿ.ವೇಣುಗೋಪಾಲ್ ಅವಿರೋಧವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಸವಿತಾ ಸಮಾಜದ ಮುಖಂಡರಾದ ಇವರು, ಕೆಪಿಸಿಸಿ ಹಿಂದುಳಿದ ಘಟಕದ ಅಧ್ಯಕ್ಷರಾಗಿದ್ದರು.
ಬೆಂಗಳೂರಿನ ಜಯನಗರ ಕ್ಷೇತ್ರದಲ್ಲಿ 2013ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ವೇಣುಗೋಪಾಲ್ 2018ರ ಚುನಾವಣೆ ಟಿಕೆಟ್ ಅಕಾಂಕ್ಷಿಯಾಗಿದ್ದರು. ಆದರೆ, ಪಕ್ಷದ ನಾಯಕರ ಸಲಹೆಯಂತೆ ಸೌಮ್ಯಾ ರೆಡ್ಡಿ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಆಗಲೇ ಅವರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಭರವಸೆಯನ್ನು ನಾಯಕರು ನೀಡಿದ್ದರು.
ಎಂ.ಸಿ.ವೇಣುಗೋಪಾಲ್ ಅವರ ಅವಧಿ 2020ರ ಜೂನ್ 30ರ ತನಕ ಇದೆ.
ನಜೀರ್ ಅಹ್ಮದ್
ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ನಜೀರ್ ಅಹ್ಮದ್ ಅವರು 2ನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನಜೀರ್ ಅಹ್ಮದ್ ಅವರು ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದರು. 1983, 1999 ಮತ್ತು 2013ರ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿದು ಸೋಲು ಕಂಡಿದ್ದರು.
ನಜೀರ್ ಅಹ್ಮದ್ ಅವರ ಅವಧಿ 2020ರ ಜೂನ್ 30ರ ತನಕ ಇದೆ.
ಎಚ್.ಎಂ.ರಮೇಶ್ ಗೌಡ
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಆಪ್ತರಾದ ಎಚ್.ಎಂ.ರಮೇಶ್ ಗೌಡ ಅವರು ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರು ನಗರ ಯುವ ಜೆಡಿಎಸ್ ಘಟಕದ ಅಧ್ಯಕ್ಷರಾದ ರಮೇಶ್ ಗೌಡ ಅವರು ಉದ್ಯಮಿಗಳು ಹೌದು. ಜೆಡಿಎಸ್ ರೇಸ್ ಕೋರ್ಸ್ ಕಚೇರಿ ಖಾಲಿ ಮಾಡಿದಾಗ ತಮ್ಮ ಗೋಡಾನ್ನಲ್ಲಿ ತಾತ್ಕಾಲಿಕ ಕಚೇರಿ ತೆರೆಯಲು ಅವಕಾಶ ಮಾಡಿಕೊಟ್ಟಿದ್ದರು. ರಮೇಶ್ ಗೌಡ ಆಯ್ಕೆ ಬಗ್ಗೆಯೇ ಜೆಡಿಎಸ್ನಲ್ಲಿ ಭಾರಿ ಚರ್ಚೆ ನಡೆದಿತ್ತು.
ರಮೇಶ್ ಗೌಡ ಅವಧಿ 2022ರ ಜೂನ್ 14ರ ತನಕವಿದೆ.
ಪ್ರತಿ ಪಕ್ಷದ ಅಭ್ಯರ್ಥಿಗಳು ಇರಲಿಲ್ಲ
ಕಾಂಗ್ರೆಸ್ ಪಕ್ಷದ ನಜೀರ್ ಅಹ್ಮದ್, ಎಂ.ಸಿ.ವೇಣುಗೋಪಾಲ್ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿ ಎಚ್.ಎಂ.ರಮೇಶ್ ಗೌಡ ಅವರು ಅವಿರೋಧವಾಗಿ ಆಯ್ಕೆಯಾದರು.
ಪ್ರತಿಪಕ್ಷ ಬಿಜೆಪಿ ಚುನಾವಣೆಯಿಂದ ದೂರ ಉಳಿದಿತ್ತು. ಶಾಸಕರ ಕೊರತೆ ಹಿನ್ನಲೆಯಲ್ಲಿ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರಲಿಲ್ಲ.
ಪಕ್ಷೇತರ ಅಭ್ಯರ್ಥಿಯಾಗಿ ಹರಿಶ್ಚಂದ್ರ ಗೌಡ ಮತ್ತು ವೆಂಕಟೇಶ್ವರ ಮಹಾಸ್ವಾಮೀಜಿ ಕಟಕದೊಂಡ ಸಲ್ಲಿಸಿದ್ದ ನಾಮಪತ್ರಗಳು ಸೂಚಕರು ಇಲ್ಲದ ಕಾರಣ ತಿರಸ್ಕಾರವಾಗಿತ್ತು.