ರಾಜ್ಯ ವಿಧಾನ ಮಂಡಲ ಬಜೆಟ್ ಅಧಿವೇಶನ ಮೊಟಕು? ಅಧಿವೇಶನ ಮೊಟಕುಗೊಳಿಸಲು ಕಾರಣ ಏನು?
ಬೆಂಗಳೂರು, ಮಾ. 15: ರಾಜ್ಯದಲ್ಲಿ ಕೊರೊನಾ ಎರಡನೆಯ ಅಲೆಯ ನೆಪದಲ್ಲಿ ವಿಧಾನ ಮಂಡಳ ಅಧಿವೇಶನ ಮೊಟಕುಗೊಳಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿರುವುದನ್ನು ಪರಿಶೀಲನೆ ನಡೆಸಲು ತುರ್ತು ಸಭೆ ಕರೆದಿದ್ದಾರೆ.
ಮಾರ್ಚ್ 4 ರಂದು ಆರಂಭವಾಗಿದ್ದ ರಾಜ್ಯ ಬಜೆಟ್ ಅಧಿವೇಶನದ ಮೊದಲೆರಡು ದಿನಗಳು, 'ಒಂದು ರಾಷ್ಟ್ರ-ಒಂದು ಚುನಾವಣೆ' ಚರ್ಚೆಗೆ ಬಲಿಯಾಗಿತ್ತು. ಒಂದು ರಾಷ್ಟ್ರ-ಒಂದು ಚುನಾವಣೆ ಆರ್ಎಸ್ಎಸ್ ಅಜೆಂಡಾ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಚರ್ಚೆ ನಡೆಯಲು ಬಿಟ್ಟಿರಲಿಲ್ಲ.
24 ಗಂಟೆಗಳಲ್ಲೇ ಭಾರತದಲ್ಲಿ ಭಯ ಹುಟ್ಟಿಸಿದ ಕೊರೊನಾವೈರಸ್
ಆ ಬಳಿಕ ಮಾರ್ಚ್ 8 ರಂದು ರಾಜ್ಯ ಬಜೆಟ್ ಮಂಡನೆಯಾಗಿದೆ. ಬಜೆಟ್ ಮಂಡನೆ ಆಗುತ್ತಿದ್ದಂತೆಯೆ ಪಂಚ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಜೊತೆಗೆ ರಮೇಶ್ ಜಾರಕಿಹೊಳಿ ಅವರಿದ್ದಾರೆ ಎನ್ನಲಾದ 'ಸಿಡಿ' ಬಿಡುಗಡೆಯಾಗಿ ಸಂಚಲವನ್ನುಂಟು ಮಾಡಿದೆ.
ಪಂಚರಾಜ್ಯಗಳ ಚುನಾವಣೆ ಹಿನ್ನೆಲೆ..?
ಇದೀಗ ಬಜೆಟ್ ಮೇಲೆ ಚರ್ಚೆ ನಡೆದು ಧನ ವಿನಿಯೋಗ ವಿಧೇಯಕಕ್ಕೆ ಸಿಎಂ ಯಡಿಯೂರಪ್ಪ ಅವರು ಉಭಯ ಸದನಗಳಲ್ಲಿ ಒಪ್ಪಿಗೆ ಪಡೆಯಬೇಕಿದೆ. ಹೀಗಾಗಿ ಮಾರ್ಚ್ 31ರ ವರೆಗೆ ಬಜೆಟ್ ಅಧಿವೇಶನ ನಡೆಯಬೇಕಾಗಿತ್ತು. ಆದರೆ ಇದೀಗ ಪಂಚ ರಾಜ್ಯಗಳ ಚುನಾವಣೆ ಘೋಷಣೆಯಾಗಿದ್ದು, ರಾಜ್ಯದಲ್ಲಿಯೂ ನಾಲ್ಕು ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ.
ಪಂಚ ರಾಜ್ಯಗಳ ಚುನಾವಣೆ?
ಪಂಚ ರಾಜ್ಯಗಳ ಚುನಾವಣೆಯಲ್ಲಿ ಐದೂ ರಾಜ್ಯಗಳಿಗೆ ರಾಜ್ಯ ಬಿಜೆಪಿ ಶಾಸಕರುಗಳನ್ನು ಚುನಾವಣೆ ಕೆಲಸಕ್ಕೆ ನಿಯೋಜನ ಮಾಡಿದೆ. ಹೀಗಾಗಿ ಬಿಜೆಪಿ ಶಾಸಕರು ಕೇರಳ, ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಚುನಾವಣಾ ಕೆಲಸಕ್ಕೆ ತೆರಳಲಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿ ಆದಷ್ಟು ಬೇಗ ಧನ ವಿನಿಯೋಗ ವಿಧೇಯಕಕ್ಕೆ ಅನುಮೋದನೆ ಪಡೆದುಕೊಂಡು ಅಧಿವೇಶನ ಮೊಟಕು ಗೊಳಿಸಲು ರಾಜ್ಯ ಬಿಜೆಪಿ ಸರ್ಕಾರ ನಿರ್ಧಾರ ಮಾಡಿದೆ ಎಂಬ ಮಾಹಿತಿ ಬಂದಿದೆ.
ವಿಪಕ್ಷಗಳ ಮನವೊಲಿಕೆ ಮಾಡಲು ಸಿಎಂ ಪ್ರಯತ್ನ
ಹೆಚ್ಚುತ್ತಿರುವ ಕೊರೊನಾ ವೈರಸ್ ಕಾರಣಕ್ಕೆ ಈ ವಾರದ ಕೊನೆಯಲ್ಲಿ ಅಧಿವೇಶನ ಅಂತ್ಯಗೊಳಿಸಲು ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ. ಈ ವರ್ಷದ ಬಜೆಟ್ ಮತ್ತು ಧನ ವಿನಿಯೋಗ ವಿಧೇಯಕಕ್ಕೆ ಅನುಮೋದನೆ ಪಡೆದುಕೊಂಡು ಅಧಿವೇಶನವನ್ನು ಮೊಟಕುಗೊಳಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಈ ಸಂಬಂಧ ಪ್ರತಿಪಕ್ಷಗಳ ಮನವೊಲಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ್ ಬೊಮ್ಮಾಯಿ ಮುಂದಾಗಿದ್ದಾರೆ ಎಂಬ ಮಾಹಿತಿಯಿದೆ.
ಈ ವಾರಾಂತ್ಯದಲ್ಲಿ ಅಧಿವೇಶನ ಅಂತ್ಯ?
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿದರುವ ಬಜೆಟ್ ಮೇಲೆ ಇಂದು ಉಭಯ ಸದನಗಳಲ್ಲಿ ಚರ್ಚೆ ಆರಂಭವಾಗಲಿದೆ. ಆದರೂ ಶೀಘ್ರವೇ ಅಧಿವೇಶನ ಮೊಟಕು ಮಾಡಲು ರಾಜ್ಯ ಸರ್ಕಾರ ಪ್ಲಾನ್ ಮಾಡಿದೆ. ಇದಕ್ಕೆ ಪ್ರತಿಪಕ್ಷಗಳು ಸಹಕಾರ ನೀಡಿದಲ್ಲಿ ಈ ವಾರದ ಅಂತ್ಯದಲ್ಲಿ ಅಧಿವೇಶನ ಮುಕ್ತಾಯವಾಗುವುದು ಖಚಿತವಾಗಿದೆ. ಕೋರೋನಾ ಎರಡನೇಯ ಅಲೆಯ ನೆಪದಲ್ಲಿ ಬಜೆಟ್ ಅಧಿವೇಶನ ಬಲಿಯಾಗೋದು ನಿಶ್ಚಿತ ಎಂದು ಹೇಳಲಾಗುತ್ತಿದೆ.
Recommended Video