ಸಿದ್ದರಾಮಯ್ಯನವರ ಅವಧಿಯಲ್ಲಿ ಮೈಸೂರು ದಸರಾ ಉದ್ಘಾಟಿಸಿ ನಿಸಾರ್ ಅಹಮದ್ ಹೇಳಿದ್ದು ಹೀಗೆ..
ನಿತ್ಯೋತ್ಸವದ ಕವಿಯೆಂದೇ ಹೆಸರಾಗಿರುವ ಪ್ರೊ. ಕೆ.ಎಸ್.ನಿಸಾರ್ ಅಹಮದ್, ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಭಾನುವಾರ (ಮೇ 3) ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 84ವರ್ಷ ವಯಸ್ಸಾಗಿತ್ತು.
73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನಿಸಾರ್ ಅಹಮದ್, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ, 2017ರಲ್ಲಿ ಮೈಸೂರು ದಸರಾ ಉದ್ಘಾಟಿಸಿದ್ದರು.
ಕರ್ನಾಟಕದ ಹಿರಿಯ ಕವಿ ಕೆ. ನಿಸಾರ್ ಅಹಮದ್ ವಿಧಿವಶ
ಈ ವೇಳೆ ಭಾಷಣ ಮಾಡಿದ್ದ ನಿಸಾರ್ ಅಹಮದ್, "ಹಜ್ ಮುಸ್ಲಿಮರಿಗೆ, ಕುಂಭಮೇಳ ಹಿಂದೂಗಳಿಗೆ, ಆದರೆ, ಮೈಸೂರು ದಸರಾ, ಎಲ್ಲಾ ಜಾತಿ ಧರ್ಮದವರಿಗೆ" ಎಂದಿದ್ದರು.
"ನನ್ನ ಹಲವು ಕಾಲದ ಮಿತ್ರರೂ ಆಗಿರುವ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೃಪೆಯಿಟ್ಟು ನನಗೆ ಈ ಅವಕಾಶವನ್ನು ಕೊಟ್ಟಿದ್ದಾರೆ. ತಾಯಿ ಚಾಮುಂಡಿಯ ಮುಂದೆ ನಿಂತು ಮಾತನಾಡುವ ನೈತಿಕ ಸ್ಥೈರ್ಯ ನನಗೆ ಇದೆಯೋ ಇಲ್ಲವೋ ಗೊತ್ತಿಲ್ಲ" ಎಂದು ನಿಸಾರ್ ಅಹಮದ್ ಹೇಳಿದ್ದರು.
ಜೋಗದ ಸಿರಿ ಬೆಳಕಿನಲ್ಲಿ ಮರೆಯಾದ ನಿತ್ಯೋತ್ಸವ ಕವಿ
"ವಿಜಯನಗರ ಕಾಲದಿಂದ, ನಾಲ್ಕುನೂರು ವರ್ಷಗಳ ಇತಿಹಾಸವಿರುವ ಈ ಉತ್ಸವವನ್ನು ಉದ್ಘಾಟಿಸಲು ನನಗೆ ಆಹ್ವಾನ ಬಂದಾಗ, ನನಗೆ ಭಯವಾಗಿತ್ತು. ಯಾವುದೋ ಕಾಲದ ಸಂಸ್ಕಾರ ನನ್ನಲ್ಲಿ ಉಳಿದಿದ್ದರಿಂದ, ಈ ಅವಕಾಶ ನನಗೆ ಸಿಕ್ಕಿತು' ಎಂದು ನಿಸಾರ್ ಅಹಮದ್ ಹೇಳಿದ್ದರು.
"ನನ್ನ ಜೀವಮಾನದಲ್ಲಿ ನನಗೆ ಸಿಕ್ಕ ಅತ್ಯಂತ ಸ್ಮರಣೀಯ ದಿನ ಇದಾಗಿದೆ. ತಾಯಿ ಚಾಮುಂಡಿ ದೊಡ್ಡ ಶಕ್ತಿಯವಳು. ಅವಳ ಸನ್ನಿಧಾನದಲ್ಲಿ ನನಗೆ ಸಿಕ್ಕ ಈ ಗೌರವವನ್ನು ಎಂದಿಗೂ ಮರೆಯಲಾರೆ" ಎಂದು ನಿಸಾರ್ ಅಹಮದ್, ಭಾವೋದ್ವೇಗಕ್ಕೊಳಗಾಗಿ ಹೇಳಿದ್ದರು.
"ದಸರಾ ಸರಕಾರೀ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮ. ಇದು ಮುಂದಿನ ದಿನಗಳಲ್ಲಿ ಇನ್ನೂ ಚೆನ್ನಾಗಿ ಬೆಳೆಯಲಿ. ಹಜ್ ನಲ್ಲಿ ಮುಸ್ಲಿಮರು, ಕುಂಭ ಮೇಳದಲ್ಲಿ ಹಿಂದುಗಳು. ಆದರೆ ಮೈಸೂರು ದಸರಾದಲ್ಲಿ ಮಾತ್ರ ಧರ್ಮಗಳ ಮಿತಿಯೇ ಇಲ್ಲದೆ ಎಲ್ಲರೂ ತಾಯಿ ಚಾಮುಂಡಿ ದೇವಿ ಆಶೀರ್ವಾದ ಪಡೆದು ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ" ಎಂದು ನಿಸಾರ್ ಅಹಮದ್ ಹೇಳಿದ್ದರು.