ಡಿ.8ರಂದು ಕರ್ನಾಟಕ ಬಂದ್ ಆಚರಣೆಗೆ ಎಡ ಪಕ್ಷಗಳ ಕರೆ
ಬೆಂಗಳೂರು, ಡಿ. 6: ಕೃಷಿ ಮಸೂದೆ ವಿರೋಧಿಸಿ ವಿವಿಧ ರೈತ ಸಂಘಟನೆಗಳು ಕರೆ ನೀಡಿರುವ ಡಿಸೆಂಬರ್ 8 ರ ಭಾರತ ಬಂದ್ ಭಾಗವಾಗಿ ಕರ್ನಾಟಕದಲ್ಲಿ ಸಂಪೂರ್ಣ ಬಂದ್ ಆಚರಿಸಿ ಯಶಸ್ವಿಗೊಳಿಸುವಂತೆ ಎಡಪಕ್ಷಗಳು ಕರೆ ನೀಡಿವೆ.
ಕೇಂದ್ರ ಸರಕಾರ ರೈತರ ಹಾಗೂ ದೇಶ ವಿರೋಧಿ ಮತ್ತು ಕಾರ್ಪೋರೇಟ್ ಕಂಪನಿ ಪರವಾದ ಕೃಷಿ ಕಾಯ್ದೆಗಳು ಮತ್ತು ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ- 2020 ಮತ್ತು ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ - 2020 ಗಳನ್ನು ಬೇಷರತ್ತಾಗಿ ವಾಪಾಸು ಪಡೆಯುವಂತೆ ಒತ್ತಾಯಿಸಿ, ದೇಶದ 500 ಕ್ಕೂ ಹೆಚ್ಚು ರೈತ ಸಂಘಗಳು ಕಳೆದ ಹದಿನೈದು ದಿನಗಳಿಂದ ದೇಶದಾದ್ಯಂತ ರೈತರು ಹೋರಾಟ ನಡೆಸಿದ್ದಾರೆ.
ಕೃಷಿ ಮಸೂದೆ ವಿರೋಧಿಸಿ ಡಿ.8 ರಂದು ಭಾರತ ಬಂದ್: ಎಡ ಪಕ್ಷಗಳ ಬೆಂಬಲ
ಈ ಚಳವಳಿಯನ್ನು ದೇಶದ ಎಲ್ಲ ಎಡ ಪಕ್ಷಗಳು ಮತ್ತು ವಿರೋಧ ಪಕ್ಷಗಳು ಬೆಂಬಲಿಸಿ ಬೇಗನೇ ರೈತರ ಹಕ್ಕೊತ್ತಾಯಗಳನ್ನು ಪರಿಹರಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿವೆ. ಆದರೆ, ರೈತರ ಹಕ್ಕೊತ್ತಾಯಗಳನ್ನು ಪರಿಗಣಿಸದೇ ಹಠಮಾರಿತನವನ್ನು ತೋರುತ್ತಿರುವ ಕೇಂದ್ರ ಸರಕಾರದ ರೈತ ವಿರೋಧಿ ಹಾಗೂ ಕಾರ್ಪೋರೇಟ್ ಪರವಾದ ನೀತಿಗಳನ್ನು, ರಾಜ್ಯದ ಎಡ ಪಕ್ಷಗಳಾದ ನಾವು ಬಲವಾಗಿ ಖಂಡಿಸುತ್ತೇವೆ. ದೇಶದ ಆಹಾರದ ಭದ್ರತೆ, ಸ್ವಾತಂತ್ರ್ಯ ಹಾಗೂ ಸ್ವಾವಲಂಬನೆ ಮತ್ತು ಸಾರ್ವಭೌಮತೆಗೆ ದಕ್ಕೆ ತರಲಿರುವ ಅವುಗಳನ್ನು ಕೂಡಲೇ ವಾಪಾಸು ಪಡೆಯುವಂತೆ ಮತ್ತೊಮ್ಮೆ ಬಲವಾಗಿ ಒತ್ತಾಯಿಸುತ್ತೇವೆ.
ರೈತ ಸಂಘಗಳು ಇದುವರೆಗೆ ಕೇಂದ್ರ ಸರಕಾರದ ಜೊತೆಗೆ ನಡೆಸಿದ ಮಾತುಕತೆಗಳು ವಿಫಲವಾಗಿರುವುದರಿಂದ, ಸರಕಾರದ ನಿಲುಮೆಯನ್ನು ಬಲವಾಗಿ ಪ್ರತಿರೋಧಿಸಲು 08.12.2020 ರಂದು ಭಾರತ ಬಂದ್ ಗೆ ಕರೆ ನೀಡಿವೆ. ರಾಜ್ಯದ ರೈತ ಹಾಗೂ ಕಾರ್ಮಿಕ ಸಂಘಗಳು ರಾಜ್ಯದಲ್ಲಿ ಅದನ್ನು ಯಶಸ್ವಿಗೊಳಿಸಲು ಮುಂದಾಗಿವೆ.
Breaking News: ಡಿಸೆಂಬರ್ 8ರಂದು ಭಾರತ್ ಬಂದ್ಗೆ ಕರೆ ನೀಡಿದ ರೈತರು
Recommended Video
ಬಂದ್ ಕರೆಯನ್ನು ರಾಜ್ಯದ ಎಡಪಕ್ಷಗಳು ಬೆಂಬಲಿಸುತ್ತವೆ ಮತ್ತು ಇದೊಂದು ದೇಶಪ್ರೇಮಿ ಹೋರಾಟವಾಗಿದ್ದು, ರಾಜ್ಯದ ಜನತೆ, ಎಲ್ಲಾ ಪ್ರಜಾ ಸತ್ತಾತ್ಮಕ ಶಕ್ತಿಗಳು, ಒಟ್ಟಾಗಿ ಭಾಗಿಯಾಗಿ, ಭಾರತ ಬಂದ್ ಭಾಗವಾಗಿ ಕರ್ನಾಟಕ ಬಂದ್ ಯಶಸ್ವಿಗೊಳಿಸಲು ಮನವಿ ಮಾಡುತ್ತವೆ. ಎಡ ಪಕ್ಷಗಳ ಎಲ್ಲಾ ಘಟಕಗಳು ರಾಜ್ಯದಾದ್ಯಂತ ಅದರ ಯಶಸ್ಸಿಗೆ ಕ್ರಮ ವಹಿಸಲು ಕರೆ ನೀಡಿವೆ ಎಂದು ಸಿಪಿಐಎಂ ಕಾರ್ಯದರ್ಶಿ ಬಸವರಾಜ ಹಾಗೂ ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದರು.