ಮುಖ್ಯಮಂತ್ರಿ ಬದಲಾವಣೆ ಉಹಾಪೋಹಕ್ಕೆ ತೆರೆ ಎಳೆದ ಹೈಕಮಾಂಡ್!
ಬೆಂಗಳೂರು ಆಗಸ್ಟ್ 12: "ಕಾಂಗ್ರೆಸ್ನ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ನಡುವೆ ಒಡಕಿದೆ. ಅದನ್ನು ಮುಚ್ಚಿಹಾಕಲು ಕಾಂಗ್ರೆಸ್ನವರು ಮುಖ್ಯಮಂತ್ರಿ ಬಸಲಾವಣೆ ಗಾಳಿ ಹಬ್ಬಿಸಿದ್ದಾರೆ" ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ಶುಕ್ರವಾರ ಈ ಕುರಿತು ನವದೆಹಲಿಯಲ್ಲಿ ಮಾತನಾಡಿರುವ ಅವರು, "ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಎಂಬುದು ಕೇವಲ ಕಾಂಗ್ರೆಸ್ ಷಡ್ಯಂತ್ರ, ಹೊರತು ಆ ವಿಚಾರ ಸತ್ಯವಲ್ಲ" ಎನ್ನುವ ಮೂಲಕ ಊಹಾಪೋಹಗಳಿಗೆ ಸ್ಪಷ್ಟವಾಗಿ ಉತ್ತರ ನೀಡಿದ್ದಾರೆ.
ವಕ್ಫ್ ಬೋರ್ಡ್ಗೆ ಪರೇಶ್ ಮೆಸ್ತಾ ಕೊಲೆ ಆರೋಪಿ ಉಪಾಧ್ಯಕ್ಷ?: ಸಿದ್ದರಾಮಯ್ಯ ಆಕ್ರೋಶ
"ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಮುಖ್ಯಮಂತ್ರಿ ಆದ ಮೇಲೆ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ರೈತರ ಪರವಾಗಿ, ಯುವ ಸಮೂಹದ ಪರವಾಗಿ ಅನೇಕ ಅಭಿವೃದ್ಧಿ ಯೋಜನೆಗಳು ಘೋಷಣೆ ಆಗಿವೆ" ಎಂದರು.
"ಘೋಷಣೆಯಾದ ಯೋಜನೆಗಳಲ್ಲಿ ಸಾಕಷ್ಟು ಯೋಜನೆ ಅನುಷ್ಠಾನಕ್ಕೂ ಬಂದಿವೆ. ತಾವೊಬ್ಬರು ಕಾಮನ್ ಮ್ಯಾನ್ ಸಿಎಂ ರೀತಿಯಲ್ಲಿ ಕೆಲಸ ಮಾಡಿದ್ದಾರೆ" ಎಂದು ಬಸವರಾಜ ಬೊಮ್ಮಾಯಿ ಕಾರ್ಯವನ್ನು ಸಿಂಗ್ ಶ್ಲಾಘಿಸಿದರು.
ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ; ಹಾಲಿ ಮುಖ್ಯಮಂತ್ರಿಗಳನ್ನು ಬದಲಿಸುವುದಿಲ್ಲ. ಈ ಬಗ್ಗೆ ಮಾತನಾಡುವವರಿಗೆ ಉತ್ತರ ಎಂಬಂತೆ, "ಮುಂದಿನ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸಲಿದ್ದೇವೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಕ್ಷೇತ್ರಗಳಲ್ಲಿ ಗೆದ್ದು ಪೂರ್ಣ ಪ್ರಮಾಣದಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ" ಎಂದು ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
"ಕಾಂಗ್ರೆಸ್ ರಾಜಕೀಯ ಪ್ರೇರಿತವಾಗಿ, ದುರುದ್ದೇಶದಿಂದ ಗೊಂದಲ ಹುಟ್ಟು ಹಾಕುತ್ತಿದೆ. ಇದನ್ನು ಸೂಕ್ಷ್ಮವಾಗಿ ಪರಿಗಣಿಸಿದರೆ ಮುಖ್ಯಮಂತ್ರಿ ಬದಲಾವಣೆ ವಿಚಾರ ಕಾಂಗ್ರೆಸ್ ಷಡ್ಯಂತ್ರ ಎನ್ನುವುದು ತಿಳಿಯುತ್ತದೆ. ಕಾಂಗ್ರೆಸ್ ನಾಯಕರೇ ಇಲ್ಲದ ಪಕ್ಷವಾಗಿದೆ. ನಾಯಕತ್ವ ಬದಲಾವಣೆ ವಿಚಾರ ಸತ್ಯಕ್ಕೆ ದೂರವಾದದ್ದು" ಎಂದು ಅರುಣ್ ಸಿಂಗ್ ಸ್ಪಷ್ಟಪಡಿಸಿದರು.