'ಯಡಿಯೂರಪ್ಪ ಬದಲಾವಣೆ ಬೇಡಿಕೆ': ಅರುಣ್ ಸಿಂಗ್ಗೆ ಎಚ್ ವಿಶ್ವನಾಥ್ ಹೇಳಿದ್ದೇನು?
ಬೆಂಗಳೂರು, ಜೂ. 17: ನಾಯಕತ್ವ ಬದಲಾವಣೆ ಇಲ್ಲ ಎನ್ನುತ್ತಲೇ ಮಹತ್ವದ ಬೆಳವಣಿಗೆಗಳು ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿವೆ. ಬೆಂಗಳೂರಿಗೆ ಬಂದಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಎಲ್ಲರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ನಾಯಕತ್ವ ಬದಲಾವಣೆ ಅಸಾಧ್ಯದ ಮಾತು ಎಂದು ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿದೆ. ಆದರೆ ರಾಜಕೀಯದಲ್ಲಿ 'ಏನೂ ಬೇಕಾದರೂ' ಆಗಬಹುದು ಎಂಬ ಮಾತಿದೆ. ಹಾಗೇ ನೋಡುವುದಾದರೆ ರಾಜಕೀಯದಲ್ಲಿ ಯಾವುದೂ ಕೂಡ ಅಸಂಭವವಲ್ಲ ಎಂದೂ ವಿಶ್ಲೇಷಣೆಯನ್ನೂ ಮಾಡಲಾಗುತ್ತಿದೆ.
ಹೀಗಾಗಿ ಅರುಣ್ ಸಿಂಗ್ ಅವರು ಸಿಎಂ ಯಡಿಯೂರಪ್ಪ ಅವರ ಕುರಿತು ಪಡೆಯುತ್ತಿರುವ 'ಅಭಿಪ್ರಾಯ ಸಂಗ್ರಹ'ಕ್ಕೆ ಅತಿ ಹೆಚ್ಚು ಮಹತ್ವ ಬಂದಿದೆ. ನಿನ್ನೆ ಸಿಎಂ ಯಡಿಯೂರಪ್ಪ ಸಂಪುಟದ ಸಚಿವರೊಂದಿಗೆ ಚರ್ಚೆ ನಡೆಸಿದ್ದ ಅರುಣ್ ಸಿಂಗ್ ಅವರು ಇಂದು (ಜೂ.17) ಮತ್ತು ನಾಳೆ (ಜೂ.18) ಶಾಸಕರು, ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅರುಣ್ ಸಿಂಗ್ ಅವರಿಗೆ ತಮ್ಮ ಅಭಿಪ್ರಾಯ ತಿಳಿಸಿರುವ ಮಾಜಿ ಸಚಿವ, ಬಿಜೆಪಿ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ಕುರಿತು ಸ್ಪೋಟಕ ಹೇಳಿಕೆ ನೀಡಿದ್ದಾರೆ.
"ಬದಲಾವಣೆ" ಕುರಿತು ಸ್ಪೋಟಕ "ಹೇಳಿಕೆ"
ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲು ರಾಜ್ಯ ಬಿಜೆಪಿಯಲ್ಲಿ ಒತ್ತಡಗಳು ಹೆಚ್ಚಾಗಿವೆ. ಹೀಗಾಗಿ ಸಿಎಂ ಯಡಿಯೂರಪ್ಪ ಅವರ ಕುರಿತು ಅಭಿಪ್ರಾಯ ಸಂಗ್ರಹಿಸಲು ಹೈಕಮಾಂಡ್ ತೀರ್ಮಾನಿಸಿದ್ದು, ಶಾಸಕರ ಅಭಿಪ್ರಾಯ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲು ನಿರ್ಣಯಿಸಿದೆ ಎಂಬ ಮಾಹಿತಿಯಿದೆ. ಹೀಗಾಗಿ ಅರುಣ್ ಸಿಂಗ್ ಅವರು ಎಲ್ಲ ಶಾಸಕರಿಂದ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಅರುಣ್ ಸಿಂಗ್ ಅವರ ಎದುರು ಖಡಕ್ ಆಗಿ ತಮ್ಮ ಅಭಿಪ್ರಾಯ ಹೇಳಿರುವ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್ ಅವರು, ಮಾಧ್ಯಮಗಳಿಗೆ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಯಡಿಯೂರಪ್ಪ ಬದಲಾವಣೆಗೆ...!
ಮಹತ್ವದ ಬೆಳವಣಿಗೆಯಲ್ಲಿ 'ಮುಖ್ಯಮಂತ್ರಿ ಬದಲಾವಣೆ'ಗೆ ವಿಶ್ವನಾಥ್ ಬೇಡಿಕೆ ಇಟ್ಟಿದ್ದಾರೆ. ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯ ತಿಳಿಸಿರುವ ಅವರು, ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಮಾರ್ಗದರ್ಶಕರಾಗಿರಲಿ. ಲಿಂಗಾಯತ ಸಮುದಾಯದ ಬಿಜೆಪಿ ನಾಯಕರಿಗೆ ಅವಕಾಶ ಕೊಡಲಿ. ಯಡಿಯೂರಪ್ಪ ಅವರೇ ಮುಂದೆ ನಿಂತು ಒಂದು ಉತ್ತಮ ತಂಡವನ್ನು ಕಟ್ಟಿಕೊಡಲಿ. ಆದರೆ ಅವರು ಮಾರ್ಗದರ್ಶಕರಾಗಿರಲಿ, ಅವರ ಜಾಗಕ್ಕೆ ಮತ್ತೊಬ್ಬ ನಾಯಕರು ಬರಲಿ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗಲಿ ಎಂದು ಅರುಣ್ ಸಿಂಗ್ ಅವರಿಗೆ ತಿಳಿಸಿದ್ದಾಗಿ ಮಾಧ್ಯಮಗಳಿಗೆ ಕೊಟ್ಟಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಲ್ಲಿಯೂ ಕುಟುಂಬ ರಾಜಕಾರಣ!
ಇಷ್ಟೇ ಅಲ್ಲ ಬಿಜೆಪಿಯ ಸದ್ಯದ ಪರಿಸ್ಥಿತಿಯನ್ನು ವಿಶ್ವನಾಥ್ ಅವರು ವಿವರಿಸಿ, "ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ್ದೇನೆ. ರಾಜ್ಯದ ರಾಜಕಾರಣದ ಬೆಳವಣಿಗೆಗಳನ್ನು ಅವರಿಗೆ ತಿಳಿಸಿದ್ದೇನೆ. ನಾನು ಯಾವುದೇ ಬಣಕ್ಕೆ ಸೇರಿದವನಲ್ಲ, ನಾನೊಬ್ಬ ಪಕ್ಷದ ಎಂಎಲ್ಸಿ ಹಾಗೂ ಕಾರ್ಯಕರ್ತ ಅಷ್ಟೇ" ಎಂದಿದ್ದಾರೆ.
"ನಾನು ಯಾರ ವಿರೋಧಿಯೂ ಅಲ್ಲ. ಹೀಗಾಗಿ ನಾನು ಹೇಳಿದ ಮಾತನ್ನು ಅರುಣ್ ಸಿಂಗ್ ಗಂಭೀರವಾಗಿ ಕೇಳಿದ್ದಾರೆ. ಈ ಹಿಂದೆ ನಾನು ಜೆಡಿಎಸ್ ಅಧ್ಯಕ್ಷನಾಗಿಯೂ ಕೆಲಸ ಮಾಡಿದ್ದವನು. ಅದಕ್ಕೆ ರಾಜೀನಾಮೆ ಕೊಟ್ಟಾಗ ಹಲವು ವಿಚಾರಗಳಿದ್ದವು. ಅವನ್ನು ವಿರೋಧಿಸಿಯೇ ಇಲ್ಲಿಗೆ ಬಂದಿದ್ದೇವೆ. ಆದರೆ ಇಲ್ಲಿಯೂ ಕೂಡ ಕುಟುಂಬ ರಾಜಕಾರಣವೇ ಎದ್ದು ಕಾಣುತ್ತಿದ" ಎಂದು ಬಿಜೆಪಿಯ ಸದ್ಯದ ಪರಿಸ್ಥಿತಿಯನ್ನು ವಿಶ್ವನಾಥ್ ಅವರು ವಿವರಿಸಿದ್ದಾರೆ.
Recommended Video
ಜನರಿಗೆ ಯಡಿಯೂರಪ್ಪ ಬಗ್ಗೆ ಗೌರವವಿದೆ
ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹೊರತಾಗಿಯೂ ರಾಜ್ಯದ ಜನರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಅಪಾರ ಗೌರವವಿದೆ. ಹೀಗಾಗಿ ಮುಖ್ಯಮಂತ್ರಿಯಾಗಿ ಆಗಿ ಅವರು ಮಾಡಿದ ಕೆಲಸದ ಬಗ್ಗೆ ನನಗೂ ಗೌರವವಿದೆ. ಆದರೆ ಸರ್ಕಾರ ಹೇಗೆ ನಡೆಯುತ್ತಿದೆ ಎಂಬುದನ್ನು ಗಮನಿಸಬೇಕು. ಅದನ್ನು ಗಮನಿಸಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಉಸ್ತವಾರಿ ಅರುಣ್ ಸಿಂಗ್ ಮೂಲಕ ಎಚ್. ವಿಶ್ವನಾಥ್ ಅವರು ಬಿಜೆಪಿ ಹೈಕಮಾಂಡ್ಗೆ ಮನವಿ ಮಾಡಿಕೊಂಡಿದ್ದಾರೆ.
ಇದರೊಂದಿಗೆ ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದರೂ ಈ ಅಭಿಪ್ರಾಯ ಸಂಗ್ರಹ ಮಾಡುತ್ತಿರುವುದೇಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಬರೀ ಭಿನ್ನಮತ ಶಮನ ಮಾಡುವುದಿದ್ದರೆ ಸಾಮೂಹಿಕ ಸಭೆ ಮಾಡಲಾಗುತ್ತಿತ್ತು. ಆದರೆ ಒಬ್ಬೊಬ್ಬರಾಗಿ ಎಲ್ಲರ ಅಭಿಪ್ರಾಯವನ್ನು ಸಂಗ್ರಹ ಮಾಡುತ್ತಿರುವುದರ ಹಿಂದೆ ಬಿಜೆಪಿ ಹೈಕಮಾಂಡ್ ನಿಗೂಢ ನಡೆಯಿದೆ ಎಂಬ ಚರ್ಚೆಗಳು ರಾಜ್ಯದಲ್ಲಿ ನಡದಿವೆ!