ನಾಯಕತ್ವ ಬದಲಾವಣೆ: ಸಿಎಂ ಯಡಿಯೂರಪ್ಪ ಸೈಲೆಂಟ್, ಮಠಾಧಿಪತಿಗಳು ವೈಲೆಂಟ್
ನಾಡಿನ ಧಾರ್ಮಿಕ ಪೀಠದ ಗುರುಗಳಿಗೆ ರಾಜಕೀಯದಲ್ಲಿ ಏನು ಕೆಲಸ? ಸಂವಿಧಾನದ ಪ್ರಕಾರ ಚುನಾಯಿತ ಪ್ರತಿನಿಧಿಗಳು ಯಾರು ಶಾಸಕಾಂಗ ಪಕ್ಷದ ನಾಯಕರಾಗ ಬೇಕು ಎನ್ನುವುದನ್ನು ನಿರ್ಧರಿಸುವುದು ನಮ್ಮ ನೆಲದ ಕಾನೂನು.
ಆದರೂ, ಸರಕಾರ ಯಾರದ್ದೇ ಇರಲಿ, ಯಾವ ಸಮುದಾಯದ ನಾಯಕನೇ ಇರಲಿ, ಮಠಾಧಿಪತಿಗಳ ಹಸ್ತಕ್ಷೇಪ ಹಿಂದಿನಿಂದಲೂ ಇದೆ. ಇದಕ್ಕೆ ಪ್ರತ್ಯಕ್ಷವಾಗಿ ಯಾವ ಪಕ್ಷದ ನಾಯಕರೂ ಪ್ರತಿರೋಧವನ್ನು ಒಡ್ಡುವುದಿಲ್ಲ.
ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ!
ಅದರಂತೆಯೇ, ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರು ಕೆಳಗಿಳಿಯಲಿದ್ದಾರೆ ಎನ್ನುವ ಅನಧಿಕೃತ ಸುದ್ದಿ ವೇಗ ಪಡೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ಮತ್ತೆ ಸ್ವಾಮೀಜಿಗಳು ಮುನ್ನಲೆಗೆ ಬಂದಿದ್ದಾರೆ.
ಪೀಠದಿಂದ ಕೂತೇ ಯಡಿಯೂರಪ್ಪನವರು ಬದಲಾಗಬಾರದು ಎಂದು ಹೇಳುತ್ತಿದ್ದ ಸ್ವಾಮೀಜಿಗಳು, ಮಂಗಳವಾರದಂದು (ಜುಲೈ 20) ಗುಂಪಾಗಿ ಬಂದು ಯಡಿಯೂರಪ್ಪನವರನ್ನು ಭೇಟಿಯಾಗಿ ಬಂದಿದ್ದಾರೆ. ಸಿಎಂ ಸ್ಥಾನದಿಂದ ಕೆಳಗಿಳಿಯಬಾರದು ಎಂದು ಒತ್ತಾಯಿಸಿದ್ದಾರೆ. ಆದರೆ, ಇದೆಲ್ಲಾ ಯಡಿಯೂರಪ್ಪನವರ ಕೈಯಲ್ಲಿ ಎಲ್ಲಿದೆ?
ಜುಲೈ 26ಕ್ಕೆ ಬಿಎಸ್ವೈ ಸರಕಾರಕ್ಕೆ 2ವರ್ಷ: ವಿದಾಯವೋ, ವಿಜೃಂಭಣೆಯೋ
ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿಯವರ ನೇತೃತ್ವ
ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಂಗಳೂರಿನ ಕಾವೇರಿ ನಿವಾಸದಲ್ಲಿ 35 ಲಿಂಗಾಯತ ಪೀಠದ ಸ್ವಾಮೀಜಿಗಳು ಯಡಿಯೂರಪ್ಪನವರನ್ನು ಭೇಟಿಯಾಗಿ, ಸಿಎಂ ಸ್ಥಾನದಿಂದ ಇಳಿಯಬಾರದು ಎಂದಿದ್ದಾರೆ. ಹೈಕಮಾಂಡ್ ಸೂಚಿಸಿದಂತೆ ನಡೆದುಕೊಳ್ಳಬೇಕಾಗುತ್ತದೆ ಎನ್ನುವ ಉತ್ತರ ಮುಖ್ಯಮಂತ್ರಿಗಳಿಂದ ಬಂದಿದೆ.
ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು, ರಂಭಾಪುರಿ ಶ್ರೀಗಳು
ಇದಲ್ಲದೇ, ಇಂತಹ ಸಂದರ್ಭದಲ್ಲಿ ಯಡಿಯೂರಪ್ಪನವರನ್ನು ಕೆಳಗಿಳಿಯಲು ಸೂಚಿಸಬಾರದು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಮತ್ತು ಮಾದಾರ ಚೆನ್ನಯ್ಯ ಪೀಠದ ಬಸವಮೂರ್ತಿ ಸ್ವಾಮೀಜಿಗಳು, ರಂಭಾಪುರಿ ಶ್ರೀಗಳು ಮುಂತಾದವರೂ ಒತ್ತಾಯಿಸಿದ್ದಾರೆ. ಇಷ್ಟಕ್ಕೇ ಮುಗಿದಿಲ್ಲ..
ಯಡಿಯೂರಪ್ಪನವರನ್ನು ಇಳಿಸಿದರೆ ಬಿಜೆಪಿ ಸರ್ವನಾಶವಾಗುತ್ತದೆ
ಯಡಿಯೂರಪ್ಪನವರನ್ನು ಇಳಿಸಿದರೆ ಬಿಜೆಪಿ ಸರ್ವನಾಶವಾಗುತ್ತದೆ ಎಂದು ಹೇಳಿದ್ದಾರೆ. ಹಿಂದೆ, ಬಿಎಸ್ವೈ ಕೆಜೆಪಿ ಕಟ್ಟಿದಾಗ ಪಕ್ಷದ ಸ್ಥಿತಿ ಏನಾಯಿತು ಎನ್ನುವುದನ್ನು ಒಮ್ಮೆ ನೆನೆಪಿಸಿಕೊಳ್ಳಿ ಎಂದು ಹೈಕಮಾಂಡಿಗೆ ಎಚ್ಚರಿಕೆ ನೀಡಿದ್ದಾರೆ. ಆ ಮೂಲಕ, ಬಿಜೆಪಿಗಿಂತ ಯಡಿಯೂರಪ್ಪನವರೇ ದೊಡ್ಡವರು ಎಂದು ಸಾರಿದ್ದಾರೆ.
ಯಡಿಯೂರಪ್ಪ ಎಂಡ್ ಟೀಂ ಸೈಲೆಂಟ್, ಧರ್ಮಗುರುಗಳು ಮಾತ್ರ ವೈಲೆಂಟ್
ಸಮುದಾಯದ ನಾಯಕ ಎಂದು ಯಡಿಯೂರಪ್ಪನವರನ್ನು ಬೆಂಬಲಿಸುತ್ತಿಲ್ಲ ಎನ್ನುವ ಹೇಳಿಕೆಯನ್ನು ಲಿಂಗಾಯತ ಪೀಠಾಧಿಪತಿಗಳು ಹೇಳುತ್ತಿದ್ದರೂ, ಸುಮಾರು ಐನೂರಕ್ಕೂ ಹೆಚ್ಚು ಧರ್ಮಗುರುಗಳು ಯಡಿಯೂರಪ್ಪನವರ ಪರ ನಿರ್ಣಯ ಆಂಗೀಕರಿಸುವ ಚಿಂತನೆ ನಡೆಸುತ್ತಿದ್ದಾರೆ. ಹಾಗಾಗಿ, ಸದ್ಯದ ಮಟ್ಟಿಗೆ ಯಡಿಯೂರಪ್ಪ ಎಂಡ್ ಟೀಂ ಸೈಲೆಂಟಾಗಿದ್ದರೂ, ಧರ್ಮಗುರುಗಳು ಮಾತ್ರ ವೈಲೆಂಟಾಗಿದ್ದಾರೆ.