ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ; ಯಾರು, ಏನು ಹೇಳಿದರು?
ಬೆಂಗಳೂರು, ಜುಲೈ 29: ಕರ್ನಾಟಕದಲ್ಲಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಬೇಕು ಎಂಬ ಚರ್ಚೆಗಳು ನಡೆದಿವೆ ಎಂಬ ವರದಿಗಳು ಕೇಳಿ ಬರುತ್ತಿವೆ.
Recommended Video
77 ವರ್ಷದ ಬಿ. ಎಸ್. ಯಡಿಯೂರಪ್ಪ ಕೋವಿಡ್-19 ನಂತಹ ಕಠಿಣ ಪರಿಸ್ಥಿತಿಯಲ್ಲಿಯೂ ರಾಜ್ಯದಲ್ಲಿ ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ನಾಯಕತ್ವ ಬದಲಾವಣೆ ಸುದ್ದಿ ಹುಟ್ಟಿದ್ದು ಎಲ್ಲಿಂದ ಎಂಬುದು ಇನ್ನು ನಿಗೂಢ. ನಾಯಕತ್ವ ಬದಲಾವಣೆ ನಿಜವಾದರೆ ಎಲ್ಲರೂ ಒಪ್ಪುವ ಪರ್ಯಾಯ ನಾಯಕ ಯಾರು? ಎಂಬುದಕ್ಕೆ ಉತ್ತರವಿಲ್ಲ.
ಲಕ್ಷ್ಮಣ ಸವದಿ ದೆಹಲಿ ಭೇಟಿ ಬಗ್ಗೆ ಚರ್ಚೆ; ಸ್ಪಷ್ಟನೆ ಕೊಟ್ಟ ಡಿಸಿಎಂ
ಸರ್ಕಾರದ ಒಂದು ವರ್ಷದ ಕಾರ್ಯಕ್ರಮಕ್ಕೆ ಗೈರಾಗಿದ್ದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ದೆಹಲಿಯಲ್ಲಿದ್ದರು. ವಿವಿಧ ಕೇಂದ್ರ ಸಚಿವರನ್ನು ಅವರು ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಈ ಬಗ್ಗೆ ಅವರು ಫೇಸ್ಬುಕ್ನಲ್ಲಿ ಸ್ಪಷ್ಟನೆಯನ್ನೂ ನೀಡಿದ್ದಾರೆ.
ಸರ್ಕಾರಕ್ಕೆ ಒಂದು ವರ್ಷ; ಶಾಸಕರಿಗೆ ಕೊಡುಗೆ ಕೊಟ್ಟ ಬಿಎಸ್ವೈ
ಕರ್ನಾಟಕದಲ್ಲಿ ಆಪರೇಶನ್ ಕಮಲದಂತಹ ಅಕ್ರಮ ಮಾರ್ಗದಲ್ಲಿ ಅಧಿಕಾರ ಹಿಡಿದ ಬಿಜೆಪಿ ಇದೀಗ ಜನರಿಗೆ ಅತ್ಯಧಿಕ ಸಹಾಯ ಅಗತ್ಯವಿರುವ ಹೊತ್ತಿನಲ್ಲಿ ಮತ್ತೆ ಆಂತರಿಕ ಕಚ್ಚಾಟದಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಸಹ ಆರೋಪಿಸಿದೆ. ನಾಯಕತ್ವ ಬದಲಾವಣೆ ಬಗ್ಗೆ ಯಾರು ಏನು ಹೇಳಿದರು?.
ರಾಜ್ಯ ಸರ್ಕಾರಕ್ಕೆ ಒಂದು ವರ್ಷ; ಯಾರಿಗೂ ಇಲ್ಲ ಹರ್ಷ!
ಜಗದೀಶ್ ಶೆಟ್ಟರ್ ಹೇಳಿಕೆ
"ಮುಖ್ಯಮಂತ್ರಿ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ. ಸವದಿ ಈ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿಲ್ಲ. ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ" ಎಂದು ಕೈಗಾರಿಕಾ ಸಚಿವ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಸೀಬು ಇದ್ದರೆ ಸಿಎಂ ಆಗಲಿ
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಈ ಕುರಿತು ಮಾತನಾಡಿದ್ದು, "ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ನಸೀಬು ಇದ್ದರೆ ಮುಖ್ಯಮಂತ್ರಿಯಾಗಲಿ" ಎಂದು ಹೇಳಿಕೆ ನೀಡಿದ್ದಾರೆ.
ಈ ಅಭಿಪ್ರಾಯ ನಾನು ವ್ಯಕ್ತಪಡಿಸಿಲ್ಲ
"ಮುಂದಿನ ಮುಖ್ಯಮಂತ್ರಿ ಎಂದು ನನ್ನನ್ನು ಅಥಣಿಯ ಕೆಲವು ಅಭಿಮಾನಿಗಳು ಬಿಂಬಿಸಿರುವುದಕ್ಕೂ ನನಗೂ ಸಂಬಂಧವಿಲ್ಲ. ಈ ಅಭಿಪ್ರಾಯ ನಾನು ವ್ಯಕ್ತಪಡಿಸಿಲ್ಲ" ಎಂದು ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದಾರೆ.
ಎಚ್. ಸಿ. ಮಹದೇವಪ್ಪ ಟೀಕೆ
ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎಚ್. ಸಿ. ಮಹದೇವಪ್ಪ, "ಕರ್ನಾಟಕದಲ್ಲಿ ಆಪರೇಶನ್ ಕಮಲದಂತಹ ಅಕ್ರಮ ಮಾರ್ಗದಲ್ಲಿ ಅಧಿಕಾರ ಹಿಡಿದ ಬಿಜೆಪಿ ಪಕ್ಷ ಇದೀಗ ಜನರಿಗೆ ಅತ್ಯಧಿಕ ಸಹಾಯ ಅಗತ್ಯವಿರುವ ಹೊತ್ತಿನಲ್ಲಿ ಮತ್ತೆ ಆಂತರಿಕ ಕಚ್ಚಾಟದಲ್ಲಿ ತೊಡಗಿದೆ" ಎಂದು ಟೀಕಿಸಿದ್ದಾರೆ.