ರಾಜೀನಾಮೆಗೆ ಸಿದ್ಧನಿದ್ದೆ, ನಾಯಕರು ಬೇಡ ಅಂದರು: ಸಚಿವ ಪುಟ್ಟರಾಜು
ಬೆಂಗಳೂರು, ಮೇ 27: ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋತರೆ ರಾಜಕೀಯದಿಂದ ನಿವೃತ್ತರಾಗುವುದಾಗಿ ಹೇಳಿದ್ದ ಸಚಿವ ಸಿ.ಎಸ್. ಪುಟ್ಟರಾಜು ವರಸೆ ಬದಲಿಸಿದ್ದಾರೆ. ಆದರೆ, ತಮ್ಮ ನಿರ್ಧಾರಕ್ಕೆ ಈಗಲೂ ಬದ್ಧ ಎಂದು ಹೇಳಿದ್ದಾರೆ.
ರಾಜೀನಾಮೆ ನೀಡಲು ಬದ್ಧನಾಗಿದ್ದೆ. ಆದರೆ, ಪಕ್ಷದ ನಾಯಕರು ಅದಕ್ಕೆ ಸಹಮತ ಸೂಚಿಸುತ್ತಿಲ್ಲ. ಹೀಗಾಗಿ ರಾಜೀನಾಮೆ ನೀಡಿಲ್ಲ ಎಂದು ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ತಿಳಿಸಿದ್ದಾರೆ.
ಮಂಡ್ಯದಲ್ಲಿ ಚುನಾವಣೆ ಮುಗಿದ ಬಳಿಕ ಶಿವಮೊಗ್ಗದಲ್ಲಿ ಪ್ರಚಾರ ನಡೆಸಲು ತೆರಳಿದ್ದ ಸಚಿವ ಪುಟ್ಟರಾಜು ಅವರು ಸುದ್ದಿಗೋಷ್ಠಿಯಲ್ಲಿ, 'ನಿಖಿಲ್ ಕುಮಾರಸ್ವಾಮಿ ಅವರು ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸುತ್ತಾರೆ. ಅಕಸ್ಮಾತ್ ನಿಖಿಲ್ ಕುಮಾರಸ್ವಾಮಿ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ' ಎಂದು ಅವರು ಹೇಳಿಕೆ ನೀಡಿದ್ದರು.
ಮಂಡ್ಯ ಫಲಿತಾಂಶ: ರಾಜಕೀಯ ಸನ್ಯಾಸತ್ವದ ಶಪಥ ಮಾಡಿದ ಜೆಡಿಎಸ್ ಸಚಿವ
ಸುಮಲತಾ ಅವರು ಸಿನಿಮಾದಲ್ಲಿ ಹೇಗೆ ನಟನೆ ಮಾಡಿದ್ದಾರೋ ಇಲ್ಲವೋ ನನಗೆ ತಿಳಿದಿಲ್ಲ. ಈ ಚುನಾವಣೆಯಲ್ಲಿ ಉತ್ತಮ ನಟನೆ ಮಾಡಿದ್ದಾರೆ. ಅವರ ನಟನೆಗೆ ಮಂಡ್ಯದ ಜನರು ಮರಳಾಗುವುದಿಲ್ಲ. ಚಲುವರಾಯಸ್ವಾಮಿ ಯಾರ ಪರವಾಗಿ ಕೆಲಸ ಮಾಡಿದ್ದಾರೋ ಅವರೆಲ್ಲರೂ ಸೋತಿದ್ದಾರೆ. ಅದೇ ರೀತಿ ಸುಮಲತಾ ಕೂಡ ಸೋಲು ಅನುಭವಿಸಲಿದ್ದಾರೆ ಎಂದು ಹೇಳಿದ್ದರು.
ಈ ನಡುವೆ ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡ ಎನ್. ಚಲುವರಾಯಸ್ವಾಮಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ, ಮಂಡ್ಯದ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಹರಿಹಾಯ್ದಿದ್ದಾರೆ.
ರಾಜೀನಾಮೆಗೆ ಈಗಲೂ ಬದ್ಧ
ನಿಖಿಲ್ ಕುಮಾರಸ್ವಾಮಿ ಅವರ ಸೋಲಿನ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದೆ. ಈಗಲೂ ನನ್ನ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಇಂತಹ ನಿರ್ಧಾರ ಸರಿಯಲ್ಲ ಎಂದು ನಾಯಕರು ಹೇಳಿದ್ದಾರೆ. ಎರಡೂ ಪಕ್ಷಗಳ ನಾಯಕರು ರಾಜೀನಾಮೆ ನಿರ್ಧಾರ ಬೇಡ ಎಂದಿದ್ದಾರೆ. ಅದಕ್ಕಾಗಿ ಸುಮ್ಮನಾಗಿದ್ದೇನೆ ಎಂದು ಪುಟ್ಟರಾಜು ಹೇಳಿದ್ದಾರೆ.
ದೇವೇಗೌಡರ ಕುಟುಂಬದ ವಿರುದ್ಧ ಸೇಡು ತೀರಿಸಿಕೊಂಡ ಸಿದ್ದರಾಮಯ್ಯ?
ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ
ಶೀಘ್ರದಲ್ಲಿಯೇ ರಾಜ್ಯ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ನಡೆಯಲಿದೆ. ಅಗತ್ಯಬಿದ್ದರೆ ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧನಿದ್ದೇನೆ ಎಂದು ಪುಟ್ಟರಾಜು ಅವರು, ಸೋಮವಾರ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರನ್ನು ಭೇಟಿ ಮಾಡಿದ ಬಳಿಕ ತಿಳಿಸಿದ್ದಾರೆ. ಸಂಪುಟ ವಿಸ್ತರಣೆಯಾದರೆ ಅತೃಪ್ತರಿಗೆ ಮಣೆ ಹಾಕಲು ಸಿ.ಎಸ್. ಪುಟ್ಟರಾಜು ಸೇರಿದಂತೆ ಪಕ್ಷದ ಕೆಲವು ನಿಷ್ಠಾವಂತರನ್ನು ಸಂಪುಟದಿಂದ ಕೈಬಿಡಲು ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ರಾಜೀನಾಮೆ ಕೇಳೊಲ್ಲ
ಮೇ 23ರಂದು ಉತ್ತರ ಕೊಡ್ತೀನಿ ಅಂದಿದ್ದರು. ಈಗ ಕೊಟ್ಟಿದ್ದಾರಾ? ಅವರ ರಾಜೀನಾಮೆಯನ್ನು ನಾನು ಕೇಳುವುದಿಲ್ಲ ಎಂದು ಚಲುವರಾಯಸ್ವಾಮಿ ಅವರು ರಾಜಕೀಯ ಸನ್ಯಾಸ್ವದ ಮಾತನಾಡಿದ್ದ ಸಿ.ಎಸ್. ಪುಟ್ಟರಾಜು ವಿರುದ್ಧ ಮಂಡ್ಯದಲ್ಲಿ ಹರಿಹಾಯ್ದರು.
ಸಂಪುಟದಿಂದ ಹೊರ ಹಾಕ್ಲಿ, ಏನು ಚಿಂತೆಯಿಲ್ಲ: ಡಿಸಿ ತಮ್ಮಣ್ಣ
ಎಚ್ಡಿಕೆಯನ್ನು ತಿರಸ್ಕರಿಸಿದ್ದಾರೆ
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಜನರು ತಿರಸ್ಕರಿಸಿದ್ದಾರೆ. ಜನರು ಕೊಟ್ಟ ಪ್ರೀತಿಯನ್ನು ಅವರು ಉಳಿಸಿಕೊಳ್ಳಲಿಲ್ಲ. ಜನರ ನಿರೀಕ್ಷೆಯಂತೆ ಕೆಲಸ ಮಾಡಿದ್ದರೆ ಹೀಗಾಗುತ್ತಿರಲಿಲ್ಲ. ಅವರು ತಗ್ಗಿ ಬಗ್ಗಿ ನಡೆಯದೆ ಇದ್ದರೆ ಕಷ್ಟ ಎಂದು ಚಲುವರಾಯಸ್ವಾಮಿ ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ
ಚುನಾವಣೆ ಮುಗಿದ ಬಳಿಕವಾದರೂ ದ್ವೇಷ ರಾಜಕಾರಣ ಕಡಿಮೆ ಆಗುತ್ತದೆ ಎಂದು ಭಾವಿಸಿದ್ದೆವು. ಆದರೆ ಕಡಿಮೆ ಆಗಿಲ್ಲ. ಕಾಂಗ್ರೆಸ್ಅನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ಆಗುತ್ತದೆ. ಹೀಗೆ ಮುಂದುವರಿದರೆ ಸಹಿಸಲು ಆಗುವುದಿಲ್ಲ. ಬೀದಿಗೆ ಬರಬೇಕಾಗುತ್ತದೆ. ಪಕ್ಷದ ವರಿಷ್ಠರು ಸುಮ್ಮನಿರಿ ಎನ್ನುತ್ತಿದ್ದಾರೆ. ಜೆಡಿಎಸ್ನವರು ನಡವಳಿಕೆ ತಿದ್ದಿಕೊಳ್ಳಬೇಕು ಎಂದು ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಉಚ್ಚಾಟಿಸಿದವರನ್ನು ಮರಳಿ ಸೇರಿಸಿ
ಸುಮಲತಾ ಅಂಬರೀಷ್ ಅವರ ಪರ ಪ್ರಚಾರ ಮಾಡಿದ ಆರೋಪದಲ್ಲಿ ಉಚ್ಚಾಟನೆ ಮಾಡಲಾಗಿರುವ ಕಾಂಗ್ರೆಸ್ ಮುಖಂಡರನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳಬೇಕು. ಈ ಬಗ್ಗೆ ವರಿಷ್ಠರ ಜೊತೆ ಮಾತುಕತೆ ನಡೆಸಿದ್ದೇನೆ. ಜೆಡಿಎಸ್ನವರೇ ಮೈತ್ರಿ ಬೇಡ ಎಂದು ಹೇಳುತ್ತಿದ್ದಾರೆ. ನಾನು ಇತಿಮಿತಿಯಲ್ಲಿ ಮಾತನಾಡಿದರೆ ಸತ್ಯ ಹೊರಗೆ ಬರಲು ಸಾಧ್ಯವಿಲ್ಲ. ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ. ಕಾಂಗ್ರೆಸ್ ನಾಯಕರಿಗೆ ಎಲ್ಲವೂ ತಿಳಿದಿದೆ. ಚುನಾವಣೆ ಇದ್ದ ಕಾರಣಕ್ಕೆ ಸುಮ್ಮನಿದ್ದರು ಎಂದು ಹೇಳಿದರು.