ಖರ್ಗೆ ಮಂಡಿಸಿದ್ದು ಬೀಳ್ಕೊಡುಗೆ ಬಜೆಟ್ ಅಂತೆ!
ಬೆಂಗಳೂರು, ಫೆ.13: 19 ವರ್ಷಗಳ ಬಳಿಕ ಬುಧವಾರ ಕರ್ನಾಟಕ ಮೂಲದವರಿಗೆ ರೈಲ್ವೆ ಬಜೆಟ್ ಮಂಡಿಸುವ ಅವಕಾಶ ದೊರಕಿತ್ತು. ಲೋಕಸಭೆ ಚುನಾವಣೆಯಲ್ಲಿ ಗಮನದಲ್ಲಿಟ್ಟು ಕೊಂಡು ತೆಲಂಗಾಣಾ ಗಲಾಟೆ ನಡುವೆ ಸದನದಲ್ಲಿ ಮಲ್ಲಿಕಾರ್ಜುನ ಖರ್ಗೆ 15 ನಿಮಿಷದಲ್ಲಿ ಬಜೆಟ್ ಭಾಷಣ ಓದಿ ಮುಗಿಸಿದರು. ಖರ್ಗೆ ಮಂಡಿಸಿದ ಬಜೆಟ್ ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪ್ರಯಾಣದರ, ಸರಕು ಸಾಗಣೆ ದರ ಹೆಚ್ಚಿಸಿದೆ ಮಲ್ಲಿಕಾರ್ಜುನ ಖರ್ಗೆ ಉತ್ತಮ ಬಜೆಟ್ ಮಂಡಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ಅನ್ನು ಶ್ಲಾಘಿಸಿದ್ದಾರೆ. ಕರ್ನಾಟಕದಮೇಲೆ ಕೇಂದ್ರ ಸರ್ಕಾರ ಮತ್ತೆ ಮಲತಾಯಿ ಧೋರಣೆ ಮುಂದುವರೆಸಿದೆ ಎಂದು ವಿಧಾನಸಭೆ ಪ್ರತಿಪಕ್ಷನಾಯಕ ಜಗದೀಶ್ ಶೆಟ್ಟರ್ ಬಜೆಟ್ ಅನ್ನು ಟೀಕಿಸಿದ್ದಾರೆ. [ರೈಲ್ವೆ ಬಜೆಟ್ ಕರ್ನಾಟಕ್ಕೆ ಸಿಕ್ಕಿದ್ದೇನು]
ರಾಜ್ಯದ ಜನರಿಗೆ ಮಲ್ಲಿಕಾರ್ಜುನ ಖರ್ಗೆ ನಿರಾಸೆ ಉಂಟುಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಟೀಕಿಸಿದ್ದರೆ, ಇದು ಬಿಳ್ಕೋಡುಗೆ ಬಜೆಟ್ ಎಂದು ಅನಂತ್ ಕುಮಾರ್ ಕುಟುಕಿದ್ದಾರೆ. ಬೀದರ್ ಸಂಸದ ಧರ್ಮಸಿಂಗ್ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದ್ದಾರೆ. ಕರ್ನಾಟಕದ ರಾಜಕೀಯ ನಾಯಕರ ಪ್ರತಿಕ್ರಿಯೆಗಳು ಇಲ್ಲಿವೆ.
ಬೆಳವಣಿಗೆಗೆ ಪೂರಕವಾದ ಬಜೆಟ್
ರೈಲ್ವೆ ಬಜೆಟ್ ಮಂಡಿಸಿದ ಮಲ್ಲಿಕಾರ್ಜುನ ಖರ್ಗೆ ಪ್ರಯಾಣಿಕರ ಹಾಗೂ ಸರಕು ಸಾಗಣೆ ದರವನ್ನು ಹೆಚ್ಚು ಮಾಡದೆ ಸಾಮಾನ್ಯ ಜನರಿಗೆ ಉತ್ತಮ ಕೊಡುಗೆ ನೀಡಿದ್ದಾರೆ. ಕರ್ನಾಟಕ ರಾಜ್ಯಕ್ಕೂ ಬಜೆಟ್ ನಲ್ಲಿ ಯೋಜನೆಗಳು ಲಭಿಸಿದ್ದು, ಯಶವಂತಪುರ-ಕಟ್ರಾ, ಬೆಂಗಳೂರು-ಪಟನಾ ಸೇರಿದಂತೆ ಹಲವು ಹೊಸ ರೈಲುಗಳನ್ನು ಒದಗಿಸಿದ್ದಾರೆ. ರಾಜ್ಯಕ್ಕೆ 5 ಹೊಸ ಮಾರ್ಗದ ಸಮೀಕ್ಷೆಗೂ ಅವಕಾಶ ನೀಡಿದ್ದಾರೆ. ತಮ್ಮ ಚೊಚ್ಚಲ ಬಜೆಟ್ ನಲ್ಲಿ ಖರ್ಗೆ ರಾಜ್ಯದ ಮತ್ತು ದೇಶದ ಹಿತ ಕಾಪಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದ ಜನರಿಗೆ ಭ್ರಮನಿರಸನ
ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಮ್ಮ ಬಜೆಟ್ ಮೂಲಕ ಕರ್ನಾಟಕದ ಜನರಿಗೆ ಕೊಡುಗೆ ನೀಡಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕದ ವಿರುದ್ಧ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಮುಂದುವರೆದಿದ್ದು, ಕೇವಲ ಮೂರು ಹೊಸ ರೈಲುಗಳನ್ನು ಮಾತ್ರ ನೀಡಲಾಗಿದೆ. ನೆನೆಗುದಿಗೆಗೆ ಬಿದ್ದಿರುವ ಯೋಜನೆಗಳನ್ನು ಕೈಗೆತ್ತಿಕೊಳ್ಳದೆ ನಿರಾಸೆ ಉಂಟು ಮಾಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬಿಳ್ಕೋಡುಗೆ ಬಜೆಟ್
ಮಲ್ಲಿಕಾರ್ಜುನ ಖರ್ಗೆ ಮಂಡಿಸಿರುವ ರೈಲ್ವೆ ಬಜೆಟ್ ಬಿಳ್ಕೋಡುಗೆ ಬಜೆಟ್, ಇದು ಕೇವಲ ಕಾಗದದ ಮೇಲೆ ಮಾತ್ರ ಉಳಿಯಲಿದೆ. ಮುಂದಿನ ಎರಡು ತಿಂಗಳಿನಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಕ್ರಾಂತಿಕಾರಿ ಬಜೆಟ್ ಮಂಡಿಸುತ್ತೇವೆ ಎಂದು ಸಂಸದ ಅನಂತ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ರೈಲುಗಳು ಗುಲ್ಬರ್ಗಕ್ಕೆ ಮುಖಮಾಡಿವೆ
ಕರ್ನಾಟಕಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ರೈಲುಗಳು ಗುಲ್ಬರ್ಗಕ್ಕೆ ಮುಖಮಾಡಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಕುಟುಕಿದ್ದಾರೆ. ರಾಜ್ಯಕ್ಕೆ ಅನುಕೂಲವಾಗುವ ರೈಲು ಬಜೆಟ್ ಮಂಡಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಅದನ್ನು ಖರ್ಗೆ ಹುಸಿಗೊಳಿಸಿದ್ದಾರೆ. ನಿರೀಕ್ಷೆ ಇಟ್ಟುಕೊಂಡವರಿಗೆ ನಿರಾಸೆ ಆಗಿದೆ ಎಂದು ಜೋಶಿ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ
ಮಲ್ಲಿಕಾರ್ಜುನ ಖರ್ಗೆ ಚೊಚ್ಚಲ ಬಜೆಟ್ ಮಂಡನೆಯಲ್ಲಿಯೇ ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ ಎಂದು ಬೀದರ್ ಸಂಸದ ಧರ್ಮಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. 40 ವರ್ಷಗಳಿಂದ ರಾಜ್ಯದ ಜನರ ಜೊತೆ ಒಡನಾಟಕ್ಕೆ ಪ್ರತಿಯಾಗಿ ಅಗತ್ಯ ಕೊಡುಗೆ ನೀಡಿದ್ದಾರೆ. ರಾಜ್ಯಕ್ಕೆ ಹಲವಾರು ಉತ್ತಮ ಯೋಜನೆಗಳು ಲಭಿಸಿವೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಬೆಳವಣಿಗೆಗೆ ಪೂರಕ ಬಜೆಟ್
ರೈಲ್ವೆ ಬಜೆಟ್ ಮಂಡಿಸಿದ ಎರಡನೇ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ರಾಜ್ಯಕ್ಕೆ ಮಾರ್ಗ ಪರಿವರ್ತನೆ ಸೇರಿ ಹಲವು ಕೊಡುಗೆ ನೀಡಿದ್ದಾರೆ. ರೈಲ್ವೆ ಪ್ರಕ್ರಿಯೆ ಗಣಕೀಕರಣ, ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ನೀಡಿದ್ದು, ರಾಜ್ಯದ ಬೆಳವಣಿಗೆಗೆ ಪೂರಕವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.