ದಿನೇಶ್ ಗುಂಡೂರಾವ್ ಗೆ ಹಿನ್ನಡೆ: ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹೆಸರು ಫೈನಲ್?
ಕಳೆದ ಸುಮಾರು ಎಂಟು ವರ್ಷಗಳಿಂದ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ, ರಾಜ್ಯದ ಉಪಮುಖ್ಯಮಂತ್ರಿಯೂ ಆಗಿರುವ ಡಾ. ಪರಮೇಶ್ವರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯಿಂದ ರಿಲೀವ್ ಆಗುವ ದಿನ ಹತ್ತಿರಬರುತ್ತಿದೆ.
ಎರಡೆರಡು ಜವಾಬ್ದಾರಿಯನ್ನು ನಿರ್ವಹಿಸಲು ಕಷ್ಟವಾಗುತ್ತಿದೆ, ಆದಷ್ಟು ಬೇಗ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸೂಕ್ತವರನ್ನು ಆಯ್ಕೆಮಾಡಿ ಎಂದು ಪರಮೇಶ್ವರ್ ಹೈಕಮಾಂಡಿಗೆ ಒತ್ತಡ ಹೇರುತ್ತಲೇ ಬರುತ್ತಿದ್ದರು. ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರುವ ನೆಪದಲ್ಲಿ ದೆಹಲಿಗೆ ಹೋಗಿದ್ದ ಪರಮೇಶ್ವರ್ ಈ ಸಂಬಂಧ ಮತ್ತೆ ಮನವಿ ಮಾಡಿಬಂದಿದ್ದರು ಎನ್ನುವ ಸುದ್ದಿಯಿದೆ.
ಕಾಂಗ್ರೆಸ್ ಮಡಿಲಲ್ಲಿರುವ ಟೈಮ್ ಬಾಂಬ್ ಸ್ಫೋಟವಾದರೆ...!
ಸಚಿವ ಸಂಪುಟ ವಿಸ್ತರಣೆಯ ವೇಳೆ ಅವಕಾಶ ಸಿಗದ ಹಿರಿಯ ಮತ್ತು ನಿಷ್ಟಾವಂತ ಮುಖಂಡರ ಹೆಸರು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಕೇಳಿ ಬಂದಿತ್ತು. ಎರಡು ದಿನಗಳ ಕೆಳಗೆ, ಹಿರಿಯ ಕಾಂಗ್ರೆಸ್ಸಿಗರೆಲ್ಲಾ ಒಂದು ಕಡೆ ಸೇರಿ ನಮ್ಮಲ್ಲಿ ಯಾರಿಗಾದರೂ ಹುದ್ದೆ ಸಿಗಲಿ ಎಂದು ಒಕ್ಕೂರಲಿನ ನಿರ್ಧಾರಕ್ಕೆ ಬಂದು, ಹೈಕಮಾಂಡಿಗೆ ಸಂದೇಶ ರವಾನಿಸಿದ್ದರು.
ಹಿರಿಯ ಮುಖಂಡರ ನಿರ್ಧಾರಕ್ಕೆ ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಗಾಂಧಿನಗರ ಕ್ಷೇತ್ರದಿಂದ ಸತತವಾಗಿ ಗೆದ್ದು ಬರುತ್ತಿರುವ ದಿನೇಶ್ ಗುಂಡೂರಾವ್ ಅವರಿಗೆ ಕಳೆದ ಸಿದ್ದರಾಮಯ್ಯನವರ ಸರಕಾರದಲ್ಲಿ ಮೊದಲು ಆಹಾರ ಮಂತ್ರಿಯಾಗಿ ಕೆಲಸ ಮಾಡಿ, ನಂತರ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆ ನೀಡಲಾಗಿತ್ತು.
ಕೆಪಿಸಿಸಿ ಅಧ್ಯಕ್ಷರ ನೇಮಕ : ರಾಹುಲ್ ಗಾಂಧಿ ಕೊಟ್ಟ ಸೂಚನೆ ಏನು?
ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಸೂಕ್ತವಾದ ಮತ್ತು ಎಲ್ಲರೂ ಒಪ್ಪುವ ನಾಯಕನನ್ನು ಕೆಪಿಸಿಸಿ ಅಧ್ಯಕ್ಷ ಗಾದಿಗೆ ನೇಮಿಸಬೇಕಾದ ಅನಿವಾರ್ಯತೆಯಲ್ಲಿ ಹೈಕಮಾಂಡ್ ಇದೆ. ಉತ್ತರ ಕರ್ನಾಟಕದ ಮೂಲದ ಹಿರಿಯ ಮುಖಂಡರೊಬ್ಬರು, ಈ ಹುದ್ದೆಗೆ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನುವ ಮಾಹಿತಿಯಿದೆ. ಮುಂದೆ ಓದಿ...
ತೇಲಿ ಬಂದ ಹೆಸರು ಒಂದೆರಡಲ್ಲ, ಐದಾರು
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ತೇಲಿ ಬಂದ ಹೆಸರು ಒಂದೆರಡಲ್ಲ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಎಚ್ ಕೆ ಪಾಟೀಲ್, ಕೆ ಎಚ್ ಮುನಿಯಪ್ಪ, ಎಂ ಬಿ ಪಾಟೀಲ್, ಬಿ ಕೆ ಹರಿಪ್ರಸಾದ್ ಹೆಸರು ಚಾಲ್ತಿಯಲ್ಲಿತ್ತು. ನಾನೂ ಆ ಹುದ್ದೆಯ ಆಕಾಂಕ್ಷಿಯೆಂದು ಟಿ ಬಿ ಜಯಚಂದ್ರ, ಸತೀಶ್ ಜಾರಕಿಹೊಳಿ ಕೂಡಾ ಹೇಳಿಕೆ ನೀಡಿದ್ದರು. ಹೈಕಮಾಂಡ್ ತಮಗಿರುವ ಎಲ್ಲಾ ಆಯ್ಕೆಯನ್ನು ಅಳೆದುತೂಗಿ, ಹೆಸರು ಬಹುತೇಕ ಅಂತಿಮಗೊಳಿಸಿದೆ ಎನ್ನುವ ಮಾಹಿತಿಯಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ಅಥವಾ ದಿನೇಶ್?
ರಂಪರಾಮಾಯಣ ಮಾಡಿದ್ದ ಎಂ ಬಿ ಪಾಟೀಲ್
ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿ, ಸಿಗದೇ ಇದ್ದಾಗ ರಂಪರಾಮಾಯಣ ಮಾಡಿದ್ದ ಎಂ ಬಿ ಪಾಟೀಲ್ ಅಥವಾ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಇವರಲ್ಲಿ ಒಬ್ಬರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಫೈನಲ್ ಆಗುವ ಸಾಧ್ಯತೆಯಿತ್ತು. ಆದರೆ, ಹಿರಿಯ ಮುಖಂಡರು ನಮ್ಮಲ್ಲಿ ಒಬ್ಬಗರಿಗೆ ಆ ಹುದ್ದೆ ನೀಡಬೇಕೆಂದು ಪಟ್ಟು ಹಿಡಿದಿದ್ದರಿಂದ, ಕೊನೆಯ ಗಳಿಗೆಯಲ್ಲಿ ಬೇರೆಯವರ ಹೆಸರನ್ನು ಅಂತಿಮಗೊಳಿಸಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಎಚ್ ಕೆ ಪಾಟೀಲ್ ಹೆಸರು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಅಂತಿಮ?
ಕೊನೆಯ ಕ್ಷಣದ ಬದಲಾವಣೆ ಹೊರತಾಗಿ, ಉತ್ತರ ಕರ್ನಾಟಕದ ಪ್ರಭಾವಿ ಮುಖಂಡ, ನಿಷ್ಟಾವಂತ ಎಚ್ ಕೆ ಪಾಟೀಲ್ ಹೆಸರು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಅಂತಿಮವಾಗಿದೆ ಎನ್ನುವ ಮಾಹಿತಿಯಿದೆ. ಜೂನ್ ಮಾಸಾಂತ್ಯದೊಳಗೆ ಇವರ ಹೆಸರನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ. ಎಲ್ಲರ ಜೊತೆ ಉತ್ತಮ ಒಡನಾಟ ಹೊಂದಿರುವ ಪಾಟೀಲ್ ಸಾಹೇಬ್ರು ಸೂಕ್ತ ಎಂದು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ ಎನ್ನುವ ಬಹುತೇಕ ಖಚಿತ ಸುದ್ದಿ ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿದೆ.
ಅಸಮತೋಲನ ನಿವಾರಿಸುವ ಕೆಲಸಕ್ಕೆ ಮುಂದಾದ ಕಾಂಗ್ರೆಸ್ ಹೈಕಮಾಂಡ್
ಉತ್ತರ ಕರ್ನಾಟಕ ಭಾಗದ ಮುಖಂಡರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡಿ, ಅಸಮತೋಲನ ನಿವಾರಿಸುವ ಕೆಲಸಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುಂದಾದಂತೆ ಕಾಣುತ್ತಿದೆ. ಅಧ್ಯಕ್ಷ ಹುದ್ದೆಯ ತೀವ್ರ ಆಕಾಂಕ್ಷಿಗಳಾಗಿದ್ದ ಎಂ ಬಿ ಪಾಟೀಲ್ ಮತ್ತು ದಿನೇಶ್ ಗುಂಡೂರಾವ್ ಅವರಿಗೆ ಎಐಸಿಸಿ ವಲಯದಲ್ಲಿ ಸೂಕ್ತ ಹುದ್ದೆ ನೀಡಿ, ಅವರನ್ನು ಸಮಾಧಾನ ಪಡಿಸುವ ಕೆಲಸಕ್ಕೆ ಕೆ ಸಿ ವೇಣುಗೋಪಾಲ್ ಮುಂದಾಗುವ ಸಾಧ್ಯತೆಯಿದೆ.
ದಿನೇಶ್ ಗೆ ಹಿನ್ನಡೆ : ಹಿರಿಯ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷಗಿರಿ?
ಗದಗ ಮೂಲದ ಎಚ್ ಕೆ ಪಾಟೀಲ್ ಯಾವುದೇ ಬಣದ ಜೊತೆಗೆ ಗುರುತಿಸಿಕೊಳ್ಲದೇ, ಎಲ್ಲರಲ್ಲೂ ಉತ್ತಮ ಬಾಂಧವ್ಯ ಇಟ್ಟುಕೊಂಡವರು. ಜೊತೆಗೆ, ಈಗಿನ ಸಮ್ಮಿಶ್ರ ಸರಕಾರದಲ್ಲೂ ಎಲ್ಲರ ಜೊತೆ ಒಡನಾಟ ಇಟ್ಟುಕೊಂಡಿರುವ ಪಾಟೀಲ್, ಕಾಂಗ್ರೆಸ್ಸಿನ ನಿಷ್ಟಾವಂತ ಮುಖಂಡರು. ಇನ್ನೊಂದು ವರ್ಷದಲ್ಲಿ ಚುನಾವಣೆ ಎದುರಿಸಬೇಕಾಗಿರುವುದರಿಂದ, ಎಚ್ ಕೆ ಪಾಟೀಲ್ ಅವರೇ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸೂಕ್ತ ಎನ್ನುವ ನಿರ್ಧಾರಕ್ಕೆ ರಾಹುಲ್ ಗಾಂಧಿ ಬಂದಿದ್ದಾರೆ ಎನ್ನುವ ಸುದ್ದಿಯಿದೆ.