ವಕೀಲ ಜಗದೀಶ್ ಬಿಡುಗಡೆ ದಿನ ಸಂಭ್ರಮಾಚರಣೆಗೆ ಅಭಿಮಾನಿಗಳ ತಯಾರಿ
ಬೆಂಗಳೂರು, ಫೆ. 17: 'ವಕೀಲಸಾಬ್' ಜಗದೀಶ್ ಬಿಡುಗಡೆ ಮೇಲೆ ಸುಮ್ಮನಿರಲ್ಲ. 'ಚನ್ನಣ್ಣ ಉಸಾರಣ್ಣ.. ಬನ್ನಿ ಜಗದೀಶ್ ಬಂಧನದಿಂದ ಬಿಡಿಸೋಕೆ ಹೋರಾಟ ಮಾಡೋಣ'. ಭ್ರಷ್ಟಾಚಾರದ ವಿರುದ್ಧದ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ. ಲಾಯರ್ ಜಗದೀಶ್ ಜೈಲಿನಿಂದ ಬಿಡುಗಡೆಯಾದ ದಿನ ಸಂಭ್ರಮಾಚರಣೆ ನಡೆಯಲಿದೆ! ಜಗದೀಶ್ ಇಲ್ಲದೇ ನಮ್ಮ ಗುಂಪು ನಿರ್ಗತಿಕವಾಗಿದೆ..! ಇದು ವಕೀಲ ಜಗದೀಶ್ ಬೆಂಬಲಿಸಿ ಬಂದಿರುವ ಅಸಂಖ್ಯ ಸಂದೇಶಗಳ ಸ್ಯಾಂಪಲ್.
ಕೋರ್ಟ್ ಆವರಣದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಕೆ.ಎನ್.ಜಗದೀಶ್ ಅವರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ಜಗದೀಶ್ ಅವರ ಬೆಂಬಲಕ್ಕೆ ನಿಂತ ಸಮುದಾಯ ಸಾಮಾಜಿಕ ಜಾಲ ತಾಣದಲ್ಲಿ ಅವರನ್ನು ಬೆಂಬಲಿಸಿ ಸಾರ್ವಜನಿಕರು ಸಾಕಷ್ಟು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ವಕೀಲ ಜಗದೀಶ್ ಬಂಧನಕ್ಕೆ ರಾಜ್ಯದಲ್ಲೆಡೆ ವ್ಯಾಪಕ ಟೀಕೆ
ವಕೀಲ ಜಗದೀಶ್ ಅವರ ಬಂಧನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ವಕೀಲ ಸಮುದಾಯದಲ್ಲೂ ಸಹ ಅವರ ಬಗ್ಗೆ ಭಿನ್ನ ಅಭಿಪ್ರಾಯಗಳು ಹೊರ ಬರುತ್ತಿವೆ. ವಕೀಲ ಜಗದೀಶ್ ಅವರು ಬಳಸುವ ಕೆಟ್ಟ ಮಾತುಗಳನ್ನು ಯಾರೂ ಸಹಿಸಲ್ಲ. ಆದರೆ, ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ವಕೀಲ ಜಗದೀಶ ಅವರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿರುವುದು ವಕೀಲರ ಸಂಘದಲ್ಲಿಯೇ ಭಿನ್ನಾಭಿಪ್ರಾಯಗಳಿಗೆ ಎಡೆ ಮಾಡಿಕೊಟ್ಟಿದೆ.
ಒಂದು ವರ್ಗ, ವಕೀಲ ಜಗದೀಶ್ ವಕೀಲರಾಗಿ ವಕಾಲತು ಹಾಕಬೇಕಿತ್ತು. ವಾದ ಮಂಡನೆ ಮಾಡಬೇಕಿತ್ತು. ಅದನ್ನು ಬಿಟ್ಟು ಹೀರೋ ಆಗಲು ಸಾರ್ವಜನಿಕರನ್ನು ಕೋರ್ಟ್ಗೆ ಆಹ್ವಾನಿಸುತ್ತಾರೆ. ವಾಸ್ತವದಲ್ಲಿ ಅವರು ರವಿ ಡಿ. ಚನ್ನಣ್ಣನವರ್ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಿಸಿಲ್ಲ. ರವಿ ಚನ್ನಣ್ಣನವರ್ ಮಾಧ್ಯಮಗಳ ಮೇಲೆ ತಂದಿರುವ ತಡೆಯಾಜ್ಞೆ ಪ್ರಕರಣದಲ್ಲಿ ವಕಾಲತು ಹಾಕಲು ಜಗದೀಶ್ ಬಂದಿದ್ದರು. ಜನರ ಮುಂದೆ ನನ್ನ ಬಳಿ 500 ಪುಟ ದಾಖಲೆಗಳು ಇವೆ ಎಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸಿದ್ದರು. ಅವರೇ ಹೇಳುವಂತೆ ಜಗದೀಶ್ ಮೇಲೆ ಹಲ್ಲೆ ನಡೆಯದಂತೆ ಪೊಲೀಸರು ರಕ್ಷಣೆ ಮಾಡಿದರು ಎಂದು ಹೇಳಿಕೊಂಡಿದ್ದಾರೆ.
ವಕೀಲ ಜಗದೀಶ್ ಪುತ್ರನ ಮೇಲೆ ಕೋರ್ಟ್ ಆವರಣದಲ್ಲಿ ಹಲ್ಲೆ ಆರೋಪ
ಇನ್ನೊಂದಡೆ ಪೊಲೀಸ್ ಆಯುಕ್ತರನ್ನು ಮತ್ತು ಡಿಜಿಪಿಯವರನ್ನು ಬಾಯಿಗೆ ಬಂದಂಗೆ ಮಾತನಾಡ್ತಾರೆ. ಅವರು ಈವರೆಗೂ ಹೋರಾಟ ನಡೆಸಿರುವ ಒಂದು ಪ್ರಕರಣ ತಾರ್ಕಿಕ ಅಂತ್ಯಗೊಳಿಸಿರುವುದನ್ನು ತೋರಿಸಲಿ ಎಂದು ಯುವ ವಕೀಲ, ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ. ಈ ಕುರಿತು ಒನ್ಇಂಡಿಯಾ ಕನ್ನಡ ಲೈವ್ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಮಂದಿಟ್ಟಿದ್ದಾರೆ.
ಜಗದೀಶ್ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಯಾರ ವಿರುದ್ಧವೇ ಹೋರಾಟ ಮಾಡಲಿ. ಒಬ್ಬ ವಕೀಲರಾಗಿ ಅವರು ಆಡುವ ಭಾಷೆ ಇಡೀ ವಕೀಲ ಸಮುದಾಯ ತಲೆ ತಗ್ಗಿಸುವಂತಾಗಿದೆ. ಅಮ್ಮ, ಅಕ್ಕ ಪದ ಬಳಕೆ ಮಾಡುತ್ತಾರೆ. ಯಾವ ಗಂಡಸು ತಾನೆ ತನ್ನ ತಾಯಿ ಬಗ್ಗೆ ಮಾತನಾಡಿದರೆ ಸುಮ್ಮನಿರುತ್ತಾನೆ. ಜೈಲಿನಿಂದ ಬಿಡುಗಡೆಯಾದ ಬಳಿಕ ನಿಜವಾಗಿಯೂ ಜಗದೀಶ್ ಬಳಿ ದಾಖಲೆಗಳು ಇದ್ದರೆ ಭ್ರಷ್ಟಾಚಾರ ವಿರುದ್ಧ ಹೋರಾಡಲಿ. ಎಲ್ಲಾ ವಕೀಲರು ಬೆಂಬಲಿಸುತ್ತಾರೆ. ಆದರೆ, ಸುಮ್ಮನೆ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಆಗಬಾರದು ಎಂದು ವಕೀಲ ನಾರಾಯಣಸ್ವಾಮಿ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ವಕೀಲ ಜಗದೀಶ್ ಇದೇ ನಾರಾಯಣಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
ವಕೀಲ ಜಗದೀಶ್ ಕೆಟ್ಟ ಪದ ಬಳಸುವುದನ್ನು ಯಾರೂ ಒಪ್ಪಲ್ಲ. ಹಾಗಂತ ಆತನ ಮೇಲೆ ಕೊಲೆಯತ್ನ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ಆತ ಯಾವ ಯಾರಿಗೆ ಚಾಕುವಿನಿಂದ ಇರಿದಿದ್ದಾನೆ. ಪೊಲೀಸರು ಷಡ್ಯಂತ್ರ ಮಾಡಿ ವಕೀಲರ ನಡುವೆ ಭಿನ್ನಾಭಿಪ್ರಾಯ ಮೂಡಿಸಿ ವಕೀಲ ಜಗದೀಶ್ ಅವರನ್ನು ಬಂಧಿಸಿದ್ದಾರೆ. ಅವರ ಮೇಲೆ ಕೊಲೆಯತ್ನ ಪ್ರಕರಣ ದಾಖಲಿಸಿದ್ದು ಸೂಕ್ತವಲ್ಲ ಎಂಬ ವಾದವನ್ನು ಬೆಂಗಳೂರು ವಕೀಲರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಎ.ಪಿ. ರಂಗನಾಥ್ ಹೇಳಿಕೊಂಡಿದ್ದಾರೆ. ಈ ಭಿನ್ನ ಹೇಳಿಕೆಗಳು ಇದೀಗ ವಕೀಲರ ಸಂಘದಲ್ಲಿಯೇ ಭಿನ್ನಾಭಿಪ್ರಾಯಗಳಿಗೆ ಎಡೆ ಮಾಡಿಕೊಟ್ಟಿದೆ.
ಸಾಮಾಜಿಕ ಜಾಲ ತಾಣಗಳ ಸ್ಥಿತಿ: ಇನ್ನು ಸಾಮಾಜಿಕ ಜಾಲ ತಾಣದಲ್ಲಿ ವಕೀಲ ಜಗದೀಶ್ ಅವರಿಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ವಕೀಲ ಜಗದೀಶ್ ಸುಮ್ಮನಿರಲ್ಲ. ಬಂದ ಮೇಲೆ ಅವರ ಶಕ್ತಿ ತೋರಿಸುತ್ತಾರೆ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ನಾವು ಕರ್ನಾಟಕದವರು ಕೈಯಲ್ಲಾದ ನೆರವು ಕೊಡ್ತೇವೆ. ಭ್ರಷ್ಟಾಚಾರ ವಿರುದ್ಧ ನಿಮ್ಮ ಹೋರಾಟ ಮುಂದುವರೆಸಿ ಎಂದು ಸಲಹೆ ನೀಡಿದ್ದಾರೆ. ವಕೀಲ ಜಗದೀಶ್ ಅವರ ಫೇಸ್ ಬುಕ್ ಪೇಜ್ ನಿಷ್ಕ್ರಿಯಗೊಳಿಸಿರುವ ಕ್ರಮಕ್ಕೂ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಸಭ್ಯತೆಯ ಮುಖವಾಡ ಧರಿಸಿ ಲೂಟಿಕೋರರನ್ನು ಬೆಂಬಲಿಸುವ ಹೀನಾಯ ಬದುಕಿಗಿಂತ ಅವರನ್ನು ಅಸಭ್ಯವಾಗಿ ನಿಂದಿಸುವ ಧೈರ್ಯವಂತರನ್ನು ಬೆಂಬಲಿಸುವುದು ಸೂಕ್ತ ಅಲ್ಲವೇ ಎಂಬ ಅಭಿಪ್ರಾಯಗಳು ಹೊರ ಬಿದ್ದಿವೆ. ಗಾಯಗೊಂಡ ಸಿಂಹದ ಉಸಿರು ಅದರ ಘರ್ಜನೆಗಿಂತ ಅಪಾಯಕಾರಿ, ಕುರಿಯಾಗಿ ಬದುಕುವುದಕ್ಕಿಂತ ಒಂಟಿ ಸಿಂಹವಾಗಿರುವುದು ಉತ್ತಮ ಹೀಗೆ ಜಗದೀಶ್ ಬೆಂಬಲಿತ ಹೇಳಿಕೆಗಳು ಸಾಮಾಜಿಕ ಜಾಲ ತಾಣದಲ್ಲಿ ತುಂಬಿ ತುಳುಕುತ್ತಿವೆ.
ಜಗದೀಶ್ ಜಾಮೀನು ಅರ್ಜಿ ಶುಕ್ರವಾರ ವಿಚಾರಣೆ: ಇನ್ನು ಕೋರ್ಟ್ ಆವರಣದಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಜಗದೀಶ್ ಜಾಮೀನು ಅರ್ಜಿ ವಿಚಾರಣೆ ಶುಕ್ರವಾರ ಅಥವಾ ಶನಿವಾರ ನಡೆಯಲಿದೆ. ವಾರಂತ್ಯಕ್ಕೆ ಬಿಡುಗಡೆಯಾಗಲಿದ್ದಾರೆ ಎಂಬ ಮಾಹಿತಿಯನ್ನು ಅವರ ಬೆಂಬಲಿಗರು ಜಗದೀಶ್ ಫೇಸ್ ಬುಕ್ ಅಭಿಮಾನಿಗಳ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ನನ್ನ ಹೋರಾಟ ನಿಲ್ಲಿಸುತ್ತೇನೆ ಎಂದು ಹೇಳಿಕೆ ನೀಡಿರುವ ಜಗದೀಶ್ ನಿಜವಾಗಿಯೂ ಮೌನಕ್ಕೆ ಶರಣಾಗುತ್ತಾರಾ? ಅಥವಾ ಮತ್ತೆ ಹೋರಾಟದ ಹಾದಿ ತುಳಿಯುತ್ತಾರಾ ಕಾದು ನೋಡಬೇಕು. ಎಲ್ಲದಕ್ಕೂ ಜೈಲಿನಿಂದ ಜಗದೀಶ್ ಬಿಡುಗಡೆಯಾದ ಬಳಿಕವೇ ಗೊತ್ತಾಗಲಿದೆ.
Recommended Video