ಯಡಿಯೂರಪ್ಪ ತಮಗೆ ತಾನೇ ವಯಸ್ಸಾಗಿದೆ ಅಂದುಕೊಂಡಿರಬಹುದು: ಮಾಧುಸ್ವಾಮಿ!
ಬೆಂಗಳೂರು, ಜು. 22: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ನಿವೃತ್ತಿಯ ಬಗ್ಗೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.
ಶುಕ್ರವಾರವಷ್ಟೇ ಶಿವಮೊಗ್ಗದಲ್ಲಿ ಬಿ.ಎಸ್. ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಣೆ ಮಾಡಿದರು. ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ಪ್ರೀತಿಯ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಬಿಟ್ಟುಕೊಡುತ್ತಿರುವುದಾಗಿ ಘೋಷಣೆ ಮಾಡಿದರು. ಯಡಿಯೂರಪ್ಪ ಅವರ ಈ ಘೋಷಣೆ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಬಿ.ಎಸ್. ಯಡಿಯೂರಪ್ಪ ಅವರ ತೀರ್ಮಾನದ ಬಗ್ಗೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ತೀಕ್ಷ್ಣವಾಗಿ ಹೇಳಿಕೆ ಕೊಟ್ಟಿದ್ದಾರೆ.
ಯಡಿಯೂರಪ್ಪ ಚುನಾವಣೆಗೆ ನಿಲ್ಲುವುದು, ನಿಲ್ಲದೇ ಇರುವುದು ಯಡಿಯೂರಪ್ಪ ಅವರ ಸ್ವಂತ ವಿಷಯ. ಅವರೇ ಹೇಳಿದ್ದಾರೆ ಎಂದರೆ ಇರಬಹುದು. ಯಡಿಯೂರಪ್ಪ ಘೋಷಣೆ ಮಾಡಿದ ಮೇಲೆ ನಾವು ಯಾರು ಹೇಳುವುದಕ್ಕೆ? ಪಕ್ಷ ಏನೂ ಹೇಳಿಲ್ಲ. ನೀವು ಚುನಾವಣೆಗೆ ನಿಲ್ಲಬೇಡಿ ಎಂದು ಯಡಿಯೂರಪ್ಪ ಅವರಿಗೆ ಯಾರೂ ಹೇಳಿಲ್ಲ. ಯಡಿಯೂರಪ್ಪ ಅವರೇ ತಾವೇ ವಯಸ್ಸು ಅಗಿದೆ ಅಂತ ಅಂದುಕೊಂಡಿರಬಹುದು ಎಂದಯ ಮಾರ್ಮಿಕವಾಗಿ ನುಡಿದರು.
ಸಿದ್ದರಾಮಯ್ಯ ಪದೇ ಪದೇ ಕೊನೆ ಚುನಾವಣೆ ಅಂತಿದ್ದಾರೆ. ಅದಕ್ಕೆ ಕಮೆಂಟ್ ಮಾಡಿ ಅಂದ್ರೆ ಏನು ಹೇಳೋದು ಎನ್ನುವ ಮೂಲಕ ಯಡಿಯೂರಪ್ಪ ಮುಂದೆ ಚುನಾವಣೆಯಲ್ಲಿ ನಿಂತರೂ ನಿಲ್ಲಬಹುದು. ನಿಲ್ಲದೆಯೂ ಇರಬಹುದು ಎಂಬ ದಾಟಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.