ಕಳೆದ 24 ಗಂಟೆಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆಯಾಗಿದ್ದೆಲ್ಲಿ?
ಬೆಂಗಳೂರು, ಜುಲೈ 18: ಎರಡು ದಿನದಿಂದೀಚೆಗೆ ಕರ್ನಾಟಕದಲ್ಲಿ ಮುಂಗಾರು ಚುರುಕುಗೊಂಡಿದೆ. ಮಳೆಯಾಗುವ ಕಡೆಗಳಲ್ಲಿ ಮಳೆ ಕಡಿಮೆಯಾಗಿದೆ, ಮಳೆಯಾಗದ ಕಡೆಗಳಲ್ಲಿ ಮಳೆಯಾಗುತ್ತಿದೆ.
ಚಿತ್ರದುರ್ಗದ ಹಿರಿಯೂರು, ಮಸ್ಕಲ್ನಲ್ಲಿ ಕಳೆದ ಒಂದು ದಿನದಲ್ಲಿ ಅಧಿಕ ಮಳೆಯಾಗಿದೆ. ಅಲ್ಲಿ 85 ಮಿ.ಮೀನಷ್ಟು ಮಳೆಯಾಗಿದೆ. ಕೊಡಗು ಜನತೆ ಬರುವ ಮಳೆಯ ಬಗ್ಗೆ ಆತಂಕಗೊಂಡಿದ್ದಾರೆ, ಯಾಕೆಂದರೆ ಮತ್ತೆ ಮಹಾ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹಲವು ದಿನಗಳ ಬಳಿಕ ಬೆಂಗಳೂರಲ್ಲಿ ಭಾರಿ ಮಳೆ
ಜುಲೈ 17ರ ಬೆಳಗ್ಗೆ 8.30ರಿಂದ ಜುಲೈ 18ರ ಬೆಳಗ್ಗೆ 8.30ರವರೆಗೆ ಮಸ್ಕಲ್ನಲ್ಲಿ 85 ಮಿ.ಮೀನಷ್ಟು ಮಳೆ ದಾಖಲಾಗಿದೆ. ಕೊಪ್ಪಳ, ನಾರಾಯಣಪುರದಲ್ಲಿ ತಲಾ 9 ಸೆಂ.ಮೀ ಮಳೆಯಾಗಿದೆ. ತಾಳಿಕೋಟೆಯಲ್ಲಿ 8 ಸೆಂ.ಮೀ ಮಳೆಯಾಗಿದೆ.
ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಬೆಂಗಳೂರಲ್ಲಿ ಮೋಡಕವಿದ ವಾತಾವರಣವಿದ್ದು ಕಳೆದ ಎರಡು ದಿನಗಳಿಂದ ಸಂಜೆಯ ಸಮಯದಲ್ಲಿ ಮಳೆಯಾಗುತ್ತಿದೆ. ನಗರದ ಕೇಂದ್ರ ಭಾಗದಲ್ಲಿ ಗರಿಷ್ಠ ಉಷ್ಣಾಂಶ 29.3 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕೆಐಎಎಲ್ನಲ್ಲಿ ಗರಿಷ್ಠ 30.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21.6 ಡಿಗ್ರಿ ಸೆಲ್ಸಿಯಸ್, ಎಚ್ಎಎಲ್ನಲ್ಲಿ ಗರಿಷ್ಠ 29.7 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಜುಲೈ 18-20ರವರೆಗೆ ಭಾರಿ ಮಳೆಯಾಗಲಿದೆ. ಪಂಜಾಬ್, ಹರಿಯಾಣ, ಚಂಡೀಗಢ ಹಾಗೂ ಉತ್ತರ ಪ್ರದೇಶದಲ್ಲಿ ಮುಂದಿನ 48 ಗಂಟೆಗಳಲ್ಲಿ ಹೆಚ್ಚು ಮಳೆಯಾಗಲಿದೆ. ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರಾದಲ್ಲಿ ಮಳೆ ಪ್ರಮಾಣ ಕೊಂಚ ಕಡಿಮೆಯಾಗಿದೆ.