ಕೊನೆಗೂ ಮಲೆನಾಡು ಭಾಗದ ರೈತರ ಬಹು ದಶಕಗಳ ಬೇಡಿಕೆ ಈಡೇರಿಸಿದ ರಾಜ್ಯ ಸರ್ಕಾರ!
ಬೆಂಗಳೂರು, ಆ. 28: ಕೃಷಿಯನ್ನು ಲಾಭದಾಯಕ ಮಾಡಲು ಪ್ರಧಾನಿ ಮೋದಿ ಹೊಸ ಯೋಜನೆ ಹಾಕಿಕೊಂಡಿದ್ದಾರೆ. ಅದಕ್ಕಾಗಿ ಉನ್ನತಾಧಿಕಾರದ ಸಮಿತಿಯೊಂದನ್ನು ನೇಮಕ ಮಾಡಿದ್ದಾರೆ. ಆ ಸಮಿತಿಗೆ ನಿವೃತ್ತ ಐಎಎಸ್ ಅಧಿಕಾರಿ ಅಶೋಕ್ ದಳವಾಯಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ, ಬರುವ 2023ರೊಳಗೆ ರೈತರ ಆದಾಯ ದ್ವಿಗುಣಗೊಳಿಸುವ ಗುರುಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಕಳೆದ ನಾಲ್ಕು ದಿನಗಳ ಹಿಂದೆ ಲಾಭದಾಯಕ ಕೃಷಿಯ ಬಗ್ಗೆ ಸಿಎಂ ಬೊಮ್ಮಾಯಿ ಎದುರು ಕೇಂದ್ರದ ಉನ್ನತಾಧಿಕಾರದ ಸಮಿತಿ ಪ್ರಾತ್ಯಕ್ಷಿಕೆ ಕೊಟ್ಟಿತ್ತು.
ಇದೇ ಸಂದರ್ಭದಲ್ಲಿ ರಾಜ್ಯದ ರೈತರಿಗೆ, ಅದರಲ್ಲಿಯೂ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ರಾಜ್ಯ ಸರ್ಕಾರ ಸಂತಸದ ಸುದ್ದಿ ಕೊಟ್ಟಿದೆ. ಮಲೆನಾಡು ಜನತೆಯ ಬಹುದಿನಗಳ ಬೇಡಿಕೆಯಾದ ಸಾಂಬಾರ್(ಸ್ಪೈಸ್) ಪಾರ್ಕ್ ಸದ್ಯಲ್ಲಿಯೇ ತಲೆ ಎತ್ತಲಿದ್ದು, ದಶಕಗಳ ಕನಸು ಕೊನೆಗೂ ನನಸಾಗುವ ದಿನ ಸಮೀಪಿಸಿದೆ. ಸಾಂಬಾರು ಪದಾರ್ಥಗಳ ವ್ಯಾಪಾರಕ್ಕೆಂದು ಬಂದಿದ್ದ ಆಂಗ್ಲರು ಇಡೀ ದೇಶವನ್ನು ಮುನ್ನೂರು ವರ್ಷಗಳ ಕಾಲ ಆಳಿದ್ದರು. ಅಷ್ಟೊಂದು ಲಾಭದಾಯಕ ಮಸಾಲೆ ಬೆಳೆಗಳ ಬಗ್ಗೆ ಸರ್ಕಾರಗಳ ನಿರ್ಲಕ್ಷ ನಿಜಕ್ಕೂ ವಿಪರ್ಯಾಸ.
ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯ ಖನಿಜ ಭವನದಲ್ಲಿರುವ ಉದ್ಯೋಗ ಮಿತ್ರದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹಾಗೂ ಕೇಂದ್ರ ಕೃಷಿ ಮತ್ತು ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಸ್ಪೈಸ್ ಪಾರ್ಕ್ ನಿರ್ಮಾಣದ ಬಗ್ಗೆ ತೀರ್ಮಾನ ಮಾಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಸಾಂಬಾರ್ ಪಾರ್ಕ್ ನಿರ್ಮಾಣಕ್ಕೆ ಅಂತಿಮ ನಿರ್ಧಾರ ಮಾಡಿವೆ. ಸಾಂಬಾರ ಪಾರ್ಕ್ ನಿರ್ಮಾಣದಿಂದ ರೈತರಿಗೆ ಹೇಗೆ ಸಹಾಯವಾಗಲಿದೆ? ಅದಕ್ಕೆ ರೈತರು ಬೇಡಿಕೆ ಇಟ್ಟಿದ್ದು ಯಾಕೆ? ಮುಂದಿದೆ ಮಾಹಿತಿ!
ಮಲೆನಾಡ ರೈತರ ಕನಸು ಚಿಕ್ಕಮಗಳೂರು ಜಿಲ್ಲೆಯಲ್ಲಿ ನನಸು!
ಮಲೆನಾಡು ಭಾಗದ ರೈತರಿಗೆ ಸ್ವಲ್ಪ ಹೆಚ್ಚು ಅನುಕೂಲವಾಗುವ ಸಾಂಬಾರ್ ಪಾರ್ಕ್ ಸ್ಥಾಪನೆಯಿಂದ ತೋಟಗಾರಿಕಾ ಬೆಳೆ ಬಳೆಯುವ ರಾಜ್ಯದ ಎಲ್ಲ ರೈತರಿಗೆ ಅನುಕೂಲವಾಗಲಿದೆ. ಚಿಕ್ಕಮಗಳೂರು ಜಿಲ್ಲೆ ಹೊಸಕೋಟೆ ಸಮೀಪದ ಅಂಬಾಲಿ ಗ್ರಾಮದಲ್ಲಿ ಸುಮಾರು 10 ಎಕರೆ ಭೂಮಿಯಲ್ಲಿ ಸಾಂಬಾರು ಪಾರ್ಕ್ ನಿರ್ಮಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ.
ಕರ್ನಾಟಕ ಕೈಗಾರಿಕಾ ಪ್ರವೇಶಾಭಿವೃದ್ಧಿ ನಿಗಮ(ಕೆಐಎಡಿಬಿ)ವು ರೂ. 20,35,665 ಆರ್ಥಿಕ ನೆರವು ನೀಡಲಿದ್ದು, 10 ಎಕರೆ ಜಮೀನನಿನಲ್ಲಿ ಪಾರ್ಕ್ ನಿರ್ಮಾಣವಾಗಲಿದೆ.
ಮಲೆನಾಡ ರೈತರ ದಶಕಗಳ ಬೇಡಿಕೆ!
ಚಿಕ್ಕಮಗಳೂರಿನಲ್ಲಿ ಸಾಂಬಾರು ಪಾರ್ಕ್ ನಿರ್ಮಾಣವಾಗಬೇಕೆಂಬುದು ರೈತರ ದಶಕಗಳ ಬೇಡಿಕೆಯಾಗಿತ್ತು. ಆದರೆ ಅದು ಒಂದಿಲ್ಲೊಂದು ಕಾರಣಗಳಿಂದ ಮುಂದೂಡಿಕೆಯಾಗುತ್ತಲೇ ಇತ್ತು. ಈ ಬಗ್ಗೆ ಇತ್ತೀಚೆಗೆ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಕೇಂದ್ರ ಸಚಿವೆ ಜೊತೆ ಶೋಭಾ ಕರಂದ್ಲಾಜೆ ಜೊತೆ ಮಾತುಕತೆ ನಡೆಸಿದ್ದರು.
ಜೊತೆಗೆ ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತರಿಗೆ ಜಮೀನಿನ ಮಾರುಕಟ್ಟೆಯ ದರದಂತೆ ಜಾಗದ ರೂ. 20,35,665 ಪಾವತಿಸಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ್ದ ಸಚಿವ ನಿರಾಣಿ ಚಿಕ್ಕಮಗಳೂರಿನ ಸೂಕ್ತ ಸ್ಥಳದಲ್ಲಿ ಕೆಐಎಡಿಬಿಯಿಂದ ಜಾಗ ಗುರುತಿಸುವಂತೆ ಸೂಚನೆ ನೀಡಿದ್ದರು.
ರೈತರ ಉತ್ಪನ್ನ ವಿದೇಶಕ್ಕೆ ರಫ್ತು ಮಾಡಲು ವಿಶೇಷ ಘಟಕ
ರೈತರ ದೇಶದ ಬೆನ್ನಲುಬು ಎಂಬುದು ಕೇಲವ ಹೇಳಿಕೆಗೆ ಮಾತ್ರ ಸಿಮೀತವಾಗಿದೆ. ಆದರೂ ರಾಜ್ಯದಲ್ಲಿ ರೈತರು ಬೆಳೆಯುವ ಕೃಷಿ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲು 'ವಿಶೇಷ ಘಟಕ' ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಶೀಘ್ರದಲ್ಲೇ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ವತಿಯಿಂದ ವಿಶೇಷ ಘಟಕವನ್ನು ಆರಂಭಿಸಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಭರವಸೆ ಕೊಟ್ಟಿದ್ದಾರೆ. ರೈತರಿಗೆ ಅನುಕೂಲವಾಗಲು ಯಾವುದೇ ಕ್ರಮ ಕೈಗೊಳ್ಳಲು ಸಿದ್ಧವಿರುವುದಾಗಿ ಇದೇ ಸಂದರ್ಭದಲ್ಲಿ ಸಚಿವ ನಿರಾಣಿ ಹೇಳಿದ್ದಾರೆ.
Recommended Video
ಕೃಷ್ಣಾ ನದಿ ಪ್ರವಾಹ ಪರಿಹಾರ ಹೆಚ್ಚಳಕ್ಕೆ ಕ್ರಮ
ಬಾಗಲಕೋಟೆಯ ಜಮಖಂಡಿ ಉಪವಿಭಾಗದಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಉಂಟಾಗಿರುವ ಸವಕಳಿ-ಜವಕಳಿ ಮಣ್ಣಿನ ಕುಸಿದ ಬಗ್ಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ವಿಶೇಷ ಅನುದಾನಕ್ಕೆ ಸಚಿವ ಮುರುಗೇಶ್ ನಿರಾಣಿ ಬೇಡಿಕೆ ಇಟ್ಟಿದ್ದಾರೆ. ಪ್ರತಿ ವರ್ಷವೂ ಮಳೆಗಾಲದಲ್ಲಿ ಪ್ರವಾಹ ಬಂದಾಗ ಕೃಷ್ಣ ನದಿ ಉಕ್ಕಿ ಹರಿದು ಜಮಖಂಡಿ ಉಪವಿಭಾಗದಲ್ಲಿ ಪ್ರವಾಹ ಉಂಟಾಗುತ್ತದೆ. ಇದರಿಂದ ರೈತರ ಜಮೀನಿನಲ್ಲಿರುವ ಫಲವತ್ತಾದ ಮಣ್ಣು ಕೊಚ್ಚಿಹೋಗಿ ರೈತರು ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ನಿರಾಣಿ ವಿವರಿಸಿದ್ದಾರೆ.
ಅತಿವೃಷ್ಟಿ ಮತ್ತು ಪ್ರವಾಹ ಸಂದರ್ಭದಲ್ಲಿ ಕೃಷಿ ಭೂಮಿಯಲ್ಲಿ ಆಗಬಹುದಾದ ಕೊರಕಲು, ಭೂ ಸವಕಳಿಯಂತಹ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಹೊಲ ಸಮತಟ್ಟು ಉಳಿಸಲು ರೈತರಿಗೆ ಕೇಂದ್ರದಿಂದ ಅಗತ್ಯ ಪರಿಹಾರ ಒದಗಿಸಲು ಎನ್ಡಿಆರ್ಎಪ್ ಕಾನೂನಿನಲ್ಲಿ ಅವಕಾಶವಿದೆ. ಈಗ ಸರ್ಕಾರ ನೀಡುತ್ತಿರುವ ಪರಿಹಾರವು ರೈತರಿಗೆ ಸಾಕಾಗುತ್ತಿಲ್ಲ. ಇದೊಂದು ಶಾಶ್ವತ ಸಮಸ್ಯೆಯಾಗಿರುವುದರಿಂದ ಕೇಂದ್ರ ಸರ್ಕಾರ ಈಗಿರುವ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಕೇಂದ್ರಕ್ಕೆ ಸಚಿವ ನಿರಾಣಿ ಮನವಿ ಮಾಡಿದ್ದಾರೆ.
ಅದಕ್ಕೆ ಸ್ಪಂದಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, "ಈ ಸಂಬಂಧ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಜೊತೆ ಚರ್ಚಿಸಿ ರೈತರಿಗೆ ಪರಿಹಾರ ಹೆಚ್ಚಳ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಆಶ್ವಾಸನೆ ನೀಡಿದ್ದಾರೆ.