ಕನ್ನಡ ಮಾಧ್ಯಮ ಕಡ್ಡಾಯವಲ್ಲ : ಸುಪ್ರೀಂ ತೀರ್ಪು
ಬೆಂಗಳೂರು, ಮೇ.6 : ಭಾಷಾ ಮಾಧ್ಯಮ ವಿವಾದ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ಇಂದು ತನ್ನ ತೀರ್ಪನ್ನು ಪ್ರಕಟಿಸಿದ್ದು, ಅನುದಾನರಹಿತ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಲ್ಲ ಎಂದು ಮಹತ್ವದ ತೀರ್ಪು ನೀಡಿದೆ. ಇದರಿಂದ ಕರ್ನಾಟಕ ಸರ್ಕಾರಕ್ಕೆ ಭಾರೀ ಹಿನ್ನಡೆ ಉಂಟಾಗಿದೆ.
ಒಂದರಿಂದ ನಾಲ್ಕನೇ ತರಗತಿವರೆಗೆ ಖಾಸಗಿ ಶಾಲೆಗಳು ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು ಎಂದು 1994ರಲ್ಲಿ ಭಾಷಾ ಮಾಧ್ಯಮ ಆದೇಶವನ್ನು ಕರ್ನಾಟಕ ಸರ್ಕಾರ ಹೊರಡಿಸಿತ್ತು. ಖಾಸಗಿ ಶಾಲೆಗಳು ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದವು, ಕೋರ್ಟ್ ಈ ಆದೇಶವನ್ನು ರದ್ದುಗೊಳಿಸಿ ತೀರ್ಪುನೀಡಿತ್ತು. ಕರ್ನಾಟಕ ಸರ್ಕಾರ ಇದನ್ನು ಪ್ರಶ್ನಿಸಿ ಸುಪ್ರೀಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.
ತೀರ್ಪಿನಲ್ಲೇನಿದೆ : ಮಂಗಳವಾರ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ಮಾತೃಭಾಷೆ ಎಂಬುದು ಪೋಷಕರು ಮಾತನಾಡುವ ಭಾಷೆಯಾಗಿದೆ. ಆದ್ದರಿಂದ ಮಾತೃಭಾಷೆಯ ಆಯ್ಕೆಯನ್ನು ಅವರಿಗೆ ಬಿಡಬೇಕು. ಮಾತೃಭಾಷೆಯನ್ನು ಸರ್ಕಾರ ಶಾಲೆಗಳ ಮೇಲೆ ಹೇರುವಂತಿಲ್ಲ. ಆದ್ದರಿಂದ ಖಾಸಗಿ ಶಾಲೆಗಳು ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು ಎಂದು ಕಡ್ಡಾಯಗೊಳಿಸಲಾಗದು ಎಂದು ಕೋರ್ಟ್ ಹೇಳಿದೆ.
ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಕರ್ನಾಟಕ ಸರ್ಕಾರಕ್ಕೆ ಭಾರೀ ಹಿನ್ನಡೆ ಉಂಟಾಗಿದೆ. ಈ ತೀರ್ಪಿನಿಂದಾಗಿ ಎರಡು ದಶಕಗಳ ನಡುವಿನ ಖಾಸಗಿ ಶಾಲೆಗಳ ಮತ್ತು ಸರ್ಕಾರದ ನಡುವಿನ ಹಗ್ಗಜಗ್ಗಾಟ ಅಂತ್ಯಗೊಂಡಿದೆ.
ಸಚಿವರ ಪ್ರತಿಕ್ರಿಯೆ : ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ತೀರ್ಪು ಈಗಷ್ಟೆ ಪ್ರಕಟವಾಗಿದೆ. ಇಂದು ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ಕರೆದು ಈ ಕುರಿತು ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಹಿಂದಿನ ಸುದ್ದಿ : ಎಲ್ಲ ಖಾಸಗಿ ಶಾಲೆಗಳು ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು ಎಂನ ಕರ್ನಾಟಕ ಸರ್ಕಾರದ ಆದೇಶದ ಕುರಿತು ಮಂಗಳವಾರ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸಲಿದೆ. ಈ ತೀರ್ಪಿನಿಂದಾಗಿ ಸರ್ಕಾರ ಮತ್ತು ಖಾಸಗಿ ಶಾಲೆಗಳ ನಡುವೆ ನಡೆಯುತ್ತಿರುವ ಕಾನೂನು ಹೋರಾಟಕ್ಕೆ ತೆರೆ ಬೀಳಲಿದೆ.
ಕರ್ನಾಟಕ ಸರ್ಕಾರ ಎಲ್ಲಾ ಖಾಸಗಿ ಶಾಲೆಗಳು ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು ಎಂದು 1994ರಲ್ಲಿ ಭಾಷಾ ಮಾಧ್ಯಮ ಆದೇಶವನ್ನು ಹೊರಡಿಸಿತ್ತು. ಕಳೆದ ಎರಡು ದಶಕಗಳಿಂದ ಈ ಆದೇಶ ತೀವ್ರವಿವಾದಕ್ಕೆ ಕಾರಣವಾಗಿದೆ. ಇಂದು ಈ ವಿವಾದದ ಕುರಿತು ಸುಪ್ರೀಂ ತೀರ್ಪು ನೀಡಲಿದ್ದು, ಸರ್ಕಾರದ ಪರವಾಗಿ ತೀರ್ಪು ಬರಲಿದಯೇ ಕಾದು ನೋಡಬೇಕು. [ಏನಿದು ಭಾಷಾ ವಿವಾದ : ವಿವರ ಇಲ್ಲಿದೆ]
ಹೈಕೋರ್ಟ್ ಆದೇಶ : ಕರ್ನಾಟಕ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಾಲೆಗಳು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದವು. ವಿವಾದದ ಕುರಿತು 2008ರಲ್ಲಿ ಹೈಕೋರ್ಟ್ ಭಾಷಾ ಮಾಧ್ಯಮ ನೀತಿಯನ್ನು ಖಾಸಗಿ ಶಾಲೆಗಳ ಮೇಲೆ ಹೇರಲು ಬರುವುದಿಲ್ಲ ಎಂಬ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದು, ಅದರ ಕುರಿತು ಆದೇಶ ಇಂದು ಹೊರಬೀಳಲಿದೆ.
ಸುಪ್ರೀಂಕೋರ್ಟ್ ಸಂವಿಧಾನಿಕ ಪೀಠ ಅರ್ಜಿಯ ಬಗ್ಗೆ ಫೆಬ್ರವರಿ ತಿಂಗಳಲಿ ಸುಧೀರ್ಘ ವಿಚಾರಣೆ ನಡೆಸಿದ್ದು, ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಪ್ರಕಟವಾಗು ಈ ತೀರ್ಪಿನಿಂದಾಗಿ ಸರ್ಕಾರ ಮತ್ತು ಖಾಸಗಿ ಶಾಲೆಗಳ ನಡುವೆ ನಡೆಯುತ್ತಿರುವ ಕಾನೂನು ಹೋರಾಟಕ್ಕೆ ತೆರೆ ಬೀಳಲಿದೆ.