ಭೂ ಹಗರಣ: ಮಾಜಿ ಸಚಿವ ಕಟ್ಟಾ ನಾಯ್ಡುಗೆ ಮತ್ತೆ ಸಂಕಟ
ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ವಿರುದ್ಧ ದಾಖಲಾಗಿದ್ದ ಕೆಐಎಡಿಬಿ ಭೂ ಹಗರಣ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಸುಪ್ರೀಂಕೋರ್ಟಿನಿಂದ ಕಟ್ಟಾ ಅವರಿಗೆ ನೋಟಿಸ್ ಜಾರಿಗೊಂಡಿದೆ.
ಬೆಂಗಳೂರು, ಫೆಬ್ರವರಿ 17: ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ವಿರುದ್ಧ ದಾಖಲಾಗಿದ್ದ ಕೆಐಎಡಿಬಿ ಭೂ ಹಗರಣ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಕಟ್ಟಾ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ಸ್ವೀಕರಿಸಲಾಗಿದ್ದು, ಕಟ್ಟಾ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಹೈಕೋರ್ಟಿನ ಏಕಸದಸ್ಯ ಪೀಠದಿಂದ ಈ ಪ್ರಕರಣ ರದ್ದುಗೊಳಿಸಿದೆ. ಕಟ್ಟಾ ನಾಯ್ಡು ಅಲ್ಲದೆ ಬಿಜೆಪಿ ಶಾಸಕರಾದ ಎಸ್.ಆರ್. ವಿಶ್ವನಾಥ್, ಎಸ್. ಮುನಿರಾಜು ಅವರಿಗೆ ಇದರಿಂದ ರಿಲೀಫ್ ಸಿಕ್ಕಿತ್ತು. ಆದರೆ, ಇದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.
ಕೆಐಎಡಿಬಿ ಭೂಹಗರಣಕ್ಕೆ ಸಂಬಂಧಪಟ್ಟಂತೆ ಕಟ್ಟಾಸುಬ್ರಹ್ಮಣ್ಯ ನಾಯ್ಡು ಸಚಿವ ಸ್ಥಾನವನ್ನು ಕಳೆದುಕೊಂಡು, ಜೈಲುಪಾಲಾಗಿದ್ದರು. ಆದರೆ, 2011ರ ಡಿಸೆಂಬರ್ ನಲ್ಲಿ ಕೆಐಎಡಿಬಿ ಹಗರಣದ ಆರೋಪಿಯಾಗಿರುವ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಕಟ್ಟಾ ಜಗದೀಶ್ ಮತ್ತು ಇಟಸ್ಕಾ ಎಂಡಿ ಶ್ರೀನಿವಾಸ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು. ಹೈಕೋರ್ಟ್ನ ಏಕಸದಸ್ಯ ಪೀಠ ಬಿಜೆಪಿಯ ಈ ಮೂವರು ಮುಖಂಡರ ವಿರುದ್ಧ ದಾಖಲಾಗಿದ್ದ ಭೂಹಗರಣದ ಪ್ರಕರಣಗಳನ್ನು ರದ್ದುಗೊಳಿಸಿದೆ.