ಭ್ರಷ್ಟಾಚಾರ ತಡೆದಿದ್ದಕ್ಕೇ ರೋಹಿಣಿ ಸಿಂಧೂರಿ ವರ್ಗಾವಣೆ?
ಬೆಂಗಳೂರು, ಸೆಪ್ಟೆಂಬರ್ 24: ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ಹುದ್ದೆಯಿಂದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿರುವುದು ವಿವಾದ ಸೃಷ್ಟಿಸಿದೆ.
ಭ್ರಷ್ಟಾಚಾರಕ್ಕೆ ರೋಹಿಣಿ ಸಿಂಧೂರಿ ಅಂಕುಶ ಹಾಕಿದ್ದರು. ಫೆಬ್ರವರಿಯಲ್ಲಿ ಮಂಡಳಿಯ ಕಾರ್ಯದರ್ಶಿ ಹುದ್ದೆಗೆ ನೇಮಕವಾಗಿದ್ದ ಅವರನ್ನು ಆರೇಳು ತಿಂಗಳಿನಲ್ಲಿಯೇ ವರ್ಗಾವಣೆ ಮಾಡಿರುವುದರ ಹಿಂದೆ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವವರ ಹಿತಾಸಕ್ತಿ ಇದೆ ಎಂಬ ಆರೋಪ ಕೇಳಿಬಂದಿದೆ.
ದಿಟ್ಟ IAS ಅಧಿಕಾರಿ ರೋಹಿಣಿ ಸಿಂಧೂರಿ ಮತ್ತೆ ವರ್ಗಾವಣೆಯ ಆಘಾತ
ಸೆ.20ರಂದು ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರವು ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿದೆ. ಅವರ ಸ್ಥಾನಕ್ಕೆ ಕಾರ್ಮಿಕ ಆಯುಕ್ತ ಕೆಜಿ ಶಾಂತಾರಾಂ ಅವರಿಗೆ ಹೆಚ್ಚುವರಿಗೆ ಹೊಣೆಗಾರಿಕೆಯನ್ನು ನೀಡಿ ನೇಮಿಸಲಾಗಿದೆ. ಸಿಂಧೂರಿ ಅವರಿಗೆ ಇನ್ನೂ ಬೇರೆ ಸ್ಥಾನ ನೀಡಿಲ್ಲ. ಇದು ಅನೇಕ ಸಂದೇಹಗಳಿಗೆ ಕಾರಣವಾಗಿದೆ. ಕಾರ್ಮಿಕರಿಗೆ ವಿವಿಧ ಸವಲತ್ತುಗಳನ್ನು ಒದಗಿಸಲು ಮಂಡಳಿಗೆ ಭಾರಿ ಪ್ರಮಾಣದ ಅನುದಾನ ಬರುತ್ತದೆ. ಈ ಹಣ ದುರ್ಬಳಕೆಯಾಗುತ್ತಿತ್ತು. ಈ ಎಲ್ಲ ಅವ್ಯವಹಾರಗಳಿಗೆ ರೋಹಣಿ ಸಿಂಧೂರಿ ಬ್ರೇಕ್ ಹಾಕಿದ್ದರು. ಇದರಿಂದ ಸಿಗುತ್ತಿದ್ದ ಲಾಭಕ್ಕೆ ಅಡ್ಡಿಯಾಗಿದ್ದರಿಂದ ಪ್ರಭಾವ ಬೀರಿ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ರೋಹಿಣಿ ಅವರ ವರ್ಗಾವಣೆಯನ್ನು ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆಗಳನ್ನು ಆಯೋಜಿಸಲಾಗಿದೆ.
ಬಳಕೆಯಾಗದ 8,000 ಕೋಟಿ ರೂ. ನಿಧಿ
ಮಂಡಳಿಯಲ್ಲಿ 8,000 ಕೋಟಿ ರೂ. ಅನುದಾನವಿರುತ್ತದೆ. ಇದರಲ್ಲಿ ಹೆಚ್ಚಿನ ಹಣ ಎಲ್ಲ ಸರ್ಕಾರಿ ಮತ್ತು ಖಾಸಗಿ ನಿರ್ಮಾಣ ಕಾಮಗಾರಿಗಳ ಮೇಲಿನ ಶೇ 1ರ ಕಾರ್ಮಿಕ ಸೆಸ್ ಮೂಲಕವೇ ಬಂದಿರುತ್ತದೆ. ಕಳೆದ ಎಂಟು ವರ್ಷಗಳಲ್ಲಿ ಕೇವಲ 800 ಕೋಟಿ ರೂ. ಹಣ ಬಳಕೆಯಾಗಿದೆ. ಈ ಹಣವೂ ಸಮರ್ಪಕವಾಗಿ ಬಳಕೆಯಾಗಿಲ್ಲ. ಹೀಗಾಗಿ ಸಿಂಧೂರಿ ಅವರು ಈ ಹಣದ ಬಳಕೆಗೆ ಸೂಕ್ತ ಚೌಕಟ್ಟು ಹಾಕುವ ಕಾರ್ಯ ಮಾಡುತ್ತಿದ್ದರು. ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ದೊರಕಿಸಿಕೊಡಲು ಯೋಜನೆಗಳನ್ನು ರೂಪಿಸಿದ್ದರು ಎನ್ನಲಾಗಿದೆ.
ಬಿಜೆಪಿ ಸಂಸದರ ಮೂಲಕ ಪ್ರಭಾವ
ರೋಹಿಣಿ ಸಿಂಧೂರಿ ಅವರು ಮಂಡಳಿಯಲ್ಲಿ ತಮ್ಮ ಸಲಹೆಗಳನ್ನು ಪಾಲಿಸಲು ನಿರಾಕರಿಸಿದ ಕಾರಣ ಬಿಜೆಪಿ ಸಂಸದರೊಬ್ಬರ ಮೇಲೆ ಪ್ರಭಾವ ಬೀರಿ ಅವರ ವರ್ಗಾವಣೆಗೆ ಒತ್ತಡ ಹೇರಿದ್ದರು ಎಂದು ವರದಿಯಾಗಿದೆ. ಮಂಡಳಿಯು ಕಾರ್ಮಿಕ ಇಲಾಖೆಯ ಅಡಿಯಲ್ಲಿದ್ದು, ಇದರ ವಾರ್ಷಿಕ ಬಜೆಟ್ 100 ಕೋಟಿ ರೂ. ಇದರಲ್ಲಿ ಶೇ 80ರಷ್ಟು ಹಣ ಉದ್ಯೋಗಿಗಳ ವೇತನಕ್ಕೆ ವಿನಿಯೋಗವಾಗುತ್ತದೆ. ಇನ್ನು ಬಿಲ್ಡರ್ಗಳು ಮತ್ತು ಮನೆಗಳನ್ನು ನಿರ್ಮಿಸುವ ವ್ಯಕ್ತಿಗಳಿಂದ ಸಂಗ್ರಹವಾಗುವ ಕಲ್ಯಾಣ ಸೆಸ್ ಮೊತ್ತ 8,000 ರೂ.
ಕಾರ್ಮಿಕರ ಕೌಶಲ್ಯಾಭಿವೃದ್ಧಿ ಹೆಚ್ಚಿಸಲು ರೋಹಿಣಿ ಸಿಂಧೂರಿ ದಿಟ್ಟ ಹೆಜ್ಜೆ
ವರ್ಗಾವಣೆ ಖಂಡಿಸಿ ಬುಧವಾರ ಪ್ರತಿಭಟನೆ
ರೋಹಣಿ ಸಿಂಧೂರಿ ಹಠಾತ್ ವರ್ಗಾವಣೆ ಕಾರ್ಮಿಕ ಸಂಘಟನೆಗಳನ್ನು ಕೆರಳಿಸಿವೆ. ಹದಗೆಟ್ಟಿದ್ದ ವ್ಯವಸ್ಥೆಯನ್ನು ಸರಿದಾರಿಗೆ ತರುವ ಪ್ರಯತ್ನಗಳು ನಡೆದಿವೆ. ಕಾರ್ಮಿಕರಿಗೆ ಒಳಿತಾಗುತ್ತಿದೆ ಎನ್ನುವ ಸಮಯದಲ್ಲಿಯೇ ಈ ವರ್ಗಾವಣೆ ನಡೆದಿರುವುದು ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ಅದನ್ನು ವಿರೋಧಿಸಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ರಾಜ್ಯದ ವಿವಿಧೆಡೆ ಸೆ. 25ರಂದು ಪ್ರತಿಭಟನೆ ಆಯೋಜಿಸಿದೆ. ಅದಕ್ಕೆ ವಿವಿಧ ಸಂಘಟನೆಗಳ ಬೆಂಬಲವೂ ಸಿಕ್ಕಿದೆ. ಬೆಂಗಳೂರಿನಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರತಿಭಟನೆ ನಡೆಯಲಿದೆ.
ಸುಧಾರಣೆ ತಂದ ರೋಹಿಣಿ ಸಿಂಧೂರಿ
'ಮಂಡಳಿಯಿಂದ ಕಾರ್ಮಿಕರಿಗೆ ಯಾವ ಯಾವ ಸವಲತ್ತುಗಳು ಸಿಗುತ್ತವೆ ಎನ್ನುವುದೇ ತಿಳಿದಿಲ್ಲ. ಅಲ್ಲಿ ಪ್ರತಿಯೊಂದು ಕೆಲಸಕ್ಕೂ ಲಂಚದ ಅವ್ಯವಹಾರ ನಡೆಯುತ್ತಿತ್ತು. ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿತ್ತು. ರೋಹಿಣಿ ಸಿಂಧೂರಿ ಅವರು ಮಂಡಳಿಗೆ ಬರುತ್ತಿದ್ದಂತೆಯೇ ಅವುಗಳಿಗೆ ಕಡಿವಾಣ ಹಾಕಿದರು. ಎಲ್ಲೆಡೆ ಪಾರದರ್ಶಕ ವ್ಯವಸ್ಥೆಯನ್ನು ಅಳವಡಿಸಿದರು. ಕಾರ್ಮಿಕ ಸಂಘಟನೆಗಳನ್ನು ಕರೆದು ಅವರ ಸಮಸ್ಯೆಗಳು, ಅವರಿಗೆ ಸಿಗುವ ಸವಲತ್ತುಗಳ ಬಗ್ಗೆ ಚರ್ಚಿಸಿದರು. ಅವರು ಮಂಡಳಿಗೆ ಬಂದ ಬಳಿಕ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅವರನ್ನು ಇಲ್ಲಿಯೇ ಉಳಿಸಬೇಕು' ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಲಿಂಗರಾಜ್ 'ಒನ್ ಇಂಡಿಯಾ'ಕ್ಕೆ ತಿಳಿಸಿದರು.
ಕುಂದಾಪುರದಲ್ಲಿ ಅಮೋನಿಯಾ ಸೋರಿಕೆಯಿಂದ ಅಸ್ವಸ್ಥರಾದ 67 ಕಾರ್ಮಿಕರು; ತನಿಖೆಗೆ ಡಿಸಿ ಆದೇಶ
ಕಿಯೋನಿಕ್ಸ್ಗೆ ಗುತ್ತಿಗೆ ನೀಡಲು ಒತ್ತಡ
ಯಾವುದೇ ಟೆಂಡರ್ ಪ್ರಕ್ರಿಯೆಗಳನ್ನು ನಡೆಸದೆಯೇ ಮಂಡಳಿಯ ವಿವಿಧ ಕೆಲಸಗಳನ್ನು ಕಿಯೋನಿಕ್ಸ್ಗೆ ವಹಿಸುವಂತೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಸಿಂಧೂರಿ ಅವರ ಮೇಲೆ ಒತ್ತಡ ಹೇರಿದ್ದರು. ಆದರೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಹಾಗೂ ಸಮರ್ಪಕವಾಗಿ ನಡೆಸುವುದರಲ್ಲಿ ಕಿಯೋನಿಕ್ಸ್ ಹಲವು ಬಾರಿ ಎಡವಿರುವುದನ್ನು ಪ್ರಸ್ತಾಪಿಸಿದ್ದ ಸಿಂಧೂರಿ, ಟೆಂಡರ್ ಪ್ರಕ್ರಿಯೆ ಮೂಲಕವೇ ಮುಕ್ತ ಮಾರುಕಟ್ಟೆಯಿಂದ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡುವುದಾಗಿ ಪಟ್ಟುಹಿಡಿದಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಂಡಳಿ ನಿಧಿ ಪ್ರವಾಹ ಪರಿಹಾರಕ್ಕೆ
ಮಂಡಳಿಯಲ್ಲಿರುವ ನಿಧಿಯಲ್ಲಿನ ಒಂದು ಭಾಗವನ್ನು ಪ್ರವಾಹ ಪರಿಹಾರಕ್ಕೆ ವರ್ಗಾಯಿಸುವಂತೆಯೂ ಸಿಂಧೂರಿ ಅವರ ಮೇಲೆ ಒತ್ತಡವಿತ್ತು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆಹಾರದ ಪೊಟ್ಟಣಗಳನ್ನು, ಪೀಠೋಪಕರಣಗಳನ್ನು ಮತ್ತು ವಿದ್ಯುತ್ ವ್ಯವಸ್ಥೆ ಕಲ್ಪಿಸುವ ಉದ್ದೇಶಗಳಿಗೆ ಮಂಡಳಿಯಲ್ಲಿದ್ದ 8,000 ಕೋಟಿಯಲ್ಲಿ 3,000 ಕೋಟಿ ರೂ. ನೀಡುವಂತೆ ಹೇಳಲಾಗಿತ್ತು. ಬಳಿಕ 1,000 ಕೋಟಿ ರೂ. ನೀಡುವಂತೆ ಒತ್ತಡ ಹೇರಲಾಗಿತ್ತು ಎನ್ನಲಾಗಿದೆ.
ರೋಹಿಣಿ ಸಿಂಧೂರಿ ವಾಪಸ್ ಬರಲಿ
'1996ರಲ್ಲಿ ಕೇಂದ್ರ ಸರ್ಕಾರ ಈ ಮಂಡಳಿಯನ್ನು ಸ್ಥಾಪಿಸಿತು. ಅಪಾರ ಪ್ರಮಾಣದ ಹಣ ಹರಿದುಬಂದರೂ ಅದನ್ನು ಸರಿಯಾಗಿ ವಿನಿಯೋಗಿಸಿಲ್ಲ. ಈ ಮಂಡಳಿ ಮೂಲಕ ಕಾರ್ಮಿಕರಿಗೆ ಸುಮಾರು 40-50 ಬಗೆಯ ಸವಲತ್ತುಗಳಿವೆ. ಅದಾವುದೂ ಸಿಗುತ್ತಿಲ್ಲ. ಕಲ್ಯಾಣ ಮಂಟಪ ನಿರ್ಮಾಣ, ವಿದೇಶ ಅಧ್ಯಯ ಪ್ರವಾಸದಂತಹ ಚಟುವಟಿಕೆಗಳಿಗೆ ಹಣ ವ್ಯಯಿಸಲಾಗುತ್ತಿದೆ. ಮಂಡಳಿಗೆ ವರ್ಗಾವಣೆಯಾಗಿ ಬಂದ ರೋಹಿಣಿ ಸಿಂಧೂರಿ ಅವರು ಇದರ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ದೊರಕಿಸಲು ಯೋಜನೆಗಳನ್ನು ರೂಪಿಸಿದ್ದರು. ಎಲ್ಲವೂ ಒಂದು ವ್ಯವಸ್ಥಿತ ಹಂತಕ್ಕೆ ಬರುವ ಸಂದರ್ಭದಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ಆದೇಶವನ್ನು ಕೂಡಲೇ ಹಿಂಪಡೆದು ರೋಹಿಣಿ ಸಿಂಧೂರಿ ಅವರನ್ನು ಮರಳಿ ಹುದ್ದೆಗೆ ನೇಮಕ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ' ಎಂದು ಲಿಂಗರಾಜ್ ವಿವರಿಸಿದರು.